
ಬೆಂಗಳೂರು(ಜ.04): ಹಾಡುಹಗಲೇ ಫೈನಾನ್ಸಿಯರ್ ಮೇಲೆ ಹಲ್ಲೆ ನಡೆಸಿ ಹಣ ಕಸಿದು ಪರಾರಿಯಾಗಿದ್ದ ರೌಡಿಶೀಟರ್ ಕಾಲಿಗೆ ಸಂಪಿಗೆಹಳ್ಳಿ ಠಾಣೆ ಇನ್ಸ್ಪೆಕ್ಟರ್ ಭಾನುವಾರ ಬೆಳಗ್ಗೆ ಗುಂಡು ಹೊಡೆದು ಬಂಧಿಸಿದ್ದಾರೆ.
ರೌಡಿಶೀಟರ್ ಇಮ್ರಾನ್ ಅಲಿಯಾಸ್ ಲಾರಿ ಬಂಧಿತ ವ್ಯಕ್ತಿ. ಈತನ ಜತೆಗಿದ್ದ ನಿಜಾಮ್ ಅಲಿಯಾಸ್ ಕುಟ್ಟಿಹಾಗೂ ಉಬೇದ್ ಎಂಬುವರನ್ನು ಬಂಧಿಸಲಾಗಿದೆ. ಘಟನೆಯಲ್ಲಿ ಹೆಡ್ಕಾನ್ಸ್ಟೇಬಲ್ ಅಶೋಕ್ ಅವರ ಕೈಗೆ ಗಾಯವಾಗಿವೆ.
'ಸಿಎಂ ಸ್ಥಾನದಿಂದ ಯಡಿಯೂರಪ್ಪ ಕೆಳಗಿಳಿಯೋದು ಪಕ್ಕಾ'
ಕೋಗಿಲು ಲೇಔಟ್ ನಿವಾಸಿ, ಫೈನಾನ್ಸಿಯರ್ ಗೋಪಿಚಾಂದ್ (56) ಭಾನುವಾರ ಬೆಳಗ್ಗೆ 10ರ ಸುಮಾರಿಗೆ ಅವರು ಫೈನಾನ್ಸ್ ಹಣ ಕಲೆಕ್ಷನ್ ಮಾಡುತ್ತಿದ್ದರು. ಈ ವೇಳೆ ಇಮ್ರಾನ್ ಹಾಗೂ ಆತನ ಇಬ್ಬರು ಸಹಚರರು ಗೋಪಿಚಾಂದ್ ಅವರಿಗೆ ಚಾಕುವಿನಿಂದ ಬೆದರಿಸಿ 13 ಸಾವಿರ ನಗದು ಹಾಗೂ ಬೈಕ್ ಕಸಿದು ಪರಾರಿಯಾಗಿದ್ದರು.
ಸಂಪಿಗೆಹಳ್ಳಿ ಠಾಣೆ ಇನ್ಸ್ಟೆಕ್ಟರ್ ಬಿ.ಮಲ್ಲಿಕಾರ್ಜುನ್ ಅವರ ನೇತೃತ್ವದ ತಂಡ ಆರೋಪಿಗಳ ಬಂಧನಕ್ಕೆ ಬಲೆ ಬೀಸಿತ್ತು. ಇಮ್ರಾನ್ ಹಾಗೂ ಆತನ ಸಹಚರರು ಬಸವಲಿಂಗಪ್ಪ ಲೇಔಟ್ನಲ್ಲಿರುವ ಬಗ್ಗೆ ಇನ್ಸ್ಪೆಕ್ಟರ್ಗೆ ಮಾಹಿತಿ ಲಭ್ಯವಾಗಿತ್ತು. ಸ್ಥಳಕ್ಕೆ ಹೋದ ಪೊಲೀಸರನ್ನು ನೋಡಿ ಆರೋಪಿಗಳು ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಈ ವೇಳೆ ಹೆಡ್ಕಾನ್ಸ್ಟೇಬಲ್ ಅಶೋಕ್ ಅವರಿಗೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದರು. ಇನ್ಸ್ಪೆಕ್ಟರ್ ಎಚ್ಚರಿಕೆ ನೀಡಿದರೂ ಬಗ್ಗದಿದ್ದಾಗ ಇಮ್ರಾನ್ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ ಎಂದು ಹಿರಿಯ ಅಧಿಕಾರಿಗಳು ವಿವರಿಸಿದರು.
400 ಹಣಕ್ಕಾಗಿ ಕೊಲೆ ಮಾಡಿದ್ದ!
ಆರೋಪಿ ಇಮ್ರಾನ್ ದಾಬಸ್ಪೇಟೆಯಲ್ಲಿ .400ಗಾಗಿ ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಿದ್ದ. ಈ ಪ್ರಕರಣದಲ್ಲಿ 2018ರಲ್ಲಿ ದಾಬಸ್ಪೇಟೆ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದರು. ಬಳಿಕ ಜೈಲಿನಿಂದ ಹೊರಗೆ ಬಂದಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ರಾಬರಿ ಪ್ರಕರಣದಲ್ಲಿ ಬಂಧಿಸಿ ಎಚ್ಎಎಲ್ ಠಾಣೆ ಪೊಲೀಸರಿಗೆ ಒಪ್ಪಿಸಿದ್ದರು. ಆರೋಪಿ ಮೂರ್ನಾಲ್ಕು ತಿಂಗಳ ಹಿಂದೆಯಷ್ಟೇ ಜೈಲಿನಿಂದ ಬಿಡುಗಡೆ ಆಗಿದ್ದ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