Online Marketing Scam: ಸೆಕೆಂಡ್ ಹ್ಯಾಂಡ್ ಖರೀದಿ ಮಹಾಮೋಸ.. ಜಪ್ತಿಯಾದ ವಾಹನ ತೋರಿಸ್ತಾರೆ!

Published : Mar 21, 2022, 07:22 PM IST
Online Marketing Scam: ಸೆಕೆಂಡ್ ಹ್ಯಾಂಡ್ ಖರೀದಿ ಮಹಾಮೋಸ.. ಜಪ್ತಿಯಾದ ವಾಹನ ತೋರಿಸ್ತಾರೆ!

ಸಾರಾಂಶ

* OLXನಲ್ಲಿ ವಾಹನ ಖರೀದಿಸುವ ಗ್ರಾಹಕರೇ ಎಚ್ಚರ.. ಎಚ್ಚರ..! * ಫೈನಾನ್ಸ್ ಕಂಪನಿಗಳಲ್ಲಿ ಸೀಜ್ ಆದ ವಾಹನಗಳ ತೋರಿಸಿ ವಂಚಿಸುತ್ತಾರೆ * ಸ್ವಲ್ಪ ಯಾಮಾರಿದ್ರೂ ಲಕ್ಷಾಂತರ ರೂಪಾಯಿ ಹಣ ಗುಳುಂಸ್ವಾಹ* ಮಾಸ್ಟರ್‌ಮೈಂಡ್ ಸೇರಿ ಮೂವರ ಬಂಧಿಸಿದ ಬೆಳಗಾವಿ CEN ಪೊಲೀಸ್

ಬೆಳಗಾವಿ (ಮಾ. 21) ದಿನೇದಿನೇ ತಂತ್ರಜ್ಞಾನ (Technology) ಬೆಳೆಯುತ್ತಿದ್ದಂತೆ ಎಲ್ಲವೂ ಡಿಜಿಟಲ್(Digital) ಆಗುತ್ತಿದೆ. ಅದೇ ರೀತಿ ಕಳ್ಳರು, ವಂಚಕರು ಸಹ ಹೈಟೆಕ್ ಆಗುತ್ತಿದ್ದಾರೆ. ವಾಹನ ಮಾರಾಟ ಮೇಳ, ಫೈನಾನ್ಸ್ ಕಂಪನಿಗಳು ಸೀಜ್ ಮಾಡಿದ ವಾಹನಗಳ ಫೋಟೋ ತಗೆದು ಓಎಲ್‌ಎಕ್ಸ್‌ನಲ್ಲಿ ಹಾಕಿ ಜನರನ್ನು ಯಾಮಾರಿಸಿ ದುಡ್ಡು ಪಡೆದು ಪರಾರಿಯಾಗ್ತಿದ್ದ ಖತರ್ನಾಕ್ ಗ್ಯಾಂಗ್‌‌ವೊಂದ‌ನ್ನು ಬೆಳಗಾವಿ (Belagavi) ಸಿಇಎನ್ ಪೊಲೀಸರು ಬಂಧಿಸಿದ್ದಾರೆ‌. ಧಾರವಾಡ ಮೂಲದ ಶಿವಾನಂದ ಧೂಪದಾಳ, ಬೆಳಗಾವಿ ನಗರದ ಅಬ್ದುಲ್ ಮತ್ತು ಜುಬೇರ್ ಮೂವರು ಬಂಧಿತ ಆರೋಪಿಗಳು. ಬಂಧಿತರಿಂದ ಟಾಟಾ ಸಫಾರಿ ವಾಹನ, 70 ಸಾವಿರ ಹಣ, ನಾಲ್ಕು ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಿದ್ದಾರೆ.

