ಹೆಂಡತಿಯ ಕೈಕಾಲು ಕಟ್ಟಿ 4ನೇ ಮಹಡಿಯಿಂದ ಬಿಸಾಕಿದ ಪಾಪಿ ಗಂಡ, ಎದೆ ಝಲ್‌ ಎನ್ನಿಸುವ ಘಟನೆ

By Sharath SharmaFirst Published Jul 1, 2022, 3:04 PM IST
Highlights

Crime News: ಪ್ಯಾಷನ್‌ ಬ್ಲಾಗರ್‌ಳನ್ನು ಗಂಡನೇ ಬರ್ಬರವಾಗಿ ಕೊಲೆ ಮಾಡಿದ ಘಟನೆ ಆಗ್ರಾದಲ್ಲಿ ನಡೆದಿದೆ. ದುಡ್ಡಿಗಾಗಿ ಹೆಂಡತಿಗೆ ಪೀಡಿಸುತ್ತಿದ್ದ ಗಂಡ, ಜಗಳವಾಡಿ ಹೆಂಡತಿಯ ಕೈಕಾಲು ಕಟ್ಟಿಹಾಕಿ ನಾಲ್ಕನೇ ಮಹಡಿಯ ಬಾಲ್ಕನಿಯಿಂದ ಕೆಳಕ್ಕೆ ತಳ್ಳಿ ಸಾಯಿಸಿದ್ದಾನೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. 

ನವದೆಹಲಿ: ಫ್ಯಾಷನ್‌ ಬ್ಲಾಗರ್‌ (Fashion Blogger Murder Case) ಹೆಂಡತಿಯನ್ನು ಗಂಡ ಮತ್ತು ಆತನ ಮನೆಯವರು ಚಿತ್ರಹಿಂಸೆ ನೀಡಿ ಕೈ ಮತ್ತು ಕಾಲುಗಳನ್ನು ಹಗ್ಗದಿಂದ ಕಟ್ಟಿಹಾಕಿ ನಾಲ್ನೇ ಮಹಡಿಯಿಂದ ಕೆಳಕ್ಕೆ ನೂಕಿದ ಘಟನೆ ಕಳೆದ ವಾರ ಆಗ್ರಾದಲ್ಲಿ ನಡೆದಿತ್ತು. ಫ್ಯಾಷನ್‌ ಬ್ಲಾಗರ್‌ ರಿತಿಕಾ ಸಿಂಗ್‌ (30) (Ritika Singh) ಗಂಡನ ಮನೆಯವರಿಂದ ಕೊಲೆಯಾದ ಸಂತ್ರಸ್ಥೆ. ಈ ಪ್ರಕರಣದ ಮರಣೋತ್ತರ ಪರೀಕ್ಷೆ ವರದಿಯೀಗ ಬಂದಿದ್ದು, ಶಾಕಿಂಗ್‌ ಅಂಶಗಳು ಪತ್ತೆಯಾಗಿವೆ. ಆಕೆಯ ಮೈಮೇಲೆ ಹಲವು ಸುಟ್ಟ ಗಾಯಗಳು ಇದ್ದವು ಮತ್ತು ಆಕೆಯ ಪಕ್ಕೆಲುಬು ಕೂಡ ಮುರಿದಿತ್ತು. ರಿತಿಕಾ ಸಿಂಗ್‌ ಗಂಡ ಯಾವುದೇ ಕೆಲಸ ಮಾಡುತ್ತಿರಲಿಲ್ಲ. ರಿತಿಕಾ ಸಿಂಗ್‌ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಳು ಜತೆಗೆ ಫ್ಯಾಷನ್‌ ಬ್ಲಾಗ್‌ ನಡೆಸುತ್ತಿದ್ದಳು. ಇದೇ ಆದಾಯದಿಂದ ಗಂಡ ಮತ್ತು ಆತನ ಮನೆಯವರನ್ನು ಸಾಕುತ್ತಿದ್ದಳು. 

