
ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಗಳೂರು
ಮಂಗಳೂರು (ಜ.29): ರಾ.ಹೆ. 66 ರ ಕೊಲ್ಯ- ಅಡ್ಕ ಬಳಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಓರ್ವ ಮೃತಪಟ್ಟು, ಇಬ್ಬರು ಯುವತಿಯರ ಸಹಿತ ಮೂವರು ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಘಟನೆ ನಡೆದು ಹಲವು ಸಮಯ ಕಳೆದರೂ ಸ್ಥಳಕ್ಕೆ ಬಾರದ ಪೊಲೀಸರು ಮತ್ತು ಟೋಲ್ ಗೇಟ್ ಅಂಬ್ಯುಲೆನ್ಸ್ ವಿರುದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂಬ್ಯುಲೆನ್ಸ್ ಬಾರದೇ ಇದ್ದ ಹಿನ್ನೆಲೆಯಲ್ಲಿ ಕಾರಿನಲ್ಲೇ ಗಾಯಾಳುಗಳನ್ನು ಸಾಗಿಸಲಾಯಿತು. ಘಟನೆಯಲ್ಲಿ ಉಪ್ಪಳ ಹಿದಾಯತ್ ನಗರ ನಿವಾಸಿ ಬಷಾರ ಅಹಮ್ಮದ್ (22) ಮೃತಪಟ್ಟಿದ್ದಾರೆ. ಇನ್ನೋರ್ವ ಗಾಯಾಳು ಗುರುತು ಪತ್ತೆಯಾಗಿಲ್ಲ.
ಕೇರಳ ಕಣ್ಣೂರು ನಿವಾಸಿ ಫಾತಿಮ ಹಾಗೂ ರೇವತಿ ಎಂಬವರಿಗೆ ಗಾಯಗಳಾಗಿವೆ. ನಾಲ್ವರಿದ್ದ ಕಾರು ಕೊಲ್ಯ- ಅಡ್ಕ ಬಳಿ ರಸ್ತೆ ವಿಭಜಕವನ್ನು ಏರಿ, ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಸಂಪೂರ್ಣ ನುಜ್ಜುಗುಜ್ಜಾಗಿದೆ. ಈ ಸಂದರ್ಭ ಕಾರು ಚಲಾಯಿಸುತ್ತಿದ್ದ ಬಷಾರ ಅಹಮ್ಮದ್ ಅದರೊಳಕ್ಕೆ ಸಿಲುಕಿ, ತಲೆ ಸೇರಿದಂತೆ ದೇಹಕ್ಕೆ ಸಂಪೂರ್ಣ ಗಾಯಗೊಂಡು ಒಳಗೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ . ಇನ್ನುಳಿದ ಮೂವರನ್ನು ಸ್ಥಳೀಯರು ಸೇರಿ ಕಾರಿನಿಂದ ಹಲವು ನಿಮಿಷಗಳ ಕಾಲ ಕಾರ್ಯಾಚರಣೆ ನಡೆಸಿ ಹೊರತೆಗೆದಿದ್ದಾರೆ.
ಜೆಡಿಎಸ್ ಅಧಿಕಾರಕ್ಕೆ ಬಂದರೆ ಕಾವಲುಗಾರನಾಗಿ ಸೇವೆ: ಎಚ್.ಡಿ.ಕುಮಾರಸ್ವಾಮಿ
ಈ ಪೈಕಿ ಓರ್ವ ಯುವತಿಯನ್ನು ಕಾರಿನಲ್ಲಿ ಪ್ರಶಾಂತ್ ಗಟ್ಟಿ ಎಂಬವರು ಎ.ಜೆ ಆಸ್ಪತ್ರೆಗೆ ಕೊಂಡೊಯ್ದು ಮಾನವೀಯತೆ ಮೆರೆದರೆ, ಇನ್ನೋರ್ವಳನ್ನು ಟಿ.ಟಿ ಮೂಲಕ ಅದೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರ ಗಾಯಾಳುವನ್ನು ದೇರಳಕಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಗಾಯಾಳು ಪೈಕಿ ಫಾತಿಮ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯ ವಿದ್ಯಾರ್ಥಿ ನಿಯಾಗಿದ್ದಾರೆ. ನಾಲ್ವರು ಗೆಳೆಯರಾಗಿದ್ದರೆಂದು ತಿಳಿದುಬಂದಿದೆ.
