ದಾವಣಗೆರೆ: ಘನತ್ಯಾಜ್ಯ ವಿಲೇವಾರಿ ಘಟಕದ ಶೀಟು ಕಳವು, ಕುಣಿಗಲ್‌ನಲ್ಲಿ ಕೊಳವೆ ಬಾವಿ ಕೇಬಲ್ ಕಳವು

By Kannadaprabha NewsFirst Published May 27, 2023, 10:11 AM IST
Highlights

ಗ್ರಾಪಂನಿಂದ ಗೋಮಾಳ ಜಾಗದಲ್ಲಿ ನಿರ್ಮಿಸಿದ್ದ ಘನತ್ಯಾಜ್ಯ ವಿಲೇವಾರಿ ಘಟಕದ ಮೇಲ್ಚಾವಣಿಗೆ ಅಳವಡಿಸಿದ್ದ ತಗಡಿನ ಶೀಟ್‌ ಕಳವು ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳ ಬಂಧಿಸಿ, ತಗಡಿನ ಶೀಟುಗಳು, ಬ್ಯಾಟರಿ ಹಾಗೂ ಕೃತ್ಯಕ್ಕೆ ಬಳಸಿದ್ದ ಬೊಲೆರೋ ಪಿಕ್‌ ಅಪ್‌ ವಾಹನವನ್ನು ಚನ್ನಗಿರಿ ಪೊಲೀಸರು ಜಪ್ತಿ ಮಾಡಿದ್ದಾರೆ.

ದಾವಣಗೆರೆ (ಮೇ.27) : ಗ್ರಾಪಂನಿಂದ ಗೋಮಾಳ ಜಾಗದಲ್ಲಿ ನಿರ್ಮಿಸಿದ್ದ ಘನತ್ಯಾಜ್ಯ ವಿಲೇವಾರಿ ಘಟಕದ ಮೇಲ್ಚಾವಣಿಗೆ ಅಳವಡಿಸಿದ್ದ ತಗಡಿನ ಶೀಟ್‌ ಕಳವು ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳ ಬಂಧಿಸಿ, ತಗಡಿನ ಶೀಟುಗಳು, ಬ್ಯಾಟರಿ ಹಾಗೂ ಕೃತ್ಯಕ್ಕೆ ಬಳಸಿದ್ದ ಬೊಲೆರೋ ಪಿಕ್‌ ಅಪ್‌ ವಾಹನವನ್ನು ಚನ್ನಗಿರಿ ಪೊಲೀಸರು ಜಪ್ತಿ ಮಾಡಿದ್ದಾರೆ.

ಚನ್ನಗರಿ ತಾಲೂಕು ಪಾಂಡೋಮಟ್ಟಿಗ್ರಾಮದ ಪ್ರಜ್ವಲ್‌ (22 ವರ್ಷ), ಕೃಷ್ಣಮೂರ್ತಿ(23) ಬಂಧಿತ ಆರೋಪಿಗಳು. ಅದೇ ತಾಲೂಕಿನ ಕೊರಟಿಕೆರೆ ಗ್ರಾಪಂನಿಂದ ಶೆಟ್ಟಿಹಳ್ಳಿ ಗ್ರಾಮದ ಗೋಮಾಳ ಜಾಗದಲ್ಲಿ ನಿರ್ಮಿಸಿದ್ದ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಅಳವಡಿಸಿದ್ದ ಮೇಲ್ಚಾವಣಿ ತಗಡಿನ ಶೀಟುಗಳನ್ನು ಯಾರೋ ಕಳವು ಮಾಡಿದ್ದ ಬಗ್ಗೆ ಗ್ರಾಪಂ ಅಭಿವೃದ್ಧಿ ಅಧಿಕಾರಿ ಡಿ.ಬಿ.ನಾಗರಾಜ ಚನ್ನಗಿರಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಅಂಗಡಿ ಮೇಲ್ಚಾವಣಿ ಕೊರೆದು ಲಕ್ಷಾಂತರ ರೂ. ಮೊಬೈಲ್ ಕದ್ದೊಯ್ದ ಖದೀಮರು!

