Bengaluru Crime: ಪ್ರಿಯಕರನ ಜತೆ ಸೇರಿ ಹೆತ್ತ ತಾಯಿಯ ಒಡವೆ ಕದ್ದಳು..!

By Girish GoudarFirst Published May 18, 2022, 5:27 AM IST
Highlights

*  ಐಷಾರಾಮಿ ಜೀವನಕ್ಕಾಗಿ 36 ಲಕ್ಷ ಮೌಲ್ಯದ ಚಿನ್ನಾಭರಣ ಕಳವು
*  ಮಹಿಳೆ, ಆಕೆಯ ಪ್ರಿಯಕರ ಬಂಧನ
*  ಕಳವು ಮಾಡಿ ಆರಾಮಾಗಿದ್ದಳು 
 

ಬೆಂಗಳೂರು(ಮೇ.18): ಐಷಾರಾಮಿ ಜೀವನಕ್ಕಾಗಿ ಪ್ರಿಯಕರ(Lover) ಜತೆ ಸೇರಿ ತನ್ನದೇ ಮನೆಯಲ್ಲಿ ಚಿನ್ನಾಭರಣ(Gold) ಕದ್ದಿದ್ದ ಮಹಿಳೆ ಹಾಗೂ ಹಾಗೂ ಆಕೆಯ ಪ್ರಿಯಕರನನ್ನು ಅಮೃತಹಳ್ಳಿ ಠಾಣೆ ಪೊಲೀಸರು(Police) ಬಂಧಿಸಿದ್ದಾರೆ.

ಅಮೃತಹಳ್ಳಿಯ ಮದನ್‌(27) ಮತ್ತು ಜಕ್ಕೂರು ಲೇಔಟ್‌ನ ದೀಪ್ತಿ(24) ಬಂಧಿತರು(Arrest). ಇವರಿಂದ 36 ಲಕ್ಷ ರು. ಮೌಲ್ಯದ 725 ಗ್ರಾಂ ಚಿನ್ನಾಭರಣ ಹಾಗೂ 6 ಲಕ್ಷ ರು. ಮೌಲ್ಯದ ಮೂರು ಕಾರುಗಳನ್ನು ಜಪ್ತಿ ಮಾಡಲಾಗಿದೆ. ಜಕ್ಕೂರು ಲೇಔಟ್‌ ನಿವಾಸಿ ರತ್ನಮ್ಮ ಎಂಬುವವರು ಮನೆಯ ಬೀರುವಿನಲ್ಲಿ ಇರಿಸಿದ್ದ ಸುಮಾರು 950 ಗ್ರಾಂ ಚಿನ್ನಾಭರಣ ಕಳುವಾಗಿತ್ತು(Theft). ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ತಪ್ಪೊಪ್ಪಿಕೊಂಡರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೀರುವಿನಲ್ಲಿ ಉಮಾ ಗೋಲ್ಡ್‌ !

ದೂರುದಾರರಾದ ರತ್ನಮ್ಮ ಮೇ 5ರಂದು ಸಂಬಂಧಿಕರೊಬ್ಬರ ಮದುವೆಗೆ ಹೋಗಲು ಬೀರು ತೆಗೆದು ಆಭರಣ ನೋಡಿದ್ದಾರೆ. ಈ ವೇಳೆ ಚಿನ್ನಾಭರಣವಿದ್ದ ಜಾಗದಲ್ಲಿ ಉಮಾ ಗೋಲ್ಡ್‌(ನಕಲಿ ಚಿನ್ನಾಭರಣ) ಆಭರಣಗಳು ಇರುವುದು ಕಂಡು ಬಂದಿದೆ. ಬಳಿಕ ಮನೆಯಲ್ಲಿ ಹುಡುಕಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಮಗಳು ದೀಪ್ತಿಯನ್ನು ವಿಚಾರಿಸಿದಾಗ ಸಮರ್ಪಕ ಉತ್ತರ ಬಂದಿಲ್ಲ. ಈ ವೇಳೆ ಅಮೃತಹಳ್ಳಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಆ ದೂರಿನಲ್ಲಿ ನನ್ನ ಮಗಳು ದೀಪ್ತಿ ಹಾಗೂ ಆಕೆಯ ಸ್ನೇಹಿತ ಮದನ್‌ ಚಿನ್ನಾಭರಣ ಕಳವು ಮಾಡಿರಬಹುದು ಅನುಮಾನಿಸಿದ್ದರು. ಈ ದೂರು ಆಧರಿಸಿ ಇಬ್ಬರು ಆರೋಪಿಗಳನ್ನು(Accused) ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ.

Bengaluru Crime: ಸ್ನೇಹಿತರ ಬೈಕ್‌ ಪಡೆದು ಮೊಬೈಲ್‌ ದೋಚುತ್ತಿದ್ದ ಬಾಲ್ಯದ ಗೆಳೆಯರು!

