Ballari Festival: ಸಿಂಗರ್ ಮಂಗ್ಲಿ ಕಾರಿನ ಗ್ಲಾಸ್ ಹೊಡೆದ ಪುಂಡರು

By Govindaraj SFirst Published Jan 22, 2023, 10:30 AM IST
Highlights

ಸಿಂಗರ್ ಮಂಗ್ಲಿ ಕಾರಿನ ಗ್ಲಾಸನ್ನು ಪುಂಡರು ಹೊಡೆದ ಘಟನೆ ನಿನ್ನೆ (ಶನಿವಾರ) ರಾತ್ರಿ ಬಳ್ಳಾರಿಯ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ನಡೆದಿದೆ. ಬಳ್ಳಾರಿ ಉತ್ಸವದ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಸಿಂಗರ್ ಮಂಗ್ಲಿ ಬಂದಿದ್ದರು. 

ಬಳ್ಳಾರಿ (ಜ.22): ಸಿಂಗರ್ ಮಂಗ್ಲಿ ಕಾರಿನ ಗ್ಲಾಸನ್ನು ಪುಂಡರು ಹೊಡೆದ ಘಟನೆ ನಿನ್ನೆ (ಶನಿವಾರ) ರಾತ್ರಿ ಬಳ್ಳಾರಿಯ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ನಡೆದಿದೆ. ಬಳ್ಳಾರಿ ಉತ್ಸವದ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಸಿಂಗರ್ ಮಂಗ್ಲಿ ಬಂದಿದ್ದರು. ವೇದಿಕೆ ಮೇಲೆ ಹಾಡುಗಳನ್ನ‌ ಹೇಳಿ ವಾಪಸ್ ತೆರಳುವಾಗ ಮಂಗ್ಲಿ ನೋಡಲು ಯುವಕರು ಮುಗಿಬಿದ್ದಿದ್ದರು. ಅಲ್ಲದೇ ವೇದಿಕೆ ಹಿಂಭಾಗದಲ್ಲಿದ್ದ ಮೇಕಪ್ ಟೆಂಟ್‌ಗೆ ನುಗ್ಗಿದ ಪುಂಡರನ್ನು ಕೂಡಲೇ ಪೋಲಿಸರು ಲಘು ಲಾಟಿ ಪ್ರಹಾರ ಮಾಡಿದರು. ಆ ವೇಳೆ ಮಂಗ್ಲಿ ಹೋಗುತ್ತಿದ್ದ ಕಾರಿಗೆ ಪುಂಡರು ಕಲ್ಲೆಸೆದಿದ್ದಾರೆ. ಸದ್ಯ ಬಳ್ಳಾರಿ ಉತ್ಸವದಲ್ಲಿ ಸಾವಿರಾರು ಜನ ಸೇರಿದ್ದು, ಅನುಶ್ರೀ ಅರ್ಜುನ್ ಜನ್ಯ ಸೇರಿದಂತೆ ಹಲವು ಕಲಾವಿದರು ಭಾಗಿಯಾದ್ದರು,

ಮೊದಲ ದಿನ ಬಳ್ಳಾರಿ ಉತ್ಸವಕ್ಕೆ ಜನಸಾಗರ: ಕಲೆ-ಸಾಹಿತ್ಯ-ಸಂಸ್ಕೃತಿ ಪರಂಪರೆಯನ್ನು ಗಟ್ಟಿಗೊಳಿಸುವ ಹಾಗೂ ಸಾಮಾಜಿಕ ಬದಲಾವಣೆಗೆ ಸ್ಪೂರ್ತಿ ತುಂಬುವ ಉದ್ದೇಶ ಹೊತ್ತು ಆಯೋಜಿಸಿರುವ ಎರಡು ದಿನಗಳ ‘ಬಳ್ಳಾರಿ ಉತ್ಸವ’ಕ್ಕೆ ಮೊದಲ ದಿನ ಉತ್ತಮ ಸ್ಪಂದನೆ ಸಿಕ್ಕಿದ್ದು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಜನರು ಉತ್ಸವದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಉತ್ಸವ ಹಿನ್ನೆಲೆಯಲ್ಲಿ ನಗರದ ವಿವಿಧೆಡೆ ಆಯೋಜಿಸಿದ್ದ ಕ್ರೀಡಾ, ಸಾಹಸ ಸ್ಪರ್ಧೆಗಳು, ಆಹಾರಮೇಳ, ಮತ್ಸ್ಯಮೇಳ, ಫಲಪುಷ್ಪ ಪ್ರದರ್ಶನ, ಮರಳುಶಿಲ್ಪಕಲೆ ಪ್ರದರ್ಶನ, ಪಾರಂಪರಿಕ ಕೃಷಿ ಪರಿಕರಗಳ ಪ್ರದರ್ಶನಗಳಲ್ಲಿ ಜನ ಕಿಕ್ಕಿರಿದು ಸೇರಿದ್ದರು. 

ಸಿಲಿಕಾನ್‌ ಸಿಟಿಯಲ್ಲಿ ಡೆಲಿವರಿ ಬಾಯ್‌ನಿಂದ ಸೆಕ್ಯೂರಿಟಿ ಮೇಲೆ ಹಲ್ಲೆ!

