ಮನೆಯಲ್ಲಿ ಮಲಗಿದ್ದ ಬಾಲಕನನ್ನು ಕಚ್ಚಿಕೊಂದ ವಿಷಕಾರಿ ಕೊಳಕು ಮಂಡಲ ಹಾವು

By Sathish Kumar KHFirst Published Dec 17, 2022, 12:10 PM IST
Highlights

ಮನೆಯೊಳಗೆ ತಂದೆ-ತಾಯಿ ಜೊತೆಗೆ ಮಲಗಿದ್ದ 8 ವರ್ಷದ ಬಾಲಕನನ್ನು ವಿಷಕಾರಿ ಕೊಳಕು ಮಂಡಲ ಹಾವು ಕಚ್ಚಿ ಕೊಂದಿರುವ ಘಟನೆ ಬೀದರ್‌ ಜಿಲ್ಲೆಯ ಭಂಡಾರ ಕುಮುಟಾ ಗ್ರಾಮದಲ್ಲಿ ನಡೆದಿದೆ. 

ಬೀದರ್ (ಡಿ.17):  ಮಕ್ಕಳನ್ನು ನಾವು ಎಷ್ಟೇ ಕಾಳಜಿಯಿಂದ ನೋಡಿಕೊಳ್ಳುತ್ತೇವೆ ಎಂದರೂ, ನಮ್ಮ ಮನೆಯ ಸುತ್ತಲಿನ ವಾತಾವರಣವನ್ನು ಶುದ್ಧವಾಗಿ ಹುಳು-ಹುಪ್ಪಡಿಗಳು ಮನೆಯೊಳಗೆ ಬಾರದಂತೆ ಜಾಗ್ರತೆ ವಹಿಸಬೇಕು. ಆದರೆ, ಬೀದರ್‌ನಲ್ಲಿ ಮನೆಯೊಳಗೇ ಬಂದಿರುವ ಭಾರಿ ವಿಷಕಾರಿಯಾಗಿರುವ ಕೊಳಕು ಮಂಡಲ ಹಾವು ತಂದೆ-ತಾಯಿ ಜೊತೆಗೆ ಮಲಗಿದ್ದ ಮಗನಿಗೆ ಕಚ್ಚಿದೆ. ಹಾವು ಕಡಿತ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ದಾಖಲಾದರೂ ಮಗನನ್ನು ಬುದುಕಿಸಿಕೊಳ್ಳಲು ಸಾಧ್ಯವಾಗದೇ ದುರಂತವಾಗಿ ಸಾವನ್ನಪ್ಪಿದೆ.

ಇನ್ನು ಮೃತಪಟ್ಟ ಬಾಲಕನನ್ನು ರಾಮದಾಸ್‌ ಮಾಧವ್ (8) ಆಗಿದ್ದಾನೆ. ಬೀದರ್‌ ಜಿಲ್ಲೆಯ ಭಂಡಾರ ಕುಮುಟಾ ಗ್ರಾಮದಲ್ಲಿ ದುರಂತ ಘಟನೆ ನಡೆದಿದೆ. ತಂದೆ- ತಾಯಿ ಜತೆಯಲ್ಲಿ ಮನೆಯಲ್ಲಿ ಮಲಗಿದ್ದ ವೇಳೆ ಬಾಲಕನ ಮೈಗೆ ಕೊಳಕು ಮಂಡಲ ಹಾವು ಸುತ್ತಿಕೊಂಡಿದೆ. ಇನ್ನು ಮಗುವಿಗೆ ಸುತ್ತಿಕೊಂಡಿರುವ ಹಾವನ್ನು ತೆಗೆಯಲು ತಂದೆ ಹರಸಾಹಸ ಮಾಡಿದ್ದಾರೆ. ಆದರೆ, ಮೈಗೆ ಸುತ್ತಿಕೊಂಡಿರುವ ವಿಷಕಾರಿ ಹಾವು ಮನಬಂದಂತೆ ಮಗನ್ನು ಕಚ್ಚಿ ವಿಷವನ್ನು ಬಿಟ್ಟಿದೆ. ಇನ್ನು ಹಾವನ್ನು ಜೀವಂತವಾಗಿ ತೆಗೆಯಲಾಗದೇ ಅದನ್ನು ಸಾಯಿಸಿ ಮಗನಿಂದ ಬಿಡಿಸಿ ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ಭಾರಿ ವಿಷಕಾರಿ ಆಗಿರುವ ಹಾವು ಕಚ್ಚಿದ್ದರಿಂದ ವಿಷವು ದೇವನ್ನು ವ್ಯಾಪಿಸಿದ್ದು, ಚಿಕಿತ್ಸೆ ಫಲಕಾರಿಯಾಗಿಲ್ಲ. 

