
ವರದಿ: ವರದರಾಜ್, ದಾವಣಗೆರೆ
ದಾವಣಗೆರೆ (ಏ.04): ದೇವರ ಉತ್ಸವ ವಿಚಾರದಲ್ಲಿ ಎರಡು ಗ್ರಾಮಗಳ ನಡುವೆ ಮಾರಾಮಾರಿಯಾದ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ. ದಾವಣಗೆರೆ ಜಿಲ್ಲೆ ನ್ಯಾಮತಿ ತಾಲ್ಲೂಕಿನ ಬಸವನಹಳ್ಳಿ ಹಾಗು ಮಾದನಬಾವಿ ಗ್ರಾಮಸ್ಥರ ನಡುವೆ ಕಲ್ಲು ತೂರಾಟವಾಗಿದೆ. ಘಟನೆಯಲ್ಲಿ ಎರಡು ಗ್ರಾಮದ ಹತ್ತು ಜನರಿಗೆ ಗಾಯವಾಗಿದ್ದು, ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಕಲ್ಲು ತೂರಾಟದ ಘಟನೆ ಹಿನ್ನಲೆ: ಮಾದನಬಾವಿ ಹಾಗು ಬಸವನಹಳ್ಳಿ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಗ್ರಾಮಗಳು. ಗೋವಿನಕೋವಿ ಗ್ರಾಮದ ಗೆಡ್ಡೆ ರಾಮೇಶ್ವರ ದೇವಸ್ಥಾನಕ್ಕೆ ಮಾದನಬಾವಿ ಯ ಬೀರಲಿಂಗೇಶ್ವರ ದೇವರನ್ನು ಪೂಜೆಗೆ ಕರೆದೊಯ್ಯುವ ಸಂಪ್ರದಾಯ ಮೊದಲಿನಿಂದಲು ಇದೆ. ಯುಗಾದಿಯಾದ ನಂತರ ಪೂಜೆ ಗೆ ಕರೆದೊಯ್ಯುವ ಸಂಪ್ರದಾಯವಿದ್ದು ಈ ಬಾರಿ ಗೆಡ್ಡೆ ರಾಮೇಶ್ವರಕ್ಕೆ ಹೋಗಿದ್ದಾರೆ. ಬಸವನಹಳ್ಳಿ ಗ್ರಾಮದೊಳಗೆ ಬೀರಲಿಂಗೇಶ್ವರ ಉತ್ಸವ ಹೋಗುವ ವೇಳೆಯಲ್ಲಿ ಎರಡು ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದು ದೊಡ್ಡ ಗಲಾಟೆಯಾಗಿದೆ.
ಜಾತಿ ಪ್ರಮಾಣಪತ್ರ ವಿವಾದ: ಎಂ.ಪಿ ರೇಣುಕಾಚಾರ್ಯ ಸಹೋದರ ಸೇರಿ 11 ಮಂದಿ ವಿರುದ್ಧ FIR
ಇದೇ ವಿಚಾರಕ್ಕೆ ಸಂಬಂಧಿಸಿ 20 ವರ್ಷಗಳ ಕೆಳಗೆ ದೊಡ್ಡ ಗಲಾಟೆಯಾಗಿ ಪ್ರಕರಣ ಕೋರ್ಟ್ಮೆಟ್ಟಿಲೇರಿತ್ತು. ಆ ಸಂದರ್ಭದಲ್ಲಿ 20 ನಿಮಿಷಗಳ ಅವಧಿಯಲ್ಲಿ ಬಸವನಾಳು ಗ್ರಾಮದಿಂದ ಉತ್ಸವ ಹೊರ ಹೋಗಬೇಕು ಎಂದು ಕೋರ್ಟ್ ಅದೇಶವಾಗಿತ್ತು. ಉತ್ಸವ ಎರಡು ಗಂಟೆ ಸಮಯವಾದ್ರು ಗ್ರಾಮ ಬಿಟ್ಟು ಹೋಗದ ಹಿನ್ನಲೆ ಶುರುವಾದ ಗಲಾಟೆ ವಿಕೋಪಕ್ಕೆ ಹೋಗಿದೆ. ಎರಡು ಗುಂಪುಗಳಿಂದ ಕಲ್ಲು ತೂರಾಟವಾಗಿ ಘಟನೆಯಲ್ಲಿ 10 ಜನರಿಗೆ ಗಾಯವಾಗಿದೆ. ಸ್ಥಳಕ್ಕೆ ಎಸ್ಪಿ ರಿಷ್ಯಂತ್ ಭೇಟಿ ನೀಡಿ ಪರಿಸ್ಥಿತಿಗೊಳಿಸಲು ಯತ್ನಿಸಿದ್ದಾರೆ. ಸ್ಥಳದಲ್ಲಿ ಪೊಲೀಸರು ಮೊಕ್ಕಂ ಹೂಡಿದ್ದಾರೆ.
