ಸರಕಾರದಿಂದ ಸದ್ಯದಲ್ಲೇ ಸೈಬರ್ ಭದ್ರತಾ ನೀತಿ ಜಾರಿ: ಅಶ್ವತ್ಥನಾರಾಯಣ

By Suvarna NewsFirst Published Mar 21, 2022, 10:10 PM IST
Highlights

* ಸರಕಾರದಿಂದ ಸದ್ಯದಲ್ಲೇ ಸೈಬರ್ ಭದ್ರತಾ ನೀತಿ ಜಾರಿ
* ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ  ಹೇಳಿಕೆ
 * 12ನೇ ಜಾಗತಿಕ ಸಮಾವೇಶದಲ್ಲಿ ತಿಳಿಸಿದ ಅಶ್ವತ್ಥನಾರಾಯಣ

ಬೆಂಗಳೂರು, (ಮಾ.21): ಡಿಜಿಟಲ್ ಆರ್ಥಿಕತೆಯ ಸುಸ್ಥಿರತೆಗೆ ಸುರಕ್ಷತೆ, ಭದ್ರತೆ ಮತ್ತು ವಿಶ್ವಸಾರ್ಹತೆಗಳು ಆಧಾರಸ್ತಂಭಗಳಾಗಿದ್ದು, ನಾವೀನ್ಯತೆ ಕೂಡ ವ್ಯಾಪಕ ಪ್ರಮಾಣದಲ್ಲಿ ನಡೆಯಬೇಕಾಗಿದೆ. ಸೈಬರ್ ವಂಚನೆಯ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸರಕಾರವು ಶೀಘ್ರದಲ್ಲೇ `ಸೈಬರ್ ಭದ್ರತಾ ನೀತಿ’ಯನ್ನು (Cyber Security Policy) ಜಾರಿಗೆ ತರಲಿದೆ ಎಂದು ಐಟಿ, ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ (Dr CN Ashwath Narayan) ಹೇಳಿದ್ದಾರೆ.

`ಅಸೋಚಂ’ ಸಂಘಟನೆಯು ವರ್ಚುಯಲ್ ರೂಪದಲ್ಲಿ ಏರ್ಪಡಿಸಿರುವ ಎರಡು ದಿನಗಳ ತನ್ನ 12ನೇ ಜಾಗತಿಕ ಸಮಾವೇಶದಲ್ಲಿ ಸೋಮವಾರ ಅವರು ಮಾತನಾಡಿದರು. ಸಮಾವೇಶದಲ್ಲಿ `ವಂಚನೆಗಳು ಮತ್ತು ವಿಧಿವಿಜ್ಞಾನ: ಮುನ್ನೆಲೆಗೆ ಬರುತ್ತಿರುವ ಪ್ರವೃತ್ತಿಗಳು ಹಾಗೂ ಸವಾಲುಗಳ ನಿಗ್ರಹ’ ಕುರಿತು ಪ್ರಧಾನವಾಗಿ ಚರ್ಚಿಸಲಾಗುತ್ತಿದೆ.

Latest Videos

Cyber Crime : ಹೈದರಾಬಾದ್‌ ಗೆ ಹೋಗುವ ಕೆಲಸವೇ ಇಲ್ಲ.. ಹುಬ್ಬಳ್ಳಿಯಲ್ಲೆ ಎಲ್ಲ

ಉದ್ದೇಶಿತ ಸೈಬರ್ ಭದ್ರತಾ ನೀತಿಯು ಎಲ್ಲ ಆಯಾಮಗಳನ್ನೂ ಪರಿಗಣನೆಗೆ ತೆಗೆದುಕೊಂಡಿದೆ. ಈ ನೀತಿಯು ಜಾರಿಗೆ ಬಂದರೆ ಸರಕಾರದ ಮಾಹಿತಿ ತಂತ್ರಜ್ಞಾನ ಆಧಾರಿತ ಸಂಪನ್ಮೂಲಗಳಾದ ರಾಜ್ಯ ದತ್ತಾಂಶ ಕೇಂದ್ರ, ವೈಡ್ ಏರಿಯಾ ನೆಟ್ವರ್ಕ್ ಮತ್ತು ಇ-ಆಡಳಿತ ಸೌಲಭ್ಯಗಳು ಸುರಕ್ಷಿತವಾಗಿರಲಿವೆ ಎಂದು ಅವರು ಹೇಳಿದರು.

ಭಾರತೀಯ ರಿಸರ್ವ್ ಬ್ಯಾಂಕಿನ ಇತ್ತೀಚಿನ ವರದಿಯಂತೆ 2021-22ರಲ್ಲಿ ದೇಶದ ವಾಣಿಜ್ಯ ಬ್ಯಾಂಕುಗಳಲ್ಲಿ 1.38 ಟ್ರಿಲಿಯನ್ ರೂಪಾಯಿಗಳಷ್ಟು ಅಗಾಧ ಮೊತ್ತವು ಸೈಬರ್ ವಂಚನೆಗೆ ಒಳಗಾಗಿದೆ. ಅದರಲ್ಲೂ ಖಾಸಗಿ ಬ್ಯಾಂಕುಗಳಲ್ಲಿ ಕಾರ್ಡುಗಳು ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ವಂಚನೆಗಳು ಅಗಾಧವಾಗಿ ನಡೆಯುತ್ತಿವೆ. ಇವುಗಳನ್ನು ನಿಗ್ರಹಿಸಬೇಕಾದ್ದು ಈಗಿನ ಜರೂರಾಗಿದೆ ಎಂದು ಅವರು ವಿವರಿಸಿದರು.

