Kalaburagi| 2 ಕ್ಲಬ್‌ಗಳ ಮೇಲೆ ಪೊಲೀಸ್‌ ದಾಳಿ, 113 ಜನರ ಬಂಧನ

By Kannadaprabha NewsFirst Published Nov 24, 2021, 2:58 PM IST
Highlights

*  113 ಜನರ ಬಂಧನ, ಜೂಜಿಗೆ ಇಡಲಾಗಿದ್ದ 5.83 ಲಕ್ಷ ರು. ಜಪ್ತಿ
*  ಖಚಿತ ಮಾಹಿತಿ ಮೇರೆಗೆ ಪೊಲೀಸರ ದಾಳಿ
*  ಹಲ್ಲೆ ಆರೋಪಿಗಳಿಗೆ 1.38 ಲಕ್ಷ ದಂಡ
 

ಕಲಬುರಗಿ(ನ.24):  ಕಲಬುರಗಿ(Kalaburagi) ನಗರದಿಂದ ಆಳಂದಕ್ಕೆ ಸಂಪರ್ಕಿಸುವ ಅಂತರಾಜ್ಯ ಹೆದ್ದಾರಿ ಮೇಲಿರುವ ಕ್ರಿಸ್ಟಲ್‌ ಪಾಮ್‌ ರೆಸಾರ್ಟ್‌ ಹಾಗೂ ಜುರಿಚ್‌ ಕ್ಲಬ್‌(Club) ಮೇಲೆ ಸೋಮವಾರ ರಾತ್ರಿ ದಾಳಿ(Raid) ಮಾಡಿರುವ ನಗರ ಪೊಲೀಸರು ಇಲ್ಲಿ ಜೂಜಾಟದಲ್ಲಿ ತೊಡಗಿದ್ದ 113 ಜನರನ್ನು ಬಂಧಿಸಿ ವಶಕ್ಕೆ ಪಡೆದಿದ್ದಲ್ಲದೆ ಜೂಜಿನಲ್ಲಿ ಹೂಡಲಾಗಿದ್ದ 5. 83 ಲಕ್ಷ ರುಪಾಯಿ ಮೊತ್ತದ ಹಣವನ್ನು ವಶಕ್ಕೆ ಪಡೆದಿದ್ದಾರೆ.

ಎರಡೂ ಕ್ಲಬ್‌ಗಳಲ್ಲಿ ಜೂಜು ಸಾಗಿದೆ ಎಂಬ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಕಾರ್ಯಪ್ರವೃತ್ತರಾಗಿರುವ ಪೊಲೀಸರು ಕ್ರಸಿಟಲ್‌ ಪಾಮ್‌ ರೆಸಾರ್ಟನಿಂದ 92 ಜೂಜುಕೋರರಿಗೆ ಬಂಧಿಸಿ(Arrest) ಅವರಿಂದ 3. 72 ಲಕ್ಷ ರುಪಾಯಿ ಹಣ ವಶಪಡಿಸಿಕೊಂಡಿದ್ದಾರೆ, ಇನ್ನು ಜುರಿಚ್‌ ಕ್ಲಬ್‌ ಮೇಲೆ ದಾಳಿ ಮಾಡಿರುವ ಪೊಲೀಸರು(Police) ಅಲ್ಲಿಂದ 21 ಜನರನ್ನು ದಸ್ತಗಿರಿ ಮಾಡಿ ಅಲ್ಲಿಂದ ಜೂಜಿಗೆ ಹೂಡಲಾಗಿದ್ದ 2. 11 ಲಕ್ಷ ರು. ಹಣ ಜಪ್ತಿ ಮಾಡಿದ್ದಾರೆ.

