
ಶಿವಮೊಗ್ಗ (ನ.10): ನನಗೆ ಹಸಿವಾಗಿದೆ ಬಂದು ಊಟ ಕೊಡು ಎಂದು ಹೇಳಿದರೂ ಗಂಡನಿಗೆ ಊಟ ಕೊಡದೇ ಮೊಬೈಲ್ನಲ್ಲಿ ಮಾತನಾಡುತ್ತಾ ಹರಟೆ ಹೊಡೆಯುತ್ತಿದ್ದ ಹೆಂಡತಿಯ ಮೇಲೆ ಹಲ್ಲೆ ಮಾಡಿದ ಗಂಡ ಆಕೆಯ ಉಸಿರನ್ನೇ ನಿಲ್ಲಿಸಿದ್ದಾನೆ.
ಈ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಅಂಬ್ಲಿಗೋಳ ಗ್ರಾಮದಲ್ಲಿ ನಿನ್ನೆ ಸಂಜೆ ನಡೆದಿದೆ. ಮೊಬೈಲ್ ಫೋನ್ ನಲ್ಲಿ ಮಾತನಾಡುತ್ತಾ ಊಟ ಬಡಿಸಲು ಒಪ್ಪದ ಪತ್ನಿಯನ್ನು ಆಕೆಯ ಗಂಡನೇ ಕೊಲೆ ಮಾಡಿದ್ದಾರೆ. ಮೃತ ಗೃಹಿಣಿ ಗಾರ್ಮೆಂಟ್ಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಗೌರಮ್ಮ (28) ಎಂದು ತಿಳಿದುಬಂದಿದೆ. ಈ ಮಹಿಳೆಯ ಗಂಡ ಮನು ಎಂಬ ವ್ಯಕ್ತಿಯೇ ತನ್ನ ಹೆಂಡತಿ ಗೌರಮ್ಮನನ್ನು ಕೊಲೆ ಮಾಡಿ ಬೀಸಾಡಿದ್ದಾನೆ. ಆದರೆ, ಕೇವಲ ಊಟ ಬಡಿಸಲಿಲ್ಲ ಎಂಬ ಕಾರಣಕ್ಕೆ ಹೆಂಡತಿಯನ್ನು ಕೊಲೆ ಮಾಡಿದ್ದಾನೆ ಎಂಬ ವಿಚಾರ ಮಾತ್ರ ಎಲ್ಲೆಡೆ ವೈರಲ್ ಆಗುತ್ತಿದೆ.
ಎಂದಿನಂತೆ ಕೆಲಸ ಮುಗಿಸಿಕೊಂಡು ಬಂದ ಗಂಡ ತನ್ನ ಹೆಂಡತಿ ಗೌರಮ್ಮನಿಗೆ ನಿನ್ನೆ ರಾತ್ರಿ ವೇಳೆ ಊಟ ಕೊಡುವಂತೆ ಕೇಳಿದ್ದಾನೆ. ಆದರೆ, ಹೆಂಡತಿ ಮಾತ್ರ ಮೊಬೈಲ್ ಫೋನಿನಲ್ಲಿ ಮಾತನಾಡುತ್ತಾ ಗಂಡನಿಗೆ ಊಟ ಕೊಡಲು ನಿರಾಕರಿಸಿದ್ದಾಳೆ. ನಿನಗೆ ಕೈ ಇಲ್ಲವೇ ನೀನೇ ಊಟ ಬಡಿಸಿಕೊಂಡು ಮಾಡು ಹೋಗು ಎಂದು ಹೇಳಿದ್ದಾಳೆ. ಜೊತೆಗೆ, ನಾನು ಫೋನಿನಲ್ಲಿ ಮಾತನಾಡುತ್ತಿದ್ದೇನೆ, ಈಗ ಊಟ ಕೊಡಲು ಆಗುವುದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿ ಕಳಿಸಿದ್ದಾಳೆ. ಆದರೂ, ಮತ್ತೊಂದು ಬಾರಿ ಹೆಂಡತಿಯನ್ನು ಊಟ ಕೊಡುವಂತೆ ಕೇಳಿದಾಗ ಸಿಟ್ಟಾಗಿ ಕೊಡುವುದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕಾರಿಗೆ ಗುದ್ದುವ ಮುನ್ನ ಇಲ್ನೋಡಿ ಸ್ವಾಮಿ! ಇನ್ನೂ ಇಎಂಐ ಬಾಕಿಯಿದೆ!
ಹೆಂಡತಿ ತನಗೆ ಊಟ ಕೊಡಲು ನಿರಾಕರಿಸಿದ್ದರಿಂದ ಕೋಪಗೊಂಡ ಗಂಡ ಮನು, ಏಕಾಏಕಿ ಪತ್ನಿಗೆ ಥಳಿಸಿ ನಂತರ ಟವೆಲ್ನಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಇದಾದ ನಂತರ ಹೆಂಡತಿಯ ತಂದೆಗೆ ಕರೆ ಮಾಡಿ ನಿಮ್ಮ ಮಗಳು ಸತ್ತು ಹೋಗಿದ್ದಾಳೆ ಎಂದು ಹೇಳಿದ್ದಾನೆ. ಆಗ ಮಗಳನ್ನು ಕಳೆದುಕೊಂಡ ದುಃಖದಿಂದ ಸ್ಥಳಕ್ಕೆ ಬಂದ ಮೃತ ಮಹಿಳೆಯ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ಶಿಕಾರಿಪುರ ಗ್ರಾಮಾಂತರ ಠಾಣೆ ಪೊಲೀಸರು ಮಹಿಳೆಯ ತಂದೆ ನೀಡಿದ ದೂರನ್ನು ದಾಖಲಿಸಿಕೊಂಡು ಆಕೆಯ ಗಂಡ ಮನು ಎಂಬಾತನನ್ನು ಬಂಧಿಸಿದ್ದಾರೆ. ಈ ಘಟನೆ ಕುರಿತು ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