ವಿಜಯಪುರ: ಕಾಣೆಯಾದ ಬಾಲಕಿಯರಿಬ್ಬರು ಶವವಾಗಿ ಪತ್ತೆ

By Kannadaprabha NewsFirst Published May 15, 2021, 10:31 AM IST
Highlights

* ಬುದ್ಧಿವಾದ ಹೇಳಿದಕ್ಕೆ ಮನನೊಂದು ಬಾಲಕಿ ಆತ್ಮಹತ್ಯೆ
* ವಿಜಯಪುರ ಜಿಲ್ಲೆಯಲ್ಲಿ ನಡೆದ ಘಟನೆ 
* ಬಾವಿಯಲ್ಲಿ ಬಾಲಕಿಯರ ಶವಗಳು ಪತ್ತೆ
 

ಬಸವನಬಾಗೇವಾಡಿ(ಮೇ.15): ಕಾಣೆಯಾಗಿದ್ದ ಇಬ್ಬರು ಬಾಲಕಿಯರು ಬಾವಿಯಲ್ಲಿ ಶವವಾಗಿ ಪತ್ತೆಯಾದ ಘಟನೆ ದೇವರಹಿಪ್ಪರಗಿ ತಾಲೂಕಿನ ಬಾವಿಯೊಂದರಲ್ಲಿ ಶುಕ್ರವಾರ ನಡೆದಿದೆ.

ಬ.ಬಾಗೇವಾಡಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಬರುವ ಇಬ್ಬರು ಬಾಲಕಿಯರು ಎರಡು ದಿನಗಳಿಂದ ಕಾಣೆಯಾಗಿದ್ದರು. ಗ್ರಾಮದ ಯುವಕನೊಬ್ಬ ಬಾಲಕಿಯನ್ನು ಪ್ರೀತಿಸುತ್ತಿದ್ದ. ಯುವಕನನ್ನು ಪ್ರೀತಿಸುತ್ತಿದ್ದ ಬಾಲಕಿ ಮೇ 12 ರಂದು ತನ್ನ ಗೆಳತಿಯೊಂದಿಗೆ ಮಧ್ಯಾಹ್ನ ಮನೆಯಿಂದ ಹೋದವರು ಬಂದಿರಲಿಲ್ಲ. ಆದರೆ ಶುಕ್ರವಾರ ಬಾವಿಯೊಂದರಲ್ಲಿ ಇಬ್ಬರು ಪರಸ್ಪರ ಕೈಗಳನ್ನು ಕಟ್ಟಿಕೊಂಡ ಸ್ಥಿತಿಯಲ್ಲಿ ಅವರಿಬ್ಬರ ಶವಗಳು ಪತ್ತೆಯಾಗಿವೆ. ಇದನ್ನು ನೋಡಿದ ಜಮೀನಿನ ಮಾಲೀಕ ಬಸವನಬಾಗೇವಾಡಿಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪಿಐ ಬಸವರಾಜ ಪಾಟೀಲ ಘಟನಾ ಸ್ಥಳಕ್ಕೆ ಹೋಗಿ ಪರಿಶೀಲಿಸಿದ್ದಾರೆ. ಮೃತ ಬಾಲಕಿಯ ಸಹೋದರ ಯುವಕನೊಬ್ಬ ಪ್ರೀತಿ ಮಾಡುವುದಾಗಿ ನಂಬಿಸಿ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಶಂಕೆ ಇದೆ ಎಂದು ಬಸವನಬಾಗೇವಾಡಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಕುರಿತು ಫೋಕ್ಸೋ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಎಸ್ಪಿ ಸೇರಿದಂತೆ ಇತರೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೊರೋನಾ ಸೋಂಕಿತ ವೃದ್ಧ ಜಿಲ್ಲಾಸ್ಪತ್ರೆ ಬಾಗಿಲಲ್ಲೇ ಆತ್ಮಹತ್ಯೆ

