ಬಸವಕಲ್ಯಾಣ: ಎಟಿಎಂ ದೋಚಿ ಖದೀಮರು ಪರಾರಿ, ಯಂತ್ರ ಒಡೆದರೂ ಬಾರಿಸದ ಎಚ್ಚರಿಕೆ ಗಂಟೆ..!

By Kannadaprabha NewsFirst Published Oct 13, 2023, 12:28 PM IST
Highlights

ಎಟಿಎಂ ಯಂತ್ರವನ್ನು ಗ್ಯಾಸ್‌ ಕಟರ್‌ ಬಳಸಿ ದೋಚಲು ಬಂದಿದ್ದ ಕಳ್ಳರು, ಗುರುತು ಸಿಗದಂತೆ ಮುಖಕ್ಕೆ ಪೂರ್ಣ ಪ್ರಮಾಣದಲ್ಲಿ ಬಟ್ಟೆ ಸುತ್ತಿಕೊಂಡು ಎಟಿಯಂ ಕೇಂದ್ರ ಪ್ರವೇಶಿಸಿ ಅಲ್ಲಿದ್ದ ಸಿಸಿ ಕ್ಯಾಮರಾಗಳಿಗೆ ಯಾವುದೋ ಕ್ರೀಮ್‌ ಸ್ಪ್ರೇ ಮಾಡುವ ಮೂಲಕ ಕ್ಯಾಮರಾಗಳಲ್ಲಿ ಕಳ್ಳತನ ಮಾಡುವುದಾಗಲಿ, ತಮ್ಮ ಗುರುತಾಗಲಿ ದಾಖಲಾಗದಂತೆ ಕುತಂತ್ರ ಮಾಡಿದ್ದಾರೆ.

ಬಸವಕಲ್ಯಾಣ(ಅ.13):  ಗುರುವಾರ ಬೆಳ್ಳಂ ಬೆಳಿಗ್ಗೆ 4ರ ಸುಮಾರಿಗೆ ನಗರದ ವರ್ಷಾ ಫಂಕ್ಷನ್‌ ಹಾಲ್‌ ಹತ್ತಿರ ಇರುವ ಕರ್ನಾಟಕ ಬ್ಯಾಂಕ್‌ ಎಟಿಎಂಗೆ ನುಗ್ಗಿದ ಕಳ್ಳರು ಗ್ಯಾಸ್‌ ಕಟರ್‌ ಬಳಸಿ ಎಟಿಎಂ ಯಂತ್ರ ಕತ್ತರಿಸಿ 6.5 ಲಕ್ಷ ರು. ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.

ಎಟಿಎಂ ಯಂತ್ರವನ್ನು ಗ್ಯಾಸ್‌ ಕಟರ್‌ ಬಳಸಿ ದೋಚಲು ಬಂದಿದ್ದ ಕಳ್ಳರು, ಗುರುತು ಸಿಗದಂತೆ ಮುಖಕ್ಕೆ ಪೂರ್ಣ ಪ್ರಮಾಣದಲ್ಲಿ ಬಟ್ಟೆ ಸುತ್ತಿಕೊಂಡು ಎಟಿಯಂ ಕೇಂದ್ರ ಪ್ರವೇಶಿಸಿ ಅಲ್ಲಿದ್ದ ಸಿಸಿ ಕ್ಯಾಮರಾಗಳಿಗೆ ಯಾವುದೋ ಕ್ರೀಮ್‌ ಸ್ಪ್ರೇ ಮಾಡುವ ಮೂಲಕ ಕ್ಯಾಮರಾಗಳಲ್ಲಿ ಕಳ್ಳತನ ಮಾಡುವುದಾಗಲಿ, ತಮ್ಮ ಗುರುತಾಗಲಿ ದಾಖಲಾಗದಂತೆ ಕುತಂತ್ರ ಮಾಡಿದ್ದಾರೆ.

ಶ್ರೀಗಂಧ ಕಳ್ಳತನ ಪ್ರಕರಣ: ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು!

