ನ್ಯಾಯ ಕೇಳಿದ್ರೆ ನ್ಯಾಯಾಧೀಶೆ ನಕ್ಕರು, ಲಂಚದ ಬೇಡಿಕೆ ಇಟ್ಟರು: ಸಾವಿಗೂ ಮುನ್ನದ ಪತ್ರದಲ್ಲಿ ಟೆಕ್ಕಿ ಹೇಳಿದ್ದೇನು?

Published : Dec 12, 2024, 04:19 PM ISTUpdated : Dec 12, 2024, 04:36 PM IST
ನ್ಯಾಯ ಕೇಳಿದ್ರೆ ನ್ಯಾಯಾಧೀಶೆ ನಕ್ಕರು, ಲಂಚದ ಬೇಡಿಕೆ ಇಟ್ಟರು: ಸಾವಿಗೂ ಮುನ್ನದ ಪತ್ರದಲ್ಲಿ ಟೆಕ್ಕಿ ಹೇಳಿದ್ದೇನು?

ಸಾರಾಂಶ

ಬೆಂಗಳೂರಿನಲ್ಲಿ  ಸಾವನ್ನಪ್ಪಿದ ಸಾಫ್ಟ್‌ವೇರ್ ಇಂಜಿನಿಯರ್ ಅತುಲ್ ಸುಭಾಷ್ ಅವರು ಪತ್ನಿಯ ಕಿರುಕುಳದ ಜೊತೆಗೆ ಸಾಯುವ ಮುನ್ನ ಬರೆದಿಟ್ಟ ಪತ್ರದಲ್ಲಿ  ನ್ಯಾಯಾಧೀಶರು ಮತ್ತು ಗುಮಾಸ್ತರಿಂದ ಲಂಚದ ಬೇಡಿಕೆ, ನ್ಯಾಯಾಲಯದಲ್ಲಿ ಅವಮಾನ, ಮತ್ತು ಬೋಗಸ್ ಪ್ರಕರಣಗಳ ಬಗ್ಗೆ ಬರೆದಿದ್ದಾರೆ. "ನ್ಯಾಯವು ಬಾಕಿಯಿದೆ" ಎಂದು ಎದೆಯ ಮೇಲೆ ಬರೆದುಕೊಂಡು ಸಾವಿನ ಹಾದಿ ತುಳಿದಿದ್ದಾರೆ. 

 ಬೆಂಗಳೂರಿನ 34 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ಅತುಲ್ ಸುಭಾಷ್ ಡೆತ್‌ ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದು ಸದ್ಯ ಭಾರಿ ಸದ್ದು ಮಾಡುತ್ತಿದೆ. 24 ಪುಟಗಳ  ಡೆತ್‌ನೋಟ್‌ನಲ್ಲಿ ಅವರು ಕೊಟ್ಟ ಜಸ್ಟೀಸ್‌ ಈಸ್‌ ಡ್ಯೂ ಎಂಬ ಶೀರ್ಷಿಕೆ  ಸ್ತ್ರೀಪರವಾಗಿರುವ ಕಾನೂನು ಸೇರಿದಂತೆ ಇಡೀ ನ್ಯಾಯಾಂಗದ ವ್ಯವಸ್ಥೆಯನ್ನೇ ಅಣಕಿಸುವಂತಿದೆ. ನ್ಯಾಯ ಕೇಳಲು ಹೋಗುವ ಸಾಮಾನ್ಯ ಜನರಿಗೆ ಆಗುವ ತಲ್ಲಣಗಳು ಅವರ ಈ ಡೆತ್‌ನೋಟ್‌ ಸಾರಿ ಸಾರಿ ಹೇಳುವಂತಿದೆ.  ಡಿಸೆಂಬರ್ 9 ರಂದು ರಂಬಲ್‌ನಲ್ಲಿ ಪೋಸ್ಟ್ ಮಾಡಿದ ಸರಿಸುಮಾರು ಒಂದೂವರೆ ಗಂಟೆಗಳ ವೀಡಿಯೊದಲ್ಲಿ, ಅವರು ತಮ್ಮ ಹೆಂಡತಿ ಮತ್ತು ಅವರ ಕುಟುಂಬದ ಕಿರುಕುಳದ ಕಾರಣದಿಂದ ಸಾವಿನ ಹಾದಿ ತುಳಿಯುವುದು ಅನಿವಾರ್ಯವಾಗಿದೆ ಎಂದು ಬರೆದಿದ್ದಾರೆ.  ಪ್ರತಿಷ್ಠಿತ ಸಾಫ್ಟ್‌ವೇರ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ತಮ್ಮ ವಿಚ್ಛೇದಿತ ಪತ್ನಿ ತಮ್ಮ ವಿರುದ್ಧ ಒಂಬತ್ತು ಬೋಗಸ್ ಪ್ರಕರಣಗಳನ್ನು ದಾಖಲಿಸಿದ್ದಾರೆ ಮತ್ತು ವಿನಾಕಾರಣ ನಿರ್ವಹಣೆ ಮೊತ್ತವನ್ನು ಮೂರು ಕೋಟಿ  ಕೇಳುತ್ತಿದ್ದಾರೆ ಎಂದು ಅತುಲ್ ಸುಭಾಷ್ ವೀಡಿಯೊದಲ್ಲಿ ಹೇಳಿದ್ದಾರೆ. 

