
ದಾವಣಗೆರೆ (ಜೂ.4) : ಜನ್ಮದಿನದ ಮುನ್ನಾ ದಿನವೇ ಮಳೆಯಿಂದಾಗಿ ಶಿಥಿಲವಾಗಿದ್ದ ಕಬ್ಬಿಣದ ಗೇಟ್ ಬಿದ್ದು ಬಾಲಕನೊಬ್ಬ ದುರಂತ ಸಾವು ಕಂಡ ಘಟನೆ ನಗರದ ಹೊರ ವಲಯದ ಬಸಾಪುರ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ.
ಇಲ್ಲಿನ ಬಸಾಪುರ ಗ್ರಾಮದ ಪುರೋಹಿತ ಗುರುಶಾಂತಯ್ಯ ಎಂಬುವರ ಮಗ ನಾಗಾರ್ಜುನ(11 ವರ್ಷ) ಮೃತ ಬಾಲಕ. 6ನೇ ತರಗತಿ ಓದುತ್ತಿದ್ದ ಬಾಲಕ ನಾಗಾರ್ಜುನ ತನ್ನ ಸ್ನೇಹಿತರೊಂದಿಗೆ ಆಟವಾಡಲು ಹೊರಗೆ ಹೋಗಿದ್ದ ವೇಳೆ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಬಸಾಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಸಮೀಪದ ಸಿದ್ದಪ್ಪ ಎಂಬುವರ ಮನೆಯ ಕಾಂಪೌಂಡ್ಗೆ ಅಳವಡಿಸಿದ್ದ ಗೇಟ್ ಮಳೆಯಿಂದಾಗಿ ಶಿಥಿಲಗೊಂಡಿದ್ದು, ದುರಾದೃಷ್ಟವಶಾತ್ ಅಲ್ಲಿಯೇ ಆಟವಾಡುತ್ತಾ ಬಂದಿದ್ದ ಬಾಲಕ ನಾಗಾರ್ಜುನ ಮೇಲೆ ಬಿದ್ದಿದೆ. ಗೇಟ್ ಬಿದ್ದಿದ್ದರಿಂದ ಬಾಲಕನ ಮುಖ, ತಲೆಗೆ ತೀವ್ರ ಪೆಟ್ಟಾಗಿದ್ದರಿಂದ ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲಿ ಸಾವನ್ನಪ್ಪಿದ್ದಾನೆ.
ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ; ಮೈಸೂರಿಗೆ ಹೊರಟಿದ್ದವರು ಮಸಣಕ್ಕೆ!
ಮೃತ ನಾಗಾರ್ಜುನ ಜೂ.3ರಂದು ತನ್ನ 12ನೇ ವರ್ಷದ ಜನ್ಮದಿನ ಆಚರಿಸಿಕೊಳ್ಳಬೇಕಿತ್ತು. ಚುರುಕಾಗಿದ್ದ ಮಗನನ್ನು ಕಳೆದುಕೊಂಡ ಪುರೋಹಿತ ಗುರುಶಾಂತಯ್ಯ, ಪತ್ನಿ, ಕುಟುಂಬ ವರ್ಗ, ಬಂಧು-ಬಳಗದ ರೋಧನ ಮುಗಿಲು ಮುಟ್ಟುವಂತಿತ್ತು. ಮಾಲೀಕ ಸಿದ್ದಪ್ಪ ವಿರುದ್ಧ ಆರ್ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ರಿಪೇರಿ ವೇಳೆ ವಾಹನ ಬಿದ್ದು ಮೆಕ್ಯಾನಿಕ್ ಸಾವು
ಹೊಸದುರ್ಗ: ಬುಲೇರೊ ಸರಕು ಸಾಗಣೆ ವಾಹನವನ್ನು ರಿಪೇರಿ ಮಾಡುವ ವೇಳೆ ವಾಹನವನ್ನು ಎತ್ತರವಾಗಿಸಲು ನೀಡಲಾಗಿದ್ದ ಜಾಕ್ ಆಕಸ್ಮಿಕವಾಗಿ ಜಾರಿದ ಪರಿಣಾಮ ವಾಹನ ಮೆಕ್ಯಾನಿಕ್ ಮೇಲೆ ಬಿದ್ದು, ಆತ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಪಟ್ಟಣದಲ್ಲಿ ಶನಿವಾರ ರಾತ್ರಿ ನಡೆದಿದೆ. ಪಟ್ಟಣದ ಎನ್ಇಎಸ್ ಬಡಾವಣೆಯ ಸಾಗರ್ (28) ಮೃತ ದುರ್ದೈವಿ.
ಒಡಿಶಾದ ಬಾಲಸೋರ್ ತ್ರಿವಳಿ ರೈಲು ದುರಂತ: ಸ್ಟೇಶನ್ ಮ್ಯಾನೇಜರ್ ಎಡವಟ್ಟೇ ದುರಂತಕ್ಕೆ ಕಾರಣ?
ಈತ ಪಟ್ಟಣದಲ್ಲಿ ಹಲವು ವರ್ಷಗಳಿಂದ ಗ್ಯಾರೇಜ್ ಮಾಡುತ್ತಿದ್ದ. ವಾಹನಕ್ಕೆ ಜಾಕ್ ನೀಡಿ ಟಯರ್ ಬಿಚ್ಚಿದ ಸಾಗರ್ ವಾಹನದಡಿ ಹೋಗಿ ರಿಪೇರಿ ಮಾಡುತ್ತಿದ್ದ. ಈ ವೇಳೆ ಜಾಕ್ ಜಾರಿದ ಪರಿಣಾಮ ವಾಹನ ಆತನ ಮೈಮೇಲೆ ಬಿದ್ದು, ಆತ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾನೆ ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