Bengaluru Crime: ಎಲೆಕ್ಟ್ರಿಕ್‌ ಸ್ಕೂಟರ್‌ ಡೆಲಿವರಿ ಸೋಗಲ್ಲಿ ಆನ್‌ಲೈನ್‌ ಧೋಖಾ..!

By Girish GoudarFirst Published Mar 24, 2022, 6:49 AM IST
Highlights

*  ಸರ್ಕಾರಿ ಅಧಿಕಾರಿ ಸೇರಿ ಇಬ್ಬರಿಗೆ 1.64 ಲಕ್ಷ ವಂಚನೆ
*  ಈ ಕುರಿತು ದಕ್ಷಿಣ ವಿಭಾಗ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು
*  ಕಾಫಿ ಚೀಲ ಕಳವು: ಆರೋಪಿ ಬಂಧನ

ಬೆಂಗಳೂರು(ಮಾ.24):  ವಿದ್ಯುತ್‌ ಚಾಲಿತ ಸ್ಕೂಟರನ್ನು(Electric scooter) ಮನೆಗೆ ಡೆಲಿವರಿ(Delivery) ಕೊಡುವುದಾಗಿ ನಂಬಿಸಿ ಸರ್ಕಾರಿ ಅಧಿಕಾರಿ ಸೇರಿದಂತೆ ಇಬ್ಬರಿಗೆ ವಂಚಿಸಿರುವ ಘಟನೆ ನಗರದಲ್ಲಿ ನಡೆದಿವೆ. ಶ್ರೀನಗರದ ಕಾರ್ತಿಕ್‌ ಹಾಗೂ ಎಂ.ಎಸ್‌.ಪಾಳ್ಯದ ಮಂಜುನಾಥ್‌ ವಂಚನೆಗೊಳಗಾಗಿದ್ದು, ಈ ಸಂಬಂಧ ಸಿಇಎನ್‌ ಠಾಣೆಯಲ್ಲಿ ಸಂತ್ರಸ್ತರು ದೂರು ಸಲ್ಲಿಸಿದ್ದಾರೆ.

ಗ್ರಾಹಕರಿಗೆ(Customers) ತ್ವರಿತವಾಗಿ ಸ್ಕೂಟರ್‌ಗಳನ್ನು ಒದಗಿಸುವ ಸಲುವಾಗಿ ಆ್ಯಪ್‌ ಅಥವಾ ವೆಬ್‌ಸೈಟ್‌ ಮೂಲಕ ಬುಕ್ಕಿಂಗ್‌ ಅನ್ನು ಎಲೆಕ್ಟ್ರಿಕಲ್‌ ಸ್ಕೂಟರ್‌ ಕಂಪನಿಗಳು ಆರಂಭಿಸಿವೆ. ಈ ವೆಬ್‌ ಸೈಟ್‌ಗಳಲ್ಲಿ ಗ್ರಾಹಕರ ಮೊಬೈಲ್‌ ಸಂಖ್ಯೆಗಳನ್ನು ಕದ್ದ ಸೈಬರ್‌ ವಂಚಕರು, ಸ್ಕೂಟರ್‌ ಡೆಲಿವರಿ ನೀಡುವ ನೆಪದಲ್ಲಿ ಹಣ ಪಡೆದು ಮೋಸ ಮಾಡುತ್ತಿದ್ದಾರೆ.

Latest Videos

ಮುತ್ತಿನ ಕಥೆ ನಂಬಿ ಕೋಟಿ‌ ಕೋಟಿ ಕಳೆದುಕೊಂಡ ಜನ: ಅತಿ ಆಸೆ ಗತಿಗೇಡು ಅನ್ನೋದು ಇದಕ್ಕೆ..!

