Uttara Kannada: ಸಿದ್ದಾಪುರ ರಸ್ತೆಬದಿ ರಟ್ಟಿನ ಬಾಕ್ಸ್‌ನಲ್ಲಿ ನವಜಾತ ಗಂಡು ಶಿಶು ಪತ್ತೆ

By Sathish Kumar KHFirst Published Dec 20, 2022, 11:09 AM IST
Highlights

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಪಟ್ಟಣದಲ್ಲಿ ರಟ್ಟಿನ ಬಾಕ್ಸ್‌ನಲ್ಲಿ ನವಜಾತ ಶಿಶು ಪತ್ತೆಯಾಗಿದೆ. ಆದರೆ, ಗಂಡು ಮಗು ಅಂಗವೈಕಲ್ಯವನ್ನು ಹೊಂದಿದ್ದರಿಂದ ಪೋಷಕರೇ ಮಗುವನ್ನು ರಟ್ಟಿನ ಬಾಕ್ಸ್‌ನಲ್ಲಿ ಹಾಕಿ ರಸ್ತೆಯ ಪಕ್ಕದಲ್ಲಿ ಇಟ್ಟು ಹೋಗಿರುವ ಅಮಾನವೀಯ ಘಟನೆ ವರದಿಯಾಗಿದೆ.

ಉತ್ತರ ಕನ್ನಡ (ಡಿ.20): ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಪಟ್ಟಣದಲ್ಲಿ ರಟ್ಟಿನ ಬಾಕ್ಸ್‌ನಲ್ಲಿ ನವಜಾತ ಶಿಶು ಪತ್ತೆಯಾಗಿದೆ. ಆದರೆ, ಮಗು ಅಂಗವೈಕಲ್ಯವನ್ನು ಹೊಂದಿದ್ದರಿಂದ ಪೋಷಕರೇ ಮಗುವನ್ನು ರಟ್ಟಿನ ಬಾಕ್ಸ್‌ನಲ್ಲಿ ಹಾಕಿ ರಸ್ತೆಯ ಪಕ್ಕದಲ್ಲಿ ಇಟ್ಟು ಹೋಗಿರುವ ಅಮಾನವೀಯ ಘಟನೆ ನಡೆದಿದೆ.

ದೇಶದಲ್ಲಿ ಅದೆಷ್ಟೋ ಲಕ್ಷಾಂತರ ಜನರು ತಮಗೆ ಮಕ್ಕಳಿಲ್ಲ ಎಂಬ ಕೊರಗಿನಿಂದಲೇ ಜೀವವನ್ನು ಮುಗಿಸಿದ್ದಾರೆ. ಆದರೆ, ಕೆಲವೊಬ್ಬರು ಮಕ್ಕಳಿದ್ದರೂ ಇದು ನಮಗೆ ಬೇಡವೆಂದು ಅನಾಥಾಶ್ರಮ ಅಥವಾ ಪೋಷಣೆ ಮಾಡುವ ಕೇಂದ್ರಕ್ಕೆ ಮಕ್ಕಳನ್ನು ಬಿಡುತ್ತಾರೆ. ಇನ್ನು ಅವಿದ್ಯಾವಂತ ಮತ್ತು ಸುರಕ್ಷಿತವಲ್ಲದ ಲೈಂಗಿಕ ಕ್ರಿಯೆಯಿಂದ ಜನಿಸಿದ ಮಗುವನ್ನು ಎಲ್ಲೆಂದರಲ್ಲಿ ಎಸೆದಿರುವ ಘಟನೆಗಳು ವರದಿಯಾಗಿದೆ. ಇನ್ನೂ ಮುಂದುವರೆದು ಕೆಲವರು ಗರ್ಭವನ್ನು ಆಸ್ಪತ್ರೆಯಲ್ಲಿಯೇ ತೆಗೆಸಿಬಿಡುತ್ತಾರೆ. ಆದರೆ, ಇದ್ಯಾವುದನ್ನೂ ಮಾಡದ ಕ್ರೂರಿ ಪೋಷಕರು ಆಗ ತಾನೇ ಹುಟ್ಟಿದ ಮಗು ಅಂಗವಿಕಲ ಆಗಿದೆ ಎಂದು ಅದನ್ನು ರಟ್ಟಿನ ಬಾಕ್ಸ್‌ನಲ್ಲಿ ಇಟ್ಟು ರಸ್ತೆ ಪಕ್ಕದಲ್ಲಿ ಇಟ್ಟು ಹೋಗುರುವ ಅಮಾನವೀಯ ಘಟನೆ ಸಮಾಜವನ್ನು ತಲೆ ತಗ್ಗಿಸುವಂತೆ ಮಾಡಿದೆ.

Tamil Nadu: ಸರ್ಕಾರಿ ಶಾಲೆ ಶೌಚಾಲಯದಲ್ಲಿ ಪತ್ತೆಯಾಯ್ತು ನವಜಾತ ಶಿಶು ಶವ..!

ಶಿಶು ರಕ್ಷಣೆ ಮಾಡಿದ ಪೊಲೀಸರು: ಸಿದ್ದಾಪುರದ ಗುಡ್ಡೆಕೊಪ್ಪ ಮಾರ್ಗದ ರಸ್ತೆಯ ಪಕ್ಕದಲ್ಲಿ ರಟ್ಟಿನ ಬಾಕ್ಸ್‌ನಲ್ಲಿ ಇರಿಸಿ ನವಜಾತ ಶಿಶುವನ್ನು ಇಟ್ಟು ಹೋಗಿರುವುದನ್ನು ಕಂಡ ಸಾರ್ವಜನಿಕರು ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಮಗುವಿನ ರಕ್ಷಣೆ ಮಾಡಿದ್ದಾರೆ. ಕೂಡಲೇ ಶಿಶು ಅಭಿವೃದ್ಧಿ ಅಧಿಕಾರಿಯನ್ನು ಸ್ಥಳಕ್ಕೆ ಕರೆಸಿ ಮಗುವನ್ನು ಆರೈಕೆ ಮಾಡುವಂತೆ ಒಪ್ಪಿಸಿದ್ದಾರೆ. ಇನ್ನು ಎರಡು ವಾರದ ಗಂಡು ಮಗು ಅಂಗವೈಕಲ್ಯ ಹೊಂದಿದ್ದರಿಂದಲೇ ರಸ್ತೆ ಬದಿಯಲ್ಲಿ ಮಗುವನ್ನು ಬಿಟ್ಟು ಹೋಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಈ ಕುರಿತು ಸಿದ್ದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!