ಈ ಕುರಿತಂತೆ ಸವಿವರವಾದಂತಹ ಮಾಧ್ಯಮ ಪ್ರಕಟಮೆ ನೀಡಿರುವ ನಗರ ಪೊಲೀಸ್‌ ಆಯುಕ್ತರಾದ ಡಾ. ವೈಎಸ್‌ ರವಿ ಕುಮಾರ್‌ ಸರಿ ದಾಳಿ ಮಾಡಿ ಯಶ ಕಂಡಿರುವ ಪೊಲೀಸ್‌ ತಂಡಗಳಿಗೆ ಮೆಚ್ಚುಗೆ ಮಾತುಗಳನ್ನು ಹೇಳಿದ್ದಾರೆ.
ಜೂಜಾಟದ(Gambling) ಈ ಎರಡೂ ಪ್ರಕರಣಗಳಲ್ಲಿ ಕ್ಲಬ್‌ಗಳ ಮಾಲೀಕರಾದ ಅರುಣ ಹಾಗೂ ಅಶೋಕ ವಿರುದ್ಧ ಕೆಪಿ ಆಕ್ಟ್ 79 ಹಾಗೂ 80 ರ ಅಡಿಯಲ್ಲಿ ಸಬರ್ಬನ್‌ ಠಾಣೆಯಲ್ಲಿ ಪ್ರಕರಣಗಳು(Case) ದಾಖಲಾಗಿವೆ ಎಂದು ಪೊಲೀಸ್‌ ಕಮೀಷನರ್‌ ಡಾ. ರವಿಕುಮಾರ್‌ ತಿಳಿಸಿದ್ದಾರೆ.

ಆನ್‌ಲೈನ್‌ ಜೂಜಾಟ ನಿಷೇಧ ಮಸೂದೆ ಪಾಸ್‌: ದೋಷಿಗಳಿಗೆ 3 ವರ್ಷ ಜೈಲು, 1 ಲಕ್ಷ ದಂಡ!

ಕಮೀಷನರ್‌ ರವಿ ಕುಮಾರ್‌, ಉಪ ಪೊಲೀಸ್‌ ಆಯುಕ್ತ ಅಡ್ಡೂರು ಶ್ರೀನಿವಾಸುಲು, ಜೆಎಚ್‌ ಇನಾಮದಾರ್‌ ಮಾರ್ಗದರ್ಶನದಲ್ಲಿ ನಡೆದ ಈ ಎರಡೂ ದಾಳಿಗಳಲ್ಲಿ ಪೊಲೀಸ್‌ ಅಧಿಕಾರಿಗಳಾದ ಬಾಸು ಚವ್ಹಾಣ್‌, ವಾಜೀದ್‌ ಪಟೇಲ್‌, ದಕ್ಷಿಣ ಸಹಾಯಕ ಪೊಲೀಸ್‌ ಆಯುಕ್ತ ಅಂಶುಕುಮಾರ್‌ ಸೇರಿದಂತೆ ರಚೆನಾಯದ ತಢ ಸೋಮವಾರ ಮದ್ಯರಾತ್ರಿ 12 ಗಂಟೆಯಾದ ಮೇಲೆ ಎರಡೂ ಕ್ಲಬ್‌ಗಳ ಮೇಲೆ ಯಶಸ್ವಿ ದಾಳಿ ನಡೆಸಿದೆ.
ಇತ್ತೀಚೆಗೆ ಕಲಬುರಗಿ ಅಪರಾಧಗಳ(Crime) ನಗರವಾಗುತ್ತಿರುವ ಬಗ್ಗೆ ಹಾಗೂ ಕ್ಲಬ್‌, ಪಬ್‌(Pub), ಜೂಜು ಅಡ್ಡೆ, ಜುಗಾರಿಗಳು ಸಾಕಷ್ಟು ಅಕ್ರಮವಾಗಿ(Illegal) ಸಾಗುತ್ತಿವೆ ಎಂದು ಇಲ್ಲಿಗೆ ಬೇಟಿ ನೀಡಿದ್ದ ಗೃಹ ಸಚಿವ ಅರಗ ಜ್ಞಾನೇಂದ್ರರಿಗೆ ಸಾರ್ವಜನಿಕರು ಖುದ್ದು ಭೇಟಿ ಮಾಡಿ ದೂರಿದ್ದರು.