ಆರೋಪಿಗಳ ಪ್ಲ್ಯಾನ್ ಹೇಗಿರುತ್ತಿತ್ತು? ಬಂಧನ ಆಗಿದ್ದು ಹೇಗೆ? : ಬೆಂಗಳೂರು ಮೂಲದ ರವಿಕುಮಾರ್ ಎಂಬುವರು ಜನವರಿ 19ರಂದು ಬೆಳಗಾವಿಯ ಸಿಇಎನ್ ಪೊಲೀಸ್ ಠಾಣೆಗೆ ಒಂದು ದೂರು ನೀಡಿರುತ್ತಾರೆ. ಈ ರವಿಕುಮಾರ್ ಓಎಲ್‌ಎಕ್ಸ್‌ನಲ್ಲಿ ಟಾಟಾ ಲೆಯ್ಲ್ಯಾಂಡ್ ಕಂಪನಿಯ ವಾಹನ ಮಾರಾಟ ಬಗ್ಗೆ ಪೋಸ್ಟ್ ನೋಡಿರುತ್ತಾರೆ. ಅದರಲ್ಲಿದ್ದ ಮೊಬೈಲ್ ನಂಬರ್‌ಗೆ ಕರೆ ಮಾಡಿ ಕೇಳಿದಾಗ ಈ ವಾಹನ ಬೆಳಗಾವಿಯಲ್ಲಿದೆ ನೀವು ಖುದ್ದು ಬಂದು ವಾಹನ ಹಾಗೂ ಡಾಕ್ಯುಮೆಂಟ್ ನೋಡಿಕೊಂಡು ಹೋಗಬಹುದು‌. ನಿಮಗೆ ಇಷ್ಟವಾದ್ರೆ ಹಣ ಕೊಟ್ಟು ವಾಹನ ಖರೀದಿಸಿ ಅಂತಾ ತಿಳಿಸಿರುತ್ತಾರೆ‌. ಅದರಂತೆ ಜನವರಿ 17ರಂದು ಬೆಂಗಳೂರಿಂದ ಬೆಳಗಾವಿಗೆ ಬಂದ ರವಿಕುಮಾರ್‌ನನ್ನು ಬೆಳಗಾವಿಯ ಮಹೀಂದ್ರಾ & ಮಹೀಂದ್ರಾ ಸೀಜಿಂಗ್ ಯಾರ್ಡ್‌ಗೆ ಕರೆದುಕೊಂಡು ಹೋಗಿ ವಾಹನ ತೋರಿಸುತ್ತಾರೆ.  ಬಳಿಕ ವಾಹನದ ನಕಲಿ ದಾಖಲೆ ಪತ್ರ ತೋರಿಸಿ 3 ಲಕ್ಷ 20 ಸಾವಿರ ಹಣವನ್ನು ಆರ್ ಟಿಜಿಎಸ್ ಮೂಲಕ ತಮ್ಮ ಖಾತೆಗೆ ವರ್ಗಾಯಿಸಿಕೊಳ್ಳುತ್ತಾರೆ. ಬಳಿಕ ಮಾರನೇ ದಿನ ಡಾಕ್ಯುಮೆಂಟ್ ನಿಮ್ಮ ಹೆಸರಿಗೆ ವರ್ಗಾಯಿಸಿ ಹಣ ನೀಡ್ತೀವಿ ಅಂತಾ ಹಣದ ಜೊತೆ ಪರಾರಿಯಾಗಿರುತ್ತಾರೆ. ಎರಡು ದಿನ ಕಳೆದರೂ ವಾಹನ ಮಾತ್ರ ರವಿಕುಮಾರ್ ಗೆ ಸಿಗಲ್ಲ. ಅಷ್ಟೇ ಅಲ್ಲದೇ ಆರೋಪಿಗಳ ಮೊಬೈಲ್ ನಂಬರ್ ಸಹ ಸ್ವಿಚ್ ಆಫ್ ಆಗಿರುತ್ತೆ. ಬಳಿಕ ಜನವರಿ 19ರಂದು ಬೆಳಗಾವಿಯ ಸಿಇಎನ್ ಪೊಲೀಸರಿಗೆ ರವಿಕುಮಾರ್ ದೂರು ನೀಡಿರುತ್ತಾರೆ. ರವಿಕುಮಾರ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಬೆಳಗಾವಿ ಸಿಇಎನ್ ಪೊಲೀಸರು ತನಿಖೆಗಿಳಿಯುತ್ತಾರೆ. ಹಣ ವರ್ಗಾವಣೆ ಆದ ಅಕೌಂಟ್ ನಂಬರ್, ಆರೋಪಿಗಳ ಮೊಬೈಲ್ ನಂಬರ್ ಆಧಾರದ ಮೇಲೆ ಟೆಕ್ನಿಕಲ್ ಎವಿಡೆನ್ಸ್ ಕಲೆಕ್ಟ್ ಮಾಡಿದ ಪೊಲೀಸರು ಧಾರವಾಡ ಜಿಲ್ಲೆ ಅಳ್ನಾವರ್ ತಾಲೂಕಿನ ಕೋಗಿಲಗೆರೆ ನಿವಾಸಿ ಶಿವಾನಂದ ದೂಪದಾಳ, ಬೆಳಗಾವಿಯ ಅಬ್ದುಲ್ಲಾ, ಜುಬೇರ್‌ನನ್ನು ಬಂಧಿಸಿದ್ದಾರೆ.

