
ಬೆಂಗಳೂರು (ಏ.03): ಬೆಂಗಳೂರಿನ ಹೊಸಕೆರೆಹಳ್ಳಿ ಬಳಿಯ ನೈಸ್ ರಸ್ತೆಯಲ್ಲಿ ಸ್ಕೂಟರ್ ಟೈರ್ ಬಸ್ಟ್ ಆಗಿ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದು, ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಸಾಪ್ಟ್ವೇರ್ ಇಂಜಿನಿಯರ್ ಸುಲೋಚನಾ ಇಂದು ಬೆಳಗ್ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
ಹೊಸಕೆರೆಹಳ್ಳಿಯ ನೈಸ್ ರಸ್ತೆಯಲ್ಲಿ ನಡೆದ ಅಪಘಾತ ಪ್ರಕರಣದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಸಾಫ್ಟ್ವೇರ್ ಇಂಜನಿಯರ್ ಸುಲೋಚನಾ (24) ಸಾವನ್ನಪ್ಪಿದ್ದಾಳೆ. ಕೋರಮಂಗಲದಿಂದ ಹೊಸಕೆರೆಹಳ್ಳಿ ಕಡೆಗೆ ಸುಲೋಚನಾ ಮತ್ತು ಆಕೆಯ ಸ್ನೇಹಿತ ಆನಂದ್ ಹೋಗುತ್ತಿದ್ದರು. ಈ ವೇಳೆ ಸ್ನೇಹಿತ ಆನಂದ್ ಪೂರ್ಣ ಹೆಲ್ಮೇಟ್ ಧರಿಸಿದ್ದು, ಸುಲೋಚನಾ ಅರ್ಧ ಹೆಲ್ಮೆಟ್ ಧರಿಸಿದ್ದರು. ಇನ್ನು ನೈಸ್ ರಸ್ತೆಯಲ್ಲಿ ವೇಗವಾಗಿ ಹೋಗುವಾಗ ಸ್ಕೂಟರ್ನ ಟೈರ್ ಸ್ಪೋಟಗೊಂಡು (ಟೈರ್ ಬಸ್ಟ್) ರಸ್ತೆ ಬದಿಯ ಕಬ್ಬಿಣದ ತಡೆಗೋಡೆಗೆ ಹೋಗಿ ಡಿಕ್ಕಿ ಹೊಡೆದು ಬಿದ್ದಿದ್ದಾರೆ. ಇನ್ನು ರಸ್ತೆಗೆ ಬಿದ್ದ ರಭಸಕ್ಕೆ ಇಬ್ಬರಿಗೂ ತಲೆ ಹಾಗೂ ದೇಹದ ಇತರೆ ಭಾಗಗಳಿಗೆ ತೀವ್ರ ಪೆಟ್ಟಾಗಿತ್ತು. ಇಬ್ಬರೂ ಗಾಯಾಳುಗಳು ತೀವ್ರ ರಕ್ತಸ್ರಾವ ಉಂಟಾಗಿ ರಸ್ತೆ ಬದಿ ಅರೆ ಪ್ರಜ್ಞಾವಸ್ಥೆಯಲ್ಲಿ ಬಿದ್ದು ನರಳುತ್ತಿದ್ದರು.
ಗರ್ಭಿಣಿ ಸಾಯಿಸಿದ ಸರ್ಕಾರಿ ವೈದ್ಯರು: ತಾಯಿ ಸತ್ತರೂ ಮಗು ಬದುಕಿಸಿದ ಖಾಸಗಿ ವೈದ್ಯರು.!
ಅರ್ಧ ಹೆಲ್ಮೆಟ್ ಧರಿಸಿದ್ದರಿಂದ ತಲೆಗೆ ತೀವ್ರ ಪೆಟ್ಟು: ಇನ್ನು ಸ್ಕೂಟರ್ ಸವಾರರು ಗಾಯಗೊಂಡು ಬಿದ್ದಿರುವುದನ್ನು ಕಂಡ ದಾರಿಹೋಕರು ಗಮನಿಸಿ ಹತ್ತಿರದ ಇಬ್ಬರೂ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಸುಲೋಚನಾ ಅರ್ಧ ಹೆಲ್ಮೆಟ್ ಧರಿಸಿದ್ದರಿಂದ ತಲೆಗೆ ತೀವ್ರ ಹೊಡೆತ ಬಿದ್ದಿದ್ದು, ಕಿವಿಯಲ್ಲಿಯೂ ರಕ್ತಸ್ರಾವ ಉಂಟಾಗಿತ್ತು. ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ ಹಿನ್ನೆಲೆಯಲ್ಲಿ ಚಿಕಿತ್ಸೆ ಫಲಿಸದೇ ಸುಲೋಚನಾ ಇಂದು ಬೆಳಗ್ಗಿನ ವೇಳೆ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ನಂತರ ಸುಲೋಚನಾ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.
