
ಉಡುಪಿ (ನ.22) : ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳ ಬೀಗ ಮುರಿದ ಕಳ್ಳತನ ಮಾಡುತ್ತಿದ್ದ ಇಬ್ಬರು ಅಂತರ್ ಜಿಲ್ಲಾ ಕಳ್ಳರನ್ನು ಕೋಟ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ತಮಿಳುನಾಡಿನ ಸೇಲಂ ನಿವಾಸಿ ಕುಮಾರಸ್ವಾಮಿ (59) ಮತ್ತು ಕಾಪು ತಾಲೂಕಿನ ಹೆಜಮಾಡಿ ನಿವಾಸಿ ಜಾಹೀದ್ ಸಿನಾನ್ (32) ಎಂದು ಗುರುತಿಸಲಾಗಿದೆ.
ಜಿಲ್ಲೆಯಲ್ಲಿ ಕಳೆದ 5-6 ತಿಂಗಳಿನಿಂದ ರಾತ್ರಿ ಶಾಲಾ- ಕಾಲೇಜುಗಳಿಗೆ ನುಗ್ಗಿ ಬೀಗ ಮುರಿದು ಹಣ ಹಾಗೂ ಬೆಲೆಬಾಳುವ ಸೊತ್ತುಗಳು ಕಳ್ಳತನವಾಗಿರುವ ಬಗ್ಗೆ ಸರಣಿ ಪ್ರಕರಣಗಳು ಬೇರೆಬೇರೆ ಠಾಣೆಗಳಲ್ಲಿ ದಾಖಲಾಗಿದ್ದವು. ಈ ಬಗ್ಗೆ ಎಸ್ಪಿ ಅಕ್ಷಯ ಎಂ.ಎಚ್. ಅವರು ಬ್ರಹ್ಮಾವರ ವೃತ್ತನಿರೀಕ್ಷಕ ಅನಂತಪದ್ಮನಾಭ ಅವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿದ್ದರು.
ನಿಮ್ಮ ಎಟಿಎಂ ಕಾರ್ಡ್ ಕಳುವಾಗಿದೆಯಾ? ತಕ್ಷಣ ಬ್ಲಾಕ್ ಮಾಡಿಸೋದು ಹೇಗೆ? ಇಲ್ಲಿದೆ ಮಾಹಿತಿ
ನ.21ರಂದು ಕೋಟದ ಆವರ್ಸೆ ಗ್ರಾಮದಲ್ಲಿ ಬೈಕಿನಲ್ಲಿ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಅವರು ತಾವೇ ಶಾಲಾ ಕಾಲೇಜುಗಳಲ್ಲಿ ಕಳ್ಳತನದ ಕೃತ್ಯವನ್ನು ಒಪ್ಪಿಕೊಂಡಿದ್ದಾರೆ.
ತಮಿಳುನಾಡಿನ ನಿವಾಸಿ ಕುಮಾರಸ್ವಾಮಿ ಉ.ಕ. ಜಿಲ್ಲೆಯ ಭಟ್ಕಳ ನಗರ ಠಾಣೆಯಲ್ಲಿ 5 ಮನೆ ಕಳ್ಳತನ, ಹೊನ್ನಾವರ ಠಾಣೆಯಲ್ಲಿ 4 ಮನೆ ಕಳ್ಳತನ, ಹಾಸನ ಜಿಲ್ಲೆ ಬೇಲೂರು ಠಾಣೆಯಲ್ಲಿ 4 ಮನೆ ಕಳ್ಳತನ ಪ್ರಕರಣಗಳ ಆರೋಪಿಯಾಗಿ, 2014 ರಿಂದ 2021ರ ವರೆಗೆ 7 ವರ್ಷಗಳ ಕಾಲ ಕಾರವಾರ ಜೈಲಿನಲ್ಲಿ ಶಿಕ್ಷೆ ಅನುಭವಿಸಿ, ಬಿಡುಗಡೆಯಾಗಿದ್ದಾನೆ.
ಜಾಹೀದ್ ಸಿನಾನ್ ಉಡುಪಿಯ ಸಂತೆಕಟ್ಟೆಯಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದು, ಕುಮಾರಸ್ವಾಮಿಯನ್ನು ಕರೆಯಿಸಿಕೊಂಡು ಕಳ್ಳತನವನ್ನು ಮಾಡುತ್ತಿದ್ದನು. ಇವರಿಬ್ಬರು ಸೇರಿ 2021ರಿಂದ ಉಡುಪಿಯ 27, ಉ.ಕ. ಜಿಲ್ಲೆಯ 2, ಶಿವಮೊಗ್ಗ ಜಿಲ್ಲೆಯ 6 ಮತ್ತು ದ.ಕ. ಜಿಲ್ಲೆಯ 2 ಸೇರಿ, ಒಟ್ಟು 37 ಶಾಲಾ ಕಾಲೇಜುಗಳಲ್ಲಿ ಕಳ್ಳತನ ಮಾಡಿದ್ದಾರೆ.
ಮಂಡ್ಯದಿಂದ ಕಳುವಾಗಿದ್ದ ಬಾಲಾಜಿ ವಿಗ್ರಹ ತಮಿಳ್ನಾಡಲ್ಲಿ ವಶ
ಉಡುಪಿ ಜಿಲ್ಲೆಯ ಬೈಂದೂರು, ಕೊಲ್ಲೂರು, ಶಂಕರನಾರಾಯಣ, ಕುಂದಾಪುರ, ಬ್ರಹ್ಮಾವರ, ಹಿರಿಯಡ್ಕ, ಉಡುಪಿ ನಗರ, ಮಲ್ಪೆ, ಕಾರ್ಕಳ, ಪಡುಬಿದ್ರೆ ಠಾಣಾ ಸರಹದ್ದಿನಲ್ಲಿ ಒಟ್ಟು 27 ಕಡೆ ಶಾಲಾ ಕಾಲೇಜುಗಳಿಗೆ ನುಗ್ಗಿ ಕಳ್ಳತನ ನಡೆಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