
ಚಿತ್ರದುರ್ಗ: ಮುರುಘಾ ಮಠದ ಶ್ರೀಗಳ ವಿರುದ್ಧ ಒಂದಾದ ಮೇಲೊಂದರಂತೆ ಪ್ರಕರಣಗಳು ದಾಖಲಾಗುತ್ತಿವೆ. ಹೊಸ ಪ್ರಕರಣಗಳ ಸಂಬಂಧ ವಿಚಾರಣೆಗೆಂದು ಪೊಲೀಸರು ಮೂರು ದಿನಗಳ ಕಾಲ ಮುರುಘಾ ಶ್ರೀಯನ್ನು ಕಸ್ಟಡಿಗೆ ಪಡೆದಿದ್ದಾರೆ. ಇಂದು ನ್ಯಾಯಾಲಯಕ್ಕೆ ಅವರನ್ನು ಹಾಜರುಪಡಿಸಿ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. 2ನೇ ಫೋಕ್ಸೋ ಪ್ರಕರಣ ಸಂಬಂಧ ಅವರನ್ನು ವಿಚಾರಣೆಗೊಳಪಡಿಸಲಿದ್ದಾರೆ. ಚಿತ್ರದುರ್ಗ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಪೊಲೀಸರ ಮನವಿ ಅಂಗೀಕರಿಸಿ ಆದೇಶ ನೀಡಿದೆ. ಗ್ರಾಮಾಂತರ ಠಾಣೆ ಸಿಪಿಐ ಬಾಲಚಂದ್ರ ನಾಯ್ಕ್ ನೇತೃತ್ವದಲ್ಲಿ ವಿಚಾರಣೆ ನಡೆಯಲಿದೆ. ಚಿತ್ರದುರ್ಗ ಡಿವೈಎಸ್ಪಿ ಕಚೇರಿಗೆ ಕರೆದೊಯ್ದು ಅವರನ್ನು ವಿಚಾರಣೆ ನಡೆಸಲಾಗುತ್ತದೆ.
ಪೂಜೆ ಕೈಂಕರ್ಯಕ್ಕೆ ಉತ್ತರಾಧಿಕಾರಿ:
ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಆರೋಪ ಎದುರಿಸುತ್ತಿರುವ ಮುರುಘಾ ಶ್ರೀ ವಿರುದ್ಧದ ಫೋಕ್ಸೊ ಪ್ರಕರಣ ಸಂಬಂಧಿಸಿದಂತೆ ದಿನಕ್ಕೊಂದು ತಿರುವು ಪಡೆಯುತ್ತಿದೆ. ಇಂದು ಪೂಜಾ ಕೈಂಕರ್ಯ ಉಸ್ತುವಾರಿಯನ್ನು ಅಧಿಕೃತವಾಗಿ ನೇಮಿಸುವ ಮೂಲಕ ಮುರುಘಾ ಶ್ರೀ ಆದೇಶ ಹೊರಡಿಸಿದ್ದಾರೆ. ಇದರ ಜೊತೆ ಜೊತೆಗೆ ಮುರುಘಾ ಶರಣರ ಪೀಠತ್ಯಾಗಕ್ಕೂ ಒತ್ತಡ ಹೆಚ್ಚು ಮುನ್ನೆಲೆಗೆ ಬರ್ತಿದೆ. ಮುರುಘಾ ಶರಣರ ವಿರುದ್ಧ ಫೋಕ್ಸೊ ಪ್ರಕರಣ ದಾಖಲಾದ ನಂತರ ಬೆಳವಣಿಗೆಗಳು ಗರಿಗೆದರಿವೆ. ಇಂದು ಬೆಳಿಗ್ಗೆ ಚಿತ್ರದುರ್ಗ ವೀರಶೈವ ಮಹಾಸಭಾ ಜಿಲ್ಲಾ ಘಟಕದಿಂದ ಸಭೆ ನಡೆಸಲಾಯಿತು. ವೀರಶೈವ ಮಹಾಸಭಾ ಅಧ್ಯಕ್ಷರಿಗೆ ಪತ್ರ ಬರೆದಿರುವ ಲಿಂಗಾಯತ ಮುಖಂಡರು ಮುರುಘಾ ಶ್ರೀ ನ್ಯಾಯಾಂಗ ಬಂಧನದಲ್ಲಿರುವ ಹಿನ್ನೆಲೆ ಮಠದ ಆಡಳಿತ, ಧಾರ್ಮಿಕ ಆಚರಣೆಗೆ ಧಕ್ಕೆಯುಂಟಾಗಿದೆ. ಮಠದ ಪೂಜಾ ಕೈಂಕರ್ಯಕ್ಕಾಗಿ ಹೆಬ್ಬಾಳು ಮಹಾಂತ ರುದ್ರೇಶ್ವರ ಸ್ವಾಮೀಜಿಗೆ ಮೌಖಿಕವಾಗಿಯಷ್ಟೇ ಸೂಚಿಸಲಾಗಿದೆ. ಮಠಕ್ಕೆ ಹೊಸ ಪೀಠಾಧಿಕಾರಿ ಆಯ್ಕೆ ಆಗಬೇಕು. ಈಗಾಗಲೇ ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್ವೈ ಅವರಿಗೆ ಭೇಟಿಯಾಗಿ ಮನವರಿಕೆ ಮಾಡಿದ್ದೇವೆ. ಸಿಎಂ, ಮಾಜಿ ಸಿಎಂ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ಎಂದರು.
