ಕ್ರೈಂ ಸಿನಿಮಾ, ವೆಬ್ ಸೀರೀಸ್‌ಗಳಿಂದ ಪ್ರೇರಣೆ: ಮಾಜಿ ಗೆಳತಿಯ ಪತಿಯನ್ನು ಕೊಂದವ ಬೀದರ್‌ನಲ್ಲಿ ಅರೆಸ್ಟ್

By Suvarna NewsFirst Published Aug 27, 2022, 4:54 PM IST
Highlights

Crime News: ಪುಣೆಯ ಚಂದನ್ ನಗರದಲ್ಲಿ 26 ವರ್ಷದ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಬೀದರ್‌ನಲ್ಲಿ ಬಂಧಿಸಲಾಗಿದೆ

ಪುಣೆ (ಆ. 27): ಪುಣೆಯ ಚಂದನ್ ನಗರದಲ್ಲಿ 26 ವರ್ಷದ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.  ಪ್ರಕರಣದ ಪ್ರಮುಖ ಆರೋಪಿ ಸಂತೋಷ್ ಸತ್ಯವಾನ್ ಶಿಂಧೆ (28), ಮೃತ ಅಕ್ಷಯ್ ಪ್ರಕಾಶ್ ಭಿಸೆ ಅವರ ಪತ್ನಿಯೊಂದಿಗೆ ವಿವಾಹಕ್ಕೂ ಮುನ್ನ ಸಂಬಂಧ ಹೊಂದಿದ್ದು, ಮಹಿಳೆಯೊಂದಿಗೆ ಮತ್ತೆ ಸಂಬಂಧ ಬೆಳೆಸುವ ಆಸೆಯಿಂದ ಭಿಸೆಯನ್ನು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂಗ್ರಾಮ್ ಅಲಿಯಾಸ್ ಬಾಬು ಬಾಮ್ನೆ (27) ಎಂಬಾತ ಶಿಂಧೆಗೆ ಈ ಕೃತ್ಯದಲ್ಲಿ ನೆರವು ನೀಡಿದ್ದ. ಶಿಂಧೆ ಮತ್ತು ಬಾಮ್ನೆ ಇಬ್ಬರೂ ಸೊಲ್ಲಾಪುರದ ನಿವಾಸಿಗಳಾಗಿದ್ದಾರೆ.

ಅಪರಾಧ ವಿಭಾಗದ ತಂಡವು ಗುರುವಾರ ಕರ್ನಾಟಕದ ಬೀದರ್‌ನಿಂದ (Bidar) ಶಿಂಧೆಯನ್ನು ಬಂಧಿಸಿದೆ. ಶಿಂಧೆ ಪ್ರಸ್ತುತ ಬೀದರ್ ಜಿಲ್ಲೆಯ ಭಾಲ್ಕಿಯಲ್ಲಿ ವಾಸವಾಗಿದ್ದರೆ, ಬಾಮ್ನೆ ಸೊಲ್ಲಾಪುರ ಜಿಲ್ಲೆಯ ತೆಂಬೂರ್ಣಿಯಲ್ಲಿನ ಹೋಟೆಲ್‌ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆತನನ್ನು ಸೊಲ್ಲಾಪುರದಲ್ಲಿ ಬಂಧಿಸಲಾಗಿದೆ.

ಶಿಂಧೆ ವಿವಿಧ ಅಪರಾಧ ಆಧಾರಿತ ವೆಬ್ ಸರಣಿಗಳು, ದೂರದರ್ಶನ ಧಾರಾವಾಹಿಗಳು ಮತ್ತು ಚಲನಚಿತ್ರಗಳನ್ನು ವೀಕ್ಷಿಸಿದ ನಂತರ ಕೊಲೆಗಾಗಿ ಸ್ಕೆಚ್‌ ಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಅಕ್ರಮವಾಗಿ ಪಿಸ್ತೂಲ್ ಖರೀದಿಸಿ, ಕರ್ನಾಟಕದಿಂದ ಸ್ಪೋರ್ಟ್ಸ್ ಬೈಕ್ ಕದ್ದು ಮುಖ ಮುಚ್ಚಲು ಹೆಲ್ಮೆಟ್ ಪಡೆದಿದ್ದ ಎಂದು ವರದಿಗಳು ತಿಳಿಸಿವೆ. 

ಬೆಂಗಳೂರು: ಪ್ರಿಯತಮೆಯಿಂದ ಪ್ರಿಯಕರನ ಕಿಡ್ನಾಪ್ ಮಾಡಿ ಹಲ್ಲೆ: 8 ಜನರ ಬಂಧನ

ಖಾರಾಡಿಯಲ್ಲಿ ವಾಸವಾಗಿದ್ದ ಕಸದ ವ್ಯಾನ್ ಕೆಲಸಗಾರನಾಗಿ ಕೆಲಸ ಮಾಡುತ್ತಿದ್ದ ಭೀಸೆ ಅವರನ್ನು ಆಗಸ್ಟ್ 21 ರಂದು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಈ ಬೆನ್ನಲ್ಲೇ  ಕೊಲೆ ಪ್ರಕರಣ ಪ್ರಕರಣ ದಾಖಲಿಸಿಕೊಂಡು ಚಂದನ್ ನಗರ ಪೊಲೀಸರು ತನಿಖೆ ಆರಂಭಿಸಿದ್ದರು.  ಪೊಲೀಸರು ಅಪರಾಧ ನಡೆದ ಸ್ಥಳ ಮತ್ತು ಇತರ ಸ್ಥಳಗಳಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ಸ್ಪೋರ್ಟ್ಸ್ ಬೈಕನ್ನು ಟ್ರ್ಯಾಕ್‌ ಮಾಡಿದ್ದಾರೆ. ಬಳಿಕ ಆರೋಪಿಯನ್ನು ಬಂಧಿಸಿದ್ದಾರೆ. 

ಭಿಸೆಯ ಚಲನವಲನಗಳ ಮೇಲೆ ಶಿಂಧೆ ತೀವ್ರ ನಿಗಾ ವಹಿಸಿದ್ದ ಮತ್ತು ಕೊಲೆಯಾದ ದಿನ  ಬಾಮ್ನೆ ಜೊತೆಗೆ ಸ್ಪೋರ್ಟ್ಸ್ ಬೈಕ್‌ನಲ್ಲಿ ಪುಣೆಗೆ ಆಗಮಿಸಿ ಭಿಸೆ ಮೇಲೆ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಶಿಂಧೆ ಕೊಲೆಯ ಆಯುಧವನ್ನು ಎಲ್ಲಿಂದ ಪಡೆದುಕೊಂಡಿದ್ದಾನೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

click me!