
ಬೆಂಗಳೂರು (ಡಿ.2): ರಾಜಧಾನಿ ಬೆಂಗಳೂರಿನಲ್ಲಿ ಕಳ್ಳತನವನ್ನೇ ತಮ್ಮ ಕುಲ ಕಸುಬಾಗಿ ಮಾಡಿಕೊಂಡಿದ್ದ ಐನಾತಿ ಅಣ್ಣತಮ್ಮಂದಿರನ್ನು ಕೆಂಗೇರಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಾಗೇಪಲ್ಲಿ ಮೂಲದವರಾದ ಈ ಕಳ್ಳ ಸಹೋದರರು ಒಂದೇ ತಾಯಿಯ ಮಕ್ಕಳಾಗಿದ್ದು, ಜೊತೆಜೊತೆಯಲ್ಲೇ ಕಳ್ಳತನ ಮಾಡುತ್ತಿದ್ದರು. ಇವರು ಹೆಚ್ಚಾಗಿ ಜನ ನಿಲ್ಲುವ ಬಿಎಂಟಿಸಿ ಬಸ್ ನಿಲ್ದಾಣಗಳನ್ನು ಗುರಿಯಾಗಿಸಿಕೊಂಡು ಖದೀಮ ಸಹೋದರರು ಕಳ್ಳತನ ಮಾಡುತ್ತಿದ್ದರು.
ಬಸ್ ಹತ್ತುವಾಗ ಅಣ್ಣ ನೂಕುನುಗ್ಗಲಿನಲ್ಲಿ ಜನರ ಜೇಬಿಗೆ ಕೈಹಾಕಿ ಮೊಬೈಲ್ ಕಳವು ಮಾಡಿದರೆ, ತಮ್ಮ ಅದನ್ನು ಕ್ಷಣಾರ್ಧದಲ್ಲಿ ಬ್ಯಾಗ್ಗೆ ಹಾಕಿಕೊಳ್ಳುತ್ತಿದ್ದ. ನಂತರ ಈ ಸಹೋದರರು ನಡೆಸುತ್ತಿದ್ದ ನಾಟಕ ಎಲ್ಲರನ್ನು ಅಚ್ಚರಿಗೊಳಿಸಿದೆ. ಮೊಬೈಲ್ ಕಳುವಾದ ವಿಷಯ ಮಾಲೀಕರ ಅರಿವಿಗೆ ಬಾರದಿದ್ದರೂ, ಕಳ್ಳರಲ್ಲಿ ಒಬ್ಬ ಸಭ್ಯಸ್ಥನಂತೆ ನಟಿಸಿ, 'ನಿಮ್ಮ ಮೊಬೈಲ್ ಕಳುವಾಯ್ತು ನೋಡಿ! ಎಂದು ಹೇಳುತ್ತಿದ್ದ. ನಂತರ, ಕಳ್ಳ ಆ ಕಡೆ ಹೋಗುತ್ತಿದ್ದಾನೆ ಎಂದು ಮಾಲೀಕರನ್ನು ಅನುಮಾನ ಬರದಂತೆ ಬೇರೆ ದಿಕ್ಕಿಗೆ ಡೈವರ್ಟ್ ಮಾಡಿ, ಅದೇ ಬಸ್ಸಿನಲ್ಲಿ ಮುಂದಿನ ನಿಲ್ದಾಣದಲ್ಲಿ ಇಳಿದು ಎಸ್ಕೇಪ್ ಆಗುತ್ತಿದ್ದರು.
ಕೆಂಗೇರಿ, ಎಲೆಕ್ಟ್ರಾನಿಕ್ ಸಿಟಿ, ಬಾಗಲೂರು ಸೇರಿದಂತೆ ನಗರದ ಹಲವೆಡೆ ಬಿಎಂಟಿಸಿ ಬಸ್ ಪ್ರಯಾಣಿಕರನ್ನು ಟಾರ್ಗೆಟ್ ಮಾಡಿ ಈ ಸಹೋದರರು ಕೈಚಳಕ ತೋರಿಸುತ್ತಿದ್ದರು. ಸದ್ಯ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಇಬ್ಬರು ಖತರ್ನಾಕ್ ಕಳ್ಳ ಅಣ್ಣತಮ್ಮಂದಿರನ್ನು ಪೊಲೀಸರು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