ಗಿರೀಶ್ ಮಾದೇನಹಳ್ಳಿ
ಬೆಂಗಳೂರು(ನ.29): ಕೆಲ ದಿನಗಳ ಹಿಂದೆ ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತನಿಗೆ ಚಾಕು ಇರಿತ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿಗೆ ಬೆಳಗಾವಿ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿರುವ ಶಂಕಿತ ಉಗ್ರರು ಜಿಹಾದಿ ಬೋಧನೆ ಮಾಡಿದ್ದರು ಎಂಬ ಮಹತ್ವದ ಸಂಗತಿ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.
ಶಿವಮೊಗ್ಗದ ವೃತ್ತಿಪರ ಕ್ರಿಮಿನಲ್ ಎನ್ನಲಾದ ಮೊಹಮ್ಮದ್ ಜಬೀವುಲ್ಲಾ ಖಾನ್ ಅಲಿಯಾಸ್ ಚರ್ಬಿಗೆ ಜೈಲಿನಲ್ಲಿ ಜಿಹಾದಿ ಬೋಧನೆ ಆಗಿದ್ದು, ಇತ್ತೀಚಿಗೆ ಮಂಗಳೂರಿನ ಕುಕ್ಕರ್ ಬಾಂಬ್ ಸ್ಫೋಟದ ಶಂಕಿತ ಉಗ್ರ ಶಾರೀಕ್ ಜತೆ ಈತನಿಗೆ ನಿಕಟ ಸಂಪರ್ಕ ಇತ್ತು. ಶಿವಮೊಗ್ಗದಲ್ಲಿ ದ್ವಿಚಕ್ರ ವಾಹನ ಕಳ್ಳವು ಸೇರಿದಂತೆ ಸಣ್ಣಪುಟ್ಟಅಪರಾಧ ಚಟುವಟಿಕೆಯಲ್ಲಿ ತೊಡಗಿದ್ದ ಜಬೀವುಲ್ಲಾ ಖಾನ್ನನ್ನು ಮೂರು ವರ್ಷಗಳ ಹಿಂದೆ ಕಳ್ಳತನ ಪ್ರಕರಣದಲ್ಲಿ ಬಂಧಿಸಿ ಬೆಳಗಾವಿ ಹಿಂಡಲಗಾ ಕಾರಾಗೃಹಕ್ಕೆ ಶಿವಮೊಗ್ಗ ಪೊಲೀಸರು ಕಳುಹಿಸಿದ್ದರು. ಆಗ ಜೈಲಿನಲ್ಲಿದ್ದ ಶಂಕಿತ ಉಗ್ರರು ಜಬೀವುಲ್ಲಾ ಖಾನ್ಗೆ ಮೂಲಭೂತದ ಕುರಿತು ಬೋಧಿಸಿ ಬ್ರೈನ್ ವಾಶ್ ಮಾಡಿದ್ದರು ಎಂದು ಹಿರಿಯ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.
ಭಯೋತ್ಪಾದಕ ಎಂದ ಉಪನ್ಯಾಸಕರಿಗೆ ಮುಸ್ಲಿಂ ವಿದ್ಯಾರ್ಥಿಯ ಕ್ಲಾಸ್...
ಜೈಲಿನಿಂದ ಜಾಮೀನು ಪಡೆದು ಹೊರ ಬಂದ ನಂತರ ಕುಕ್ಕರ್ ಬಾಂಬ್ ಸ್ಫೋಟಕ ಶಂಕಿತ ಉಗ್ರ ಮೊಹಮ್ಮದ್ ಶಾರೀಕ್ ಜತೆ ಆತನ ಸಂಪರ್ಕ ಬೆಳೆದಿತ್ತು. ಇದೇ ಗೆಳತನದಲ್ಲೇ ಜಬೀವುಲ್ಲಾಖಾನ್ಗೆ ನಿರಂತರವಾಗಿ ಜಿಹಾದಿಗೆ ಸಂಬಂಧಿಸಿದ ಹಲವು ವಿಡಿಯೋಗಳನ್ನು ಗೆಳೆಯನಿಗೆ ಶಾರೀಕ್ ಕಳುಹಿಸಿದ್ದ. ಹಿಂದೂ ಕಾರ್ಯಕರ್ತನಿಗೆ ಚಾಕು ಇರಿತ ಪ್ರಕರಣದಲ್ಲಿ ಬಂಧಿತನಾದ ಜಬೀವುಲ್ಲಾನ ಮೊಬೈಲ್ ವಶಕ್ಕೆ ಪಡೆದು ಪರಿಶೀಲಿಸಿದಾಗಲೇ ಶಂಕಿತ ಉಗ್ರ ಶಾರೀಕ್ ದುಷ್ಕೃತ್ಯದ ಕುರಿತು ಮಾಹಿತಿ ಸಿಕ್ಕಿತು ಎಂದು ಮೂಲಗಳು ವಿವರಿಸಿವೆ.