ಇತ್ತೀಚೆಗೆ ಗಂಡನ ಮನೆಯವರ ಕಾಟ ವಿಪರೀತವಾದಾಗ ರಿತಿಕಾ ಮನೆಯಿಂದ ಸ್ನೇಹಿತನೊಬ್ಬನ ಮನೆಗೆ ಶಿಫ್ಟ್‌ ಆಗಿದ್ದಾಳೆ. ರಿತಿಕಾ ಗಂಡನ ಮನೆ ಇರುವುದು ಗಾಜಿಯಾಬಾದಿನಲ್ಲಿ. ಆದರೆ ಆಕ ಕೆಲ ತಿಂಗಳುಗಳಿಂದ ಆಗ್ರಾಗೆ ಶಿಫ್ಟ್‌ ಆಗಿದ್ದಳು. ನೆಮ್ಮದಿ ಹುಡುಕಿ ದೂರ ಬಂದರೂ ಗಂಡನ ಮನೆಯವರ ಕಾಟ ತಪ್ಪಿರಲಿಲ್ಲ. ಆಗಾಗ ಆಗ್ರಾದ ಮನೆಗೆ ಬಂದು ದುಡ್ಡಿಗಾಗಿ ಪೀಡಿಸುತ್ತಲೇ ಇದ್ದರು. ಕಳೆದ ವಾರ ರಿತಿಕಾ ಗಂಡ ಆಕಾಶ್‌ ಇಬ್ಬರು ಮಹಿಳೆಯರು ಮತ್ತು ಇಬ್ಬರು ಯುವಕರನ್ನು ಕರೆದುಕೊಂಡು ಆಗ್ರಾದ ಓಂ ಶ್ರೀ ಪ್ಲಾಟಿನಮ್‌ ಅಪಾರ್ಟ್‌ಮೆಂಟ್‌ಗೆ ಬಂದಿದ್ದ. ಬಂದವರೇ ದುಡ್ಡಿಗಾಗಿ ಪೀಡಿಸಿದ್ದಾರೆ. ನಂತರ ರಿತಿಕಾ ಮೇಲೆ ಹಲ್ಲೆ ಮಾಡಿದ್ದಲ್ಲದೇ ರಿತಿಕಾ ಸ್ನೇಹಿತ ವಿಪುಲ್‌ ಮೇಲೂ ಹಲ್ಲೆ ಮಾಡಲಾಗಿದೆ. ನಂತರ ವಿಪುಲ್‌ನನ್ನು ಬಾತ್‌ರೂಮಲ್ಲಿ ಕೂಡಿಹಾಕಿ ರಿತಿಕಾ ಮೇಲೆ ಹಲ್ಲೆ ಮುಂದುವರೆಸಿದ್ದಾರೆ. 

ಇದನ್ನೂ ಓದಿ: ಯುವತಿ ಅಪಹರಿಸಿ ನಿರಂತರ ಅತ್ಯಾಚಾರ, ಮನುಷ್ಯರ ಮಾಂಸ ತಿನ್ನಿಸಿದ ಕೀಚಕರು

ಹಣ ಕೊಡುವುದಿಲ್ಲ ಎಂದು ಹೇಳುತ್ತಿದ್ದಂತೆಯೇ ಇಬ್ಬರ ನಡುವೆ ವಾಗ್ವಾದ ಆರಂಭವಾಗಿದೆ. ಆಕಾಶ್‌ ಜೊತೆ ಬಂದಿದ್ದ ಯುವಕರು ಹಣಕ್ಕಾಗಿಯೇ ಬಂದಿದ್ದರು. ಮಾತಿಗೆ ಮಾತು ಸೇರಿ ಜಗಳವಾದ ನಂತರ ಹಲ್ಲೆ ಮಾಡಲು ಆರಂಭಿಸಿದರು ಎಂದು ವಿಪುಲ್‌ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತನಿಖಾ ತಂಡ ಆಕಾಶ್‌ ಮತ್ತು ಆತನ ಜತೆಗಿದ್ದ ಕಾಜಲ್‌ ಮತ್ತು ಕುಸುಮಾ ಎಂಬ ಆರೋಪಿಗಳನ್ನು ಈಗಾಗಲೇ ಬಂಧಿಸಿದ್ದಾರೆ. ಇನ್ನಿಬ್ಬರು ಆರೋಪಿಗಳು ಪರಾರಿಯಾಗಿದ್ದು ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿದೆ. ಆಕಾಶ್‌ ಮತ್ತು ರಿತಿಕಾ ಇಬ್ಬರ ಮೊಬೈಲ್‌ ಕೂಡ ಇನ್ನೂ ಪತ್ತೆಯಾಗಿಲ್ಲ. ಪೊಲೀಸರ ಸಂಶಯದ ಅನ್ವಯ ಮೊಬೈಲ್‌ ಫೋನನ್ನು ಜತೆಗಿದ್ದ ಯುವಕರ ಕೈಗೆ ಕೊಟ್ಟು ಆಕಾಶ್‌ ಕಳಿಸಿದ್ದಾನೆ. ಘಟನೆಯ ವಿಡಿಯೋ ಮಾಡಿರುವ ಸಾಧ್ಯತೆಯೂ ಇದೆ, ವಿಡಿಯೋ ಪೊಲೀಸರಿಗೆ ಸಿಗಬಾರದು ಎಂಬ ಕಾರಣಕ್ಕೆ ಮೊಬೈಲ್‌ ಸಾಗಿಸಲಾಗಿದೆ. 