ಭಾರತೀಯ ಡೇಟಾ ಸುರಕ್ಷತೆ ಮಂಡಲಿಯ ಪ್ರಕಾರ, ಸೈಬರ್ ಭದ್ರತಾ ಉದ್ಯಮವು ಸದ್ಯಕ್ಕೆ 80 ಶತಕೋಟಿ ಡಾಲರ್ ಮೌಲ್ಯವನ್ನು ಹೊಂದಿದ್ದು, ಮುಂದಿನ ಮೂರು ವರ್ಷಗಳಲ್ಲಿ ಇದು 190  ಶತಕೋಟಿ ಡಾಲರ್ ಗಾತ್ರಕ್ಕೆ ಬೆಳೆಯಲಿದೆ. ಇಂತಹ ಉದ್ಯಮವನ್ನು ಸುರಕ್ಷತೆಯೊಂದಿಗೆ ಬೆಳೆಸುವುದು ಸರಕಾರದ ಕರ್ತವ್ಯವಾಗಿದೆ ಎಂದು ಅವರು ನುಡಿದರು.

ಇಂಟರ್ನೆಟ್ ಬಳಕೆದಾರರ ಸಂಖ್ಯೆಯು ಕಳೆದ ಐದು ವರ್ಷಗಳಲ್ಲಿ ಮೂರು ಪಟ್ಟು ಹೆಚ್ಚಳಗೊಂಡಿದ್ದು, ಡಿಜಿಟಲ್ ವಹಿವಾಟಿನ ಪ್ರಮಾಣವು ಕಳೆದ ಆರು ವರ್ಷಗಳಲ್ಲಿ 8 ಪಟ್ಟು ಹೆಚ್ಚಿದೆ. ಇದರ ಜತೆಗೆ ಬ್ರಾಡ್-ಬ್ಯಾಂಡ್ ಅಂತರ್ಜಾಲ ಬಳಕೆದಾರರ ಸಂಖ್ಯೆಯು 2016ರಿಂದ 2021ರ ನಡುವೆ ಶೇ.79ಕ್ಕಿಂತ ಹೆಚ್ಚು ಏರಿಕೆ ದಾಖಲಿಸಿದೆ. ಒಟ್ಟಿನಲ್ಲಿ ಸಾರ್ವಜನಿಕರು ವಂಚನೆಯ ಉದ್ದೇಶದ ಮೊಬೈಲ್  ಕರೆಗಳು, ಸಂದೇಶಗಳು, ಅಪರಿಚಿತ ಲಿಂಕ್ ಗಳು, ಅನಧಿಕೃತ ಕ್ಯೂಆರ್ ಕೋಡ್ ಇತ್ಯಾದಿಗಳ ಬಗ್ಗೆ ಎಚ್ಚರದಿಂದ ಇರಬೇಕು ಎಂದು ಅಶ್ವತ್ಥನಾರಾಯಣ ಹೇಳಿದರು.

ಕೇಂದ್ರ ಸರಕಾರವು ಕೈಗೆತ್ತಿಕೊಂಡಿರುವ `ಡಿಜಿಟಲ್ ಇಂಡಿಯಾ’ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವುದು ಸರಕಾರದ ಆದ್ಯತೆಯಾಗಿದೆ. ಇದಕ್ಕಾಗಿ ಬಳಕೆದಾರರನ್ನು ಡಿಜಿಟಲ್ ತಂತ್ರಜ್ಞಾನದ ಬಗ್ಗೆ ಶಿಕ್ಷಿತರನ್ನಾಗಿ ಮಾಡುವುದು ಮತ್ತು ಸರಕಾರ ಹಾಗೂ ಖಾಸಗಿ ವಲಯಗಳೆರಡರಲ್ಲೂ ತಾಂತ್ರಿಕ ಪರಿಣತಿಯನ್ನು ಬೆಳೆಸುವ ಎರಡು ಆಯಾಮಗಳ ಉಪಕ್ರಮಗಳನ್ನು ರೂಪಿಸಲಾಗಿದೆ ಎಂದು ಸಚಿವರು ವಿವರಿಸಿದರು.

ಅಸೋಚಮ್ ಪದಾಧಿಕಾರಿಗಳಾದ ಶೋಭಿತ್ ಅಗರವಾಲ್, ಬಸುದೇವ್ ಮುಖರ್ಜಿ, ಐಸಿಎಐ ಮುಖ್ಯಸ್ಥ ಡಾ.ಅಶೋಕ್ ಹಾಲ್ದಿಯಾ, ಸೆಬಿಯ ಮುಖ್ಯ ವಿಚಕ್ಷಣಾಧಿಕಾರಿ ಆರತಿ ಶ್ರೀವಾಸ್ತವ ಮತ್ತಿತರರು ಈ ವರ್ಚುಯಲ್ ಸಮಾವೇಶದಲ್ಲಿ ಉಪಸ್ಥಿತರಿದ್ದರು.

click me!