ಎಎಸ್ಪಿ ರಾಮಗೊಂಡ ಬಿ.ಬಸರಗಿ, ಚನ್ನಗಿರಿ ಡಿವೈಎಸ್ಪಿ ಡಾ.ಕೆ.ಎಂ.ಸಂತೋಷ್‌ ಮಾರ್ಗದರ್ಶನದಲ್ಲಿ ಚನ್ನಗಿರಿ ನಿರೀಕ್ಷಕ ಎಚ್‌.ಎನ್‌.ಶಶಿಧರ್‌ ಒಳಗೊಂಡ ತಂಡವು ತಾವರಕೆರೆ ಕ್ರಾಸ್‌ ಬೀರೂರು ಕಡೆಯಿಂದ ಪಿಕಪ್‌ ವಾಹನದಲ್ಲಿ ತಗಡಿನ ಶೀಟುಗಳ ತುಂಬಿ ಬರುತ್ತಿದ್ದ ಆರೋಪಿಗಳಾದ ಪಾಂಡೋಮಟ್ಟಿಪ್ರಜ್ವಲ್‌, ಕೃಷ್ಣಮೂರ್ತಿ ವಿಚಾರಿಸಿದಾಗ ವಿಚಾರ ಬಯಲಾಯಿತು. ಆರೋಪಿಗಳಿಂದ 2 ಲಕ್ಷ ರು.ಮೌಲ್ಯದ 80 ತಗಡಿನ ಶೀಟುಗಳು, 21,500 ರು. ಮೌಲ್ಯದ ಬ್ಯಾಟರಿ ಸೇರಿ 2,21,500 ರು. ಮೌಲ್ಯದ ಸ್ವತ್ತು ಹಾಗೂ ಕೃತ್ಯಕ್ಕೆ ಬಳಸಿದ್ದ ಬೊಲೆರೋ ವಾಹನ ಜಪ್ತಿ ಮಾಡಲಾಗಿದೆ. ಚನ್ನಗಿರಿ ಠಾಣೆ ನಿರೀಕ್ಷಕ ಪಿ.ಬಿ.ಮಧು, ಪಿಎಸ್‌ಐ ಕೆ.ಎನ್‌.ಚಂದ್ರಶೇಖರ, ಸಿಬ್ಬಂದಿಯಾದ ರಂಗಪ್ಪ, ಬೀರೇಶ ಪುಟ್ಟಕ್ಕನವರ, ಅರುಣಕುಮಾರ, ನರೇಂದ್ರ ಸ್ವಾಮಿ, ಬೀರಪ್ಪ, ಜಗದೀಶರನ್ನು ಒಳಗೊಂಡ ತಂಡದ ಕಾರ್ಯಕ್ಕೆ ಎಸ್ಪಿ ಡಾ.ಕೆ.ಅರುಣ್‌ ಶ್ಲಾಘಿಸಿದ್ದಾರೆ.

ಕೊಳವೆ ಬಾವಿಗಳ ಕೇಬಲ್‌ ಕಳವು

ಕುಣಿಗಲ್‌: ಪಟ್ಟಣದಲ್ಲಿ ಗುರುವಾರ ತಡರಾತ್ರಿ ದೊಡ್ಡಪೇಟೆ, ಕೋಟೆ ಹಾಗೂ ಅಗ್ರಹಾರ ಸೇರಿದಂತೆ ವಿವಿಧ ವಾರ್ಡ್‌ಗಳಲ್ಲಿ ಒಂಬತ್ತು ಕೊಳವೆ ಬಾವಿಗಳಿಗೆ ಅಳವಡಿಸಿದ್ದ ಕೇಬಲ್‌ ವೈರ್‌ಗಳನ್ನು ಕತ್ತರಿಸಿರುವ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ.

ವೀಸಾ ವೆರಿಫಿಕೇಶನ್‌ ಸೋಗಲ್ಲಿ ಮನೆಗೆ ನುಗ್ಗಿ ನಗದು, ಚಿನ್ನ ದೋಚಿದ್ದವರ ಸೆರೆ

ಬೆಳಿಗ್ಗೆ ನೀರಿನ ಸಮಸ್ಯೆ ಉಂಟಾಗದಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ನೀರು ಸರಬರಾಜು ಮಾಡಲಾಗಿದೆ ಎಂದು ಪುರಸಭೆಯ ಮುಖ್ಯಾಧಿಕಾರಿ ಶಿವಪ್ರಸಾದ್‌ ತಿಳಿಸಿದ್ದಾರೆ. ಇನ್ನೂ ಘಟನೆ ಸಂಬಂಧ ಕುಣಿಗಲ್‌ ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು, ರಾತ್ರಿ ವೇಳೆಯಲ್ಲಿ ಪೊಲೀಸ್‌ ಗಸ್ತು ಹೆಚ್ಚಿಸುವಂತೆ ಪಟ್ಟಣದ ಪೊಲೀಸರಿಗೆ ಪುರಸಭೆಯ ಮುಖ್ಯಧಿಕಾರಿ ಮನವಿ ಮಾಡಿದ್ದಾರೆ. ಪಟ್ಟಣದ ಪ್ರಮುಖ ಕಡೆಗಳಲ್ಲಿ ಒಂದೇ ರಾತ್ರಿಯಲ್ಲಿ ಒಂಬತ್ತು ಕಡೆಗಳಲ್ಲಿ ಕೇಬಲ್‌ ಕಳ್ಳತನವಾಗಿರುವುದು ಈಗ ಚರ್ಚೆಗೆ ಗ್ರಾಸವಾಗಿದ್ದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

click me!