
ಐಟಿ ಸಂಸ್ಥೆ ಟಿಸಿಎಸ್ನ ನಾಸಿಕ್ ಬ್ರಾಂಚ್ನಲ್ಲಿ ನಡೆದ ಉದ್ಯೋಗಿಗಳ ಮತಾಂತರ (TCS Love Jihad Case) ಹಾಗೂ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದಂತೆ ಬಂದ ತನಿಖಾ ವರದಿಗಳು ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಅಗೆದಷ್ಟೂ ಬಗೆದಷ್ಟೂ ಇದರ ಕಿಂಗ್ಪಿನ್ ನಿದಾ ಖಾನ್ಳ ಖತರ್ನಾಕ್ ಪ್ಲ್ಯಾನ್ಗಳು ಬೆಳಕಿಗೆ ಬಂದಿದ್ದವು. ತನಿಖೆ ನಡೆಸುತ್ತಿರುವ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿಗಳನ್ನು ಬಯಲಿಗೆಳೆದಿದ್ದರು. ನಿದಾ ಖಾನ್ ಪೊಲೀಸರ ಕೈಗೆ ಸಿಗದೇ ಪರಾರಿಯಾಗಿದ್ದಳು. ಕೊನೆಗೂ ಆಕೆಯನ್ನು ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು.
ನಿದಾ ಖಾನ್ ತಮ್ಮ ಕಂಪೆನಿಯಲ್ಲಿ ಉದ್ಯೋಗಿಗಳನ್ನು ಮತಾಂತರಕ್ಕೆ ಯತ್ನಿಸಿದ್ದು ತನಿಖೆಯಿಂದ ಬಯಲಾಗಿದೆ. ಉದ್ಯೋಗವಕಾಶದ ಹೆಸರಿನಲ್ಲಿ ಲೇಡಿ ಉದ್ಯೋಗಿಯೊಬ್ಬರನ್ನು ಮಲೇಷ್ಯಾಕ್ಕೆ ಕಳುಹಿಸಲು ಮುಂದಾಗಿದ್ದಲ್ಲದೇ ಇಮ್ರಾನ್ ಎಂಬಾತನಿಗಾಗಿ ಕೆಲಸ ಮಾಡುವುದಕ್ಕೆ ಕೇಳಲಾಗಿತ್ತು ಎಂಬ ವಿಚಾರವೂ ಬೆಳಕಿಗೆ ಬಂದಿತ್ತು. ನಿದಾ ಖಾನ್ ಟಿಸಿಎಸ್ನಲ್ಲಿ ಪ್ರೊಸೆಸ್ ಅಸೋಸಿಯೇಟ್ ಆಗಿ ಕೆಲಸ ಮಾಡುತ್ತಿದ್ದಳು. ಆಕೆಯ ವಿರುದ್ಧ ಉದ್ಯೋಗಿಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವುದ ಜೊತೆಗೆ ಮತಾಂತರಕ್ಕೆ ಒತ್ತಾಯಿಸಿದ ಪ್ರಕರಣ ದಾಖಲಾಗಿದೆ. ಸಂತ್ರಸ್ತೆ ಪರಿಶಿಷ್ಟ ಜಾತಿಗೆ ಸೇರಿರುವುದರಿಂದ ಈಗ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿಯೂ ಕೇಸ್ ದಾಖಲಾಗಿದೆ.
ಇವೆಲ್ಲವುಗಳ ನಡುವೆ ಅವಳು ಅರೆಸ್ಟ್ ಆಗುವ ಸಮಯದಲ್ಲಿ ಗರ್ಭಿಣಿ ಎನ್ನುವುದು ತಿಳಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಳು. ಇದೇ ಕಾರಣ ಕೊಟ್ಟು ಜಾಮೀನು ಮಂಜೂರು ಮಾಡುವಂತೆ ಕೋರಲಾಗಿತ್ತು. ನಾಸಿಕ್ನ ವಿಶೇಷ ಕೋರ್ಟ್ ಶ್ರೀಕೃಷ್ಣನ ಉದಾಹರಣೆ ಕೊಟ್ಟು ಜಾಮೀನು ಮಂಜೂರು ಮಾಡಿದ್ದು, ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಶ್ರೀಕೃಷ್ಣನು ಜೈಲಿನಲ್ಲಿ ಜನಿಸಿದನೆಂಬ ಅಂಶವನ್ನು ಉಲ್ಲೇಖಿಸಿ, "ಜೈಲಿನಲ್ಲಿ ಹುಟ್ಟುವ ಮಾನಸಿಕ ಆಘಾತ ಅಥವಾ ಅದರೊಂದಿಗೆ ಬರುವ ಸಾಮಾಜಿಕ ಕಳಂಕವನ್ನು ಯಾವುದೇ ಮಗು ಸಹಿಸಿಕೊಳ್ಳಬೇಕಾಗಿಲ್ಲ" ಎಂದು ವಿಶೇಷ ನ್ಯಾಯಾಧೀಶ ಕೆ. ಜಿ. ಜೋಶಿ ಹೇಳಿದರು. ನ್ಯಾಯಾಧೀಶರು ಮಗುವಿನ ಹಿತದೃಷ್ಟಿಯಿಂದ ನ್ಯಾಯಾಂಗ ವಿವೇಚನೆಯನ್ನು ಬಳಸುವುದು ನ್ಯಾಯಯುತ ಮತ್ತು ಸೂಕ್ತ ಎಂದು ಹೇಳಿದರು.