ಆಟವಾಡುತ್ತಿದ್ದ 2 ವರ್ಷದ ಬಾಲಕನ ನುಂಗಿದ ಹಿಪ್ಪೋ, ಬಳಿಕ ನಡೆದಿದ್ದೆಲ್ಲಾ ಪವಾಡ!

 

ನಾಗರ ಹಾವಿಗಿಂತ 5 ಪಟ್ಟು ವಿಷಕಾರಿ: ಇನ್ನು ನಮ್ಮ ರಾಜ್ಯದಲ್ಲಿ ಒಟ್ಟು 8 ವಿಷಕಾರಿ ಹಾವುಗಳು ಎಂದು ಗುರುತಿಸಲಾಗಿದೆ. ಅದರಲ್ಲಿ ನಾಗರಹಾವು ಅತ್ಯಂತ ವಿಷಕಾರಿ ಹಾವು ಎಂದು ನಾವು ಹೇಳುತ್ತೇವೆ. ಆದರೆ, ವೈಜ್ಞಾನಿಕ ಅಧ್ಯಯಮ ಹೇಳುವ ಪ್ರಕಾರ ಕೊಳಕು ಮಂಡಲ (Russell's Viper) ಹಾವು ನಾಗರ ಹಾವಿಗಿಂತ 5 ಪಟ್ಟು ವಿಷಕಾರಿ ಆಗಿದೆ. ಈ ಹಾವು ಸಾಮಾನ್ಯವಾಗಿ ನೆಲದ ಮೇಲೆ ಹರಿದಾಡುತ್ತಿದ್ದರೆ ಯಾರ ಮೇಲೆಯೂ ದಾಳಿ ಮಾಡುವುದಿಲ್ಲ. ಒಂದು ವೇಳೆ ಅದು ಯಾವುದಾದರೂ ಪ್ರಾಣಿಗೆ ಸುತ್ತಿಕೊಂಡಿದೆ ಎಂದರೆ ಅದು ದಾಳಿ ಮಾಡುವುದು ಶತಃಸಿದ್ಧ. ಹೀಗಾಗಿ, ಕೊಳಕುಮಂಡಲ ಹಾವಿನಿಂದ ತೀವ್ರ ಎಚ್ಚರಿಕೆಯಿಂದ ಇರಬೇಕು ಎಂದು ವನ್ಯಜೀವಿ ಸಂರಕ್ಷಕ ಪ್ರಸನ್ನ ಕುಮಾರ್‌ ತಿಳಿಸಿದ್ದಾರೆ.

ಮುಗಿಲು ಮುಟ್ಟಿದ ಕುಟುಂಬದ ಆಕ್ರಂದನ: ಮಕ್ಕಳನ್ನು ತಂದೆ ತಾಯಿಗಳು ಪೋಷಣೆ ಮಾಡುವಲ್ಲಿ ಯಾವುದಾದರೂ ನಿರ್ಲಕ್ಷ್ಯ ಮಾಡಿ ಸಾವನ್ನಪ್ಪಿದರೆ ಸಹಿಸಿಕೊಳ್ಳಬಹುದು. ಆದರೆ, ತಮ್ಮ ಅಂಗೈಯಲ್ಲಿನ ಬೆಣ್ಣೆಯಂತೆ ಮಗನನ್ನು ಪೋಷಣೆ ಮಾಡುತ್ತಿದ್ದರೂ ವಿಷಕಾರಿ ಹಾವು ಮನೆಯೊಳಗೆ ಬಂದು ಕಚ್ಚಿ ಸಾಯಿಸಿರುವುದು ಕುಟುಂಬದವರಿಗೆ ಬರಸಿಡಿಲು ಬಡಿದಂತಾಗಿದೆ. ಇನ್ನು ಹಾವು ತಮ್ಮ ಮಗಲನ್ನು ಸುತ್ತಿಕೊಂಡು ಕಚ್ಚುವುದನ್ನು ತಡೆಯಲಾಗದೇ ಹಾಗೂ ಆಸ್ಪತ್ರೆಗೆ ತೆಗೆದುಕೊಂಡು ಹೋದರೂ ಬದುಕಿಸಿಕೊಳ್ಳಲಾಗಲಿಲ್ಲ ಎಂಬುದು ಕುಟುಂಬವನ್ನು ಮತ್ತಷ್ಟು ದುಃಖಕ್ಕೆ ಈಡು ಮಾಡಿದೆ. ಇನ್ನು ಪೋಷಕರ ಕುಟುಂಬದ ಆಕ್ರಂದ ಮುಗಿಲು ಮುಟ್ಟಿದ್ದು, ಇಡೀ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.

