ತಾತಗುಣಿ ಬಳಿ BWSSB ಪೈಪ್‌ಲೈನ್ ಸಂಪ್‌ನಲ್ಲಿ ಕಾಣೆಯಾಗಿದ್ದ ಬಾಲಕನ ಶವ ಪತ್ತೆ!

Published : Feb 01, 2026, 09:30 PM IST
Missing Boy s Body Found in BWSSB Pipeline Sump Near Tataguni After 3 Days

ಸಾರಾಂಶ

ಬೆಂಗಳೂರಿನ ತಾತಗುಣಿ ಬಳಿ ಮೂರು ದಿನಗಳಿಂದ ಕಾಣೆಯಾಗಿದ್ದ 14 ವರ್ಷದ ಬಾಲಕ, ಜಲಮಂಡಳಿ ನಿರ್ಮಿಸಿದ್ದ ತೆರೆದ ಸಂಪ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಈ ದುರ್ಘಟನೆಗೆ ಜಲಮಂಡಳಿಯ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರು (ಫೆ. 1): ಕಳೆದ ಮೂರು ದಿನಗಳಿಂದ ನಿಗೂಢವಾಗಿ ಕಾಣೆಯಾಗಿದ್ದ 14 ವರ್ಷದ ಬಾಲಕನೊಬ್ಬ ಇಂದು ಬೆಂಗಳೂರು ದಕ್ಷಿಣ ತಾಲ್ಲೂಕಿನ ತಾತಗುಣಿ ಸಮೀಪ ಶವವಾಗಿ ಪತ್ತೆಯಾಗಿದ್ದಾನೆ. ಬೆಂಗಳೂರು ಜಲಮಂಡಳಿ (BWSSB) ಪೈಪ್‌ಲೈನ್ ಅಳವಡಿಕೆಗಾಗಿ ನಿರ್ಮಿಸಿದ್ದ ತೆರೆದ ಸಂಪ್‌ನಲ್ಲಿ ಬಾಲಕನ ಮೃತದೇಹ ಪತ್ತೆಯಾಗಿದ್ದು, ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ಮೂಲತಃ ಚಾಮರಾಜನಗರ ಜಿಲ್ಲೆಯವರಾದ ರಜನಿಕಾಂತ್ ಎಂಬುವವರ ಪುತ್ರ ಪ್ರೀತಮ್ (14) ಸಾವನ್ನಪ್ಪಿದ ದುರ್ದೈವಿ.

ಮೂರು ದಿನದ ಹಿಂದೆ ದಾಖಲಾಗಿತ್ತು ಮಿಸ್ಸಿಂಗ್ ಕೇಸ್

ತಾತಗುಣಿಯ ಬಾಡಿಗೆ ಮನೆಯಲ್ಲಿ ವಾಸವಿದ್ದ ಕುಟುಂಬ. ಪ್ರೀತಮ್ ಮೂರು ದಿನಗಳ ಹಿಂದೆ ಮನೆಯಿಂದ ಹೊರಗೆ ಹೋದವನು ಮರಳಿ ಬಂದಿರಲಿಲ್ಲ. ಈ ಸಂಬಂಧ ಬಾಲಕನ ಪೋಷಕರು ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಪೊಲೀಸರು ಮತ್ತು ಸ್ಥಳೀಯರು ಹುಡುಕಾಟ ನಡೆಸುತ್ತಿದ್ದ ಸಂದರ್ಭದಲ್ಲಿ, ಇಂದು BWSSB ಕಾಮಗಾರಿ ನಡೆಯುತ್ತಿದ್ದ ಸ್ಥಳದ ತೆರೆದ ಸಂಪ್‌ನಲ್ಲಿ ಬಾಲಕನ ದೇಹ ತೇಲುತ್ತಿರುವುದು ಕಂಡುಬಂದಿದೆ.

ಜಲಮಂಡಳಿ ನಿರ್ಲಕ್ಷ್ಯಕ್ಕೆ ಮಗ ಬಲಿ?

ಈ ಸಾವಿಗೆ ಜಲಮಂಡಳಿಯ ಅತೀವ ನಿರ್ಲಕ್ಷ್ಯವೇ ಕಾರಣವಾಯ್ತಾ? ಸ್ಥಳೀಯರು ಗಂಭೀರ ಆರೋಪ ಮಾಡಿದ್ದಾರೆ. ಪೈಪ್‌ಲೈನ್‌ಗಾಗಿ ತೆಗೆಯಲಾಗಿದ್ದ ಸಂಪ್‌ಗಳನ್ನು ಕಳೆದ ಹಲವು ದಿನಗಳಿಂದ ಮುಚ್ಚದೆ ಹಾಗೆಯೇ ಬಿಡಲಾಗಿತ್ತು. ಬಾಲಕ ಓಡಾಡುವ ವೇಳೆ ಆಕಸ್ಮಿಕವಾಗಿ ಈ ತೆರೆದ ಸಂಪ್‌ಗೆ ಬಿದ್ದಿದ್ದರುವ ಸಾಧ್ಯತೆಯಿದೆ. ಇದು ಆಕಸ್ಮಿಕ ಸಾವಲ್ಲ, ಇದು ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಂಭವಿಸಿದೆ ಎಂದು ಆರೋಪಿಸಲಾಗಿದೆ.

ತನಿಖೆ ಆರಂಭಿಸಿದ ಕಗ್ಗಲೀಪುರ ಪೊಲೀಸರು

ಸ್ಥಳಕ್ಕೆ ಧಾವಿಸಿದ ಕಗ್ಗಲೀಪುರ ಪೊಲೀಸರು ಮೃತದೇಹವನ್ನು ಸಂಪ್‌ನಿಂದ ಹೊರತೆಗೆದು, ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆಗೆ ಮುಂದಾಗಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕೇಳಿದಷ್ಟು ಲಂಚ ಕೊಡಬೇಕು, ಇಲ್ಲಾಂದ್ರೆ ಅರೆಸ್ಟ್​​..! ಇನ್ಸ್​​ಪೆಕ್ಟರ್​​​ ಲೋಕಾಯುಕ್ತ ಬಲೆಗೆ ಬಿದ್ದಿದ್ದೇ ರೋಚಕ..!
30x40 ಸೈಟ್​ನಿಂದ ಸಾವಿರ ಎಕರೆ ಸಾಮ್ರಾಜ್ಯ; ರಾಯ್ ಸಾ*ವಿಗೆ ಕಾರಣವಾಯ್ತಾ ನಟಿಯ ನಂಟು?