ಕಾಂಗ್ರೆಸ್‌(Congress) ಮುಖಂಡ ಪ್ರಿಯಾಂಕ್‌ ಖರ್ಗೆ(Priyank Kharge) ಸಹ ಕಲಬುರಗಿಯನ್ನು ಕಲ್ಯಾಣ ನಾಡಿನ ಅಪರಾಧಗಳ ಕ್ಯಾಪಿಟಲ್‌ ಎಂದು ಬಣ್ಣಿಸುತ್ತ ಪೊಲೀಸರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇವೆಲ್ಲ ಬೆಳವಣಿಗೆಗಳ ನಂತರದಲ್ಲಿ ಇದೀಗ ನಗರ ಪೊಲೀಸರು ತುಸು ಎಚ್ಚೆತ್ತವರಂತೆ ಕಂಡಿದ್ದು ಮಟಕಾ ಬುಕ್ಕಿಗಳ ವಿರುದ್ಧ, ಜೂಜು ಅಡ್ಡೆ, ಕ್ಲಬ್‌, ಪಬ್‌ಗಳ ವಿರುದ್ಧ ಅಲ್ಲಲ್ಲಿ ಕಾರ್ಯಾಚರಣೆಗಳನ್ನು ಶುರು ಮಾಡಿದ್ದಾರೆ.

ಹಲ್ಲೆ ಆರೋಪಿಗಳಿಗೆ 1.38 ಲಕ್ಷ ದಂಡ

ಕಲಬುರಗಿ: ಜಮೀನಿನ ವಿಷಯದ ತಕರಾರಿನ ಹಿನ್ನಲೆಯಲ್ಲಿ ಮನೆಗೆ ನುಗ್ಗಿ ಜಗಳ ತೆಗೆದು ಹಲ್ಲೆ(Assault) ಮಾಡಿದ 18ಜನ ಆರೋಪಿಗಳಿಗೆ 1.38 ಲಕ್ಷ ರು. ದಂಡವನ್ನು ವಿಧಿಸಿ ಇಲ್ಲಿನ 3ನೇ ಅಪರ ಜಿಲ್ಲಾ ಮತ್ತು ಸತ್ರನ್ಯಾಯಾಲಯದ(Court) ನ್ಯಾಯಾಧಿಶ ಜಗದೀಶ ವಿ.ಎನ್‌. ಅವರು ತೀರ್ಪು ನೀಡಿದ್ದಾರೆ.

ಇನ್ಮುಂದೆ ಆನ್‌ಲೈನ್‌ನಲ್ಲಿ ಜೂಜು ಆಡಿದ್ರೆ ಜೈಲೇ ಗತಿ..!

ಜಿಲ್ಲೆಯ ಮಹಾಗಾಂವ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ಬರುವ ಹರಸೂರ ಗ್ರಾಮದ ಜಗದೇವಪ್ಪ ನಾಯ್ಕೋಡಿ, ನಾಗಣ್ಣ ನಾಯ್ಕೋಡಿ, ತಿಪ್ಪಣ್ಣ ನಾಯ್ಕೋಡಿ, ಶಿವಲಿಂಗಪ್ಪ ನಾಟಿಕಾರ, ಪಾರ್ವತಿ ನಾಯ್ಕೊಡಿ, ಶ್ರೀದೇವಿ ನಾಯ್ಕೋಡಿ, ಮಹಾನಂದ ನಾಯ್ಕೊಡಿ ಎನ್ನುವವರ ಮೇಲೆ ಜಮೀನಿನ ವಿಷಯದಲ್ಲಿ ಜಗಳತೆಗೆದು ಹಲ್ಲೆ ಮಾಡಿ ಗಾಯಗೊಳಿಸಿದ್ದರು. 18 ಜನ ಆರೋಪಿಗಳಿಗೆ ಒಟ್ಟು 1.38 ಲಕ್ಷ ರು. ದಂಡ ವಿಧಿಸಿ ಆದೇಶಿಸಿದ್ದಾರೆ.