ಪೊಲೀಸರ ಪ್ರಕಾರ, ಅತುಲ್‌ ಸುಭಾಷ್ ಎನ್‌ಜಿಒದ ವಾಟ್ಸಾಪ್ ಗುಂಪಿನಲ್ಲಿ ಕೌಟುಂಬಿಕ ಕಿರುಕುಳ ಸಂಬಂಧಿತ ಸಮಸ್ಯೆಗಳ ಬಗ್ಗೆ ಬರೆದಿದ್ದರು.  ತಮ್ಮ ಸಂದೇಶದಲ್ಲಿ, ಅವರು,  ತಾವು ಜೀವನವನ್ನು ಕೊನೆಗೊಳಿಸುವ ನಿರ್ಧಾರದ ಬಗ್ಗೆ ತಿಳಿಸಿದ್ದರು.  ಅವರು ಖಿನ್ನತೆಯಿಂದ ಬಳಲುತ್ತಿದ್ದರು ಎನ್ನುವುದು ಈ ಪತ್ರಗಳನ್ನು ನೋಡಿದರೆ ತಿಳಿಯುತ್ತದೆ. ಈ ಗುಂಪಿನ ಸದಸ್ಯರೊಬ್ಬರು ಮೆಸೇಜ್‌ ನೋಡಿ ಗಾಬರಿಯಿಂದ  ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತರುವಾಯ, ಪೊಲೀಸರು ಅತುಲ್‌ ಸುಭಾಷ್‌ ಅವರ  ಸ್ಥಳಕ್ಕೆ ತಲುಪಿದಾಗ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿತ್ತು. ಎದೆಯ ಮೇಲೆ "ನ್ಯಾಯವು ಬಾಕಿಯಿದೆ" ಎಂದು ಬರೆಯಲ್ಪಟ್ಟಿತು. ಅತುಲ್ ಸುಭಾಷ್ ಅವರ ದಿನಚರಿಯ ಮಾಹಿತಿ ಮತ್ತು ಅವರು ಭಾಗಿಯಾಗಿರುವ ಕಾನೂನು ಹೋರಾಟಕ್ಕೆ ಸಂಬಂಧಿಸಿದ ಮಾಹಿತಿಯನ್ನು ಒಳಗೊಂಡ ಪತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

JUSTICE IS DUE ಹೆಣ್ಣು ಮಕ್ಕಳಿಗೆ ಇರೋ ನ್ಯಾಯ ಗಂಡಸರಿಗೆ ಯಾಕಿಲ್ಲ!