ಇದೇ ರೀತಿ ಸರ್ಕಾರಿ ಉದ್ಯೋಗಿ ಕಾರ್ತಿಕ್‌ ಅವರಿಗೆ ಕರೆ ಮಾಡಿ 90 ಸಾವಿರನ್ನು ಫೋನ್‌ ಪೇ(Phonepay) ಮಾಡಿಸಿಕೊಂಡು ಸ್ಕೂಟರ್‌ ಕೊಡದೆ ಮೋಸ ಮಾಡಿದ್ದಾರೆ. ಈ ಕುರಿತು ದಕ್ಷಿಣ ವಿಭಾಗ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಾಗೆಯೇ ಎಂ.ಎಸ್‌.ಪಾಳ್ಯದ ಮಂಜುನಾಥ್‌ ಅವರು ಕೂಡಾ .74 ಸಾವಿರ ಕಳೆದು ಕೊಂಡಿದ್ದಾರೆ. ಫೆ.14ರಲ್ಲಿ ಕಂಪನಿ ವೆಬ್‌ಸೈಟ್‌ನಲ್ಲಿ ಅವರು ಸ್ಕೂಟರ್‌ ಬುಕ್‌ ಮಾಡಿದ್ದಾರೆ. ಕೆಲ ದಿನಗಳ ಬಳಿಕ ಅಪರಿಚಿತ ವ್ಯಕ್ತಿ ಕರೆ ಮಾಡಿ, ಕಂಪನಿ ಪ್ರತಿನಿಧಿ ಎಂದು ಹೇಳಿಕೊಂಡು ಸ್ಕೂಟರ್‌ ಡೆಲಿವರಿ ಕೊಡಲು ವಿಳಾಸಬೇಕೆಂದು ಮಾಹಿತಿ ಪಡೆದು ನಂತರ ಮುಂಗಡ ಹಣವೆಂದು .74 ಸಾವಿರ ಪಡೆದು ವಂಚಿಸಿದ್ದಾನೆ. ಈ ಕುರಿತು ಪೂರ್ವ ವಿಭಾಗ ಸಿಇಎನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

3 ಪೆಡ್ಲರ್‌ಗಳ ಬಂಧನ: 25 ಕೇಜಿ ಗಾಂಜಾ ವಶ

ಬೆಂಗಳೂರು: ನಗರದಲ್ಲಿ ಗಾಂಜಾ(Marijuna) ದಂಧೆ ನಡೆಸುತ್ತಿದ್ದ ಮೂವರನ್ನು ಉಪ್ಪಾರಪೇಟೆ ಠಾಣೆ ಪೊಲೀಸರು(Police) ಬಂಧಿಸಿದ್ದಾರೆ(Arrest). ಒಡಿಶಾದ ರಾಕೇಶ್‌ ಕುಮಾರ್‌ ಅಲಿಯಾಸ್‌ ರಾಜೇಶ್‌, ಸಿಟಿ ಮಾರ್ಕೆಟ್‌ ಸಮೀಪದ ನಿವಾಸಿಗಳಾದ ಸತ್ಯ ಹಾಗೂ ರವಿ ಬಂಧಿತರು. ಆರೋಪಿಗಳಿಂದ 25 ಕೆ.ಜಿ. ಗಾಂಜಾ ಜಪ್ತಿ ಮಾಡಿದ್ದಾರೆ. ತುಳಸಿ ಪಾರ್ಕ್ ಸಮೀಪ ಸಾರ್ವಜನಿಕರಿಗೆ ಗಾಂಜಾ ಮಾರಾಟಕ್ಕೆ ಆರೋಪಿಗಳು ಯತ್ನಿಸಿರುವ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಲಾಯಿತು. ಈ ದಾಳಿ ವೇಳೆ ತಪ್ಪಿಸಿಕೊಂಡಿರುವ ಪ್ರಮುಖ ಪೆಡ್ಲರ್‌ ಪತ್ತೆಗೆ ತನಿಖೆ ನಡೆದಿದೆ. ಹೊರ ರಾಜ್ಯದಿಂದ ಗಾಂಜಾ ತಂದು ನಗರದಲ್ಲಿ ಆರೋಪಿಗಳು ಮಾರಾಟ ಮಾಡುತ್ತಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಅಕ್ರಮ ಮದ್ಯ ಮಾರಾಟ: ವ್ಯಕ್ತಿ ಬಂಧನ

ಹುಬ್ಬಳ್ಳಿ: ಅಕ್ರಮ ಮದ್ಯಮಾರಾಟದ(Illegal Alcohol) ಆರೋಪದಡಿ ವ್ಯಕ್ತಿಯೊಬ್ಬನನ್ನು ಕೇಶ್ವಾಪೂರ ಠಾಣೆಯ ಪೊಲೀಸರು ಬಂಧಿಸಿದ್ದು, . 2,600 ಹಣ ಹಾಗೂ 15,000 ಮೌಲ್ಯದ ಮದ್ಯವನ್ನು ಜಪ್ತಿ ಮಾಡಿಕೊಂಡಿದ್ದಾರೆ.

