ವಿಜಯಪುರಕ್ಕೆ ಎಂಟ್ರಿ ಕೊಡ್ತಾ ಟವಲ್ ಗ್ಯಾಂಗ್?: ಸಿಸಿಟಿವಿ ದೃಶ್ಯ‌ ಕಂಡು ಬೆಚ್ಚಿಬಿದ್ದ ಜನ..!

By Girish GoudarFirst Published Jul 30, 2022, 1:27 PM IST
Highlights

ವಿಜಯಪುರದಲ್ಲಿ ಮಕ್ಕಳ ಕಳ್ಳರ ಹಾವಳಿಯಾಯ್ತು, ಈಗ ಆತಂಕ ಸೃಷ್ಟಿಸಿದ ಟವೆಲ್ ಗ್ಯಾಂಗ್

ವರದಿ: ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯಪುರ

ವಿಜಯಪುರ(ಜು.30): ಕಳೆದ ವಾರದ ಹಿಂದಷ್ಟೇ ವಿಜಯಪುರ‌ ನಗರದ ಬಸವನಗರದಲ್ಲಿ ಮಕ್ಕಳ ಕಳ್ಳರ ಹಾವಳಿ ಎದ್ದಿತ್ತು.‌ ಮಕ್ಕಳ‌ ಕಳ್ಳರ ಹಾವಳಿ ಕಂಡು ಜನರೇ ಕಳ್ಳರನ್ನ ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದರು. ಈ ಘಟನೆ ಮಾಸುವ ಮುನ್ನವೇ ಟವಲ್ ಗ್ಯಾಂಗ್‌ವೊಂದರ ವಿಡಿಯೋ ವೈರಲ್ ಆಗಿದ್ದು, ಜನರು ಈ ದೃಶ್ಯಕಂಡು ಬೆಚ್ಚಿಬಿದ್ದಿದ್ದಾರೆ. ವಿಜಯಪುರ ನಗರದ ಕನದಾಸ ಬಡಾವಣೆಯ ಮನೆಯೊಂದರ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯವನ್ನ ಕಂಡು ಜಿಲ್ಲೆಯ ಜನರು ಬೆಚ್ಚಿಬಿದ್ದಿದ್ದಾರೆ. ಮುಖಕ್ಕೆ ಮುಸುಕು ಹಾಕಿಕೊಂಡಿರುವ ಖದೀಮರ ಗುಂಪೊಂದು ಕನಕದಾಸ ಬಡಾವಣೆಯಲ್ಲಿ ಅಡ್ಡಾಡಿದೆ. ರಾತ್ರಿ ನಾಯಿಗಳು ಬೊಗಳುವ ಸದ್ದು ಕೇಳಿ ಬಂದಿದೆ. ಹೀಗಾಗಿ ಬೆಳಿಗ್ಗೆ ಎದ್ದು ಸಿಸಿಟಿವಿ ದೃಶ್ಯ ಚೆಕ್ ಮಾಡಿದವರು ಬೆಚ್ಚಿ ಬಿದ್ದಿದ್ದಾರೆ.

ಕೈಯಲ್ಲಿ ಮಾರಕಾಸ್ತ್ರ

ಯಾರೋ ಮೂರ್ನಾಲ್ಕು ಜನ ಸುಮ್ಮನೆ ಹಾಯ್ದು ಹೋಗಿದ್ದರೆ ಯಾರಿಗೂ ಸಂಶಯ ಬರ್ತಾನೆ ಇರಲಿಲ್ಲ. ಆದ್ರೆ ಇಲ್ಲಿ ತಡರಾತ್ರಿ ಅಡ್ಡಾಡಿರೋರು ಮುಸುಕುಧಾರಿಗಳು. ಮೇಲಾಗಿ ಗುಂಪಿನಲ್ಲಿದ್ದವರ ಕೈಯಲ್ಲಿ ಮಾರಕಾಸ್ತ್ರಗಳು ಕಂಡು ಬಂದಿವೆ.‌ ಒಂದಿಬ್ಬರ ಕೈಯಲ್ಲಿ ಕಟ್ಟಿಗೆ ದೊಣ್ಣೆಗಳು ಇವೆ.‌ ಇದನ್ನ ಕಂಡ ಕನಕದಾಸ ಬಡಾವಣೆಯ ಜನರು ಭಯಭೀತರಾಗಿದ್ದಾರೆ. 

ಆಲಮಟ್ಟಿ ಡ್ಯಾಂ ಬಳಿ ಬುರ್ಕಾ ತಂದ ಆತಂಕ..!

ಇದು ಟವಲ್ ಗ್ಯಾಂಗ್?

