
ವರದಿ- ಪುಟ್ಟರಾಜು. ಆರ್. ಸಿ. ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ
ಚಾಮರಾಜನಗರ(ಅ.03): ಸಿಸಿ ಕ್ಯಾಮೆರಾ ತೆಗೆಯಿರಿ ಇಲ್ಲದಿದ್ರೆ ಪರಿಣಾಮ ಭೀಕರವಾಗಿರುತ್ತೆ. ಮೂರು ಚಿನ್ನದಂಗಡಿ ಮಾಲೀಕರಿಗೆ ಎಚ್ಚರಿಕೆ ಪತ್ರ ಬಂದಿದೆ. ಅಂಗಡಿ ಮುಂದೆ ಇರುವ ಸಿಸಿಟಿವಿ ತೆಗೆಯುವಂತೆ ಸೂಚಿಸಿದ್ದಾರೆ. ಇದು ಮನವಿಯಲ್ಲ ಎಚ್ಚರಿಕೆ ಎಂದು ಪತ್ರದಲ್ಲಿ ಬರೆದಿದ್ದಾರೆ. ಈ ಎಚ್ಚರಿಕೆ ಪತ್ರ ಬರೆದಿದ್ದೆಲ್ಲಿ? ಅದ್ಯಾವ ಅಂಗಡಿಗೆ ಪತ್ರ ಬರೆದಿದ್ದಾರೆ ಅಂತೀರಾ ಹಾಗಾದ್ರೆ ಈ ಸ್ಟೋರಿ ನೋಡಿ.
ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಇತ್ತಿಚ್ಚಿಗೆ ಕಳ್ಳತನ ಪ್ರಕರಣ ಕೂಡ ಹೆಚ್ಚಾಗ್ತಿದೆ. ಈ ನಡುವೆ ಮೂರು ಚಿನ್ನದಂಗಡಿಯ ಮಾಲೀಕರಿಗೆ ಅಂಗಡಿಗೆ ಅಳವಡಿಸಿರುವ ಸಿಸಿ ಕ್ಯಾಮೆರಾ ತೆಗೆಯುವಂತೆ ಎಚ್ಚರಿಕೆ ಪತ್ರ ಬರೆಯಲಾಗಿದೆ. ಹೌದು ಚಾಮರಾಜನಗರ ದೊಡ್ಡಂಗಡಿ ಬೀದಿಯಲ್ಲಿರುವ ಮಯೂರ ಜ್ಯುವೆಲರ್ಸ್, ಕಾರ್ತಿಕ್ ಜ್ಯುವೆಲರ್ಸ್, ವಾಸುಕಿ ಯು ಶಾಪಿ ಮಾಲೀಕರಿಗೆ ಎಚ್ಚರಿಕೆಯ ಅನಾಮಧೇಯ ಪತ್ರ ಬಂದಿದೆ. ಇದು ಚಿನ್ನದಂಗಡಿ ಮಾಲೀಕರ ಚಿಂತೆ ಕೂಡ ಹೆಚ್ಚಿಸಿದೆ. ನಾವು ಮನವಿ ಮಾಡ್ತಿಲ್ಲ ನಿಮಗೆ ಕೊಟ್ಟಿರುವ ಎಚ್ಚರಿಕೆ ಅಂತ ಬರೆದಿದ್ದಾರೆ. ಇದನ್ನು ಉಲ್ಲಂಘಿಸಿದ್ರೆ ಅಥವಾ ಕಾನೂನು ಮೊರೆ ಹೋದರೆ ಪರಿಣಾಮ ಭೀಕರವಾಗಿರುತ್ತೆ ಅಂತಾ ಪತ್ರದಲ್ಲಿ ತಿಳಿಸಿದ್ದಾರೆ. ಪತ್ರದಲ್ಲಿ ಡೇಂಜರ್ ಸಿಂಬಲ್ ಕೂಡ ಹಾಕಿದ್ದಾರೆ. ಇದೀಗ ಅಂಗಡಿ ಮಾಲೀಕರು ಹೆದರಿ ಪೊಲೀಸರ ಮೊರೆ ಹೋಗಿದ್ದಾರೆ.
ರಾತ್ರೋರಾತ್ರಿ ಕಾರಿಗೆ ಬೆಂಕಿ: ಸಿಸಿಟಿವಿಯಲ್ಲಿ ಬೆಚ್ಚಿ ಬೀಳಿಸುವ ದೃಶ್ಯ ಸೆರೆ!