ಪೊಲೀಸರ ವಿರುದ್ದ ರೊಚ್ಚಿಗೆದ್ದ ಸ್ಥಳೀಯರು: ಅಪಘಾತ ನಡೆದ ಸ್ಥಳಕ್ಕೆ ಸಂಚಾರಿ ಹಾಗೂ ಉಳ್ಳಾಲ ಠಾಣಾ ಪೊಲೀಸರು ತಡವಾಗಿ ಆಗಮಿಸಿದ್ದರು ಎಂದು ಆರೋಪಿಸಿ ಸಾರ್ವಜನಿಕರು ತರಾಟೆಗೆ ತೆಗೆದುಕೊಂಡರು. ಅಲ್ಲದೇ ಬ್ಯಾರಿಕೇಡ್ ಅಳವಡಿಸುವ ಕುರಿತು ಹಲವು ಸಮಯದಿಂದ ಹೇಳುತ್ತಾ ಬಂದಿದ್ದರೂ, ಸ್ಪಂದನೆ ಸಿಕ್ಕಿಲ್ಲ ಎಂದು ಆರೋಪಿಸಿದರು. ಈ ಮಧ್ಯೆ ಘಟನೆ ನಡೆದು ಅರ್ಧ ಗಂಟೆ ಕಳೆದರೂ ಸ್ಥಳಕ್ಕೆ ಯಾವುದೇ ಅಂಬ್ಯುಲೆನ್ಸ್ ಬಂದಿಲ್ಲ. ಘಟನೆ ನಡೆದ ಎರಡು ಕಿ.ಮೀ ದೂರದಲ್ಲೇ ತಲಪಾಡಿಯ ನವಯುಗ ಟೋಲ್ ಗೇಟ್ ಇದ್ದು, ನಿಯಮ ಪ್ರಕಾರ ಹೆದ್ದಾರಿ ಸುರಕ್ಷತೆ ದೃಷ್ಟಿಯಿಂದ ಅಂಬ್ಯುಲೆನ್ಸ್ ಕಾರ್ಯಾಚರಣೆ ಮಾಡಬೇಕು. ಸ್ಥಳೀಯರು ಟೋಲ್ ಗೇಟ್ ಸಂಪರ್ಕಿಸಿದರೂ ಯಾವುದೇ ಟೋಲ್ ಅಂಬ್ಯುಲೆನ್ಸ್ ಸ್ಥಳಕ್ಕೆ ಬಂದಿಲ್ಲ.
ರಾಜ್ಯದಲ್ಲಿ ಮತ್ತೆ ಬಿಜೆಪಿಗೆ ಬಹುಮತ ಖಚಿತ: ಕೆ.ಎಸ್.ಈಶ್ವರಪ್ಪ
ಹೀಗಾಗಿ ಸ್ಥಳೀಯರೇ ಕಾರು ಮತ್ತು ಟಿಟಿ ವಾಹನದ ಮೂಲಕ ಗಾಯಾಳುಗಳನ್ನ ಸಾಗಿಸಿದ್ದಾರೆ. ಪೊಲೀಸರು ಕೂಡ ಅರ್ಧ ಗಂಟೆ ಬಳಿಕ ಸ್ಥಳಕ್ಕೆ ಬಂದಿದ್ದಾರೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ರೊಚ್ಚಿಗೆದ್ದ ಜನ ಪೊಲೀಸ್ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನು ಟೋಲ್ ರಸ್ತೆಯಾಗಿದ್ದರೂ ಇಲ್ಲಿ ಸರಿಯಾದ ಸರ್ವೀಸ್ ರಸ್ತೆಯಿಲ್ಲ. ರಸ್ತೆಯ ಬದಿಗಳಲ್ಲಿ ರಿಪ್ಲೆಕ್ಟರ್ ಅಳವಡಿಕೆ ಮಾಡಿಲ್ಲ. ಲೈಟ್ ಕಂಬದಲ್ಲಿ ಬೆಳಕಿಲ್ಲ. ಟೋಲ್ ನ ಅಂಬ್ಯುಲೆನ್ಸ್ ಮತ್ತು ಕ್ರೇನ್ ಊಟಕ್ಕಿಲ್ಲದ ಉಪ್ಪಿನಕಾಯಿ ಎನ್ನುವುದು ಸ್ಥಳೀಯರ ಆರೋಪ. ಸದ್ಯ ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