ಈ ಪತ್ರದಲ್ಲಿ ಇರುವ ಒಂದೊಂದೇ ಭಯಾನಕ ಅಂಶಗಳು ಈಗ ಬಹಿರಂಗಗೊಳ್ಳುತ್ತಿವೆ. ಆದರೆ ಪತ್ರದಲ್ಲಿ ಇರುವ ಎರಡು ಮಾಹಿತಿಗಳು ಮಾತ್ರ ನ್ಯಾಯಾಂಗ ವ್ಯವಸ್ಥೆಯನ್ನೇ ಅಣಕಿಸುವ ರೀತಿಯಲ್ಲಿ ಕಾಣಿಸುತ್ತಿದೆ.  'ಪತ್ನಿಯ ಕುಟುಂಬವು ತಿಂಗಳಿಗೆ 40 ಸಾವಿರ ರೂಪಾಯಿ ಬೇಡಿಕೆ ಇಟ್ಟಿತ್ತು. ನಂತರ ಅದನ್ನು ದ್ವಿಗುಣಗೊಳಿಸಲಾಯಿತು. ನಾಲ್ಕು ವರ್ಷದ ಮಗನಿಗೆ ಜೀವನಾಂಶದ ನೆಪದಲ್ಲಿ 1 ಲಕ್ಷ ರೂಪಾಯಿ ಕೇಳಿದರು. ಆ ಮೊತ್ತವನ್ನು ಪಾವತಿಸಲು ಸಾಧ್ಯವಾಗದಿದ್ದರೆ ಹೋಗಿ ಆತ್ಮಹತ್ಯೆ ಮಾಡಿಕೋ ಎಂದು ಪತ್ನಿ ಹೇಳಿದಳು. ಇದನ್ನು ನ್ಯಾಯಾಧೀಶರ ಎದುರು ಹೇಳಿದಾಗ ಅವರು ನಕ್ಕು ಬಿಟ್ಟರು. ಇದು ನನಗೆ ತುಂಬಾ ನೋವನ್ನು ಉಂಟು ಮಾಡಿತು. ಇದಾದ ಬಳಿಕ ನ್ಯಾಯಾಲಯದಿಂದ ಹೊರಕ್ಕೆ ಹೋದಾಗ ನೀನಿನ್ನು ಸಾಯಲಿಲ್ವ ಎಂದು ಪತ್ನಿಯ ತಾಯಿ ಕೇಳಿದರು. ಇವೆಲ್ಲಾ ನನ್ನನ್ನು ಘಾಸಿಗೊಳಿಸಿತು' ಎಂದು ಡೆತ್‌ನೋಟ್‌ನಲ್ಲಿ ಅತುಲ್ ಸುಭಾಷ್‌ ಬರೆದಿದ್ದಾರೆ ಎನ್ನಲಾಗಿದೆ.  

ಇದೇ ಪತ್ರದಲ್ಲಿ ಅವರು,  ನ್ಯಾಯಾಧೀಶರಾದ ರೀಟಾ ಕೌಶಿಕ್ ಅವರು ಅನುಕೂಲಕರ ತೀರ್ಪು ನೀಡಲು  5 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟರು. ವಿಚಾರಣೆಗಳನ್ನು ನಿಗದಿಪಡಿಸಲು 2022 ರಲ್ಲಿ ನ್ಯಾಯಾಲಯದ ಗುಮಾಸ್ತರೊಬ್ಬರು  3 ಲಕ್ಷ ರೂಪಾಯಿ ಲಂಚ ಕೇಳಿದರು. ಇವುಗಳನ್ನು ನೀಡಲು ನಾನು ನಿರಾಕರಿಸಿದ ಕಾರಣದಿಂದ ಮಾಸಿಕ  80 ಸಾವಿರ ರೂಪಾಯಿ  ಜೀವನಾಂಶವನ್ನು ಪಾವತಿಸಬೇಕೆಂದು ತೀರ್ಪು ನೀಡಲಾಯಿತು' ಎಂದಿರುವ ಅತುಲ್ ಸುಭಾಷ್‌ ಅವರು,  ರಾಷ್ಟ್ರಪತಿಗಳಿಗೆ ಪತ್ರ ಬರೆದು, ನ್ಯಾಯಾಂಗ ವ್ಯವಸ್ಥೆ ಮತ್ತು ವಿಚ್ಛೇದಿತ ಪತ್ನಿಯರು ದಾಖಲಿಸಿರುವ ಸುಳ್ಳು ಪ್ರಕರಣಗಳ ಬಗ್ಗೆಯೂ ತಿಳಿಸಿದ್ದಾರೆ ಎನ್ನಲಾಗಿದೆ. 

ಬೆಂಗಳೂರಿನಲ್ಲಿ ಉತ್ತರ ಭಾರತದ ಟೆಕ್ಕಿಯ ದುರಂತ ಅಂತ್ಯ; ಹೆಂಡತಿಯ ಕರಾಳತೆ ಬಿಚ್ಚಿಟ್ಟ ಡೆತ್ ನೋಟ್!
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರಿನ ಬಾಡಿಗೆ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ
ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!