ಹರಸೂರ ಗ್ರಾಮದಲ್ಲಿ ಕಳೆದ ದಿನಾಂಕ 23-12-2014ರಂದು ಸಂಜೆ 7 ಗಂಟೆಯ ಸುಮಾರಿನಲ್ಲಿ ಆರೋಪಿಗಳಾದ ಸಿದ್ಧಣ್ಣ ಡೆಂಗಿ, ಜಗದೇವಪ್ಪ ನಾಯ್ಕೊಡಿ, ಶಾಂತಪ್ಪಾ ಕನ್ನಡಗಿ, ಜಗದೇವಿ ಕಟ್ಟಿಮನಿ, ಭರತ್‌ ಕಟ್ಟಿಮನಿ, ಫಕಿರಪ್ಪ ನಾಯ್ಕೊಡಿ, ವೈಜನಾಥ ನಾಯ್ಕೊಡಿ, ರಾಜಪ್ಪಾ ನಾಯ್ಕೊಡಿ, ಇಂದುಬಾಯಿ ಸಂಗೀತಾ ಕಟ್ಟೋಳಿ, ಹಣಮಂತ ಕಟ್ಟೋಳಿ, ಕರಬಸಪ್ಪ ಡೆಂಗಿ, ಶರಣಪ್ಪ ಡೆಂಗಿ, ಚಂದ್ರಶಾ ಡೆಂಗಿ, ರಾಮಣ್ಣ ಡೆಂಗಿ, ಶಿವಾನಂದ ಡೆಂಗಿ, ಅಂಬರೆಶ ಡೆಂಗಿ, ಶಶಿಕಲಾ ಡೆಂಗಿ ಮತ್ತು ಭಾಗ್ಯಶ್ರೀ ಡೆಂಗಿ ಇವರೆಲ್ಲರು ಸೇರಿಕೊಂಡು ಕಲ್ಲು, ಬಡಿಗೆ ಮತ್ತು ಕೊಡಲಿಯಿಂದ ಕೊಲೆ ಮಾಡುವ ಉದ್ದೇಶದಿಂದ ಜಮೀನಿನ ವಿಷಯಕ್ಕೆ ಜಗಳ ತೆಗೆದು ದೂರುದಾರರ ಹಾಗೂ ಸಾಕ್ಷಿದಾರರ ಮೇಲೆ ಹಲ್ಲೆಮಾಡಿದ್ದರು ಎಂಬ ಪ್ರಕರಣ ದಾಖಲಾಗಿತ್ತು.

ಸದರಿ ಹಲ್ಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದ ಮಹಾಗಾಂವ ಠಾಣೆಯ ಎಎಸ್‌ಐ ಗೋವಿಂದ ಅವರು, ನ್ಯಾಯಾಲಯಕ್ಕೆ ಆರೋಪ ಪಟ್ಟಿಸಲ್ಲಿಸಿದ್ದರು. ಸರ್ಕಾರದ ಪರವಾಗಿ 3ನೇ ಅಪರ ಸರ್ಕಾರಿ ಅಭಿಯೋಜಕರಾದ ಗುರುಲಿಂಪ್ಪ ಶ್ರೀಮಂತ ತೇಲಿ ಅವರು ವಾದ ಮಂಡಿಸಿದ್ದರು. ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶರು, ಆರೋಪಿಗಳಿಗೆಲ್ಲ ಒಟ್ಟಾರೆಯಾಗಿ 1.38 ಲಕ್ಷ ರೂ.ಗಳ ದಂಡವನ್ನು ವಿಧಿಸಿದ್ದಾರೆ. ಗಾಯಾಳು ಮತ್ತು ದೂರುದಾರರಿಗೆ ತಲಾ 16,857 ರೂ.ಗಳ ಪರಿಹಾರ ನೀಡುವಂತೆ ತೀರ್ಪಿನಲ್ಲಿ ಆದೇಶಿಸಲಾಗಿದೆ.
 

click me!