ಇನ್ನು ಚಾಮರಾಜನಗರ ಜಿಲ್ಲೆಯಲ್ಲಿ ತೀರಾ ಇತ್ತೀಚೆಗೆ ಕಳ್ಳತನ ಪ್ರಕರಣ ಕೂಡ ಹೆಚ್ಚಾಗಿದೆ. ಚಾಮರಾಜನಗರ, ಹನೂರು, ಕೊಳ್ಳೇಗಾಲ, ಗುಂಡ್ಲುಪೇಟೆ ಸೇರಿದಂತೆ ಜಿಲ್ಲೆಯ ಬಹುತೇಕ ಠಾಣೆಯಲ್ಲಿ ಕಳ್ಳತನ ಪ್ರಕರಣ ಕೂಡ ದಾಖಲಾಗಿವೆ. ಗಡಿ ಜಿಲ್ಲೆ ಚಾಮರಾಜನಗರ ತಮಿಳುನಾಡು, ಕೇರಳ ಗಡಿ ಹೊಂದಿರುವ ಹಿನ್ನಲೆ ಅಂತರರಾಜ್ಯ ಖದೀಮರು ಏನಾದ್ರೂ ಕೈ ಚಳಕ ತೋರುತ್ತಿದ್ದಾರಾ ಅಂತಾ ಅನುಮಾನ ಕೂಡ ಮೂಡಿಸಿದೆ.
ಜಿಲ್ಲಾ ಕೇಂದ್ರ ಚಾಮರಾಜನಗರದಲ್ಲಿ ನಿನ್ನೆ ರಾತ್ರಿ ಸರಣಿ ಕಳ್ಳತನ ನಡೆದಿದ್ದು ಜನನಿಬಿಡ ಪ್ರದೇಶವಾದ ಮುಖ್ಯ ರಸ್ತೆಯಲ್ಲೆ ಹಾರ್ಡ್ವೇರ್, ಮೊಬೈಲ್, ಹಾಗು ಎಲೆಕ್ಟ್ರಿಕಲ್ಸ್ ಅಂಗಡಿಗಳಿಗೆ ಕನ್ನಾ ಹಾಕಿ ಒಂದು ಲಕ್ಷ ರೂಪಾಯಿಗು ಹೆಚ್ಚು ನಗದು ದೋಚಲಾಗಿದೆ. ಮೊಬೈಲ್ ಅಂಗಡಿಯಲ್ಲಿ ಸಹಸ್ರಾರು ರೂಪಾಯಿ ಬೆಲೆ ಬಾಳುವ ಮೊಬೈಲ್ ಗಳನ್ನು ಕಳುವು ಮಾಡಲಾಗಿದೆ ಮೂರು ಅಂಗಡಿಗಳಲ್ಲಿ ಹಿಂಬಾಗಲು ಒಡೆದು ಕಳ್ಳತನ ಮಾಡಲಾಗಿದ್ದು ಡಾಗ್ ಸ್ಕ್ವಾಡ್ ಹಾಗೂ ಬೆರಳಚ್ಚು ತಜ್ಞರಿಂದ ಪರಿಶೀಲನೆ ನಡೆಸಲಾಗಿದೆ. ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದೀಗ ಸಿಸಿಟಿವಿ ಕ್ಯಾಮೆರಾ ತೆಗೆಯುವಂತೆ ಪತ್ರ ಬರೆದಿರೋದು ಸಾಕಷ್ಟು ಚರ್ಚೆಗೆ ನಾಂದಿ ಹಾಡಿದೆ.
ಒಟ್ನಲ್ಲಿ ಜಿಲ್ಲೆಯಲ್ಲಿ ನಡೆಯುತ್ತಿರುವ ಕಳ್ಳತನ ಪ್ರಕರಣಗಳು ಒಂದೆಡೆ ಜನರ ನಿದ್ದೆಗೆಡಿಸಿದ್ರೆ ಇದೀಗ ಮತ್ತೊಂದು ಕಡೆ ಅಂಗಡಿಗೆ ಅಳವಡಿಸಿರುವ ಸಿಸಿಟಿವಿ ತೆಗೆಯುವಂತೆ ಎಚ್ಚರಿಕೆ ಪತ್ರ ಬಂದಿರುವುದು ಚಿನ್ನದಂಗಡಿ ಮಾಲೀಕರ ನಿದ್ದಗೆಡಿಸಿದೆ. ಆದಷ್ಟು ಬೇಗ ಈ ಪತ್ರದ ಅಸಲಿಯತ್ತೇನೂ ಕಳ್ಳರು ಬರೆದಿದ್ದಾ ಅಥವಾ ಯಾರೂ ಅನಾಮಧೇಯರು ಬೇಕಂತ ಬರೆದಿದ್ದಾರೆಂಬ ವಿಚಾರ ಬೆಳಕಿಗೆ ತರಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