ವಿದ್ಯಾರ್ಥಿನಿ ಹಾಗೂ ಬಸ್ ಚಾಲಕ ಆತ್ಮಹತ್ಯೆ ಪ್ರಕರಣವು ಅರಸೀಕೆರೆ ರೈಲ್ವೇ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಅಜ್ಜಂಪುರ ಠಾಣೆಯಲ್ಲಿ ಶಾಲಾ ಆಡಳಿತ ಮಂಡಳಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಲಾಗಿದೆ. ಇಂತಹ ಪ್ರಕರಣಗಳು ಮರುಕಳಿಸದಿರುವಂತೆ ಶಾಲೆಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಪೋಕ್ಸೋ ಪ್ರಕರಣವಾದ ಕಾರಣ ಹೆಚ್ಚಿನ ಮಾಹಿತಿ ಹಂಚಿಕೊಳ್ಳುವುದಿಲ್ಲ: ಎಸ್ಪಿ ಡಾ.ವಿಕ್ರಮ ಆಮಟೆ
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಜ.02): ಅಪ್ರಾಪ್ತ ವಿದ್ಯಾರ್ಥಿನಿ ಹಾಗೂ ಶಾಲಾ ಬಸ್ ಚಾಲಕ ಇಬ್ಬರೂ ರೈಲಿಗೆ ಸಿಕ್ಕಿ ಸಾವಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರದ ಶಾಸಗಿ ಶಾಲೆ ಆಡಳಿತ ಮಂಡಳಿ ವಿರುದ್ಧ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿದ್ದಾರೆ.
ಅಜ್ಜಂಪುರ ತಾಲ್ಲೂಕು ಗಿರಿಯಾಪುರದ ಖಾಸಗಿ ಶಾಲೆಯೊಂದರ ಬಸ್ ಚಾಲಕ ಸಂತೋಷ್ (35) ಎಂಬಾತ ಅದೇ ಶಾಲೆಯ 8 ನೇ ತರಗತಿಯ 14 ವರ್ಷದ ವಿದ್ಯಾರ್ಥಿಯೋವಳನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ. ವಿಚಾರ ತಿಳಿದು ವಿದ್ಯಾರ್ಥಿನಿ ಪೋಷಕರು ಸಂತೋಷ್ಗೆ ಎಚ್ಚರಿಕೆ ನೀಡಿ, ಶಾಲೆಯ ಮುಖ್ಯಸ್ಥರ ಗಮನಕ್ಕೂ ತಂದು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು.
ಚಿಕ್ಕಮಗಳೂರು: ರಾಮನ ಹೆಸರಿಟ್ಟುಕೊಂಡ ಮಾತ್ರಕ್ಕೆ ರಾಮನ ಗುಣ ಬರಲು ಸಾಧ್ಯವೇ, ಸಿ.ಟಿ ರವಿ
ಶಾಲಾ ಆಡಳಿತ ಮಂಡಳಿ ವಿರುದ್ಧ ವ್ಯಾಪಕ ಆಕ್ರೋಶ :
ಕಳೆದ ಡಿಸೆಂಬರ್ 31 ರಂದು ರಾತ್ರಿ ವಿದ್ಯಾರ್ಥಿನಿ ಸ್ನೇಹಿತರೊಂದಿಗೆ ಹೊಸ ವರ್ಷದ ಪಾರ್ಟಿಗೆ ಹೋಗುವುದಾಗಿ ಹೇಳಿ ಹೋಗಿದ್ದಳು. ಆದರೆ ಮಧ್ಯರಾತ್ರಿ ವೇಳೆಗೆ ಆಕೆ ಸೇರಿದಂತೆ ಶಾಲಾ ಬಸ್ ಚಾಲಕ ಸಂತೋಷ್ ಇಬ್ಬರ ಶವ ಅಜ್ಜಂಪುರ ತಾಲ್ಲೂಕಿನ ಬಂಕನಕಟ್ಟೆ ಎಂಬಲ್ಲಿ ರೈಲ್ವೆ ಹಳಿಯಲ್ಲಿ ಪತ್ತೆಯಾಗಿತ್ತು. ಇಬ್ಬರೂ ರೈಲಿಗೆ ಸಿಕ್ಕಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ವಿದ್ಯಾರ್ಥಿನಿ ಪೋಷಕರ ದೂರಿನನ್ವಯ ಅಜ್ಜಂಪುರ ಪೊಲೀಸರು ಖಾಸಗಿ ಶಾಲೆಯ ಆಡಳಿತ ಮಂಡಳಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.ಈ ಘಟನೆ ಗಿರಿಯಾಪುರ ಸೇರಿದಂತೆ ಅಜ್ಜಂಪುರ ತಾಲ್ಲೂಕನ್ನು ಬೆಚ್ಚಿಬೀಳಿಸಿತ್ತು. ಈಗಾಗಲೆ ಮದುವೆಯಾಗಿ ಇಬ್ಬರು ಮಕ್ಕಳನ್ನೂ ಹೊಂದಿರುವ ಬಸ್ ಚಾಲಕ ಸಂತೋಷ್, ಅಪ್ರಾಪ್ತ ವಿದ್ಯಾರ್ಥಿನಿಯನ್ನು ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ ಬಗ್ಗೆ ಗಮನಕ್ಕೆ ಬಂದರೂ ಗಂಭೀರವಾಗಿ ಪರಿಗಣಿಸದ ಶಾಲಾ ಆಡಳಿತ ಮಂಡಳಿ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಯಾವ ನಂಬಿಕೆ ಮೇಲೆ ಮಕ್ಕಳನ್ನು ಶಾಲೆಗೆ ಕಳಿಸಬೇಕು ಎನ್ನುವ ಪ್ರಶ್ನೆ ಎದ್ದಿತ್ತು.
ಶಾಲೆಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ :
ವಿದ್ಯಾರ್ಥಿನಿ ಹಾಗೂ ಬಸ್ ಚಾಲಕ ಆತ್ಮಹತ್ಯೆ ಪ್ರಕರಣವು ಅರಸೀಕೆರೆ ರೈಲ್ವೇ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಅಜ್ಜಂಪುರ ಠಾಣೆಯಲ್ಲಿ ಶಾಲಾ ಆಡಳಿತ ಮಂಡಳಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಲಾಗಿದೆ. ಇಂತಹ ಪ್ರಕರಣಗಳು ಮರುಕಳಿಸದಿರುವಂತೆ ಶಾಲೆಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಪೋಕ್ಸೋ ಪ್ರಕರಣವಾದ ಕಾರಣ ಹೆಚ್ಚಿನ ಮಾಹಿತಿ ಹಂಚಿಕೊಳ್ಳುವುದಿಲ್ಲ ಎಂದು ಎಸ್ಪಿ ಡಾ.ವಿಕ್ರಮ ಆಮಟೆ ತಿಳಿಸಿದ್ದಾರೆ.