ಸಂಸಾರದಲ್ಲಿ ಕಲಹ, ಡ್ರಾಪ್‌ ಕೊಡುವ ನೆಪದಲ್ಲಿ ಕತ್ತು ಸೀಳಿ ಕೊಂದ ಪತಿ!

By Kannadaprabha NewsFirst Published Dec 31, 2023, 11:55 AM IST
Highlights

ಸಂಸಾರದಲ್ಲಿ ಕಲಹದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಿಂದ ಮದುವೆಯಾದ ಪತ್ನಿಯನ್ನ ಕೊಲೆಗೈದಿರುವ ಘಟನೆ ಅರಸೀಕೆರೆಯ ರಾಂಪುರ ಗ್ರಾಮದಲ್ಲಿ ನಡೆದಿದೆ.

 ಅರಸೀಕೆರೆ (ಡಿ.31): ಸಂಸಾರದಲ್ಲಿ ಕಲಹದ ಹಿನ್ನೆಲೆಯಲ್ಲಿ ಪತ್ನಿಯನ್ನ ಕೊಲೆಗೈದಿರುವ ಘಟನೆ ತಾಲೂಕಿನ ರಾಂಪುರ ಗ್ರಾಮದಲ್ಲಿ ನಡೆದಿದೆ. ಜ್ಯೋತಿ (22) ಕೊಲೆಯಾದ ಮಹಿಳೆಯಾಗಿದ್ದು ಮೂಲತಃ ಹುಬ್ಬಳ್ಳಿಯವರು ಎಂದು ತಿಳಿದು ಬಂದಿದೆ.

ಕಳೆದ ಆರು ತಿಂಗಳ ಹಿಂದೆ ಹುಬ್ಬಳ್ಳಿ ಮೂಲದ ಜ್ಯೋತಿ ಎಂಬುವರನ್ನು ಅರಸೀಕೆರೆ ತಾಲೂಕಿನ ಜಯಚಾಮರಾಜೇಂದ್ರಪುರದ ಸಮೀಪವಿರುವ, ರಾಂಪುರ ಎಂಬ ಗ್ರಾಮದ ಜೀವನ್ (25) ಎಂಬುವರೊಂದಿಗೆ ಮದುವೆ ಮಾಡಲಾಗಿತ್ತು. ಪತ್ನಿ ಸ್ವಲ್ಪ ಬೋಲ್ಡ್ ಮತ್ತು ಮಾಡ್ರನ್ ಆಗಿ ಇದ್ದಿದ್ದರಿಂದ ಎಲ್ಲರೊಂದಿಗೆ ಬೆಳೆಸಿಕೊಂಡಿದ್ದರು ಎನ್ನಲಾಗಿದೆ ಆದರೆ, ಇದನ್ನ ತಪ್ಪಾಗಿ ಭಾವಿಸಿದ ಪತಿ ಜೀವನ್ ಕಳೆದ ಎರಡು ತಿಂಗಳಿನಿಂದ ಈಕೆಯ ಮೇಲೆ ಮೇಲೆ ಅನುಮಾನಪಟ್ಟಿದ್ದು, ಮನೆಯಲ್ಲಿ ಒಂದೆರಡು ಬಾರಿ ಗಲಾಟೆ ಕೂಡ ನಡೆದಿತ್ತು ಎನ್ನಲಾಗಿದೆ.

ಮದುವೆಯಾದ ನಂತರ ಬಟ್ಟೆ ಹಾಕುವ ವಿಚಾರದಲ್ಲೂ ಸಾಕಷ್ಟು ಬಾರಿ ಬದಲಾಗಬೇಕು ಎಂದು ಪತಿ ಜೀವನ್‌ ಪತ್ನಿಗೆ ಹಲವಾರು ಬಾರಿ ಬುದ್ಧಿವಾದ ಹೇಳಿದ್ದನು ಎನ್ನಲಾಗಿದೆ. ಆದರೆ ಆಕೆ ಪತಿಯ ಮಾತಿನ ಗಣನೆಗೆ ತೆಗೆದುಕೊಳ್ಳದೆ ಅರೆ ಬರೆ ತಿರುಗಾಡುತ್ತಿದ್ದ ಹಿನ್ನೆಲೆಯಲ್ಲಿ ಮನನೊಂದು ಆಕೆಯನ್ನು ಕೊಲೆ ಮಾಡಿರಬಹುದು ಎಂಬುದು ಸದ್ಯ ಗ್ರಾಮದಲ್ಲಿ ಹರಿದಾಡುತ್ತಿರುವ ಗುಸು ಗುಸು ಮಾತಾಗಿದೆ. ಆದರೆ ಆಕೆ ಮತ್ತೆ ಅದೇ ರೀತಿ ಬಟ್ಟೆಯನ್ನು ಹಾಕಿಕೊಂಡು ಹೊರಗೆ ಹೋಗುವುದನ್ನ ವಿರೋಧಿಸಿದ ಎನ್ನಲಾಗಿದೆ ಮತ್ತು ಆಕೆಯನ್ನು ಡ್ರಾಪ್‌ ಕೊಡುವ ನೆಪದಲ್ಲಿ ಜೆಸಿ ಪುರದ ಬಳಿ ಇರುವ ರಾಂಪುರ ಅರಣ್ಯ ಪ್ರದೇಶದಲ್ಲಿ ಕರೆದಿದ್ದು ಆಕೆಯನ್ನು ಕೊಲೆಗೈದು ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಸದ್ಯ ಆರೋಪಿ ಪತಿ ಜೀವನ್‌ಗೆ ಪೊಲೀಸರು ಹುಡುಕಾಟ ನಡೆಸಿದ್ದು ಈ ಸಂಬಂಧ ಅರಸೀಕೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪತ್ತೆಗೆ ಎರಡು ವಿಶೇಷ ತಂಡ ರಚನೆ ಮಾಡಲಾಗಿದೆ.

click me!