ಪಟ್ಟು ಸಡಿಲಿಸದೇ ದೇವರ ಹಿಡಿದು ಕೂತ ಗ್ರಾಮಸ್ಥರು: ಗೆಡ್ಡೆರಾಮೇಶ್ವರಕ್ಕೆ ತೆರಳಿ ವಾಪಸ್ಸು ಬಸವನಹಳ್ಳಿ ಮೂಲಕವೇ ಮಾದನಬಾವಿಗೆ ಬೀರಲಿಂಗೇಶ್ವರ ಉತ್ಸವ ಸಾಗಬೇಕಿದೆ.ಇದೀಗ ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದೆ. ಮಾದನಬಾವಿಯವರು ಮತ್ತೇ ಬಸವನಹಳ್ಳಿ ಗ್ರಾಮದಲ್ಲಿ ಹೋಗಬೇಕೆಂದು ಪಟ್ಟು ಹಿಡಿದು ದೇವರ ಹಿಡಿದು ಧರಣಿ ಕೂತಿದ್ದಾರೆ. ನಮ್ಮ ಗ್ರಾಮದ ಮುಖಾಂತರ ಉತ್ಸವ ವಾಪಸ್ಸು ಹೋಗುವುದಕ್ಕೆ ಬಿಡುವುದಿಲ್ಲ ಎಂದು ಬಸವನಹಳ್ಳಿ ಗ್ರಾಮಸ್ಥರು ಇನ್ನೊಂದೆಡೆ ಪಟ್ಟು ಹಿಡಿದಿದ್ದಾರೆ.
ಹಳ್ಳಿಗಳಲ್ಲಿ ಹೊನ್ನಾರು ಸಡಗರ: ನೇಗಿಲು ಹಿಡಿದ ಡಿಸಿ, ಟ್ರಾಕ್ಟರ್ ಏರಿದ ರೇಣುಕಾಚಾರ್ಯ
ಶಾಸಕ ರೇಣುಕಾಚಾರ್ಯ ಸಂದಾನಕ್ಕೆ ಬಗ್ಗದ ಗ್ರಾಮಸ್ಥರು: ಹೊನ್ನಾಳಿ ಶಾಸಕ ರೇಣುಕಾಚಾರ್ಯ ಘಟನಾ ಸ್ಥಳಕ್ಕೆ ಆಗಮಿಸಿ ಎರಡು ಗ್ರಾಮಸ್ಥರ ಮನವೊಲಿಸಲು ಪ್ರಯತ್ನಿಸಿದ್ರು ಶಾಸಕರು ಮಾತಿಗೆ ಸೊಪ್ಪು ಹಾಕಿಲ್ಲ. ಇನ್ನೊಂದೆಡೆ ಎರಡು ಗ್ರಾಮಗಳ ಜೊತೆ ಸಂದಾನಕ್ಕೆ ಎಸ್ ಪಿ ರಿಷ್ಯಂತ್ ಮುಂದಾಗಿದ್ದಾರೆ. ಮಾದನಬಾವಿ ಗ್ರಾಮಸ್ಥರನ್ನು ಗೋವಿನಕೋವಿ ಗ್ರಾಮದ ಗಡಿಯಲ್ಲಿಯೇ ತಡೆದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದ್ದಾರೆ. ಇದೇ ರಸ್ತೆಯಲ್ಲಿ ವಾಪಸ್ಸು ಹೋಗುತ್ತೇವೆ ಎಂದು ಪಟ್ಟು ಹಿಡಿದ ಮಾದನಬಾವಿ ಗ್ರಾಮಸ್ಥರು ರಾತ್ರಿಯಿಡಿ ಇಲ್ಲೇ ಕೂರುತ್ತೇವೆ ಎಂದು ರಸ್ತೆಯಲ್ಲಿ ದೇವರನ್ನು ಇಟ್ಟು ಕುಳಿತಿದ್ದಾರೆ. ಒಟ್ಟಾರೆ ಎರಡು ಗ್ರಾಮಸ್ಥರು ಪ್ರತಿಷ್ಠೆಗೆ ಬಿದ್ದಿದ್ದು ಪೊಲೀಸರು ನಿದ್ರೆ ಇಲ್ಲದೇ ಜಾಗರಣೆ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