ಆರೋಪಿಯು ತಮ್ಮ ಲಾಭಕ್ಕಾಗಿ ಯಾವುದೇ ಪರವಾನಗಿ ಇಲ್ಲದೆ ಗೋವಾದಿಂದ ರಾಯಲ್‌ ಸ್ಟ್ಯಾಗ್‌, ಇಂಪಿರಿಯಲ್‌ ಬ್ಲ್ಯೂ, ರಾಯಲ್‌ ಚಾಲೆಂಜ್‌ ಇತರ ಮದ್ಯದ ಬಾಟಲಿಗಳನ್ನು ಖರೀದಿಸಿಕೊಂಡು ಬಂದು ಮನೆಯಲ್ಲಿ ಅಕ್ರಮವಾಗಿ ದಾಸ್ತಾನಿಟ್ಟುಕೊಂಡು ಮಾರಾಟ ಮಾಡುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ. ಆರೋಪಿಯನ್ನು ನ್ಯಾಯಾಲಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದ ಕೇಶ್ವಾಪೂರ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ಜಗದೀಶ ಹಂಚಿನಾಳ ಹಾಗೂ ಸಿಬ್ಬಂದಿಯನ್ನು ಪೊಲೀಸ್‌ ಆಯುಕ್ತರು ಶ್ಲಾಘಿಸಿದ್ದಾರೆ.

Cyber Fraud: ಗೂಗಲ್‌ನಲ್ಲಿ ಹೆಲ್ಪ್‌ಲೈನ್ ನಂಬರ್ಸ್‌ ಸರ್ಚ್ ಮಾಡ್ತೀರಾ? ಹಾಗಿದ್ರೆ ಹುಷಾರ್!

ಕಾಫಿ ಚೀಲ ಕಳವು: ಆರೋಪಿ ಬಂಧನ

ಕೊಪ್ಪ: ರಾತ್ರಿ ವೇಳೆ ಕಾಫಿ ಬೀಜದ ಮೂಟೆ ಕಳವು(Theft) ಮಾಡುತ್ತಿದ್ದ ಕಲ್ಲುಗುಡ್ಡೆ ಗ್ರಾಮದ ಗಣಪತಿಕಟ್ಟೆವಾಸಿ ಗೋಪಾಲ ಬಿನ್‌ ತಿಮ್ಮಯ್ಯ ಎಂಬಾ​ತ​ನ ಮಂಗಳವಾರ ಜಯಪುರ ಪೊಲೀಸರು ಬಂಧಿಸಿದ್ದು, ಆರೋ​ಪಿ​ಯ ನ್ಯಾಯಾಂಗ ಬಂಧ​ನಕ್ಕೆ ಒಪ್ಪಿ​ಸ​ಲಾ​ಗಿದೆ.

ಮದ್ಯ ​ವ್ಯ​ಸ​ನಿ​ಯಾ​ಗಿದ್ದ ಈತ ಕೂಲಿ ಕೆಲಸದಿಂದ ಬರುತ್ತಿದ್ದ ಹಣ ಕುಡಿತಕ್ಕೆ ಸಾಕಾಗದೆ ಕಳ್ಳತನ ಮಾಡುತ್ತಿದ್ದ ಎಂದು ಪೊಲೀಸ್‌ ತನಿಖೆಯಿಂದ ತಿಳಿದುಬಂದಿದೆ. ಮಾ.16ರಂದು ರಾತ್ರಿ ಕಲ್ಲುಗುಡ್ಡೆ ಗ್ರಾಮದ ಅಂದಕಲ್ಲು ರಾಘವೇಂದ್ರ ತಮ್ಮ ಮನೆಯ ಪಕ್ಕದಲ್ಲಿರುವ ಕೊಟ್ಟಿಗೆಯಲ್ಲಿ ಇಟ್ಟಿ​ದ್ದ ಕಾಫಿ ಬೀಜ ಮೂಟೆ ಈತ ಕಳ್ಳತನ ಮಾಡಿದ್ದನು. ಮಂಗಳವಾರ ಅನುಮಾನದ ಮೇರೆಗೆ ಆರೋಪಿ ಗೋಪಾಲನನ್ನು ಕರೆದು ವಿಚಾರಣೆ ನಡೆಸಿದಾಗ ಕಾಫಿ ಬೀಜದ ಮೂಟೆ ಕಳ್ಳತನ ಮಾಡಿರುವುದಾಗಿ ಬಾಯಿ ಬಿಟ್ಟಿದ್ದಾನೆ. ಬಂಧಿತ​ನಿಂದ ಸುಮಾರು 35 ಸಾವಿರ ರು. ಮೌಲ್ಯದ 438 ಕೆ.ಜಿ ತೂಕದ 14 ಕಾಫಿ ಬೀಜದ ಮೂಟೆಗಳನ್ನು ವಶಪಡಿಸಿಕೊಳ್ಳಲಾ​ಗಿದೆ. ಜಯಪುರ ಠಾಣೆ​ಯಲ್ಲಿ ಪ್ರಕ​ರಣ ದಾಖ​ಲಾ​ಗಿದ್ದು, ಪಿಎಸ್‌ಐ ಜ್ಯೋತಿಯವರು ತನಿಖೆ ಕೈಗೊಂಡಿದ್ದಾರೆ.
 

click me!