ಹೊಡೆದು ಬುದ್ಧಿವಾದ ಹೇಳಿದಕ್ಕೆ ಮನನೊಂದು ಬಾಲಕಿ ಆತ್ಮಹತ್ಯೆ

ಮೊಬೈಲ್‌ನಲ್ಲಿ ಆಟವಾಡುತ್ತಾ ಕಾಲ ಕಳೆಯುವುದನ್ನು ಬಿಟ್ಟು ಮನೆಯಲ್ಲಿ ಅಥವಾ ತಮ್ಮೊಂದಿಗೆ ಕೆಲಸ ಮಾಡುವಂತೆ ಪಾಲಕರು ಮಗಳಿಗೆ ಎರಡೇಟು ಹೊಡೆದು ಬುದ್ಧಿ ಹೇಳಿದ ಕಾರಣಕ್ಕೆ ಮಗಳು ಮನನೊಂದು ಕಲ್ಲಿನ ಕ್ವಾರಿಯ ನೀರಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಲ್ಹಾರ ಪಟ್ಟಣದ ರಾಷ್ಟ್ರೀಯ ಹೆದ್ದಾರಿ 218ರ ಪಕ್ಕದ ಕಲ್ಲು ಕ್ವಾರಿಯಲ್ಲಿ ಗುರುವಾರ ಬೆಳಕಿಗೆ ಬಂದಿದೆ.

ವಿಜಯಪುರ ತಾಲೂಕಿನ ಹಂಚಿನಾಳ ತಾಂಡಾದ ಭಾರತಿ ತಾರಾಸಿಂಗ್‌ ಚವ್ಹಾಣ (15) ಆತ್ಮಹತ್ಯೆಗೆ ಶರಣಾದ ಬಾಲಕಿ. ಕಳೆದ ಹಲವು ತಿಂಗಳಿಂದ ಮೃತ ಬಾಲಕಿಯ ತಂದೆ ತಾರಾಸಿಂಗ್‌ ಹಾಗೂ ತಾಯಿ ಮಂಗಲಬಾಯಿ ಕುಟುಂಬ ಸಮೇತರಾಗಿ ಪಟ್ಟಣ ತಹಸೀಲ್ದಾರ್‌ ಎಂಬುವವರ ಖಡಿ ಮಷಿನ್‌ನಲ್ಲಿ ವಾಸ್ತವ್ಯ ಮಾಡಿ ಕೂಲಿ ಮಾಡುತ್ತಿದ್ದರು. ಮಗಳು ಭಾರತಿ ಮನೆಯಲ್ಲೂ ಕೆಲಸ ಮಾಡದೇ ಕೂಲಿ ಕೆಲಸದಲ್ಲೂ ಭಾಗಿಯಾಗದೇ ಸದಾಕಾಲ ಮೊಬೈಲ್‌ನಲ್ಲಿ ಆಟವಾಡುತ್ತಿದ್ದಳು. ಇದನ್ನು ಗಮನಿಸಿ ಪಾಲಕರು ಮಗಳಿಗೆ ಬುದ್ಧಿವಾದ ಹೇಳಿದ್ದಾರೆ. ಬುದ್ಧಿ ಮಾತು ಕೇಳದಿದ್ದಾಗ ಎರಡೇಟು ಹೊಡೆದಿದ್ದಾರೆ. 

ಇದರಿಂದ ಮನನೊಂದ ಬಾಲಕಿ ಬುಧವಾರ ರಾತ್ರಿಯಿಂದ ಗುರುವಾರ ಬೆಳಗ್ಗೆ 6ರ ನಡುವಿನಲ್ಲಿ ಮನೆಯ ಸಮೀಪದಲಿದ್ದ ಕಲ್ಲಿನ ಕ್ವಾರಿಯ ನೀರಲ್ಲಿ ಬಿದ್ದು ಆತ್ಮಹತ್ಯೆಗೆ ಶರಣಾಗಿದ್ದಾಳೆಂದು ಬಾಲಕಿಯ ತಾಯಿ ಕೊಟ್ಟದೂರಿನಲ್ಲಿ ತಿಳಿಸಿದ್ದಾರೆ. ಘಟನಾಸ್ಥಳಕ್ಕೆ ಪಿಎಸ್‌ಐ ಸಿದ್ದಪ್ಪ ಯಡಹಳ್ಳಿ ಭೇಟಿ ನೀಡಿ ಪರಿಶೀಲಿಸಿದ್ದು, ಈ ಕುರಿತು ಕೊಲ್ಹಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

click me!