ಬಾಗಲಕೋಟೆ: ಹ್ಯಾಕರ್‌ಗಳ ಹಾವಳಿಗೆ ಬೆಚ್ಚಿದ ಗ್ರಾಹಕ, ಬ್ಯಾಂಕ್‌ಗೆ ಬಿತ್ತು ಕನ್ನ..!

By Kannadaprabha NewsFirst Published Mar 14, 2024, 10:00 PM IST
Highlights

ಕರ್ನಾಟಕ ಬ್ಯಾಂಕಿನ ಗ್ರಾಹಕ ಮಹಾಲಿಂಗಪ್ಪ ನೆಸೂರ್ ವಂಚನೆಗೆ ಒಳಗಾದವರು. ಇವರ ಬ್ಯಾಂಕ್ ಖಾತೆಯಲ್ಲಿದ್ದ ₹13 ಲಕ್ಷ ಹಣವನ್ನು ಮುಂಬೈನ ಫೆಡರಲ್ ಬ್ಯಾಂಕ್‌ಗೆ ₹3 ಲಕ್ಷ, ಇಂಡಸ್‌ ಇಂಡ್ ಬ್ಯಾಂಕ್‌ಗೆ ₹4 ಲಕ್ಷ , ಫೈನಾನ್ಸ್ ಗಳಿಗೆ ತಲಾ ₹3 ಲಕ್ಷ ವರ್ಗಾವಣೆ ಮಾಡಿರುವುದು ಬೆಳಕಿಗೆ ಬಂದಿದೆ. ವಂಚನೆಗಾರರು ಇವರ ನೋಂದಾಯಿತ ಫೋನ್‌ ನಂಬರ್‌ಗೆ ಒಟಿಪಿ ಕಳುಹಿಸುವ ಮೂಲಕ ಯಾಮಾರಿಸಿದ್ದಾರೆ. 

ಮಹಾಲಿಂಗಪುರ(ಮಾ.14):  ದಿನದಿಂದ ದಿನಕ್ಕೆ ಸೈಬರ್ ವಂಚನೆ ಪ್ರಕರಣಗಳು ಹೆಚ್ಚುತ್ತಿವೆ. ಡಿಜಿಟಲ್ ಖದೀಮರು ಗ್ರಾಹಕರ ಖಾತೆಗೆ ಕನ್ನ ಹಾಕಿ ಲಕ್ಷಾಂತರ ರೂ.ಎಗರಿಸುವ ಘಟನೆಗಳು ಗ್ರಾಹಕರನ್ನು ದಿಗಿಲುಗೊಳಿಸುತ್ತಿವೆ. ಇಂತಹದೇ ಘಟನೆಗಳು ಮಹಾಲಿಂಗಪುರದಲ್ಲಿ ನಡೆದಿವೆ. ಇಲ್ಲಿನ ಗ್ರಾಹಕರ ಬ್ಯಾಂಕ್ ಖಾತೆ ಹ್ಯಾಕ್ ಮಾಡಿದ ಡಿಜಿಟಲ್ ಖದೀಮರು ಲಕ್ಷಾಂತರ ರೂ. ದೋಚಿದ್ದಾರೆ.

