Crime News: ಮೂರು ವರ್ಷದ ಮಗು ಕೊಂದು ತಾನೂ ಆತ್ಮಹತ್ಯೆಗೆ ಮಾಡಿಕೊಂಡ ಅಮ್ಮ

By Sharath SharmaFirst Published Jul 1, 2022, 4:04 PM IST
Highlights

Bengaluru Crime News: ಜೀವನದಲ್ಲಿ ಜಿಗುಪ್ಸೆ ಬಂದಿದೆ ಎಂಬ ಕಾರಣ ನೀಡಿ ಮೂರು ವರ್ಷದ ಮುದ್ದಾದ ಮಗುವನ್ನು ಕೊಲೆಗೈದು ತಾಯಿಯೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ನಡೆದಿದೆ. ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣ ಹುಡುಕಲಾಗುತ್ತಿದೆ. 

ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಅಮ್ಮ, ತನ್ನ ಮೂರು ವರ್ಷದ ಕಂದನನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ರಾಜರಾಜೇಶ್ವರಿ ನಗರ ಪೊಲೀಸ್‌ ಠಾಣೆಯಲ್ಲಿ (Raja Rajeshwari Nagar) ನಡೆದಿದೆ. ತಾಯಿಯ ಹೆಸರು ದೀಪಾ (31) ಮತ್ತು ಹೆಣ್ಣು ಮಗುವಿನ ಹೆಸರು ರಿಯಾ ಎಂದು ಗುರುತಿಸಲಾಗಿದೆ. ಗಂಡ ಮನೆಯಲ್ಲಿಲ್ಲದ ವೇಳೆ ವೇಲಿನಿಂದ ಮಗುವನ್ನು ಕೊಂದು ನಂತರ ತಾನೂ ನೇಣಿಗೆ ಶರಣಾಗಿದ್ದಾಳೆ. ಸಾಯುವ ಮುನ್ನ ಡೆತ್‌ ನೋಟ್‌ ಬರೆದಿಟ್ಟಿದ್ದು, ತನ್ನ ಸಾವಿಗೆ ತಾನೇ ಕಾರಣ ಎಂದು ಬರೆಯಲಾಗಿದೆ. 

"ಯಾರೂ ನನ್ನ ಸಾವಿಗೆ ಕಾರಣರಲ್ಲ. ಜೀವನದ ಜಂಜಾಟ ನನಗೆ ಸಾಕಾಗಿದೆ. ನನ್ನನ್ನು ಕ್ಷಮಿಸು ಅಮ್ಮ ಮತ್ತು ದಿವ್ಯಾ. ಲವ್‌ ಯೂ ಶೋನಾ," ಎಂದು ಆಂಗ್ಲಭಾಷೆಯಲ್ಲಿ ಡೆತ್‌ ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಿನ್ನೆ ಸಂಜೆ ಪೋಷಕರ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದರು ದೀಪಾ. ಅದಾದ ನಂತರ ಸಂಜೆ ಕೆಲಸ ಮುಗಿಸಿ ರಾತ್ರಿ 9 ಗಂಟೆಗೆ ಗಂಡ ಆದರ್ಶ್‌ ಮನೆಗೆ ಬಂದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದಿದೆ. 

ಇದನ್ನೂ ಓದಿ: Crime News: ವರದಕ್ಷಿಣೆಗಾಗಿ ಸೊಸೆಯನ್ನು ವಿದ್ಯುತ್‌ ತಂತಿಗೆ ಕಟ್ಟಿ ಕೊಂದ ಅತ್ತೆ-ಮಾವ

ನಂತರ ರಾಜರಾಜೇಶ್ವರಿ ನಗರ ಪೊಲೀಸರಿಗೆ (RR Nagar police) ಮಾಹಿತಿ ನೀಡಿದ ನಂತರ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ. ಆತ್ಮಹತ್ಯೆಗೆ ಅನಾರೋಗ್ಯ ಸಮಸ್ಯೆ ಕಾರಣವಾ ಅಥವಾ ಕೌಟುಂಬಿಕ ಸಮಸ್ಯೆ ಏನಾದರೂ ಇತ್ತಾ ಎಂಬ ಕುರಿತು ತನಿಖೆ ನಡೆಸಲಾಗುತ್ತಿದೆ. ಈ ಬಗ್ಗೆ ಮಾಹಿತಿ ನೀಡಿರುವ ಪಶ್ಚಿಮ ವಿಭಾಗ ಡಿಸಿಪಿ ಸಂಜೀವ್‌ ಪಾಟೀಲ್‌ (DCP Bengaluru West, Sanjeev Patil), "ಆರ್‌ಆರ್‌ ನಗರ ವ್ಯಾಪ್ತಿಯಲ್ಲಿ ಮಗುವನ್ನೂ ಕೊಂದು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ದಾಖಲಾಗಿದೆ. ಮಗುವನ್ನು ಸೀಲಿಂಗ್‌ ಫ್ಯಾನ್‌ಗೆ ನೇಣು ಹಾಕಲಾಗಿತ್ತು. ಮಹಿಳೆಯ ಸಹೋದರ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದೇವೆ. ದೀಪಾ ಒಂದು ವಾರದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಬೇರೆ ಏನಾದರೂ ಕಾರಣ ಇರಬಹುದಾ ಎಂಬ ಬಗ್ಗೆಯೂ ತನಿಖೆ ಮಾಡಲಾಗುತ್ತಿದೆ," ಎಂದರು. 

ಇದನ್ನೂ ಓದಿ: ಹೆಂಡತಿಯ ಕೈಕಾಲು ಕಟ್ಟಿ 4ನೇ ಮಹಡಿಯಿಂದ ಬಿಸಾಕಿದ ಪಾಪಿ ಗಂಡ, ಎದೆ ಝಲ್‌ ಎನ್ನಿಸುವ ಘಟನೆ

ಗಂಡ ಹೆಂಡತಿ ಮದುವೆಯಾಗಿ ಸುಮಾರು ನಾಲ್ಕೂವರೆ ವರ್ಷವಾಗಿತ್ತು. ಗಂಡ ಆದರ್ಶ್‌ ಉಡುಪಿ ಮೂಲದವನಾಗಿದ್ದು ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಯಾವುದೇ ಆರ್ಥಿಕ ಸಮಸ್ಯೆ ಅವರಿಗಿರಲಿಲ್ಲ ಎಂದು ಕುಟುಂಬ ಮೂಲಗಳು ಪೊಲೀಸರಿಗೆ ಮಾಹಿತಿ ನೀಡಿವೆ. ಇಬ್ಬರೂ ಅನ್ಯೋನ್ಯವಾಗಿಯೇ ಇದ್ದರು ಎಂಬ ಮಾಹಿತಿ ಪ್ರಾಥಮಿಕ ತನಿಖೆಯಲ್ಲಿ ಪೊಲೀಸರಿಗೆ ತಿಳಿದಿದೆ. 

click me!