
ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಗಳೂರು
ಮಂಗಳೂರು(ಜೂ.14): ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಪೋಟ ಸಂಬಂಧ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದ್ದು, ಸ್ಫೋಟದ ಹಿಂದೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಕೈವಾಡವಿರೋ ಅನುಮಾನ ವ್ಯಕ್ತವಾಗಿದೆ. ಕುಕ್ಕರ್ ಬಾಂಬ್ ಉಗ್ರ ಶಾರೀಕ್ ಗೆ ಐಎಸ್ಐ ಏಜೆಂಟ್ ಗಳ ಜೊತೆ ನಂಟಿನ ಮಾಹಿತಿ ಸಿಕ್ಕಿದ್ದು, ಒಡಿಸ್ಸಾ ಮೂಲದ ವ್ಯಕ್ತಿ ಬಂಧನದ ಬೆನ್ನಲ್ಲೇ ಸ್ಫೋಟಕ ಸತ್ಯ ಬಯಲಾಗಿದೆ. ಉಗ್ರ ಶಾರೀಕ್ ಬಳಿಯಿದ್ದ ಸಿಮ್ ಕಾರ್ಡ್ ಗೆ ಒಡಿಸ್ಸಾ ನಂಟಿದ್ದು, ಒಡಿಸ್ಸಾ ಮೂಲದ ಜಜ್ಪುರ್ ಜಿಲ್ಲೆಯ ಬುರುಂಗಾ ಗ್ರಾಮದ ಪ್ರೀತಂಕಾರ್(31)ನಿಂದ ಸಿಮ್ ಪೂರೈಕೆಯಾಗಿರುವುದು ಬೆಳಕಿಗೆ ಬಂದಿದೆ. ಪ್ರೀ ಆಕ್ಟಿವೇಟೆಡ್ ಸಿಮ್ ಕಾರ್ಡ್ ಹಾಗೂ ಡೆಬಿಟ್ ಕಾರ್ಡ್ ಪೂರೈಸಿದ್ದ ಪ್ರೀತಂನನ್ನ ಒಡಿಸ್ಸಾದ ಸ್ಟೆಷಲ್ ಟಾಸ್ಕ್ ಫೋರ್ಸ್ ಬಂಧಿಸಿದ ಬೆನ್ನಲ್ಲೇ ಸತ್ಯ ಬಯಲಾಗಿದೆ.
ಪಾಕಿಸ್ತಾನದ ಐಎಸ್ಐ ಏಜೆಂಟ್ ಒಬ್ಬನಿಗೆ ಪ್ರೀತಂ ಕಾರ್ ಸಿಮ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಪೂರೈಸಿದ್ದು, ಆ ಬಳಿಕ ಅದೇ ಸಿಮ್ ಕಾರ್ಡ್ ಅನ್ನು ಉಗ್ರ ಶಾರೀಕ್ ಗೆ ನೀಡಿದ್ದ ಎನ್ನಲಾಗಿದೆ. ಈ ಬಗ್ಗೆ ರಾಷ್ಟ್ರೀಯ ತನಿಖಾ ದಳಕ್ಕೆ ಒಡಿಸ್ಸಾ ಎಸ್ಟಿಎಫ್ ಟೀಂ ಮಾಹಿತಿ ನೀಡಿದೆ.
ಮಂಗಳೂರು, ಕೊಯಮತ್ತೂರು ಬಾಂಬ್ ಸ್ಫೋಟ ಕೇಸ್: ಐಸಿಸ್ ಕೈವಾಡದ ಬಗ್ಗೆ ತನಿಖೆ
ಭಾರತದಲ್ಲಿರೋ ಪಾಕ್ ನ ಐಎಸ್ಐ ಏಜೆಂಟ್ ಗಳ ಜೊತೆ ಸಂಪರ್ಕ ಹೊಂದಿದ್ದ ಪ್ರೀತಂ, ರಾಂಚಿ ಹಾಗೂ ಪಾಟ್ನಾದಲ್ಲಿ ಐಎಸ್ಐ ಏಜೆಂಟ್ ಗಳ ಭೇಟಿಯಾಗಿ ಸಿಮ್ ಕಾರ್ಡ್ ಡೆಲಿವರಿ ಮಾಡಿದ್ದಾನೆ. ದೇಶವಿರೋಧಿ ಕೃತ್ಯ, ಸೈಬರ್ ವಂಚನೆಗಳಿಗೆ ಒಟಿಪಿ ಮಾರಾಟ ಮಾಡುತ್ತಿದ್ದ ಪ್ರೀತಂ, ಎಂಟನೇ ತರಗತಿ ಕಲಿತಿದ್ದು, 2017ರಿಂದ ಸೈಬರ್ ವಂಚನೆ ಕೃತ್ಯದಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ.
ಬ್ಯಾಂಕ್ ಅಕೌಂಟ್ ಹ್ಯಾಕ್, ನಕಲಿ ಸಿಮ್ ಕಾರ್ಡ್ ಮಾರಾಟ ಕೃತ್ಯದಲ್ಲಿ ತೊಡಗಿದ್ದ ಈತ, ಪಾಕ್ ನ ಐಎಸ್ ಐ ಏಜೆಂಟ್ ಗಳಿಗೂ ಸಿಮ್ ಕಾರ್ಡ್ ಪೂರೈಸಿದ್ದು, ಸದ್ಯ ಪ್ರೀತಂ ವಶಕ್ಕೆ ಪಡೆದು ಎನ್ಐಎ ಅಧಿಕಾರಿಗಳ ತನಿಖೆ ನಡೆಸುತ್ತಿದ್ದಾರೆ. ಕಳೆದ ವರ್ಷ ನವೆಂಬರ್ 19ರಂದು ಮಂಗಳೂರಿನ ನಾಗುರಿ ಬಳಿ ಚಲಿಸುತ್ತಿದ್ದ ಆಟೋ ರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಸ್ಫೋಟವಾಗಿತ್ತು. ಸ್ಫೋಟದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ವಹಿಸಿಕೊಂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