ಪರಾರಿಯಾಗಿರುವ ಆರೋಪಿಗಳು ಪತ್ತೆಯಾದರೆ ಮೊಬೈಲ್‌ ಫೋನ್‌ ಕೂಡ ಸಿಗುವ ಸಾಧ್ಯತೆಯಿದೆ ಎಂದು ಪೊಲೀಸರು ನಂಬಿದ್ದಾರೆ. ರಿತಿಕಾ ತಂದೆ ತಾಯಿ ಮತ್ತು ಸಹೋದರ ಪೊಲೀಸರಿಗೆ ಈ ಹಿಂದೆ ನಡೆದ ಎಲ್ಲ ಹಲ್ಲೆಗಳ ಬಗ್ಗೆಯೂ ಮಾಹಿತಿ ನೀಡಿದ್ದಾರೆ. "ಆಕಾಶ್‌ ಒಬ್ಬ ನಿರುದ್ಯೋಗಿ. 2014ರಲ್ಲಿ ರಿತಿಕಾ ಮತ್ತು ಆಕಾಶ್‌ ಮದುವೆಯಾದರು. ಆತ ಎಂದಿಗೂ ಕೆಲಸಕ್ಕೆ ಹೋದವನೇ ಅಲ್ಲ. ಅವನ ಇಡೀ ಮನೆಯನ್ನು ರಿತಿಕಾ ದುಡಿದು ಸಾಕಿದ್ದಾಳೆ. ಹಣಕ್ಕಾಗಿ ಪ್ರತಿ ದೈಹಿಕ ಮತ್ತು ಮಾನಸಿಕ ಕಿರುಕುಳ ಕೊಟ್ಟಿದ್ದಾನೆ ಆಕಾಶ್‌. ಈಗ ಜೀವವನ್ನೇ ಕಿತ್ತುಕೊಂಡು ಬಿಟ್ಟ," ಎಂದು ರಿತಿಕಾ ಸಹೋದರ ಖಾಸಗಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. 

ಇದನ್ನೂ ಓದಿ: Crime News: ವರದಕ್ಷಿಣೆಗಾಗಿ ಸೊಸೆಯನ್ನು ವಿದ್ಯುತ್‌ ತಂತಿಗೆ ಕಟ್ಟಿ ಕೊಂದ ಅತ್ತೆ-ಮಾವ

ಇನ್ನೂ, ಬಾತ್‌ರೂಮ್‌ನಲ್ಲಿ ಕೂಡಿಹಾಕಿದ ನಂತರ ವಿಪುಲ್‌ ಅಕ್ಕಪಕ್ಕದವರನ್ನು ಅಲರ್ಟ್‌ ಮಾಡಲು ಕಿರುಚಾಡಿದ್ದಾರೆ. ಯಾವುದೇ ಪ್ರಯೋಜನವಾಗಿಲ್ಲ. ಹಲ್ಲೆ ಮಾಡುತ್ತಿದ್ದ ಆಕಾಶ್‌ ಆಕೆಯ ಕೈಕಾಲು ಕಟ್ಟಿ ಬಾಲ್ಕನಿಯಿಂದ ಕೆಳಗೆ ಬಿಸಾಕಿದ್ದಾನೆ. ಬಿದ್ದ ರಭಸಕ್ಕೆ ರಿತಿಕಾ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಅಪಾರ್ಟ್‌ಮೆಂಟ್‌ನ ನಿವಾಸಿಗಳು ಕೈಕಾಲು ಕಟ್ಟಿದ ಸ್ಥಿತಿಯಲ್ಲಿ ಶವವಾಗಿ ಬಿದ್ದಿದ್ದ ರಿತಿಕಾ ಸ್ಥಿತಿಯನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಸ್ಥಳಕ್ಕೆ ಬರುವ ಮೊದಲೇ ಗಂಡ ಮತ್ತು ಉಳಿದ ಆರೋಪಿಗಳು ಪರಾರಿಯಾಗಿದ್ದರು. 

click me!