
ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ
ಚಿತ್ರದುರ್ಗ (ಜು.08): ಇತ್ತೀಚೆಗೆ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರ ಒಂದಲ್ಲ ಒಂದು ಗಲಾಟೆ ವಿಷಯದಲ್ಲಿ ಸುದ್ದಿ ಆಗ್ತಾನೆ ಇದೆ. ಅದಕ್ಕೆಲ್ಲಾ ಮೂಲ ಕಾರಣವೇ ಮುಂಬರುತ್ತಿರುವ ವಿಧಾನಸಭಾ ಚುನಾವಣೆ ಎಂದು ಸಾಮಾಜಿಕ ಜಾಲತಾಣದಲ್ಲಿ ಗುಸು ಗುಸು ಶುರುವಾಗಿದೆ. ಇದಕ್ಕೆ ನಿದರ್ಶನ ಎಂಬಂತೆ ಗುರುವಾರವೂ ಕೂಡ ಒಂದು ಗಲಾಟೆ ನಡೆದಿರೋದು ಕ್ಷೇತ್ರದ ಜನರ ನಿದ್ದೆ ಕೆಡಿಸಿದೆ.
ಹೌದು! ಗುರುವಾರ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಚಿಕ್ಕಜಾಜೂರು ಗ್ರಾಮದಲ್ಲಿ ರಾಜಕೀಯ ವೈಷಮ್ಯಕ್ಕೆ ಗಲಾಟೆ ನಡೆದಿದೆ. ಅದೇ ಗ್ರಾಮದ ಗ್ರಾಮ ಪಂಚಾಯ್ತಿ ಸದಸ್ಯ ಸಿದ್ದೇಶ್ ಎಂಬಾತನ ಮೇಲೆ ಹೊಳಲ್ಕೆರೆಯ ಹಾಲಿ ಶಾಸಕ ಎಂ. ಚಂದ್ರಪ್ಪ ಅವರ ಬೆಂಬಲಿಗ ಡಿ.ಸಿ ಮೋಹನ್ ಇಟ್ಟಿಗೆಯಿಂದ ತಲೆಗೆ ಬಲವಾಗಿ ಏಕಾಏಕಿ ಹಲ್ಲೆ ನಡೆಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಇನ್ನೂ ಈ ಗಲಾಟೆಗೆ ಸಂಬಂಧಿಸಿದಂತೆ ಹಲ್ಲೆ ಮಾಡುತ್ತಿರುವ ವಿಡಿಯೋ ಎಲ್ಲೆಡೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಶಾಸಕರ ಬೆಂಬಲಿಗನ ದರ್ಪವನ್ನು ಎಲ್ಲರೂ ಖಂಡಿಸುತ್ತಿದ್ದಾರೆ.
ಹೈಕೋರ್ಟ್ಗೆ ಸುಳ್ಳು ಮಾಹಿತಿ ನೀಡಿದ್ಯಾ ಚಿತ್ರದುರ್ಗ ಜಿಲ್ಲಾಡಳಿತ..?
ತೀವ್ರ ಹಲ್ಲೆಗೆ ಒಳಗಾಗಿರುವ ಸಿದ್ದೇಶ್ ಸ್ಥಳೀಯ ಹೊಳಲ್ಕೆರೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ದರ್ಪ ಮೆರೆದಿರೋ ಶಾಸಕ ಚಂದ್ರಪ್ಪನ ಬಲಗೈ ಬಂಟ ಡಿ.ಸಿ ಮೋಹನ್ ಬೇರೆ ಯಾರೂ ಅಲ್ಲ, ಅದೇ ಚಿಕ್ಕಜಾಜೂರು ಗ್ರಾಮದ ಮಾಜಿ ಗ್ರಾ.ಪಂ ಅಧ್ಯಕ್ಷ. ಮೇಲಾಗಿ ಸಿದ್ದೇಶ್ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಆಗಿದ್ದು, ಮೋಹನ್ ಬಿಜೆಪಿ ಶಾಸಕ ಬೆಂಬಲಿಗ ಆಗಿರುವುದಕ್ಕೆ ಈ ಗಲಾಟೆಗೆ ಮೂಲ ಕಾರಣ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ರಾಜಕೀಯ ವೈಷಮ್ಯವೇ ಎನ್ನಲಾಗ್ತಿದೆ.