ಅಂಡರ್‌ಪಾಸ್ ಅವಾಂತರ, ಕಸದ ಲಾರಿಗೆ ಬಾಲಕಿ ಬಲಿ, ಬಿಬಿಎಂಪಿ ವಿರುದ್ಧ ಆಕ್ರೋಶ

ಬಂಧಿತರ ವಿಚಾರಣೆ ವೇಳೆ ಮತ್ತಷ್ಟು ಪ್ರಕರಣ ಬಯಲು: ಇನ್ನು ಬಂಧಿತ ಮೂವರ ವಿಚಾರಣೆ ವೇಳೆ ಮತ್ತಷ್ಟು ವಂಚನೆ ಪ್ರಕರಣಗಳು ಬಯಲಾಗಿವೆ‌. ಈ ಕುರಿತು ಪ್ರತಿಕ್ರಿಯಿಸಿರುವ ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ, 'ಭಾರತೀಯ ಸೇನೆಯಲ್ಲಿ ಕೆಲಸ ಮಾಡ್ತಿದ್ದ ಶಿವಾನಂದ ಧೂಪದಾಳ ಅಲ್ಲಿ ಹೇಳದೇ ಕೇಳದೇ ಕೆಲಸ ಬಿಟ್ಟು ಊರಿಗೆ ಬಂದು ಈ ರೀತಿ ವಂಚನೆ ಕೆಲಸ ಮಾಡ್ತಿದ್ದ‌.

ಬೆಳಗಾವಿಯ ಅಬ್ದುಲ್ಲಾ, ಜುಬೇರ್ ಎಂಬಾತನ ಜೊತೆ ಸೇರಿ ಬೆಳಗಾವಿ ನಗರ ವ್ಯಾಪ್ತಿಯಲ್ಲಿ ಇದೇ ರೀತಿ ಮೂರು ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಅಲ್ಲದೇ ವಿಜಯಪುರ ಮೂಲದ ವ್ಯಕ್ತಿಯೊಬ್ಬರಿಗೂ ಇದೇ ರೀತಿ ಮೋಸ ಮಾಡಿ 2 ಲಕ್ಷ 30 ಸಾವಿರ ಹಣ ಪಡೆದು ವಂಚಿಸಿದ್ದ. ಕಳೆದ ವರ್ಷ ಬೆಳಗಾವಿಯ ಮಾರ್ಕೆಟ್ ಠಾಣೆಯಲ್ಲಿಯೂ ಸಹ 5 ಲಕ್ಷ ಪಡೆದು ಟ್ರ್ತಾಕ್ಟರ್ ಕೊಡ್ತೀನಿ ಅಂತಾ ಮೋಸ ಮಾಡಿದ್ದ ಬಗ್ಗೆ ದೂರು ದಾಖಲಾಗಿತ್ತು‌‌‌. ಬಾಗಲಕೋಟೆಯಲ್ಲಿ ಒಂದು, ಹುಬ್ಬಳ್ಳಿಯಲ್ಲಿ ಎರಡು, ಧಾರವಾಡದಲ್ಲಿ ಒಂದು ಪ್ರಕರಣ ದಾಖಲಾಗಿದೆ. ಆರೋಪಿ ಶಿವಾನಂದ ಈ ಪ್ರಕರಣದ ಮಾಸ್ಟರ್‌ಮೈಂಡ್ ಆಗಿದ್ದು ಬೇರೆಯವರನ್ನು ಕೃತ್ಯಕ್ಕೆ ಸಹಾಯ ಮಾಡಲು ಬಳಸಿರುವ ಸಾಧ್ಯತೆ ಇದೆ‌‌‌‌‌.

