ಕೊಲೆ ನಡೆದ ಕೇವಲ 48 ಗಂಟೆಯಲ್ಲಿ ಆರೋಪಿ ಬಂಧನ

By Kannadaprabha NewsFirst Published Jul 4, 2020, 8:45 AM IST
Highlights

ಕಳೆದ ಜೂನ್‌ 27ರಂದು ಪಟ್ಟಣದ ಸಮೀಪವಿರುವ ಸಿದ್ದಪ್ಪನ ಬೆಟ್ಟದಲ್ಲಿ ಯುವಕನೋರ್ವನ ಕೊಲೆ ನಡೆದಿತ್ತು. ಈ ಸಂಬಂಧ ಹೊಸದುರ್ಗ ಠಾಣೆ ಪಿಎಸ್‌ಐ ಶಿವಕುಮಾರ್‌ ನೇತೃತ್ವದಲ್ಲಿ ತಂಡ ರಚಿಸಲಾಗಿದ್ದು ಆರೋಪಿ ಎಂ ಜಿ ದಿಬ್ಬ ಗ್ರಾಮದ ಯುವಕ ದೇವರಾಜ (25) ಎಂಬುವಾತನನ್ನು ಬಂಧಿಸಿದ್ದಾರೆ. ಈ ಕಾರ್ಯಾಚರಣೆ ನಡೆದದ್ದು ಹೇಗೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ

ಹೊಸದುರ್ಗ(ಜು.04): ಕೊಲೆ ನಡೆದ 48 ಗಂಟೆಯಲ್ಲಿ ಆರೋಪಿಗಳ ಪತ್ತೆ ಹಚ್ಚುವಲ್ಲಿ ಹೊಸದುರ್ಗ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಶುಕ್ರವಾರ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಸ್ಪಿ ರಾಧಿಕಾ ಪೊಲೀಸರ ಕಾರ್ಯವನ್ನು ಶ್ಲಾಘಿಸಿದ್ದಾರೆ.

ಕಳೆದ ಜೂನ್‌ 27ರಂದು ಪಟ್ಟಣದ ಸಮೀಪವಿರುವ ಸಿದ್ದಪ್ಪನ ಬೆಟ್ಟದಲ್ಲಿ ಯುವಕನೋರ್ವನ ಕೊಲೆ ನಡೆದಿತ್ತು. ಈ ಸಂಬಂಧ ಹೊಸದುರ್ಗ ಠಾಣೆ ಪಿಎಸ್‌ಐ ಶಿವಕುಮಾರ್‌ ನೇತೃತ್ವದಲ್ಲಿ ತಂಡ ರಚಿಸಲಾಗಿದ್ದು ಆರೋಪಿ ಎಂ ಜಿ ದಿಬ್ಬ ಗ್ರಾಮದ ಯುವಕ ದೇವರಾಜ (25) ಎಂಬುವಾತನನ್ನು ಬಂಧಿಸಿದ್ದಾರೆ ಎಂದರು.

'ಅಪ್ಪಾ ಆನ್‌ ಲೈನ್ ಕ್ಲಾಸ್‌ಗೆ ಮೊಬೈಲ್‌ ಬೇಕು' ತಂದುಕೊಡಲಾಗದ ರೈತ ಸುಸೈಡ್

ಕೊಲೆಯಾದ ಯುವಕ ಅಶೋಕ್‌ ಹಾಗೂ ಆರೋಪಿ ದೇವರಾಜ ಸ್ನೇಹಿತರಾಗಿದ್ದು ಇವರಿಬ್ಬರೂ ಮದ್ಯ ಸೇವನೆಗೆ ಸಿದ್ದಪ್ಪನ ಬೆಟ್ಟಕ್ಕೆ ತೆರಳಿದ್ದಾರೆ. ಫೋನ್‌ ಮಾಡುವ ವಿಚಾರದಲ್ಲಿ ಇವರಿಬ್ಬರಿಗೂ ಗಲಾಟೆಯಾಗಿದೆ. ಪರಸ್ಪರ ಜಗಳವಾಡಿಕೊಂಡಿದ್ದು ಅಂತಿಮವಾಗಿ ಮಾರಾಮಾರಿಗೆ ಇಳಿದಿದ್ದಾರೆ. ಈ ವೇಳೆ ಆರೋಪಿ ದೇವರಾಜ ತಾನು ಹಾಕಿಕೊಂಡಿದ್ದ ಜಾಕೆಟ್‌ನಲ್ಲಿದ್ದ ದಾರದಿಂದಲೇ ಅಶೋಕನ ಕುತ್ತಿಗೆಗೆ ಬಿಗಿದು ಸಾಯಿಸಿದ್ದಾನೆ . ವಿಚಾರಣೆ ವೇಳೆ ಆರೋಪಿ ತಾನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆಂದು ಎಸ್ಪಿ ರಾಧಿಕಾ ತಿಳಿಸಿದರು.