ಯಾವ ಕಾರಣಕ್ಕೆ ಗಲಾಟೆ ನಡೆಯುತ್ತವೆ: ಹೊಳಲ್ಕೆರೆ ವಿಧಾನಸಭಾ ಕ್ಷೇತ್ರ ಇಡೀ ಚಿತ್ರದುರ್ಗದಲ್ಲಿ ಬರುವ ಕ್ಷೇತ್ರಗಳಲ್ಲಿ ಸ್ವಲ್ಪ ಭಿನ್ನವಾದದ್ದು ಅಂದ್ರೆ ತಪ್ಪಾಗಲಿಕ್ಕಿಲ್ಲ. ಯಾಕಂದ್ರೆ ಮಾಜಿ ಸಚಿವ ಹೆಚ್.ಆಂಜನೇಯ ಪ್ರತಿನಿಧಿಸುವ ಕ್ಷೇತ್ರವೂ ಇದಾಗಿದೆ. ಆದ್ದರಿಂದ ಮೊದಲಿನಿಂದಲೂ ಆಂಜನೇಯ ಹಾಗೂ ಬಿಜೆಪಿಯ ಹಾಲಿ ಶಾಸಕ ಎಂ ಚಂದ್ರಪ್ಪ ಬೆಂಬಲಿಗರ ನಡುವಿನ ಗಲಾಟೆ ನಿನ್ನೆ ಮೊನ್ನೆಯದಲ್ಲ. ಪ್ರತೀ ಬಾರು ಚುನಾವಣೆ ಬರುವ ಸಮಯದಲ್ಲಿಯೇ ಈ ರೀತಿಯ ಕಿರಿಕ್ಗಳನ್ನು ಅವರವರ ಬೆಂಬಲಿಗರು ಮಾಡುತ್ತಾರೆ. ಇನ್ನೂ ಆಂಜನೇಯ ಹಾಗೂ ಚಂದ್ರಪ್ಪ ಅವರ ಕೆಸರೆರಚಾಟವೂ ನಿತ್ಯ ಕ್ಷೇತ್ರದಲ್ಲಿ ನಡೆಯುತ್ತಲೇ ಇರುತ್ತದೆ.
Chitradurga: ಕರ್ನಾಟಕದಲ್ಲಿ ಮದ್ಯ ಮಾರಾಟಗಾರರಿಗೆ ಸಕಾಲಕ್ಕೆ ಮದ್ಯ ಸಿಗದೆ ದುಸ್ಥಿತಿ ನಿರ್ಮಾಣ!
ಇಬ್ಬರೂ ನಾಯಕರು ಒಬ್ಬರ ಮೇಲೆ ಒಬ್ಬರು ಬಾಯಿಗೆ ಲಗಾಮು ಹಾಕದೇ ತಮಗೆ ಇಷ್ಟ ಬಂದಂತೆ ಏಕ ವಚನದಲ್ಲಿಯೇ ಹಲವಾರು ಕಾರ್ಯಕ್ರಮಗಳಲ್ಲಿ ವಾಗ್ದಾಳಿ ನಡೆಸುತ್ತಲೇ ಇರ್ತಾರೆ. ಇದರ ಪರಿಣಾಮವಾಗಿ ಅವರ ಬೆಂಬಲಿಗರ ಮಧ್ಯೆ ಈ ರೀತಿಯ ಗಲಾಟೆಗಳು ನಡೆಯುತ್ತಿವೆ. ಅದೇನೆ ಇರ್ಲಿ ಶಾಸಕರ ಬೆಂಬಲಿಗ ಅನ್ನೋ ಕಾರಣಕ್ಕೆ ಡಿ.ಸಿ ಮೋಹನ್ ಕಾಂಗ್ರೆಸ್ ಬೆಂಬಲಿಗ ಸಿದ್ದೇಶ್ ಗೆ ಇಟ್ಟಿಗೆಯಿಂದ ಮಾರಣಾಂತಿಕ ಹಲ್ಲೆ ನಡೆಸಿರೋದು ಖಂಡನೀಯ. ಈ ಕುರಿತು ಚಿಕ್ಕಜಾಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತಪ್ಪಿತಸ್ಥ ರಿಗೆ ಪೊಲೀಸರು ಸೂಕ್ತ ಕಾನೂನು ಶಿಕ್ಷೆ ವಿಧಿಸಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