ಬೆಂಗ್ಳೂರಲ್ಲಿ ಮೂವರು ಶಾಲಾ ಬಾಲಕಿಯರು ನಾಪತ್ತೆ: ಕಾಣೆಯಾಗಿ 9 ದಿನವಾದ್ರೂ ಪತ್ತೆಯಾಗಿಲ್ಲ..!

By Girish GoudarFirst Published Sep 14, 2022, 2:08 PM IST
Highlights

ಪೋಷಕರು ಎಷ್ಟೇ ಹುಡುಕಿದರೂ ಬಾಲಕಿಯರು ಮಾತ್ರ ಪತ್ತೆಯಾಗಿಲ್ಲ. ಶಾಲೆಯಲ್ಲಿ ಈ ಬಗ್ಗೆ ವಿಚಾರಿಸಿದರೆ ಸರಿಯಾಗಿ ಉತ್ತರ ನೀಡ್ತಿಲ್ಲವಂತೆ ಅಂತ ದೂರಿದ ಪೋಷಕರು 

ಬೆಂಗಳೂರು(ಸೆ.14):  ಒಂದೇ ಶಾಲೆಯ ಮೂವರು ಬಾಲಕಿಯರು ನಾಪತ್ತೆಯಾಗಿರುವ ಘಟನೆ ನಗರದ ಫ್ರೇಜರ್ ಟೌನ್‌ನಲ್ಲಿ ನಡೆದಿದೆ. 15 ವರ್ಷದ ಶಕ್ತೀಶ್ವರಿ, ನಂದಿನಿ ಹಾಗೂ 16 ವರ್ಷದ ವರುಣಿಕ ಮಿಸ್ಸಿಂಗ್ ಆಗಿರುವ ಬಾಲಕಿಯರು.  ಬೆಂಗಳೂರಿನ ಪ್ರಾಮನೆಡ್ ರಸ್ತೆಯಲ್ಲಿರುವ ಸೆಂಟ್ ಜೋಸೆಫ್ ಕಾನ್ವೆಂಟ್ ಹೈ ಪ್ರೈಮರಿ ಶಾಲೆಯಲ್ಲಿ ಓದುತ್ತಿದ್ದಾರೆ‌. ಶಕ್ತೀಶ್ವರಿ ಮತ್ತು ನಂದಿನಿ 9 ನೇ ತರಗತಿಯಲ್ಲಿ ವ್ಯಾಸಾಂಗ ಮಾಡ್ತಿದ್ರೆ, ವರುಣಿಕ 10 ನೇ ತರಗತಿ ಓದ್ತಿದ್ದಾಳೆ. ಅಲ್ಲದೇ ಶಕ್ತೀಶ್ವರಿ ಮನೆಯಿಂದ ಶಾಲೆಗೆ ಹೋಗಿ ಬರ್ತಿದ್ರೆ ಉಳಿದಿಬ್ಬರು ಇದೇ ಶಾಲೆಯ ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ರು. ಸೆ. 6 ರಂದು ಮೂವರು ನಾಪತ್ತೆಯಾಗಿದ್ದು, ಘಟನೆ ನಡೆದು 9 ದಿನ ಕಳೆದ್ರೂ ಕೂಡ ಮಕ್ಕಳ ಬಗ್ಗೆ ಸುಳಿವು ಸಿಕ್ಕಿಲ್ಲ. 