ಈ ಬಗ್ಗೆ ಕುಲಂಕೂಷವಾಗಿ ತನಿಖೆ ಮಾಡಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಓಎಲ್‌ಎಕ್ಸ್‌ನಲ್ಲಿ ಲಾರಿ, ಮಿನಿ ಲಾರಿ, ಟ್ರ್ಯಾಕ್ಟರ್ ಫೋಟೋಗಳನ್ನು ಅಪ್ ಲೋಡ್ ಮಾಡಿ ಬೇರೆ ಬೇರೆ ಹೆಸರಲ್ಲಿ ಅಕೌಂಟ್ ತಗೆದು ಮೋಸ ಮಾಡ್ತಿದ್ದ. ಮೊದಲು ಫೈನಾನ್ಸ್ ಕಂಪನಿಗಳು ಸೀಜ್ ಮಾಡಿದ್ದ ಲಾರಿಗಳ ಫೋಟೋಗಳನ್ನು ಓಎಲ್‌ಎಕ್ಸ್‌ನಲ್ಲಿ ಹಾಕಿ ಬಳಿಕ ಅವರು ಬಂದ್ಮೇಲೆ ಲಾರಿ ತೋರಿಸಿ, ದಾಖಲೆ ಮಾಡಿಕೊಡ್ತೀದೀವಿ ಅಂತಾ ನಂಬಿಸುತ್ತಿದ್ರು. ಹಣ ಸಿಕ್ಕ ಮೇಲೆ ಮೊಬೈಲ್ ಸ್ವಿಚ್ ಆಫ್ ಮಾಡಿ ಎಸ್ಕೇಪ್ ಆಗ್ತಿದ್ರು‌‌‌. ಸೆಕಂಡ್ ಹ್ಯಾಂಡ್ ವಾಹನಗಳನ್ನು ಖರೀದಿಸುವವರ‌ನ್ನೇ ಟಾರ್ಗೆಟ್ ಮಾಡ್ತಿದ್ರು' ಅಂತಾ ತಿಳಿಸಿದ್ದಾರೆ‌

ಒಟ್ಟಿನಲ್ಲಿ ಸೆಕೆಂಡ್ ಹ್ಯಾಂಡ್ ವಾಹನ ಕಡಿಮೆ ಬೆಲೆ ಸಿಗ್ತಾ ಇದೆ ಅಂತಾ ನೀವು ತಕ್ಷಣ ಹಣ ಕೊಟ್ರೆ ಮೋಸ ಹೋಗೋದು ಗ್ಯಾರಂಟಿ‌‌. ವಾಹನ ಖರೀದಿಸುವವರಿದ್ರೆ ಮೂಲ ಮಾಲೀಕರ ಜೊತೆ ನೇರವಾಗಿ ಮಾತುಕತೆ ನಡೆಸಿ ವ್ಯವಹಾರ ಬಗೆಹರಿಸಿಕೊಳ್ಳೋದು ಒಳಿತು. ಸ್ವಲ್ಪ ಯಾಮಾರಿದರೂ ಕ್ಷಣಾರ್ಧದಲ್ಲಿ ನಿಮ್ಮ ಹಣ ತಗೆದುಕೊಂಡು ಎಸ್ಕೇಪ್ ಆಗುವ ಖದೀಮರಿದ್ದಾರೆ ಎಚ್ಚರಿಕೆ. 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೀದರ್ ಹಾಸ್ಟೆಲ್‌ ನಲ್ಲಿ ವಿಚಿತ್ರ ಆಕೃತಿ ನೋಡಿ ಬೆಚ್ಚಿಬಿದ್ದ ಮಕ್ಕಳು! ವಿದ್ಯಾರ್ಥಿನಿಯರಿಗೆ ಸಾಯಬೇಕೆನ್ನುವ ಕೆಟ್ಟ ಕನಸು!
ಪ್ರೇಯಸಿ ಜೊತೆಗಿನ ಖಾಸಗಿ ವಿಡಿಯೋ ಲೀಕ್; ದೂರಿನ ಬೆನ್ನಲ್ಲೇ ಸ್ನೇಹಿತನ ಮನೆಯಲ್ಲಿ ಬಾಯ್‌ ಫ್ರೆಂಡ್ ಶ*ವವಾಗಿ ಪತ್ತೆ!