Belagavi: ಶೆಡ್‌ ಮೇಲೆ ಉರುಳಿ ಬಿದ್ದ ಕಬ್ಬು ತುಂಬಿದ ಟ್ರ್ಯಾಕ್ಟರ್‌: ಮಹಿಳೆ ಸಾವು -ನಾಲ್ವರಿಗೆ ಗಾಯ

By Sathish Kumar KHFirst Published Jan 22, 2023, 5:05 PM IST
Highlights

ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಣೆ ಮಾಡುತ್ತಿದ್ದ ಟ್ರ್ಯಾಕ್ಟರ್‌ ರಸ್ತೆ ಬದಿಯಲ್ಲಿದ್ದ ಗುಡಿಸಲಿನ ಮೇಲೆ ಉರುಳಿ ಬಿದ್ದಿದ್ದು, ಗುಡಿಸಲಿನಲ್ಲಿ ಮಲಗಿದ್ದ ಮಹಿಳೆ ಸ್ಥಳದಲ್ಲಿಯೇ ಸಾವನ್ನಪ್ಪಿದ ದುರ್ಘಟನೆ ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಶೀಗಿಹಳ್ಳಿ ಗ್ರಾಮದಲ್ಲಿ ನಡೆದಿದೆ. 

ಬೆಳಗಾವಿ (ಜ.22): ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಣೆ ಮಾಡುತ್ತಿದ್ದ ಟ್ರ್ಯಾಕ್ಟರ್‌ ರಸ್ತೆ ಬದಿಯಲ್ಲಿದ್ದ ಗುಡಿಸಲಿನ ಮೇಲೆ ಉರುಳಿ ಬಿದ್ದಿದ್ದು, ಗುಡಿಸಲಿನಲ್ಲಿ ಮಲಗಿದ್ದ ಮಹಿಳೆ ಸ್ಥಳದಲ್ಲಿಯೇ ಸಾವನ್ನಪ್ಪಿದ ದುರ್ಘಟನೆ ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಶೀಗಿಹಳ್ಳಿ ಗ್ರಾಮದಲ್ಲಿ ನಡೆದಿದೆ. 

ಇಂದು ಮಧ್ಯಾಹ್ನದ ವೇಳೆ ಡಬಲ್‌ ಟ್ರಾಲಿಯನ್ನು ಹೊಂದಿದ್ದ ಟ್ರ್ಯಾಕ್ಟರ್‌ನಲ್ಲಿ ಓವರ್‌ ಲೋಡ್‌ ಆಗುವಂತೆ ಕಬ್ಬನ್ನು ತುಂಬಿಕೊಂಡು ಸಕ್ಕರೆ ಕಾರ್ಖಾನೆ ಕಡೆಗೆ ಹೋಗುತ್ತಿತ್ತು. ಆದರೆ, ರಸ್ತೆಯಲ್ಲಿ ಇದ್ದಕ್ಕಿಂದ್ದಂತೆ ಹಿಂಬದಿಯ ಟ್ರಾಲಿಯಲ್ಲಿನ ಕಬ್ಬು ಎಡಭಾಗಕ್ಕೆ ವಾಲಿಕೊಂಡಿದೆ. ನಂತರ ಎಡಭಾಗಕ್ಕೆ ವಾಲಿದ ಕಬ್ಬಿನ ಭಾರ ಹೆಚ್ಚಾಗಿದ್ದರಿಂದ ಕಬ್ಬು ಸಮೇತವಾಗಿ ಟ್ರಾಲಿಯೇ ಬೀಳಲು ಮುಂದಾಗಿದೆ.  ಈ ವೇಳೆ ಟ್ರ್ಯಾಕ್ಟರ್‌ ಚಾಲಕ ನಿಯಂತ್ರಣ ಮಾಡಲು ಪ್ರಯತ್ನಿಸಿದರೂ ಭಾರ ಹೆಚ್ಚಾಗಿದ್ದರಿಂದ ಎಡಭಾಗಕ್ಕೆ ಕಬ್ಬು ಸಮೇತವಾಗಿ ಹೊರಳಿಕೊಂಡಿದೆ. 