ನಗರದ ಕರ್ನಾಟಕ ಬ್ಯಾಂಕಿನ ಗ್ರಾಹಕ ಮಹಾಲಿಂಗಪ್ಪ ನೆಸೂರ್ ವಂಚನೆಗೆ ಒಳಗಾದವರು. ಇವರ ಬ್ಯಾಂಕ್ ಖಾತೆಯಲ್ಲಿದ್ದ ₹13 ಲಕ್ಷ ಹಣವನ್ನು ಮುಂಬೈನ ಫೆಡರಲ್ ಬ್ಯಾಂಕ್‌ಗೆ ₹3 ಲಕ್ಷ, ಇಂಡಸ್‌ ಇಂಡ್ ಬ್ಯಾಂಕ್‌ಗೆ ₹4 ಲಕ್ಷ , ಫೈನಾನ್ಸ್ ಗಳಿಗೆ ತಲಾ ₹3 ಲಕ್ಷ ವರ್ಗಾವಣೆ ಮಾಡಿರುವುದು ಬೆಳಕಿಗೆ ಬಂದಿದೆ. ವಂಚನೆಗಾರರು ಇವರ ನೋಂದಾಯಿತ ಫೋನ್‌ ನಂಬರ್‌ಗೆ ಒಟಿಪಿ ಕಳುಹಿಸುವ ಮೂಲಕ ಯಾಮಾರಿಸಿದ್ದಾರೆ. ಬ್ಯಾಂಕ್ ಸ್ಟೇಟ್‌ಮೆಂಟ್ ಪಡೆದಾಗ ಮಹಾಲಿಂಗಪ್ಪನವರಿಗೆ ಹಣ ಕಳೆದುಕೊಂಡಿರುವುದು ಗಮನಕ್ಕೆ ಬಂದಿದೆ. ಕೂಡಲೇ ಅವರು ಬ್ಯಾಂಕ್‌ ಶಾಖೆಗೆ ಭೇಟಿ ನೀಡಿ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಮೇಲಾಧಿಕಾರಿಗಳಿಗೆ ಮಾಹಿತಿ ಕಳುಹಿಸುವುದಾಗಿ ತಿಳಿಸಿರುವ ಬ್ಯಾಂಕ್ ಮ್ಯಾನೇಜರ್, ಅಪರಿಚಿತ ವ್ಯಕ್ತಿಗಳಿಗೆ ಒಟಿಪಿ ಸೇರಿದಂತೆ ತಮ್ಮ ಯಾವುದೇ ಮಾಹಿತಿ ನೀಡದಂತೆ ತಿಳಿ ಹೇಳಿದ್ದಾರೆ.

ಮದುವೆ ವಿಳಂಬಕ್ಕೆ ಕಾರಣ ಕೇಳಿಬಂದ ಯುವತಿ; ವಿಶೇಷ ಪೂಜೆ ಮಾಡಿಸುವ ನೆಪದಲ್ಲಿ ನಕಲಿ ಜ್ಯೋತಿಷಿಯಿಂದ ವಂಚನೆ!

ಸ್ಟೇಟ್ ಬ್ಯಾಂಕ್ ಗ್ರಾಹಕ ರಾಯಪ್ಪ ಸೋಮಪ್ಪ ಹಿರೇವಳ್ಳಿ ಅವರು ಖಾತೆಯಿಂದ ಮಾ.3 ರಂದು ₹90 ಸಾವಿರ ದೋಚಲಾಗಿದೆ. ಶೇಖಪ್ಪ ಪಮ್ಮಾರ ಖಾತೆಯಿಂದ ₹20 ಸಾವಿರ, ಸಚಿನ್ ಮಾಳಿ ಖಾತೆಯಿಂದ ₹5 ಸಾವಿರ ಎಗರಿಸಿದ ಹ್ಯಾಕರ್ಸ್‌ಗಳು ತಮ್ಮ ಕೈಚಳಕ ತೋರಿಸಿದ್ದಾರೆ.

ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕುತ್ತಿರುವ ಪ್ರಕರಣಗಳು ಜನರಲ್ಲಿ ಆತಂಕ ಮೂಡಿಸಿದೆ. ಗ್ರಾಹಕರು ಬ್ಯಾಂಕ್ ಸುರಕ್ಷತೆ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. ಬ್ಯಾಂಕ್ ಮ್ಯಾನೇಜರ್ ಸೂಚನೆಯಂತೆ ಹಣ ಕಳೆದುಕೊಂಡ ಗ್ರಾಹಕರು ಸೈಬರ್ ಕ್ರೈಂ ಪ್ರಕರಣ ದಾಖಲಿಸಿದ್ದಾರೆ.

ತಜ್ಞರು ಹೇಳುವುದೇನು?:

ಬಗ್ಗೆ ಮಾಹಿತಿ ನೀಡಿರುವ ತಜ್ಞರು, ಯಾರೊಬ್ಬರ ಆಧಾರ ಸಂಖ್ಯೆಯನ್ನು ಹೊಂದಿರುವುದು ಅವರ ಬ್ಯಾಂಕ್ ಖಾತೆಗೆ ನೇರ ಪ್ರವೇಶಕ್ಕೆ ಅವಕಾಶ ಇಲ್ಲ. ಒಟಿಪಿ ದೃಢೀಕರಣ, ಫೇಸ್ ಐಡಿ ಅಥವಾ ಐರಿಸ್ ಸ್ಕ್ಯಾನ್‌ನಂತಹ ಭದ್ರತಾ ಕಾರ್ಯವಿಧಾನಗಳು ನಿರ್ಣಾಯಕ ರಕ್ಷಣಾತ್ಮಕ ವ್ಯವಸ್ಥೆಯಾಗಿದೆ. ಈ ಹೆಚ್ಚುವರಿ ಭದ್ರತಾ ಲೇಯರ್‌ಗಳಿರುವುದರಿಂದ ಬ್ಯಾಂಕ್ ಖಾತೆಗಳಿಗೆ ಸುರಕ್ಷಿತವಾಗಿ ಇರಲಿವೆ ಎನ್ನುತ್ತಾರೆ.

