
ರಾಯಚೂರು(ನ.28): ರಾಯಚೂರು ಜಿಲ್ಲೆಯ ಲಿಂಗಸೂಗೂರು ಪಟ್ಟಣದಲ್ಲಿ ಹಾಡುಹಗಲೇ ಮನೆ ಬೀಗ ಮುರಿದು ಭಾರಿ ಕಳ್ಳತನ ನಡೆದಿದೆ. ವರದಿಗೆಂದು ಹೊರಗೆ ತೆರಳಿದ್ದ ಪತ್ರಕರ್ತರೊಬ್ಬರ ಮನೆಯಲ್ಲಿ ಇದ್ದ ಬರೋಬ್ಬರಿ 14 ಲಕ್ಷ ರೂಪಾಯಿ ನಗದು ಮತ್ತು 95 ಗ್ರಾಂ ಚಿನ್ನಾಭರಣಗಳನ್ನು ಕಳ್ಳರು ದೋಚಿಕೊಂಡು ಪರಾರಿಯಾಗಿದ್ದಾರೆ.
ಲಿಂಗಸೂಗೂರು ಪಟ್ಟಣದ ನಿವಾಸಿ ಹಾಗೂ ಪತ್ರಕರ್ತರಾದ ಸಿದ್ದನಗೌಡ ಪಾಟೀಲ್ ಅವರ ಮನೆಯಲ್ಲಿ ಈ ಘಟನೆ ನಡೆದಿದೆ. ಸಿದ್ದನಗೌಡ ಪಾಟೀಲ್ ಅವರು ವರದಿಗಾರಿಕೆಗೆಂದು ಹೊರಗೆ ಹೋಗಿದ್ದ ಸಮಯವನ್ನು ಬಳಸಿಕೊಂಡ ಖದೀಮರು, ಮನೆಯ ಬೀಗ ಮುರಿದು ಒಳನುಗ್ಗಿದ್ದಾರೆ. ಪತ್ರಕರ್ತ ಸಿದ್ದನಗೌಡ ಪಾಟೀಲ್ ಅವರು ಇತ್ತೀಚೆಗೆ ಪಿತ್ರಾರ್ಜಿತ ಜಮೀನು ಮಾರಾಟ ಮಾಡಿ ಸುಮಾರು 14 ಲಕ್ಷ ರೂಪಾಯಿಗಳು ಮನೆಯಲ್ಲಿಟ್ಟಿದ್ದರು. ಇದರ ಜೊತೆಗೆ ಅವರ ಪತ್ನಿ, ಶಿಕ್ಷಕಿ ನಾಗಮ್ಮ ಅವರಿಗೆ ಸೇರಿದ ಚಿನ್ನದ ಮಾಂಗಲ್ಯ ಸರ, ಝುಮುಕಿ, ಕಿವಿಯೋಲೆ ಮತ್ತು ಉಂಗುರ ಸೇರಿದಂತೆ ಒಟ್ಟು 95 ಗ್ರಾಂ ಚಿನ್ನಾಭರಣಗಳು ಕಳ್ಳತನವಾಗಿವೆ. ಇದರ ಜೊತೆಗೆ, ಸುಮಾರು 50 ಗ್ರಾಂ ಬೆಳ್ಳಿ ಆಭರಣಗಳೂ ಕಳುವಾಗಿವೆ ಎಂದು ತಿಳಿದುಬಂದಿದೆ.
ಕಳ್ಳತನದ ಮಾಹಿತಿ ತಿಳಿದ ತಕ್ಷಣ ಲಿಂಗಸೂಗೂರು ಪೊಲೀಸ್ ಇನ್ಸ್ಪೆಕ್ಟರ್ ಪುಂಡಲೀಕ ಪಟಾತರ ಅವರು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಲಿಂಗಸೂಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ಪತ್ತೆಗೆ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