ಚಿಂಚೋಳಿ: ದುಷ್ಕರ್ಮಿಗಳಿಂದ ದನದ ಕೊಟ್ಟಿಗೆಗೆ ಬೆಂಕಿ, 25 ರಾಸು​ಗ​ಳಿಗೆ ಗಾಯ

By Kannadaprabha NewsFirst Published Sep 23, 2021, 3:38 PM IST
Highlights

*  ದನದ ಕೊಟ್ಟಿಗೆಗೆ ಕೊಳ್ಳಿ ಇಟ್ಟಿರುವ ಪ್ರಕರಣದ ಹಿಂದಿನ ಕಾಣದ ಕೈ ಯಾರದ್ದು?
*  ಭುಗಿಲೆದ್ದ ರೈ​ತರ ಆಕ್ರೋಶ 
*  ಬೆಂಕಿಯ ಬಿಸಿ ತಾಳದೇ ಒದ್ದಾಡಿದ ರಾಸುಗಳು  
 

ಚಿಂಚೋಳಿ(ಸೆ.23): ತಾಲೂಕಿನ ಗಡಿಗ್ರಾಮ ಕುಂಚಾವರಂ ಗ್ರಾಮದಲ್ಲಿ ಸೋಮವಾರ ಮಧ್ಯರಾತ್ರಿ ದುಷ್ಕರ್ಮಿಗಳು ದನದ ಕೊಟ್ಟಿಗೆ ಬೆಂಕಿ(Fire) ಹಚ್ಚಿದ್ದು, 25 ಎತ್ತು, ಆಕಳು, ಕರುಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಈ ಘೋರ ಘಟನೆಯ ಹಿಂದಿನ ಕಾಣದ ಕೈಗಳು ಯಾರದ್ದು ಎಂಬುದು ತೀವ್ರ ಚರ್ಚೆಗೆ ಗ್ರಾಸ​ವಾ​ಗಿ​ದ್ದು, ಇದು ಇಡೀ ತಾಲೂಕಿನ ​ರೈ​ತರ(Farmers) ಆಕ್ರೋಶ ಭುಗಿಲೇಳುವಂತೆ ಮಾಡಿದೆ. ಕುಂಚಾವರಂ ಪೊಲೀಸರೇನೋ ಪ್ರಕರಣ ದಾಖಲಿಸಿದ್ದಾರಾದರೂ ಆರೋ​ಪಿಗಳು ಇನ್ನೂ ಪತ್ತೆ​ಯಾ​ಗಿಲ್ಲ. ರಾಸು​ಗ​ಳು ದಲಿತ ಸಮುದಾಯಕ್ಕೆ ಸೇರಿದ ರೈತ ಬಿಚ್ಚಪ್ಪ ಪೆಂಟಪ್ಪ ದುನ್ನಾ​ರಿಗೆ ಸೇರಿ​ದ​ವು. ಬೆಂಕಿಯ ಬಿಸಿ ತಾಳದೇ ಒದ್ದಾಡುತ್ತಿರುವುದನ್ನು ನೋಡಿದ ಗ್ರಾಮಸ್ಥರು ತಮ್ಮ ಮನೆಗಳಿಂದ ನೀರು ತಂದು ಬೆಂಕಿ ನಂದಿಸಿ ಜಾನುವಾರುಗಳ ಪ್ರಾಣ ​ಉ​ಳಿಸಿದ್ದಾರೆ.

ನಾ​ಲ್ಕು ಎತ್ತುಗಳ ಕಣ್ಣುಗಳು ಸಂಪೂರ್ಣ ಸುಟ್ಟು ಹೋಗಿವೆ. 6 ಆಕಳುಗಳ ಕಾಲುಗಳು ಸುಟ್ಟಿದ್ದರಿಂದ ನಡೆಯಲು ಬಾರದಂತಾಗಿದೆ. 10 ಎತ್ತುಗ​ಳು ಗಂಭೀರವಾಗಿ ಗಾಯಗೊಂಡಿವೆ. ಕಬ್ಬಿನ ​ಸೋ​ಗೆಯಿಂದ ಮಾಡಿದ ದನದ ಕೊಟ್ಟಿಗೆ​ಯಾ​ದ್ದ​ರಿಂದ ಬೆಂಕಿ ಹತೋಟಿಗೆ ಬಾರದೇ ​ಉ​ರಿ​ದಿ​ದೆ ಎಂದು ಬಿಚ್ಚಪ್ಪ ದುನ್ನಾ ಕಣ್ಣೀ​ರಿ​ಟ್ಟಾ​ಗ ನೆರೆದ ಗ್ರಾಮಸ್ಥರು ಮಮ್ಮಲ ಮರುಗಿದರು.

ಬೆಂಗಳೂರು ತರಗುಪೇಟೆಯಲ್ಲಿ ನಿಗೂಢ ಸ್ಫೋಟ: ಮೂವರು ಸಾವು, ಗಾಯಾಳುಗಳ ಸ್ಥಿತಿ ಗಂಭೀರ

ಘಟನಾ ಸ್ಥಳಕ್ಕೆ ಚಿಂಚೋಳಿ ಪಶು ವೈದ್ಯಾಧಿಕಾರಿ ಡಾ. ಧನರಾಜ ಬೊಮ್ಮ, ಜೆಡಿಎಸ್‌ ಮುಖಂಡ ಸಂಜೀವನ್‌ ಯಾಕಾಪೂರ, ಕಂದಾಯ ನಿರೀಕ್ಷಕ ಸುಭಾಶ ಸುಲೇಪೇಟ, ಪಿಎಸ್‌ಐ ಸುಖಾನಂದ ಹೂಗಾರ ಭೇಟಿ ನೀಡಿ ಪರಿಶೀಲಿಸಿದರು. ಜೆಡಿಎಸ್‌(JDS) ಮುಖಂಡ ಸಂಜೀವನ್‌ ಯಾಕಾಪೂರ ಹಾನಿಗೊಳಗಾದ ರೈತನಿಗೆ ವೈಯಕ್ತಿಕ ಪರಿಹಾರ ನೀಡಿದರು. ಕುಂಚಾವರಂ ಪೋಲಿ​ಸ್‌(Police) ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಕುಂಚಾವರಂ ದನದ ಕೊಟ್ಟಿಗೆ ಬೆಂಕಿ ಅನಾಹುತದಲ್ಲಿ ಗಾಯಗೊಂಡಿರುವ ಎಲ್ಲ ದನಕರುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಬೆಂಕಿಯಿಂದ ಸಾಕಷ್ಟು ದನಗಳಲ್ಲಿ ಒಳಗಾಯ ಆಗಿವೆ. ಗುಣವಾಗಲು ಒಂದುವಾರ ಬೇಕಾಗಲಿದೆ ಎಂದು ಚಿಂಚೋಳಿ ಪಶು ಆಸ್ಪತ್ರೆ ಸಹಾಯಕ ನಿರ್ದೇಶಕ ಡಾ. ಧನರಾಜ ಬೊಮ್ಮಾ ತಿಳಿಸಿದ್ದಾರೆ. 
 

click me!