ರಾಮನಗರ: ಹಣ ದುಪ್ಪಟ್ಟು ಮಾಡುವ ಆಮಿಷ, ಯುವತಿಗೆ 12 ಲಕ್ಷ ಪಂಗನಾಮ ಹಾಕಿದ ಖದೀಮರು..!

ನನ್ನ ಖಾತೆಯಿಂದ ಹಣ ಹೋಗಿರುವ ಬಗ್ಗೆ ಶಾಖಾ ವ್ಯವಸ್ಥಾಪಕರನ್ನು ಸಂಪರ್ಕಿಸಿದಾಗ ಈ ತರಹ ಘಟನೆ ನಮ್ಮ ಬ್ಯಾಂಕಿನಲ್ಲಿ ಮೊದಲ ಆಗಿದ್ದು, ಈ ಬಗ್ಗೆ ಪ್ರಧಾನ ಕಚೇರಿಗೆ ಮಾಹಿತಿ ಕೊಡುತ್ತೇವೆ ಎಂದಿದ್ದಾರೆ. ಮೊಬೈಲ್ ಬ್ಯಾಂಕ್ ಹ್ಯಾಕ್ ಆದರೆ ಅದು ನಮ್ಮ ಗಮನಕ್ಕೆ ಬರುವುದಿಲ್ಲ. ತಾವೇ ಎಚ್ಚರಿಕೆಯಿಂದ ವ್ಯವಹರಿಸಿ, ನಾವು ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿದರು ಎಂದು ಕರ್ನಾಟಕ ಬ್ಯಾಂಕ್ ಗ್ರಾಹಕ ಮಹಾಲಿಂಗ ನೆಸೂರ್ ಹೇಳಿದ್ದಾರೆ. 

ಬ್ಯಾಂಕ ಗ್ರಾಹಕರು ಯಾವುದೇ ಅಪರಿಚಿತ ಕರೆಗಳಿಗೆ ಹಣದ ವ್ಯವಹಾರದ ಬಗ್ಗೆ ಮಾಹಿತಿ ನೀಡುವುದಾಗಲಿ, ಒಟಿಪಿ ಹೇಳುವುದಾಗಲಿ ಮಾಡಬಾರದು. ನಮ್ಮ ಬ್ಯಾಂಕಿನ ಅಧಿಕೃತ ಆಪ್‌ಗಳನ್ನು ಮಾತ್ರ ಬಳಸಬೇಕು. ಬೇರೆ ಆ್ಯಪ್‌ಗಳನ್ನು ಹಾಕಿಕೊಂಡು, ಬೇರೆಯವರಿಗೆ ತಮ್ಮ ಖಾತೆ ಮಾಹಿತಿ ನೀಡುವುದು ತಪ್ಪು. ಇದುವರೆಗೆ ನಮ್ಮ ಶಾಖೆಯಲ್ಲಿ ಯಾವುದೇ ಇಂತಹ ಪ್ರಕರಣಗಳು ನಡೆದಿಲ್ಲ. ಹಣ ವಂಚನೆ ಬಗ್ಗೆ ನಮ್ಮ ಮುಖ್ಯ ಕಛೇರಿಗೆ ತಿಳಿಸಿ ನಮ್ಮ ಕೈಲಾದ ಸಹಾಯ ಮಾಡುತ್ತೇವೆ ಎಂದು ಕರ್ನಾಟಕ ಬ್ಯಾಂಕಿನ ವ್ಯೆವಸ್ಥಾಪಕ ದೀಪಕ ಕೆ.ಡಿ ತಿಳಿಸಿದ್ದಾರೆ. 

click me!