ಚಿಕ್ಕಬಳ್ಳಾಪುರ: ಹಾವು ತಪ್ಪಿಸಲು ಹೋಗಿ ಟ್ರಕ್‌ ಚಾಲಕ ಎಡವಟ್ಟು, ಸರಣಿ ಅಪಘಾತ

30 ಲಕ್ಷ ರೂ. ಪರಿಹಾರ ಕೊಡಿ: ವನ್ಯಜೀವಿ ಸಂರಕ್ಷಣಾ ಕಾಯ್ದೆ ಪ್ರಕಾರ ಶೆಡ್ಯೂಲ್‌ 1 ನಲ್ಲಿ ಬರುತ್ತದೆ. ಆನೆ ದಾಳಿ ಮತ್ತು ಹುಲಿ ದಾಳಿಗೆ ನೀಡುವ ಪರಿಹಾರ ಮೊತ್ತದಷ್ಟೇ ಪರಿಹಾರ ಕೊಡಬೇಕು. ಸಾರ್ವಜನಿಕರು ಮತ್ತು ಅವರ ಮಕ್ಕಳು ಹಾವು ಕಡಿತದಿಂದ ಸಾವನ್ನಪ್ಪಿದಾಗ ಕುಟುಂಬದವರು ಸರ್ಕಾರಕ್ಕೆ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಬೇಕು. ಆದರೆ, ಸರ್ಕಾರ ಹಾವು ದಾಳಿಯಿಂದ ಸಾವನ್ನಪ್ಪಿದ ಕುಟುಂಬಕ್ಕೆ ವನ್ಯ ಜೀವಿ ಸಂರಕ್ಷಣೆ ಕಾಯ್ದೆಯಲ್ಲಿರುವ ನಿಯಮ ಉಲ್ಲಂಘನೆ ಮಾಡಿ ಅತ್ಯಂತ ಕಡಿಮೆ ಪರಿಹಾರ ನೀಡಲಾಗುತ್ತಿದೆ. ಕೂಡಲೇ ಪರಿಹಾರ ಮೊತ್ತವನ್ನು ಸರ್ಕಾರ 30 ಲಕ್ಷ ರೂ.ಗೆ ಹೆಚ್ಚಳ ಮಾಡಿ ಸಾರ್ವಜನಿಕರ ಸಾವಿಗೆ ನ್ಯಾಯ ಒದಗಿಸಬೇಕು.

ವಾರ್ಷಿಕ 50 ಸಾವಿರ ಜನರ ಸಾವು: 
ಅತಿ ಹೆಚ್ಚು ವನ್ಯಜೀವಿಗಳಿಂದ ಮೃತ ಪಡುತ್ತಿರುವ ಪ್ರಕರಣಗಳಲ್ಲಿ ಶೇ.೯೦ ಹಾವು ಕಡಿತದಿಂದ ಸಾವನ್ನಪ್ಪಿದ ಪ್ರಕರಣಗಳಾಗಿವೆ. ವಿಶ್ವ ಆರೋಗ್ಯ ಸಂಸ್ಥೆ ಇತ್ತೀಚೆಗೆ ಬಿಡುಗಡೆ ಮಾಡಿದ ವರದಿ ಅನ್ವಯ ಭಾರತದಲ್ಲಿ ಅತಿ ಹೆಚ್ಚು  50 ಸಾವಿರ ಜನರು ಹಾವು ಕಡಿತದಿಂದ ಸಾವನ್ನಪ್ಪುತ್ತಿದ್ದಾರೆ. ಇನ್ನು ದೇಶದಲ್ಲಿ ಚಿರತೆ, ಆನೆ, ಹುಲಿ ಅಥವಾ ಇತರೆ ವನ್ಯಜೀವಿಗಳು ದಾಳಿ ಮಾಡಿ ಮಾನವರ ಸಾವನ್ನಪ್ಪುವ ಪ್ರಮಾಣಕ್ಕಿಂತ ಹಾವು ಕಡಿತದಿಂದ ಸಾವನ್ನಪ್ಪುವ ಪ್ರಮಾಣ ಶೇ.90 ರಷ್ಟಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ಜೊತೆಗೆ, ಹಾವು ಕಡಿತಕ್ಕೆ ಸಂಬಂಧಿಸಿದಂತೆ ಸೂಕ್ತ ಔಷಧೋಪಚಾರ ಸ್ಥಳೀಯ ಆಸ್ಪತ್ರೆಗಳಲ್ಲಿ ಲಭ್ಯವಾಗುವಂತೆ ಮಾಡಬೇಕು ಎಂದು ಸಾರ್ವಜನಿಕರಿಂದ ಒತ್ತಾಯ ಕೇಳಿಬಂದಿದೆ.

click me!