
ಇನ್ನೇನು ಕೆಲವೇ ಕ್ಷಣಗಳಲ್ಲಿ ಮದುವೆ ಶಾಸ್ತ್ರ ಮುಗಿದಿತ್ತು. ಭಾವಿ ಪತಿಯ ಜೊತೆ ಕನಸುಗಳ ರಾಶಿಯನ್ನು ಹೊತ್ತಿದ್ದಳು ಮದುಮಗಳು. ಮದುವೆಯ ದಿನವೂ ತುಂಬಾ ಖುಷಿಯಾಗಿಯೇ ಹಸೆಮಣೆ ಏರಿದ್ದಳು. ಇನ್ನೇನು ತಾಳಿ ಕಟ್ಟುವುದು ಒಂದೇ ಬಾಕಿ ಇತ್ತು. ಅಷ್ಟರಲ್ಲಿಯೇ ನಡೆಯಬಾರದ ದುರಂತ ನಡೆದು ಹೋಯಿತು. ಸಿನಿಮಾಗಳಲ್ಲಿ ತೋರಿಸಿರುವಂತೆ, ತಾಳಿ ಕಟ್ಟುವ ವೇಳೆ ನಿಲ್ಲಿಸಿ ಎಂದು ಯಾರೋ ಬರಲಿಲ್ಲ. ಬದಲಿಗೆ ಸಿನಿಮೀಯ ರೀತಿಯನ್ನೂ ಮೀರಿಸೋ ರೀತಿಯಲ್ಲಿ ಇಲ್ಲಿ ಘಟನೆ ನಡೆಯಿತು. ಯುವಕನೊಬ್ಬ ಬಂದು ನೇರವಾಗಿ ವಧುವಿನ ಹೊಟ್ಟೆಗೇ ಗುಂಡಿಕ್ಕಿದ್ದಾನೆ. ಸಂಭ್ರಮದಲ್ಲಿದ್ದ ಮದುವೆ ಮನೆ ರಣಾಂಗಣವಾಯಿತು. ಎಲ್ಲರೂ ದಿಕ್ಕಾಪಾಲಾಗಿ ಓಡಿದರು. ಏನಾಯಿತು ಎನ್ನೋದೇ ತಿಳಿಯಲಿಲ್ಲ. ಕ್ಷಣ ಮಾತ್ರದಲ್ಲಿ ವಧು ಕುಸಿದು ಬಿದ್ದಳು. ಗುಂಡಿಕ್ಕಿದವ ಪರಾರಿಯಾದ. ವಧು ಸಾವು ಬದುಕಿನ ನಡುವೆ ಆಸ್ಪತ್ರೆಯಲ್ಲಿ ನರಳಾಡುತ್ತಿದ್ದಾಳೆ.
ಈ ಘಟನೆ ನಡೆದದ್ದು ಬಿಹಾರದ ಬಕ್ಸಾರ್ನಲ್ಲಿ. ಇದರ ವಿಡಿಯೋ ವೈರಲ್ ಆಗಿದೆ. ಮದುವೆ ಸಮಾರಂಭದಲ್ಲಿ ವಧುವಿನ ಮೇಲೆ ಆಕೆಯ ಪ್ರಿಯಕರ ಗುಂಡು ಹಾರಿಸಿದ್ದಾನೆ ಎಂದು ಹೇಳಲಾಗಿದ್ದು, ಆ ವ್ಯಕ್ತಿಯನ್ನು ನೆರೆಮನೆಯ ದೀನಬಂಧು ಎಂದು ಗುರುತಿಸಲಾಗಿದೆ. 18 ವರ್ಷದ ಆರತಿ ಕುಮಾರಿ ತನ್ನ ಭಾವಿ ಪತಿಯೊಂದಿಗೆ ಮದುವೆ ಮಂಟಪದಲ್ಲಿ ಇದ್ದಾಗ ಈ ಘಟನೆ ನಡೆದಿದೆ. ವೇದಿಕೆ ಮೇಲೆ ಸ್ನೇಹಿತರು ಮತ್ತು ಕುಟುಂಬದರು ಸುತ್ತುವರೆದಿದ್ದರು. ಆರತಿಯ ಸಹೋದರಿಯರೂ ಇದ್ದರು. ಮದುವೆಯ ಸಂಪ್ರದಾಯ ನಡೆಯುತ್ತಿತ್ತು. ಮದುಮಗಳ ಅಮ್ಮ ಅಳಿಯನ ಹಣೆಯ ಮೇಲೆ ಸಿಂಧೂರವನ್ನು ಹಾಕುತ್ತಿದ್ದರು. ನಂತರ ಮಗಳಿಗೆ ಕುಂಕುಮ ಹಚ್ಚಲು ಮುಂದಾಗುತ್ತಿದ್ದಂತೆಯೇ ಧರಧರ ವೇದಿಕೆ ಮೇಲೇರಿದ ಮಾಜಿ ಪ್ರಿಯಕರ ಹಿಂದೆ ಮುಂದೆ ನೋಡದೇ ಗುಂಡು ಹಾರಿಸಿದ್ದಾನೆ.
ಗುಂಡು ಆರತಿಯ ಹೊಟ್ಟೆಗೆ, ಹೊಕ್ಕುಳಿನ ಬಳಿ ತಗುಲಿತು. ಕೆಲವರು ಆರತಿ ಪ್ರಜ್ಞೆಯಿಂದ ಇರುವಂತೆ ನೋಡಿಕೊಳ್ಳಲು ಪ್ರಯತ್ನಿಸಿದಾಗ, ಇತರರು ಕೂಗುತ್ತಾ ಸ್ಥಳದಿಂದ ಹೊರಗೆ ಓಡಿಹೋದರು. ಆರತಿಯನ್ನು ಹತ್ತಿರದ ಸದರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪ್ರಥಮ ಚಿಕಿತ್ಸೆ ನೀಡಿದ ನಂತರ, ವೈದ್ಯರು ವಧುವನ್ನು ವಾರಣಾಸಿ ಟ್ರಾಮಾ ಸೆಂಟರ್ಗೆ ಕಳುಹಿಸಿದರು. ಆಕೆಯ ಸ್ಥಿತಿ ಇನ್ನೂ ಗಂಭೀರವಾಗಿದೆ. ಆರೋಪಿ ದೀನಬಂಧು ಪರಾರಿಯಾಗಿದ್ದು, ಪೊಲೀಸರು ಆತನ ಪೋಷಕರನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ.
ಆರೋಪಿಯನ್ನು ಈ ಹಿಂದೆ ಮದ್ಯದ ಪ್ರಕರಣದಲ್ಲಿ ಜೈಲಿನಲ್ಲಿಡಲಾಗಿತ್ತು ಎಂದು ಹೆಚ್ಚುವರಿ ಸ್ಟೇಷನ್ ಹೌಸ್ ಅಧಿಕಾರಿ ಚಂದನ್ ಕುಮಾರ್ ತಿಳಿಸಿದ್ದಾರೆ. ಆತನನ್ನು ಬಂಧಿಸಲು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.. "ಎಫ್ಎಸ್ಎಲ್ ತಂಡವು ಸಾಕ್ಷ್ಯಗಳನ್ನು ಸಂಗ್ರಹಿಸಿದೆ, ಮತ್ತು ಭಾಗಿಯಾಗಿರುವ ವ್ಯಕ್ತಿಗಾಗಿ ಹುಡುಕಾಟ ಮುಂದುವರಿಯುತ್ತದೆ. ಇನ್ನೂ ಕೆಲವು ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ" ಎಂದು ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