ತಡರಾತ್ರಿ ಸಂಶಯಾಸ್ಪದ ರೀತಿಯಲ್ಲಿ ಅಡ್ಡಾಡಿರುವ ಈ‌ ಗ್ಯಾಂಗ್ ಟವಲ್ ಗ್ಯಾಂಗ್ ಎನ್ನಲಾಗ್ತಿದೆ. ಮುಖಕ್ಕೆ ಎಲ್ಲರೂ ಟವಲ್ ಸುತ್ತಿಕೊಂಡು ಓಡಾಡಿದ್ದಾರೆ.‌ ತಮ್ಮ ಗುರುತು ಮುಚ್ಚಿಕೊಳ್ಳಲು ಟವಲ್ ಬಳಕೆ ಮಾಡಿ ಅಡ್ಡಾಡಿರೋದು ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ. ಈ ಗ್ಯಾಂಗ್ ಯಾರಿಗಾದರೂ ಏನಾದ್ರು ಮಾಡಿದ್ರೆ ಹೇಗೆ ಎಂದು ಭಯಗೊಂಡಿದ್ದಾರೆ.

ದರೋಡೆ ಬಂದಿತ್ತಾ ಗ್ಯಾಂಗ್?, ಇಲ್ಲಾ ಬೇರೆ ಉದ್ದೇಶವಾ?

ಕನಕದಾಸ ಬಡಾವಣೆಯಲ್ಲಿ ಅಡ್ಡಾಡಿದ್ದಾರೆ ಎನ್ನಲಾಗುವ ಈ ದೃಶ್ಯ ಕಂಡು ಜನರು ಅಕ್ಷರಶಃ ಬೆಚ್ಚಿಬಿದ್ದಿದ್ದಾರೆ. ಈ ಗ್ಯಾಂಗ್ ಟವಲ್‌ನಲ್ಲಿ ಮುಖ ಮುಚ್ಚಿಕೊಂಡು ಓಡಾಡಿದ್ದು ಯಾಕೆ ಎನ್ನುವ ಪ್ರಶ್ನೆಯೂ ಜನರಲ್ಲಿ ಕಾಡ್ತಿದೆ. ಮೇಲಾಗಿ ರಾತ್ರಿ ಯಾವುದೋ ಮನೆ ದೋಚಲು ಈ ಗ್ಯಾಂಗ್ ಏಂಟ್ರಿಕೊಟ್ಟಿತ್ತಾ ಎನ್ನುವ ಸಂಶಯಗಳು ಕಾಡ್ತಿವೆ. ಆದ್ರೆ ದರೋಡೆ, ಕಳ್ಳತನ ಬಿಟ್ಟು ಮತ್ಯಾವುದೋ ಕ್ರೈಂ ಕೆಲಸಕ್ಕೆ ಈ ಗ್ಯಾಂಗ್ ಇಳಿದಿತ್ತಾ ಅನ್ನೊ ಭಯವು ಇಲ್ಲಿನ ಜನರಿಗೆ ಕಾಡ್ತಿದೆ..

ತನಿಖೆಗೆ ಸೂಚನೆ

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರೋ ಈ ವಿಡಿಯೋ ಹಿಂದಿನ ಉದ್ದೇಶವೇನು? ಈ ಗ್ಯಾಂಗ್ ಏನು ಎತ್ತ ಎನ್ನುವ ಬಗ್ಗೆ ಪೊಲೀಸ್ ಇಲಾಖೆಯು ತನಿಖೆಗೆ ಮುಂದಾಗಿದೆ. ಅಸಲಿಗೆ ಇದೊಂದು ಟವಲ್ ಗ್ಯಾಂಗ್? ದರೋಡೆಗೆ ಬಂದಿತ್ತಾ? ಕ್ರೈಂ ಮಾಡಲು ಹೊಂಚು ಹಾಕಿ ಅಡ್ಡಾಡಿದ್ದಾ ಹೇಗೆ ಎಂದು ತನಿಖೆ ನಡೆಸಲು ಪೊಲೀಸರು ಮುಂದಾಗಿದ್ದಾರೆ. ಅಸಲಿಗೆ ಹೀಗೆ ಟವಲ್‌ ಮುಸುಕು ಧರಿಸಿ ಓಡಾಡೋದರ ಹಿಂದಿನ ಉದ್ದೇಶವಾದ್ರು ಏನು ಅನ್ನೋದನ್ನ ಪೊಲೀಸರು ತನಿಖೆಯ ಮೂಲಕ ಬಯಲಿಗೆ ಎಳೆಯಬೇಕಿದೆ.

click me!