ಪೋಷಕರು ಅದೆಷ್ಟೆ ಎಚ್ಚರವಾಗಿದ್ದರೂ ಕೆಲವೊಮ್ಮೆ ಅನಾಹುತಗಳು ನಡೆದುಹೋಗುತ್ತೆ. ಇದೀಗ ಮಂಡ್ಯ ಜಿಲ್ಲೆಯಲ್ಲಿ ಇಂತದ್ದೇ ಅನಾಹುತಕ್ಕೆ ಪುಟ್ಟ ಕಂದಮ್ಮ ಬಲಿಯಾಗಿದೆ. ಮನಕಲುಕುವ ಈ ಘಟನೆಯ ವಿವರ ಇಲ್ಲಿದೆ.
ಮಂಡ್ಯ(ಏ.26): ಮನೆಯಲ್ಲಿ ಆಟವಾಡೋ ವೇಳೆ ನೀರಿನ ಪಾತ್ರೆಗೆ ಬಿದ್ದು ಮಗು ಸಾವನ್ನಪ್ಪಿದ ಘಟನೆ ಮಂಡ್ಯ ಜಿಲ್ಲೆಯ ಮದ್ದೂರಿನ ವಿಶ್ವೇಶ್ವರಯ್ಯ ನಗರದಲ್ಲಿ ನಡೆದಿದೆ. ರಾಜು ಹಾಗೂ ಮಾನಸ ದಂಪತಿಯ ಒಂದು ವರ್ಷದ ಹೆಣ್ಣು ಮಗು ಮೃತ ದುರ್ದೈವಿ.
ಇದನ್ನೂ ಓದಿ: ಬೆಂಗಳೂರು ಪೊಲೀಸರಿಂದ ಹಲ್ಲೆ: ಜೀವನ್ಮರಣ ಹೋರಾಟದಲ್ಲಿ ಯುವಕ
ಪೋಷಕರು ತಮ್ಮ ಕೆಲಸದಲ್ಲಿ ಮಗ್ನರಾಗಿದ್ದರು. ಈ ವೇಳೆ ಮಗು ಮನೆಯಲ್ಲಿ ಆಟವಾಡುತಿತ್ತು. ಆಟವಾಡುತ್ತಿದ್ದ ಮಗು ನೀರು ತುಂಬಿಸಿದ್ದ ಪಾತ್ರೆಯಲ್ಲಿ ಬಿದ್ದಿದೆ. ನೀರಿನಲ್ಲಿ ಮುಳುಗಿದ ಮಗುವಿನ ಆಕ್ರಂದನ ಯಾರಿಗೂ ಕೇಳಿಸಲಿಲ್ಲ. ಕೆಲ ಹೊತ್ತಿನ ಬಳಿಕ ಮಗು ಕಾಣದಿದ್ದಾಗ ಪೋಷಕರು ಹುಡುಕಾಟ ಆರಂಭಿಸಿದ್ದಾರೆ. ಪಕ್ಕದಲ್ಲೇ ಇದ್ದ ನೀರಿನ ಪಾತ್ರೆಯಲ್ಲಿ ಮುಳುಗಿದ ರೀತಿಯಲ್ಲಿ ಮಗುವಿನ ದೇಹ ಪತ್ತೆಯಾಗಿದೆ.
ಇದನ್ನೂ ಓದಿ: IPL ಕ್ರಿಕೆಟ್ ಬೆಟ್ಟಿಂಗ್ -ಹಾಸನದ ಡಿಪ್ಲೋಮಾ ವಿದ್ಯಾರ್ಥಿ ಬಲಿ!
ಹೆತ್ತವರು ಮಗುವನ್ನು ಹುಡುಕುವಷ್ಟರಲ್ಲಿ ಕಂದಮ್ಮನ ಪ್ರಾಣ ಪಕ್ಷಿ ಹಾರಿ ಹೋಗಿದೆ. ಹೆಣ್ಣು ಮಗುವನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ. ಕಂದಮ್ಮನ್ನು ಕಳೆದುಕೊಂಡ ಹೆತ್ತವರು ಆಘಾತಕ್ಕೊಳಗಾಗಿದ್ದಾರೆ. ಮದ್ದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.