ಹಿಂಡಲಗಾದಲ್ಲಿ 10 ಮಂದಿ ಶಂಕಿತ ಉಗ್ರರು:
2005ರ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಬಾಂಬ್ ಸ್ಫೋಟ ಸೇರಿದಂತೆ ವಿವಿಧ ಭಯೋತ್ಪಾದ ಕೃತ್ಯಗಳಲ್ಲಿ ಬಂಧಿತರಾಗಿರುವ 10 ಶಂಕಿತ ಉಗ್ರರನ್ನು ಬೆಳಗಾವಿ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿಡಲಾಗಿದೆ. 2019ರಲ್ಲಿ ವಾಹನ ಕಳವು ಪ್ರಕರಣದಲ್ಲಿ ಬಂಧಿತನಾಗಿದ್ದ ಜಬೀವುಲ್ಲಾಖಾನ್ನನ್ನು ಇದೇ ಜೈಲಿಗೆ ಕಳುಹಿಸಲಾಗಿತ್ತು. ಆಗ ಆತನಿಗೆ ಶಂಕಿತರ ಉಗ್ರರ ನಂಟು ಬೆಳೆದಿದೆ. ಅದರಲ್ಲೂ ಐಐಎಸ್ಸಿ ಬಾಂಬ್ ಸ್ಫೋಟದ ಶಂಕಿತ ಉಗ್ರ ಅನ್ಸಾರಿ ಪಾಷ ಜತೆ ಜಬೀವುಲ್ಲಾ ಖಾನ್ಗೆ ಒಡನಾಟ ಹೆಚ್ಚಿತ್ತು ಎನ್ನಲಾಗಿದೆ.
ಭಯೋತ್ಪಾದನೆಯಲ್ಲಿ ಭಾಗಿಯಾಗದಂತೆ ಮೌಲ್ವಿಗಳು ಬುದ್ಧಿ ಹೇಳಬೇಕು: ಕಾಣಿಯೂರುಶ್ರೀ
ಕಳೆದ 2020ರಲ್ಲಿ ಜಾಮೀನಿನ ಮೇರೆಗೆ ಜೈಲಿನಿಂದ ಬಿಡುಗಡೆಗೊಂಡಾಗ ಆತ ಪೂರ್ಣವಾಗಿ ‘ಜಿಹಾದಿ’ ಪ್ರತಿಪಾದಕನಾಗಿ ಪರಿವರ್ತನೆಗೊಂಡಿದ್ದ. ಶಿವಮೊಗ್ಗಕ್ಕೆ ಮರಳಿದ ಬಳಿಕ ಗುಪ್ತವಾಗಿ ಇಸ್ಲಾಂ ಮೂಲಭೂತದ ಕಡೆಗೆ ಮುಸ್ಲಿಂ ಯುವಕರ ಸೆಳೆಯಲು ಜಬೀ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ. ಹೀಗಾಗಿ ಇದೇ ವರ್ಷದ ಆಗಸ್ಟ್ನಲ್ಲಿ ಸಾವರ್ಕರ್ ಫ್ಲೆಕ್ಸ್ ಹಾಕುವ ವಿಚಾರದಲ್ಲಿ ಉಂಟಾದ ಗಲಾಟೆಯಲ್ಲಿ ಆತ ಮುಂಚೂಣಿಯಲ್ಲಿದ್ದ. ಆಗಲೇ ಹಿಂದೂ ಸಂಘಟನೆ ಕಾರ್ಯಕರ್ತನಿಗೆ ಚಾಕು ಇರಿದು ಕೊನೆಗೆ ಪೊಲೀಸರಿಂದ ಜಬೀ ಗುಂಡೇಟು ತಿದ್ದಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಶಾರೀಕ್ಗೆ ಜಬಿ ಸಾಥ್!
ಸಂವಹನ ಆ್ಯಪ್ ಮೂಲಕ ಶಂಕಿತ ಉಗ್ರ ಶಾರೀಕ್ ಜತೆ ಜಬೀವುಲ್ಲಾಖಾನ್ ನಿರಂತರವಾಗಿ ಸಂಪರ್ಕದಲ್ಲಿದ್ದ. ಹೀಗಾಗಿ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನಲ್ಲಿ ನಡೆದ ಬಾಂಬ್ ತಯಾರಿಕೆ ಕೃತ್ಯದ ಸಂಗತಿ ಆತನಿಗೆ ಗೊತ್ತಾಗಿತ್ತು. ಕೊನೆಗೆ ಚಾಕು ಇರಿತ ಪ್ರಕರಣದಲ್ಲಿ ಆತ ಬಂಧಿತನಾದಾಗ ಶಾರೀಕ್ ದುಷ್ಕೃತ್ಯದ ಬಗ್ಗೆ ಸುಳಿವು ಸಿಕ್ಕಿತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