ಇದನ್ನೂ ಓದಿ: ಬಾಲ ನ್ಯಾಯ ಕಾಯ್ದೆ ಉಲ್ಲಂಘನೆ: ಮುರುಘಾಶ್ರೀ ವಿರುದ್ದ ಮತ್ತೊಂದು ಕೇಸ್
ಇನ್ನು ವೀರಶೈವ ಮಹಾಸಭಾ ಮುಖ್ಯಸ್ಥರ ಹೇಳಿಕೆಯ ಕೆಲವೇ ಗಂಟೆಗಳಲ್ಲಿ ಮುರುಘಾಮಠದ ಪೂಜಾ ಉಸ್ತುವಾರಿಗಾಗಿ ದಾವಣಗೆರೆ ವಿರಕ್ತ ಮಠದ ಬಸವಪ್ರಭು ಶ್ರೀ ಅವರನ್ನು ಅಧಿಕೃತವಾಗಿ ಕಾನೂನಿನ ನಡೆಯಂತೆ ನೇಮಿಸಲಾದ ಬಗ್ಗೆ ಮಠದಿಂದ ಮಾಹಿತಿ ಹೊರಬಿತ್ತು. ಉಸ್ತುವಾರಿಯಾಗಿ ನೇಮಕವಾಗುತ್ತಿದ್ದಂತೆ ಬಸವಪ್ರಭು ಶ್ರೀ ಮುರುಘಾ ಪರಂಪರೆಯ ಸ್ಥಾಪಕರಾದ ಶಾಂತವೀರ ಸ್ವಾಮಿಗಳ ಗದ್ದುಗೆ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಇನ್ನು ಪೂಜೆಯ ಬಳಿಕ ಮಾತನಾಡಿದ ಬಸವಪ್ರಭು ಶ್ರೀ ಮುರುಘಾ ಶರಣರು ಆದೇಶ ಮಾಡಿದ್ದಾರೆ. ಶ್ರೀಮಠದ ಪೂಜೆ, ಅನ್ನದಾಸೋಹ, ಕೆಲಸ ಕಾರ್ಯಗಳನ್ನು ನೋಡಲು ಆದೇಶ ನೀಡಿದಾರೆ. ನಿಷ್ಟೆ ಭಕ್ತಿಯಿಂದ ಸೇವೆ ಮಾಡುತ್ತೇನೆ ಎಂದರು.
ಇದನ್ನೂ ಓದಿ: ಮುರುಘಾ ಶ್ರೀ ಜಾಮೀನು ಅರ್ಜಿ: ಸಂತ್ರಸ್ತೆಯರಿಗೆ ಹೈಕೋರ್ಟ್ ನೋಟಿಸ್
ಇತ್ತ ಬಸವಪ್ರಭು ಶ್ರೀಗಳು ಪೂಜಾ ಉಸ್ತುವಾರಿಯಾಗಿ ನೇಮಕವಾಗುತ್ತಲೇ ಹೆಬ್ಬಾಳು ಶಿವರುದ್ರ ಸ್ವಾಮೀಜಿ ಮುರುಘಾ ಮಠದಲ್ಲಿ ಕಾಣಿಸಿಕೊಂಡಿಲ್ಲ. ಬಸವಪ್ರಭು ಶ್ರೀ ನೇಮಕಕ್ಕೆ ಅವರು ಅಸಮಾಧಾನ ಸೂಚಿಸಿದ್ದಾರೆ ಎನ್ನಲಾಗುತ್ತಿದೆ. ಮುರುಘಾ ಶ್ರೀ ನ್ಯಾಯಾಂಗ ಬಂಧನಕ್ಕೊಳಗಾದ ನಂತರ ಮಠದ ಪೂಜಾ ಕೈಂಕರ್ಯಗಳನ್ನು ಶಿವರುದ್ರ ಸ್ವಾಮೀಜಿ ನೆರವೇರಿಸಿದ್ದರು. ಆ ಹಿನ್ನೆಲೆಯಲ್ಲಿ ಅವರು ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