2 ವರ್ಷದ ಹಿಂದೆ ಕೃತ್ಯ| ಈ ಬಾರಿ ಮೊಬೈಲ್ ಕದ್ದು ಸಿಕ್ಕಿಬಿದ್ದ| ಆರೋಪಿಯಿಂದ 20 ಲಕ್ಷ ಮೌಲ್ಯದ 506 ಗ್ರಾಂ ಚಿನ್ನಾಭರಣ ಜಪ್ತಿ| ಶಂಕೆ ಮೇರೆಗೆ ವಶಕ್ಕೆ ಪಡೆದು ಆರೋಪಿಯನ್ನ ವಿಚಾರಿಸಿದಾಗ ಸತ್ಯ ಬಯಲು| ಬೆಂಗಳೂರಿನ ವಿಜಯನಗರದ ಈಜು ಕೋಳದಲ್ಲಿ ತರಬೇತುದಾರನಾಗಿದ್ದ ಬಂಧಿತ ಆರೋಪಿ|
ಬೆಂಗಳೂರು(ಜ.31): ಪರಿಚಿತರ ಮನೆಯಲ್ಲಿ ಅರ್ಧ ಕೆ.ಜಿ. ಚಿನ್ನಾಭರಣ ಕದ್ದು ಎರಡು ವರ್ಷದ ಬಳಿಕ ಈಜು ತರಬೇತುದಾರನೊಬ್ಬ ಕೆ.ಪಿ.ಅಗ್ರಹಾರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಮಾಗಡಿ ರಸ್ತೆಯ ಕೆ.ಪಿ.ಅಗ್ರಹಾರ ರೇಣುಕಾ ಪ್ರಸಾದ್ ಬಂಧಿತನಾಗಿದ್ದು, ಆರೋಪಿಯಿಂದ 20 ಲಕ್ಷ ಮೌಲ್ಯದ 506 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ತನ್ನ ವಿದ್ಯಾರ್ಥಿ ಸಿರಿಗಂಧ ಎಂಬುವರ ಮನೆಯಲ್ಲಿ ಮೊಬೈಲ್ ಕಳ್ಳತನವಾಗಿತ್ತು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಆ ದಿನ ಮನೆಗೆ ಬಂದಿದ್ದ ಈಜು ತರಬೇತುದಾರ ರೇಣುಕಾ ಪ್ರಸಾದ್ನನ್ನು ಶಂಕೆ ಮೇರೆಗೆ ವಶಕ್ಕೆ ಪಡೆದು ವಿಚಾರಿಸಿದಾಗ ಸತ್ಯ ಬಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಮಂತ್ರಣ ನೀಡಲು ಬಂದು ಕಾರು ಕಳೆದುಕೊಂಡರು!
ಕೆ.ಪಿ.ಅಗ್ರಹಾರದಲ್ಲಿ ತನ್ನ ಕುಟುಂಬದ ಜತೆ ನೆಲೆಸಿದ್ದ ರೇಣುಕಾ ಪ್ರಸಾದ್, ವಿಜಯನಗರದ ಈಜು ಕೋಳದಲ್ಲಿ ತರಬೇತುದಾರನಾಗಿದ್ದ. 3 ವರ್ಷಗಳಿಂದ ಈಜು ಕಲಿಯಲು ಬರುತ್ತಿದ್ದ ಸಿರಿಗಂಧನ ಪರಿಚಯವಾಗಿತ್ತು. ಬಳಿಕ ಆತನ ಕುಟುಂಬದೊಂದಿಗೆ ರೇಣುಕಾ ಪ್ರಸಾದ್ಗೆ ಆತ್ಮೀಯತೆ ಬೆಳೆದಿದೆ. ಕೆ.ಪಿ.ಅಗ್ರಹಾರದಲ್ಲಿದ್ದ ವಿದ್ಯಾರ್ಥಿ ಮನೆಗೆ ಆಗಾಗ್ಗೆ ಆರೋಪಿ ಹೋಗಿ ಬರುತ್ತಿದ್ದ. 2 ವರ್ಷಗಳ ಹಿಂದೆ ಅವರ ಮನೆಯಲ್ಲಿ 20 ಲಕ್ಷ ಮೌಲ್ಯದ ಆಭರಣ ಕದ್ದಿದ್ದ. ಕೃತ್ಯ ನಡೆದ ಕೆಲ ದಿನಗಳ ಮುನ್ನ ಅವರ ಕುಟುಂಬ ತಮಿಳುನಾಡಿಗೆ ಪ್ರವಾಸ ಹೋಗಿತ್ತು. ಹೀಗಾಗಿ ಪ್ರವಾಸದ ವೇಳೆ ಆಭರಣ ಕಳೆದುಕೊಂಡಿರಬಹುದು ಎಂದು ಭಾವಿಸಿ ಸುಮ್ಮನಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಫೆ.25ರಂದು ಸಿರಿಗಂಧನ ಮನೆಗೆ ರೇಣುಕಾ ಪ್ರಸಾದ್ ಹೋಗಿದ್ದ. ಅದೇ ದಿನ ಅವರ ಮನೆಯಲ್ಲಿ ಮೊಬೈಲ್ ಕಳವಾಗಿತ್ತು. ಆದರೆ ಆ ದಿನ ರೇಣುಕಾ ಪ್ರಸಾದ್ ಹೊರತುಪಡಿಸಿ ಸಿರಿಗಂಧನ ಮನೆಗೆ ಹೊರಗಿನವರು ಯಾರೂ ಬಂದಿರಲಿಲ್ಲ. ಇದರಿಂದ ಆತನ ಮೇಲೆ ಶಂಕೆಗೊಂಡ ಕುಟುಂಬದವರು, ಪೊಲೀಸರಿಗೆ ದೂರು ನೀಡಿದ್ದರು. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಆಭರಣ ಕಳ್ಳತನವೂ ಬಯಲಾಗಿದೆ.