
ಬೆಂಗಳೂರು(ಮೇ.17): ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಯುವತಿ ಕೈ ಹಿಡಿದು ಎಳೆದು ಬಳಿಕ ಆಕೆಗೆ ಡ್ಯಾಗರ್ ತೋರಿಸಿ ಕಿಡಿಗೇಡಿಯೊಬ್ಬ ಅನುಚಿತವಾಗಿ ವರ್ತಿಸಿ ಪರಾರಿಯಾದ ಘಟನೆ ಪುಲಕೇಶಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸಂತ್ರಸ್ತೆ ಪುಲಕೇಶಿ ನಗರ ಸಮೀಪದ ನಿವಾಸಿಯಾಗಿದ್ದು, ಕಾಕ್ಸ್ಟೌನ್ನಲ್ಲಿ ಸೋಮವಾರ ಮಧ್ಯಾಹ್ನ ಆಕೆ ನಡೆದುಕೊಂಡು ಹೋಗುವಾಗ ಈ ಕೃತ್ಯ ನಡೆದಿದೆ. ರಸ್ತೆಯಲ್ಲಿ ಹೋಗುವಾಗ ಹಿಂದಿನಿಂದ ಬಂದ ದುಷ್ಕರ್ಮಿ, ಯುವತಿಯ ಬೆನ್ನು ತಟ್ಟಿದ್ದಾನೆ. ಇದರಿಂದ ಆತಂಕಗೊಂಡ ಆಕೆಗೆ ತಿರುಗಿ ನೋಡಿದಾಗ ಆತ ಕೈ ಹಿಡಿದೆಳೆದಿದ್ದಾನೆ. ಈ ಹಂತದಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆತ ಡ್ಯಾಗರ್ ತೋರಿಸಿದ್ದಾನೆ. ಅಷ್ಟರಲ್ಲಿ ಯುವತಿ ನೆರವಿಗೆ ಅಲ್ಲೇ ಇದ್ದ ಮತ್ತೊಬ್ಬ ಮಹಿಳೆ ಧಾವಿಸಿದ್ದಾರೆ. ಜನರು ಜಮಾಯಿಸುತ್ತಿದ್ದಂತೆ ಭೀತಿಗೊಂಡು ದುಷ್ಕರ್ಮಿ ಓಡಿ ಹೋಗಿದ್ದಾನೆ. ಈ ಕೃತ್ಯದ ದೃಶ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ಮಾಹಿತಿ ಆಧರಿಸಿ ಆರೋಪಿ ಪತ್ತೆಗೆ ಪೊಲೀಸರು ಶೋಧಿಸುತ್ತಿದ್ದಾರೆ. ಈ ಸಂಬಂಧ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಪುಲಕೇಶಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹೊಸಕೋಟೆ: ಮತ ಹಾಕಿಲ್ಲ ಅನ್ನೋ ವಿಚಾರಕ್ಕೆ ಗಲಾಟೆ, ದೊಡ್ಡಪ್ಪನನ್ನೇ ಕೊಲೆ ಮಾಡಿದ ಮಗ..!
ಗಸ್ತು ತಿರುಗದ ಹೊಯ್ಸಳ, ಚೀತಾ
ಕಾಕ್ಸ್ಟೌನ್ ವ್ಯಾಪ್ತಿಯಲ್ಲಿ ಪೊಲೀಸರು ಗಸ್ತು ತಿರುಗುವುದಿಲ್ಲ. ಅದರಲ್ಲೂ ಈ ಭಾಗದಲ್ಲಿ ಗಸ್ತು ವಾಹನಗಳಾದ ಹೊಯ್ಸಳ ಹಾಗೂ ಚೀತಾಗಳು ಕಾಣುವುದೇ ಇಲ್ಲ. ಪೊಲೀಸರ ಈ ನಿರ್ಲಕ್ಷತನದ ಪರಿಣಾಮ ಪುಂಡ ಪೋಕರಿಗಳ ಹಾವಳಿ ಹೆಚ್ಚಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