ಆನಂದ್ ಸ್ಥಿತಿಯೂ ಗಂಭೀರ: ಸುಲೋಚನಾಳೊಂದಿಗೆ ಹೋಗುತ್ತಿದ್ದ ಆನಂದ್ ದೊಡ್ಡ ಹೆಲ್ಮೆಟ್ ಧರಿಸಿದ್ದರಿಂದ ಅವರು ನೆಲಕ್ಕೆ ಬಿದ್ದರೂ ತಲೆಗೆ ಹೆಚ್ಚಿನ ಗಾಯವಾಗಿಲ್ಲ. ಆದರೆ, ಎದೆ ಮತ್ತು ದೇಹದ ಇತರೆ ಭಾಗಗಳಿಗೆ ಗಂಭೀರ ಗಾಯವಾಗಿದ್ದು, ಒಮದು ಕಡೆ ಕೈ ಮುರಿತವಾಗಿದೆ. ಆನಂದ್ಗೆ ಈಗಲೂ ಚಿಕಿತ್ಸೆ ಮುಂದುವರೆಯುತ್ತಿದೆ. ಆದರೆ, ಇಂಜಿನಿಯರ್ ಆನಂದ್ ಸ್ಥಿತಿಯೂ ಕೂಡ ಗಂಭೀರವಾಗಿದೆ. ಅವರ ಆರೋಗ್ಯ ಚೇತರಿಕೆ ಬಗ್ಗೆ ವೈದ್ಯರು ಯಾವುದೇ ಭರವಸೆಯನ್ನೂ ನೀಡಿಲ್ಲ. ಇನ್ನು ಸುಲೋಚನಾ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಘಟನೆ ಕುರಿತು ಕೆಂಗೇರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.
Bengaluru Accident: ನಾಯಂಡಹಳ್ಳಿ ಜಂಕ್ಷನ್ನಲ್ಲಿ ಭೀಕರ ಅಪಘಾತ: ಮಹಿಳೆ ತಲೆಮೇಲೆ ಹರಿದ ಲಾರಿ
ಬೇಸಿಗೆ ವೇಳೆ ಟೈರ್ ಬಗ್ಗೆ ಎಚ್ಚರವಿರಲಿ: ಇನ್ನು ಬೈಕ್, ಕಾರು ಮತ್ತು ಮತ್ಯಾವುದೇ ವಾಹನಗಳ ಬೈಕ್ಗಳ ಬಗ್ಗೆ ಎಲ್ಲ ವಾಹನ ಸವಾರರು ಎಚ್ಚರಿಕೆವಹಿಸಬೇಕು. ಬೇಸಿಗೆಯ ಹಿನ್ನೆಲೆಯಲ್ಲಿ ಸವೆದು ಹೋಗಿರುವ ಟೈರ್ಗಳು ಸ್ಫೋಟಗೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ಹಿನ್ನೆಲೆಯಲ್ಲಿ ವಾಹನ ಸವಾರರು ಮುಂಜಾಗ್ರತಾ ಕ್ರಮವಾಗಿ ವಾಹನಗಳ ಟೈರ್ಗಳನ್ನು ಬದಲಿಸಿ ಮುಂದಾಗುವ ಅಪಘಾತಗಳಿಂದ ತಪ್ಪಿಸಿಕೊಳ್ಳಬಹುದು.
ನಾಯಂಡಹಳ್ಳಿಯಲ್ಲಿ ಮಹಿಳೆ ತಲೆ ಮೇಲೆ ಹರಿದ ಲಾರಿ: ರಾಜ್ಯ ರಾಜಧಾನಿಯಲ್ಲಿ ನಿನ್ನೆ ಭಾನುವಾರ ಪ್ರತ್ಯೇಕವಾಗಿ ಮೂರ್ನಾಲ್ಕು ಅಪಘಾತ ಪಗ್ರಕರಣಗಳು ಸಂಭವಿಸಿವೆ. ನಾಯಂಡಹಳ್ಳಿಯಲ್ಲಿ ಮಧ್ಯಾಹ್ನ ನಡೆದ ಭೀಕರ ಅಪಘಾತದಲ್ಲಿ ಸಿಮೆಂಟ್ ಲಾರಿಯೊಂದು ಸ್ಕೂಟರ್ನಲ್ಲಿ ಹೋಗುತ್ತಿದ್ದ ಮಹಿಳೆಗೆ ಗುದ್ದಿ, ನಂತರ ಆಕೆಯ ತಲೆ ಮೇಲೆ ಹರಿದಿತ್ತು. ಇದೇ ಘಟನೆಯಲ್ಲಿ ಹಿಂಬದಿ ಸವಾರಳಾಗಿದ್ದ ಮಂಜಮ್ಮ ಅವರ ಕಾಲುಗುಗಳು ತುಂಡಾಗಿದ್ದವು. ಇನ್ನು ಅದೃಷ್ಟವಶಾತ್ ಎಂಬಂತೆ ಅವರ ಬೈಕ್ನಲ್ಲಿಯೇ ಇದ್ದ ಮೃತ ಮಹಿಳೆ ಅನುಷಾಳ ಮಗನಿಗೆ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದನು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