
ತುಮಕೂರು (ಮಾ.28): ಶಿಕ್ಷಕ ಎಂದರೆ ದೇವರ ಸಮಾನ ಎಂದು ಹೇಳುತ್ತಾರೆ. ಆದರೆ, ರಾಜ್ಯದ ಶಿಕ್ಷಣ ಸಚಿವರ ತವರು ಜಿಲ್ಲೆಯಾದ ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಬೋರನಗುಂಟೆಯ ಸರ್ಕಾರಿ ಶಾಲೆಯ ಶಿಕ್ಷಕನೊಬ್ಬ 4 ಮತ್ತು 5ನೇ ತರಗತಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಇನ್ನು ಆರೋಪದ ಬೆನ್ನಲ್ಲೇ ಶಿಕ್ಷಕನನ್ನು ಅಮಾನತು ಮಾಡಲಾಗಿದೆ.
ಶಿಕ್ಷಣ ಸಚಿವರ ತವರು ಜಿಲ್ಲೆಯಲ್ಲಿ ಕಾಮುಕ ಶಿಕ್ಷಕನ ರಂಗಿನಾಟ ಆಡಿದ ಘಟನೆ ನಡೆದಿದೆ. ವಿದ್ಯಾರ್ಥಿನಿಯರ ಜೊತೆ ಅಸಭ್ಯ ವರ್ತನೆ ಮಾಡಿದ ಆರೋಪ ಕೇಳಿಬಂದಿದೆ. ಇನ್ನು ಗ್ರಾಮಸ್ಥರಿಂದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯಿಂದ ಕಾಮುಕ ಶಿಕ್ಷಕ ಮಂಜುನಾಥ್ ಹಾಗೂ ಈ ಬಗ್ಗೆ ಕ್ರಮ ಕೈಗೊಳ್ಳದ ಮುಖ್ಯ ಶಿಕ್ಷಕ ನಟರಾಜ್ ಅವರನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ. ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಬೋರನಗುಂಟೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 4ನೇ ಮತ್ತು 5ನೇ ತರಗತಿ ವಿದ್ಯಾರ್ಥಿನಿಯರ ಅಂಗಾಂಗ ಮುಟ್ಟಿ ಲೈಗಿಂಕ ಕಿರುಕುಳ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಬಸ್ ಮೇಲಿಂದಲೇ ಜಾನಪದ ಕಲಾತಂಡಗಳ ಮೇಲೆ ಹಣ ಎಸೆದ ಡಿ.ಕೆ. ಶಿವಕುಮಾರ್: ದರ್ಪಕ್ಕೆ ಕಲಾವಿದರ ಬೇಸರ
ಶಾಲೆಗೆ ನುಗ್ಗಿ ಶಿಕ್ಷಕನ ಮೇಲೆ ಹಲ್ಲೆಗೆ ಯತ್ನ: ಕಾಮುಕ ಶಿಕ್ಷಕನ ವರ್ತನೆಗೆ ಬೇಸತ್ತ ವಿದ್ಯಾರ್ಥಿನಿಯರು ಮನೆಯಲ್ಲಿ ಪೋಷಕರಿಗೆ ಹೇಳಿಕೊಂಡಿದ್ದಾರೆ. ಈ ಬಗ್ಗೆ ಗ್ರಾಮಸ್ಥರು ಬುದ್ಧಿ ಹೇಳಿದರೂ ತಮ್ಮ ಚಾಳಿಯನ್ನು ಮುಂದುವರಿಸಿದ ಕಾಮುಕ ಶಿಕ್ಷಕನ ವಿರುದ್ದ ಮಕ್ಕಳ ಪೋಷಕರು ಹಾಗೂ ಗ್ರಾಮಸ್ಥರು ತಿರುಗಿಬಿದ್ದಿದ್ದಾರೆ. ರೊಚ್ಚಿಗೆದ್ದ ಪೋಷಕರಿಂದ ಶಿಕ್ಷಕ ಮಂಜುನಾಥ್ ವಿರುದ್ದ ತೀವ್ರ ಆಕ್ರೋಶ ವಯಕ್ತೊಡಿಸಿದ್ದು, ಶಾಲೆಗೆ ನುಗ್ಗಿ ಶಿಕ್ಷಕನ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾರೆ. ಈ ಘಟನೆ ನಡೆಯುತ್ತಿದ್ದಂತೆ ಮುಖ್ಯ ಶಿಕ್ಷಕರು ಮಧುಗಿರಿ ಕ್ಷೇತ್ರ ಶಿಕ್ಷಣ ಅಧಿಕಾರಿಗಳಿಗೆ (ಬಿಇಒ) ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಬಿಇಒ ತಿಮ್ಮರಾಜು ಬೋರನಗುಂಟೆ ಸರ್ಕಾರಿ ಶಾಲೆಗೆ ಭೇಟಿ ನೀಡಿ ಕಾಮುಕ ಶಿಕ್ಷಕ ಹಾಗೂ ಆ ಶಾಲೆಯ ಮುಖ್ಯ ಶಿಕ್ಷಕರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಜೀವಾವಧಿ ಶಿಕ್ಷೆ ನೀಡುವಂತೆ ಆಗ್ರಹ: ಇನ್ನು ವಿದ್ಯಾರ್ಥಿನಿಯರ ಅಂಗಾಂಗ ಮುಟ್ಟಿ ಲೈಂಗಿಕ ಕಿರುಕುಳ ಎಸಗುತ್ತಿದ್ದ ಕಾಮುಕ ಶಿಕ್ಷಕ ಮಂಜುನಾಥ್ಗೆ ಕೇವಲ ಅಮಾನತು ಶಿಕ್ಷೆ ನೀಡಿದರೆ ಸಾಕಾಗುವುದಿಲ್ಲ. ಅವರನ್ನು ಶಾಶ್ವತವಾಗಿ ಕೆಲಸದಿಂದ ಕಿತ್ತೆಸೆಯಬೇಕು. ಜೊತೆಗೆ, ಪೊಲೀಸರಿಗೆ ಈ ಬಗ್ಗೆ ಸ್ವತಃ ಶಿಕ್ಷಣ ಇಲಾಖೆಯೇ ದೂರು ನೀಡಿ, ಜೀವಾವಧಿ ಶಿಕ್ಷೆ ವಿಧಿಸುವಂತೆ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಇನ್ನು ಘಟನೆಯ ವಿಚಾರ ತಿಳಿಯುತ್ತಿದ್ದಂತೆ ಬಡವನಹಳ್ಳಿ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಕಾಮುಕ ಶಿಕ್ಷಕ ಮಂಜುನಾಥ್ ಅವರನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಲೈಂಗಿಕ ಕಿರುಕುಳ ನೀಡಿದ ಬಗ್ಗೆ ತನಿಖೆ ಮುಂದುವರೆಸಿದ್ದಾರೆ.
ಬೆಂಗಳೂರು SSLC ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ನೀಡಿದ ಬಿಎಂಟಿಸಿ
ಮಕ್ಕಳು, ಮಹಿಳೆಯರಿಂದ ಪ್ರತಿಭಟನೆ: ಇನ್ನು ಕಾಮುಕ ಶಿಕ್ಷಕ ಮಂಜುನಾಥ್ ಅವರನ್ನು ಕೂಡಲೇ ಜೈಲಿಗೆ ಕಳುಹಿಸಬೇಕು. ಇವರನ್ನು ಕೇವಲ ಅಮಾನತು ಮಾಡಿ ಪುನಃ ಬೇರೊಂದು ಶಾಲೆಗೆ ಕಳುಹಿಸಿದರೆ ಅವರು ಅಲ್ಲಿಯೂ ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ನೀಡುವುದನ್ನು ಮುಂದುವರೆಸುತ್ತಾರೆ. ಅವರನ್ನು ಕೆಲಸದಿಂದ ವಜಾಗೊಳಿಸಬೇಕು. ಅವರನ್ನು ಜೈಲಿಗೆ ಕಳುಹಿಸಿ ಜೀವಾವಧಿ ಶಿಕ್ಷೆಯನ್ನು ಕೊಡಿಸಬೇಕು. ಪೋಕ್ಸೋ ಪ್ರಕರಣ ದಾಖಲಿಸಬೇಕು ಎಂದು ಬೋರನಗುಂಟೆ ಗ್ರಾಮಸ್ಥರು ಶಾಲೆಯ ಮುಂದೆ ಜಮಾವಣೆಗೊಂಡು ಶಿಕ್ಷಣ ಇಲಾಖೆಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