ಸರಗಳ್ಳರ ಬಂಧನ

ತಾಲೂಕಿನಲ್ಲಿ ಹಲವು ತಿಂಗಳುಗಳ ಹಿಂದೆ ನಡೆದ ಒಂಟಿ ಮಹಿಳೆಯರ ಸರಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಂಪುರ ಠಾಣೆ ಪಿಎಸ್‌ಐ ಸುನಿಲ್‌ಕುಮಾರ್‌ ತಂಡ 3 ಜನ ಆರೋಪಿಗಳನ್ನು ಬಂದಿಸಿ 4 ಲಕ್ಷ 10 ಸಾವಿರ ಬೆಲೆ ಬಾಳುವ 82 ಗ್ರಾಂ ತೂಕದ 3 ಚಿನ್ನದ ಸರಗಳು ಹಾಗೂ ಒಂದು ಲಕ್ಷ ಬೆಲೆ ಬಾಳುವ 2 ಮೋಟಾರ್‌ ಬೈಕ್‌ ಗಳ ವಶಪಡಿಸಿಕೊಂಡಿದ್ದಾರೆ .

ಬಂದಿತರನ್ನು ಹಿರಿಯೂರು ತಾಲೂಕು ಸೂರಗೊಂಡನಹಳ್ಳೀ ಗ್ರಾಮದ ಹೆಚ್‌. ವೀರೇಂದ್ರಪ್ಪ (24), ಕಡೂರು ತಾಲೂಕು ಭೋವಿಹಟ್ಟಿಗ್ರಾಮದ ಟಿ ಕಿರಣ, ಕಡೂರು ಗ್ರಾಮದ ವಕ್ಕಲಿಗೆರೆ ಗ್ರಾಮದ ರುದ್ರೇಶ ( 38) ಎಂದು ಗುರುತಿಸಲಾಗಿದೆ. ಇವರೆಲ್ಲ ಮೂರ್ನಾಲ್ಕು ಜನರ ತಂಡ ಮಾಡಿಕೊಂಡು ಒಂಟಿ ಮಹಿಳೆಯರು ಓಡಾಡುವ ಪ್ರದೇಶಗಳನ್ನು ಆಯ್ಕೆಮಾಡಿಕೊಳ್ಳುತ್ತಿದ್ದರು. ಪೂರ್ವಯೋಜಿತವಾಗಿ ತಯಾರಿ ಮಾಡಿಕೊಂಡು ಸರ ದೋಚುವ ಕೃತ್ಯ ಎಸಗುತ್ತಿದ್ದರು.

ಈ ಎರಡು ಪ್ರತ್ಯೇಕ ಪ್ರಕರಣಗಳನ್ನು ಪತ್ತೆ ಹಚ್ಚಲು ಹೆಚ್ಚುವರಿ ಎಸ್‌ಪಿ ಮಹಾಲಿಂಗ ಬಿ. ನಂದಗಾವಿ ಮಾರ್ಗದರ್ಶನದಲ್ಲಿ, ಹಿರಿಯೂರು ಉಪವಿಭಾಗ ಡಿವೈಎಸ್‌ಪಿ ರೋಷನ್‌ ಉಸ್ತುವಾರಿಯಲ್ಲಿ ಸಿಪಿಐ ಎಂ.ಡಿ. ಪೈಜುಲ್ಲಾ ನೇತೃತ್ವದಲ್ಲಿ ಪಿಎಸ್‌ಐ ಶಿವಕುಮಾರ್‌ ಮತ್ತು ಸುನೀಲ್‌ ಕುಮಾರ್‌ ತಂಡ ರಚಿಸಲಾಗಿತ್ತು. ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾದ ತಂಡದಲ್ಲಿದ್ದ ಸಿಬ್ಬಂದಿಗಳಾದ ಯತೀಶ್‌, ಕುಮಾರ್‌, ಪ್ರಕಾಶ್‌, ಜಾವಿದ್‌ ಬಾಷಾ, ಶಶಿಕುಮಾರ್‌, ಬಸವರಾಜ್‌, ತಿಪ್ಪೇಸ್ವಾಮಿ ಇವರಿಗೆ ಎಸ್‌ಪಿ ರಾಧಿಕಾ ಅಭಿನಂದನೆ ಸಲ್ಲಿಸಿದ್ದಾರೆ.
 

click me!