ರಾಮನಗರ: ಕೆರೆಯಲ್ಲಿ ಈಜಲು ಹೋಗಿದ್ದ ಮೂವರು MBBS ವಿದ್ಯಾರ್ಥಿಗಳು ನಾಪತ್ತೆ

ಇದರಿಂದ ನೊಂದ ಪೋಷಕರು ಪುಲಕೇಶಿನಗರ ಠಾಣೆಗೆ ದೂರು ನೀಡಿದ್ದಾರೆ. ಅಪ್ರಾಪ್ತ ಮೂವರು ಹೆಣ್ಣುಮಕ್ಕಳು ಕಾಣೆ ಆದ್ರೂ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಶಾಲೆಗೆ ಹೋದ್ರೆ ನೀವು ಸ್ಲಂ ನವರು. ಬಾಯ್ ಫ್ರೆಂಡ್ಸ್ ಜೊತೆ ಹೋಗಿರಬಹುದು, ನಿಮ್ಮ ಮಕ್ಕಳನ್ನು ಕಾಯ್ದುಕೊಂಡು ಇರಕ್ಕೆ ಆಗುತ್ತಾ ಎಂದು ನಿಂದಿಸಿದ್ರಂತೆ. ಇದ್ರಿಂದ ರೊಚ್ಚಿಗೆದ್ದ ಮಕ್ಕಳ ಪೋಷಕರು ಶಾಲೆಗೆ ಮುತ್ತಿಗೆ ಹಾಕಿದ್ರು‌. ಶಾಲೆ ಮುಂಭಾಗದ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ರು. ಪ್ರತಿಭಟನೆಗೆ ಮುಂದಾದ ಪೋಷಕರ ಚಿತ್ರೀಕರಣ ಮಾಡ್ತಿದ್ದ ಮಾಧ್ಯಮದವರ ಮೇಲೆಯೇ ಪೊಲೀಸರು ದರ್ಪ ತೋರಲು ಮುಂದಾದ್ರು. ಶಾಲೆ ಪರವಾಗಿ ನಿಂತುಕೊಳ್ಳೊ ಯತ್ನ ಮಾಡಿದ್ರು. ಯಾವಾಗ ಸುದ್ದಿ ಮಾಧ್ಯಮದಲ್ಲಿ ಬಿತ್ತರ ಆಯ್ತೋ ಪೊಲೀಸರು ಮತ್ತು ಶಾಲಾ ಆಡಳಿತ ಮಂಡಳಿ ಎಚ್ಚೆತ್ತು ಪೋಷಕರ ಜೊತೆಗೆ ಸಭೆ ಮಾಡಿ ಮಕ್ಕಳನ್ನು ಹುಡುಕಿಕೊಡೋ ಭರವಸೆ ನೀಡಿದ್ರು. ಇಷ್ಟಾದ್ರು ಪೋಷಕರ ಆಕ್ರೋಶ ಮಾತ್ರ ಕಡಿಮೆ ಆಗಲೇ ಇಲ್ಲ.  
ಶಾಲಾ ಆವರಣದಿಂದ ಮಕ್ಕಳು ಕಾಣೆಯಾಗಿದ್ದು ಅದರ ಜವಾಬ್ದಾರಿಯನ್ನು ಶಾಲಾ ಆಡಳಿತ ಮಂಡಳಿಯೇ ಹೊರಬೇಕು. ಅದರ ಬದಲಾಗಿ ಜವಾಬ್ದಾರಿಯಿಂದ ನುಣುಚಿಕೊಳ್ಳೊ ಯತ್ನ ಮಾಡಿ ಪೋಷಕರನ್ನು ನಿಂದಿಸೋದು ನಿಜಕ್ಕೂ ವಿಪರ್ಯಾಸ. 

ಇನ್ನೂ ಮಕ್ಕಳು ಬರೆದಿದ್ದಾರೆ ಎನ್ನಲಾದ ಪತ್ರ ಕೂಡ ಲಭ್ಯವಾಗಿದ್ಯಂತೆ ಅದರಲ್ಲಿ ಏನೇನೆಲ್ಲ ಬರೆದಿದ್ದಾರೆ ಅನ್ನೋದು ಇನ್ನಷ್ಟೇ ಗೊತ್ತಾಗ್ಬೇಕಿದೆ. ಏನೇ ಆದರೂ ಅಪ್ರಾಪ್ತ ಬಾಲಕಿಯರು ನಾಪತ್ತೆಯಾಗಿದ್ದು ಹುಡುಕಿ ಕೊಡೊ ಜವಾಬ್ದಾರಿ ಪೊಲೀಸರ ಮೇಲಿದೆ. 9 ದಿನ ಆದ್ರೂ ಕ್ರಮ ಕೈಗೊಳ್ಳದೇ ಇರೋದು ಬೇಜವಾಬ್ದಾರಿತನ ಎಷ್ಟಿದೆ ಅನ್ನೋದನ್ನ ತೋರಿಸುತ್ತೆ. ಇನ್ನಾದ್ರು ಆ ಮಕ್ಕಳ ಪತ್ತೆಗೆ ಖಾಕಿ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ.

click me!