ತೀರ್ಪಿನಲ್ಲಿ ನ್ಯಾಯಾಧೀಶರು, ನಿದಾ ಖಾನ್ ಐದು ತಿಂಗಳ ಗರ್ಭಿಣಿ. ಶ್ರೀಕೃಷ್ಣನಂತೆ ಜೈಲಿನಲ್ಲಿ ಜನಿಸುವ ಮಾನಸಿಕ ಆಘಾತ ಅಥವಾ ಅದರೊಂದಿಗೆ ಬರುವ ಸಾಮಾಜಿಕ ಕಳಂಕ ಯಾರಿಗೂ ಅಸಹನೀಯ. ಈ ದುರಂತ ಘಟನೆಯನ್ನು ತಪ್ಪಿಸಲು ಮತ್ತು ನವಜಾತ ಶಿಶುವಿನ ಒಟ್ಟಾರೆ ಕಲ್ಯಾಣಕ್ಕಾಗಿ, ಅರ್ಜಿದಾರರ ಆರೋಪಿಗಳ ಪರವಾಗಿ ನ್ಯಾಯಾಂಗ ವಿವೇಚನೆಯನ್ನು ಬಳಸುವುದು ನ್ಯಾಯಯುತ ಮತ್ತು ಸೂಕ್ತವಾಗಿರುತ್ತದೆ ಎಂದು ಜಾಮೀನು ಮಂಜೂರು ಮಾಡಿದರು. ಶ್ರೀಕೃಷ್ಣ ಪರಮಾತ್ಮನನ್ನು ಲವ್ ಜಿಹಾದ್ ಕಿಂಗ್ಪಿನ್ ಮಗುವಿಗೆ ಹೋಲಿಕೆ ಮಾಡಿರುವುದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಜಾಮೀನು ಮಂಜೂರು ಮಾಡುವುದಿದ್ದರೆ ಗರ್ಭಿಣಿ ಎಂದು ಹೇಳಿ ಮಾಡಬಹುದಿತ್ತು. ಆದರೆ ಶ್ರೀಕೃಷ್ಣನ ಉದಾಹರಣೆ ಕೊಡುವುದು ಬೇಕಿತ್ತಾ? ಲವ್ ಜಿಹಾದಿಯ ಮಗುವನ್ನು ಶ್ರೀಕೃಷ್ಣನಿಗೆ ಹೋಲಿಸುವುದು ಎಷ್ಟು ಸರಿ ಎಂದು ಜನರು ಕಿಡಿ ಕಾರುತ್ತಿದ್ದಾರೆ.
ಸಂತ್ರಸ್ತರಿಗೆ ನಿದಾ ಖಾನ್ ಇಸ್ಲಾಂಗೆ ಮತಾಂತರ ಮಾಡುವ ಉದ್ದೇಶದಿಂದ ಇಸ್ಲಾಮಿಕ್ ಪುಸ್ತಕಗಳನ್ನು ಹಾಗೂ ಕೆಲವು ಬುರ್ಖಾಗಳನ್ನು ನೀಡಿದ್ದಳು. ಅಂತಹ ವಸ್ತುಗಳನ್ನು ನಂತರ ವಿಚಾರಣೆ ವೇಳೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ ಈ ಪುಸ್ತಕಗಳನ್ನು ಹಾಗೂ ಬುರ್ಖಾಗಳನ್ನು ಯಾವ ಮೂಲದಿಂದ ತಂದಿದ್ದಾಳೆ ಎಂಬ ಬಗ್ಗೆ ಇನ್ನಷ್ಟೇ ಬಹಿರಂಗವಾಗಬೇಕಿದೆ. ಬರೀ ಇಷ್ಟೇ ಅಲ್ಲದೇ ನಿದಾ ಖಾನ್ ಸಂತ್ರಸ್ತೆಯ ಮೊಬೈಲ್ ಫೋನ್ನಲ್ಲಿ ಇಸ್ಲಾಮಿಕ್ ಅಪ್ಲಿಕೇಷನ್ ಒಂದನ್ನು ಇನ್ಸ್ಟಾಲ್ ಮಾಡಿದ್ದಳು. ಹಾಗೂ ಆಕೆಯ ಮೇಲೆ ಇಸ್ಲಾಂ ಧರ್ಮದ ಪ್ರಭಾವ ಬೀರುವ ಉದ್ದೇಶದಿಂದ ಆಕೆಗೆ ದಿನವೂ ಧಾರ್ಮಿಕ ವಿಚಾರಕ್ಕೆ ಸಂಬಂಧಿಸಿದ ಯುಟ್ಯೂಬ್ ಹಾಗೂ ಇನಸ್ಟಾಗ್ರಾಮ್ ವೀಡಿಯೋಗಳ ಲಿಂಕ್ಗಳನ್ನು ಕಳುಹಿಸುತ್ತಿದ್ದಳು. ಸಂತ್ರಸ್ತೆಯ ಶಿಕ್ಷಣದ ದಾಖಲೆಯನ್ನು ಒತ್ತಾಯಪೂರ್ವಕವಾಗಿ ಕಸಿದುಕೊಂಡಿದ್ದ ನಿದಾ ಖಾನ್ ಆಕೆಯ ಹೆಸರನ್ನು ಹನಿಯಾ ಎಂದು ಬದಲಿಸುವಂತೆ ಒತ್ತಾಯಿಸಿದ್ದಳು. ಈ ಪ್ರಕ್ರಿಯೆಯನ್ನು ಮುಂದುವರೆಸುವುದಕ್ಕೆ ಆಕೆ ಮುಂಬೈನ ಮಲೆಗಾಂವ್ ಸಮೀಪದ ವ್ಯಕ್ತಿಯೊಬ್ಬನನ್ನು ಸಂಪರ್ಕಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