ಸಂಜೆಯಾಗುತ್ತಿದ್ದಂತೆಯೇ ಜನಾಗಮನ ಹೆಚ್ಚಾಯಿತು. ಇದರಿಂದ ಮುನ್ಸಿಪಲ್‌ ಕಾಲೇಜು ಮೈದಾನ ಜನರಿಂದ ಭರ್ತಿಗೊಂಡು, ಕಾಲಿಡಲು ಸಾಧ್ಯವಾಗದಂತಾಯಿತು. ಉತ್ಸವದಲ್ಲಿ ಹೆಚ್ಚು ಗಮನ ಸೆಳೆದದ್ದು ಫಲಪುಷ್ಪ ಪ್ರದರ್ಶನ ಹಾಗೂ ಮತ್ಸ್ಯಮೇಳ. ವಿವಿಧ ಹಣ್ಣುಗಳಲ್ಲಿ ಮೂಡಿ ಬಂದ ಅನೇಕ ಸಾಧಕರ ಕಲಾಕೃತಿಗಳು ವಿಸ್ಮಯಗೊಳಿಸಿದವು. ಮತ್ಸ್ಯಮೇಳದಲ್ಲಿ ದೇಶ-ವಿದೇಶಗಳ ಮೀನುಗಳನ್ನು ವೀಕ್ಷಿಸಿದ ಪ್ರೇಕ್ಷಕರು ಸಂತಸಗೊಂಡರು. ನೂರಾರು ಬಗೆಯ ಬಣ್ಣಬಣ್ಣದ ಮೀನುಗಳನ್ನು ಮೇಳದಲ್ಲಿ ಪ್ರದರ್ಶನಕ್ಕೆ ಇರಿಸಲಾಗಿತ್ತು. ಹತ್ತಾರು ತಳಿಯ ಮತ್ಸ್ಯಗಳನ್ನು ವೀಕ್ಷಿಸಿದ ಜನರು ಮೀನಿನ ವಿಸ್ಮಯ ಲೋಕ ಕಂಡು ಅಚ್ಚರಿಗೊಂಡರು.

ಮರಳಿನಲ್ಲಿ ಅರಳಿದವು ಶಿಲ್ಪಕಲೆಗಳು: ಮುನ್ಸಿಪಲ್‌ ಕಾಲೇಜು ಮೈದಾನದ ವಾಲಿಬಾಲ್‌ ಅಂಗಳದಲ್ಲಿ ಆಯೋಜಿಸಿರುವ ಮರಳುಶಿಲ್ಪಕಲೆ ಪ್ರದರ್ಶನ ಹೆಚ್ಚು ಆಕರ್ಷಣೀಯವಾಗಿತ್ತು. ನಾಡಿನ ಹಾಗೂ ಜಿಲ್ಲೆಯ ಐತಿಹಾಸಿಕ ಸ್ಮಾರಕಗಳು, ದೇಶದ ಅನೇಕ ಸಾಧಕರು, ಬಳ್ಳಾರಿಯ ಐತಿಹಾಸಿಕ ಕೋಟೆ, ಸಂಡೂರಿನ ಕುಮಾರಸ್ವಾಮಿ ದೇವಾಲಯ ಹೀಗೆ ಅನೇಕ ಕಲಾ ಕೃತಿಗಳು ಮರಳಿನಲ್ಲಿ ಅರಳಿದ್ದವು. ಮರಳು ಶಿಲ್ಪ ಕಲಾವಿದರ ಕೈ ಚಳಕ ಕಂಡು ನಿಬ್ಬೆರಗಾಗುವಂತೆ ನೋಡುತ್ತಿದ್ದ ಜನರು ಮರಳು ಶಿಲ್ಪಕಲಾಕೃತಿಗಳ ಮುಂದೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.

ಗೆದ್ದೆತ್ತಿನ ಬಾಲ ಹಿಡಿಯುವ ಪಕ್ಷ ಜೆಡಿಎಸ್‌: ಸಿದ್ದರಾಮಯ್ಯ

ಮೇಳದಲ್ಲಿ ಏಳು ಮಳಿಗೆಗಳಲ್ಲಿ ಪುಸ್ತಕ ಪ್ರದರ್ಶನವಿತ್ತು. ಕೇಂದ್ರ ಗ್ರಂಥಾಲಯ ಸೇರಿದಂತೆ ಜಿಲ್ಲೆಯ ವಿವಿಧ ಪ್ರಕಾಶಕರು ಪ್ರದರ್ಶನದಲ್ಲಿ ಭಾಗಿಯಾಗಿದ್ದರು. ಆದರೆ, ಪುಸ್ತಕದ ವ್ಯಾಪಾರ ವಹಿವಾಟು ಕಂಡು ಬರಲಿಲ್ಲ. ಸಾರ್ವಜನಿಕರಿಗೆ ಸರ್ಕಾರದ ಯೋಜನೆಗಳ ಕುರಿತು ಮನವರಿಕೆ ಮಾಡಿಕೊಡಲು ವಿವಿಧ ಇಲಾಖೆಗಳು ಮಳಿಗೆಗಳನ್ನು ಹಾಕಿದ್ದವು. ಆದರೆ, ಸರ್ಕಾರ ಇಲಾಖೆಯ ಮಳಿಗೆ ಕಡೆ ಜನರು ಹೆಚ್ಚಾಗಿರಲಿಲ್ಲ.

click me!