ಖಾನಾಪುರ: ವಾಹನ ಡಿಕ್ಕಿ, ಮೂವರು ಕೃಷಿ ಕಾರ್ಮಿಕ ಮಹಿಳೆಯರು ಸಾವು

ಮಹಿಳೆ ಮಲಗಿದ್ದ ಶೆಡ್‌ ಮೇಲೆ ಬಿದ್ದ ಕಬ್ಬು: 
ಇನ್ನು ಗ್ರಾಮದಲ್ಲಿ ಕಬ್ಬಿಣದ ತಗಡುಗಳನ್ನು ಬಳಸಿ ತಾತ್ಕಾಳಿಕ ಶೆಡ್‌ ನಿರ್ಮಿಸಿಕೊಂಡು ವಾಸವಿದ್ದ ಕುಟುಂಬದಲ್ಲಿ ಐವರು ವಾಸವಿದ್ದರು. ಅದರಲ್ಲಿ ಒಬ್ಬ ಮಹಿಳೆ ಶೆಡ್‌ನಲ್ಲಿ ಮಲಗಿದ್ದಳು. ಟ್ರ್ಯಾಕ್ಟರ್‌ನಲ್ಲಿನ ಕಬ್ಬು ಬೀಳುತ್ತಿದ್ದಂತೆ ಟ್ರ್ಯಾಕ್ಟರ್‌ ಚಾಲಕ ಕೂಗಿಕೊಂಡಿದ್ದಾನೆ. ಇದರಿಂದ ಶೆಡ್‌ನ ಒಳಗೆ ಕುಳಿತಿದ್ದವರು ಹೊರಬಂದು ಜೀವ ಉಳಿಸಿಕೊಂಡಿದ್ದಾರೆ. ಆದರೆ, ಮಲಗಿದ್ದ ಮಹಿಳೆಯ ಮೇಲೆ ಕಬ್ಬು ಲೋಡ್‌ ಪೂರ್ಣವಾಗಿ ಬಿದ್ದಿದ್ದು, ಭಾರಕ್ಕೆ ಮಹಿಳೆ ಸ್ಥಳದಲ್ಲಿಯೇ ರಕ್ತ ಕಾರಿಕೊಂಡು ಪ್ರಾಣ ಬಿಟ್ಟಿದ್ದಾರೆ. ಮನೆಯಿಂದ ಹೊರಬಂದವರಿಗೂ ಸಣ್ಣ-ಪುಟ್ಟ ಗಾಯಗಳಾಗಿವೆ. 

ಮಹಿಳೆಯೊಂದಿಗೆ ಕುರು, ಕೋಳಿಗಳ ಸಾವು: ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಶೀಗಿಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಈ ದುರ್ಘಟನೆಯಲ್ಲಿ ಗಂಗಮ್ಮ ಕಂಬಾರ (56) ಎಂಬ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ ದುರ್ದೈವಿ ಆಗಿದ್ದಾರೆ. ಶೆಡ್‌ನಲ್ಲಿದ್ದ ಇತರೆ ನಾಲ್ವರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದಂತೆ ಶೆಡ್‌ನಲ್ಲಿ ಸಾಕಿದ್ದ ಒಂದು ಕುರಿ, ಎರಡು ಕೋಳಿಗಳು ಕೂಡ ಸಾವನ್ನಪ್ಪಿವೆ. ಈ ಘಟನೆ ಬಗ್ಗೆ ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. 

Vijayapura: ಉಳುಮೆ ಮಾಡುತ್ತಿದ್ದ ಟ್ರ್ಯಾಕ್ಟರ್‌ಗೆ ಸಿಲುಕಿ ಯುವಕ ಸಾವು

(ದಕ್ಷಿಣ ಕನ್ನಡ) - ಹುಲ್ಲು ತರಲು ಹೋಗಿದ್ದ ಮಹಿಳೆ ಸಾವು: ದ.ಕ.ಜಿಲ್ಲೆಯ ಕಡಬ ತಾಲೂಕಿನ ಏಣಿತ್ತಡ್ಕ ಗ್ರಾಮದಲ್ಲಿ ಹರಿಯುವ ಕುಮಾರಧಾರಾ ನದಿಯಲ್ಲಿ ತೆಪ್ಪ ಮುಗುಚಿ ಮಹಿಳೆಯೊಬ್ಬಳು ಸಾವನ್ನಪ್ಪಿದ ದುರ್ಘಟನೆ ನಡೆದಿದೆ. ಏಣಿತ್ತಡ್ಕ ನಿವಾಸಿ ಬಾಳಪ್ಪ ನಾಯ್ಕ ಎಂಬುವವರ ಪತ್ನಿ ಗೀತಾ(46) ಮೃತ ಮಹಿಳೆ ಆಗಿದ್ದಾರೆ. ಕುಮಾರಧಾರ ಹೊಳೆಯಲ್ಲಿ ತೆಪ್ಪದಲ್ಲಿ ಪ್ರಯಾಣಿಸುತ್ತಿದ್ದ ಗೀತಾ ಅರೆಲ್ತಡ್ಕ ಎಂಬಲ್ಲಿಂದ ಹುಲ್ಲು ಸಂಗ್ರಹಿಸಿ ಹೊಳೆ ದಾಟುತ್ತಿದ್ದಾಗ ಘಟನೆ ನಡೆದಿದೆ. ನದಿಯ ಮದ್ಯ ಭಾಗಕ್ಕೆ ತೆಪ್ಪ ಬಂದಾಗ ಗಾಳಿ ಬೀಸಿದ್ದರಿಂದ ತೆಪ್ಪ ಮಗುಚಿ ಬಿದ್ದಿದೆ. ಈ ವೇಳೆ ತೆಪ್ಪದಲ್ಲಿದ್ದ ಮೂವರು ಮಹಿಳೆಯರಲ್ಲಿ ಇಬ್ಬರು ಹುಲ್ಲು ತುಂಬಿದ್ದ ಗೋಣಿ ಚೀಲದ ಸಹಾಯದಿಂದ ಈಜಿ ದಡ ಸೇರಿದ್ದಾರೆ. ಆದರೆ, ಯಾವುದೇ ಆಸರೆ ಸಿಗದೇ ಗೀತಾ ಎನ್ನುವವರು ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಈ ಘಟನೆ ಕಡಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

click me!