ಎಟಿಎಂ ಕೇಂದ್ರ ನುಗ್ಗಿ ಲಕ್ಷಾಂತರ ರುಪಾಯಿ ದೋಚಿರುವ ಕಳ್ಳಲು ತಮ್ಮ ಕೈಚಳಕವನ್ನು ಕೇವಲ 10 ನಿಮಿಷದಲ್ಲಿ ಮುಗಿಸಿ ಪರಾರಿಯಾಗಿದ್ದು, ಇದೇ ಸಂದರ್ಭದಲ್ಲಿ ನಗರದ ಇನ್ನೊಂದು ಎಟಿಎಂ ದೋಚಲು ಹೊಂಚು ಹಾಕಿರುವಂತಿದ್ದ ಅವರು ಪೊಲೀಸರ ಗಸ್ತು ವಾಹನ ಕಂಡು ಎರಡನೇ ಎಟಿಎಂ ದೋಚುವ ಯೋಜನೆ ಕೈಬಿಟ್ಟು ಅಲ್ಲಿಂದ ತಕ್ಷಣವೇ ಪರಾರಿಯಾಗಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿ‍ಳಿಸಿವೆ.

ಆದಷ್ಟು ಬೇಗ ಕಳ್ಳರನ್ನು ಪತ್ತೆ ಹಚ್ಚುವದಕ್ಕಾಗಿ ತಂಡ ರಚನೆ:

ಈ ಕುರಿತಂತೆ ಬೀದರ್‌ನಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌ಎಲ್‌ ಅವರು ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿ, ಎಟಿಎಂ ಯಂತ್ರ ದೋಚಿರುವ ಪ್ರಕರಣ ಮಾದರಿಯಲ್ಲಿಯೇ ವಿಜಯಪೂರದಲ್ಲಿಯೂ ಘಟನೆ ನಡೆದಿದೆ. ಹೀಗಾಗಿ ಎರಡೂ ಪ್ರಕರಣಗಳಲ್ಲಿನ ಸಾಮ್ಯತೆಯನ್ನು ಪರಿಶೀಲಿಸಲಾಗುತ್ತಿದೆ, ಆದಷ್ಟು ಬೇಗ ಕಳ್ಳರನ್ನು ಪತ್ತೆ ಹಚ್ಚುವದಕ್ಕಾಗಿ ತಂಡವನ್ನು ರಚಿಸಿ ಕಾರ್ಯೋನ್ಮುಖರಾಗಿದ್ದೇವೆ ಎಂದು ತಿಳಿಸಿದರು.

ಯಂತ್ರ ಒಡೆದರೂ ಎಚ್ಚರಿಕೆ ಗಂಟೆ ಬಾರಿಸದ ಎಟಿಎಂ:

ಎಟಿಎಂ ಕೇಂದ್ರದಲ್ಲಿ ಯಂತ್ರವನ್ನು ಒಡೆಯುತ್ತಿದ್ದಂತೆ ಎಚ್ಚರಿಕೆ ಗಂಟೆ ಬಾರಿಸಬೇಕು ಅದು ಆಗಿಲ್ಲ. ಎಟಿಎಂ ಕೇಂದ್ರದ ಶಟರ್‌ಗೆ ಬೀಗ ಹಾಕಿರಲಿಲ್ಲ. ಈ ಲೋಪದೋಷಗಳ ಕುರಿತಂತೆ ಬ್ಯಾಂಕ್‌ ವ್ಯವಸ್ಥಾಪಕರನ್ನು ಮಾಹಿತಿ ಕೇಳಿದ್ದು, ಅಲ್ಲದೆ ಆಯಾ ಡಿಎಸ್‌ಪಿ ಅವರಿಗೆ ಬ್ಯಾಂಕ್‌ ಅಧಿಕಾರಿಗಳ ಸಭೆ ನಡೆಸಿ ಎಟಿಎಂ ಕೇಂದ್ರಗಳಿಗೆ ಸೆಕ್ಯುರಿಟಿ ಗಾರ್ಡ್‌ಗಳನ್ನು ನೇಮಕ ಮಾಡಿಕೊಳ್ಳುವ ಅಥವಾ ತಡ ರಾತ್ರಿ ಎಟಿಎಂಗೆ ಬೀಗ ಜಡಿಯುವ ಕುರಿತಾಗಿ ಸಮಾಲೋಚಿಸಿ ಸಲಹೆ ಸೂಚನೆಗಳನ್ನು ನೀಡಿದ್ದೇನೆ ಎಂದು ಎಸ್‌ಪಿ ಚನ್ನಬಸವಣ್ಣ ಎಸ್‌ಎಲ್‌ ತಿಳಿಸಿದರು.

click me!