6 ಲಕ್ಷಕ್ಕೆ 3ಕಾರು ಖರೀದಿ:

ಕೆಲ ವರ್ಷಗಳ ಹಿಂದೆ ನಾಗೇಶ್‌ ಎಂಬಾತನ ವಿವಾಹವಾಗಿದ್ದ ದೀಪ್ತಿ ಕೌಟುಂಬಿಕ ಕಲಹದಿಂದ ಪತಿಯನ್ನು ತೊರೆದು ತವರು ಮನೆಯಲ್ಲೇ ನೆಲೆಸಿದ್ದಳು. ಈ ವೇಳೆ ಆರೋಪಿ ಮದನ್‌ ಪರಿಚಯವಾಗಿ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು(Love). ಐಷಾರಾಮಿ ಜೀವನ ನಡೆಸುವ ಉದ್ದೇಶದಿಂದ ತನ್ನ ಮನೆಯಲ್ಲೇ ಕಳ್ಳತನ ಮಾಡಲು ಪ್ರಿಯಕರನೊಂದಿಗೆ ಸೇರಿ ಸಂಚು ರೂಪಿಸಿದ್ದಳು. ಅದರಂತೆ ಮನೆಯಲ್ಲಿ ಇರುವ ಆಭರಣಗಳ ಬಗ್ಗೆ ತಿಳಿದುಕೊಂಡು ಅದೇ ಮಾದರಿಯ ನಕಲಿ ಆಭರಣ ಖರೀದಿಸಿದ್ದ ದೀಪ್ತಿ, ಬಳಿಕ ಮನೆಯಲ್ಲಿ ತಾಯಿ ರತ್ನಮ್ಮ ಇಲ್ಲದ ಸಮಯದಲ್ಲಿ ಅಸಲಿ ಚಿನ್ನಾಭರಣ ತೆಗೆದುಕೊಂಡು ಅನುಮಾನ ಬಾರದ ಹಾಗೆ ಆ ಜಾಗದಲ್ಲಿ ನಕಲಿ ಚಿನ್ನಾಭರಣ ಇರಿಸಿದ್ದಳು. ಬಳಿಕ ದೀಪ್ತಿ ಹಾಗೂ ಮದನ್‌ ಚಿನ್ನಾಭರಣಗಳನ್ನು ಹಲವು ಕಡೆ ಮಾರಾಟ ಮಾಡಿ ಹಣ ಪಡೆದಿದ್ದರು. ಬಳಿಕ ಆರು ಲಕ್ಷ ರು. ನೀಡಿ ಮೂರು ಕಾರುಗಳನ್ನು ಖರೀದಿಸಿ ಮೋಜು-ಮಸ್ತಿ ಮಾಡುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.

ಕಳವು ಮಾಡಿ ಆರಾಮಾಗಿದ್ದಳು !

ಚಿನ್ನಾಭರಣ ಕಳವು ಮಾಡಿದ ಬಳಿಕವೂ ದೀಪ್ತಿ ತಾಯಿಯ ಜತೆಗೆ ಮನೆಯಲ್ಲೇ ಇದ್ದಳು. ಯಾವುದೇ ಅನುಮಾನ ಬಾರದ ಹಾಗೆ ವರ್ತಿಸುತ್ತಿದ್ದಳು. ಆಕೆಯ ಪ್ರಿಯಕರ ಸಹ ಆಗಾಗ ಮನೆಗೆ ಬಂದು ಹೋಗುತ್ತಿದ್ದ. ಈತನೂ ಸಹ ಸಹಜವಾಗಿ ವರ್ತಿಸುತ್ತಿದ್ದ. ಕಳ್ಳತನ ಪ್ರಕರಣ ಬೆಳಕಿಗೆ ಬಂದ ಬಳಿಕವೂ ದೀಪ್ತಿ ಆರಾಮವಾಗಿದ್ದಳು. ಮನೆಯಲ್ಲಿ ಚಿನಾಭರಣ ಕಳ್ಳತನವಾಗಿರುವ ಬಗ್ಗೆ ಆಕೆಯಲ್ಲಿ ಯಾವುದೇ ನೋವು-ಆತಂಕ ಇರಲಿಲ್ಲ ಎನ್ನಲಾಗಿದೆ. ಇದನ್ನು ಗಮನಿಸಿದ್ದ ರತ್ನಮ್ಮ ಅವರಿಗೆ ಸ್ನೇಹಿತನ ಜತೆ ಸೇರಿ ಮಗಳೇ ಕಳ್ಳತನ ಮಾಡಿರುವ ಬಗ್ಗೆ ಅನುಮಾನ ಬಂದಿತ್ತು. ಕೊನೆಗೆ ಅನುಮಾನವೇ ನಿಜವಾಗಿದೆ.
 

click me!