
ಬೆಂಗಳೂರು (ಡಿ.18): ರಾಷ್ಟ್ರೀಯ ಹೆದ್ದಾರಿಗಳು ಹಾಗೂ ಬೆಂಗಳೂರಿನ ಅತಿ ವಾಹನ ದಟ್ಟಣೆಯ ರಸ್ತೆಗಳನ್ನು ದಾಟುವಾಗ ಪಾದಚಾರಿಗಳು ಎಷ್ಟೇ ಮುನ್ನೆಚ್ಚರಿಕೆ ವಹಿಸಿದರೂ ಸಾಲವುದಿಲ್ಲ. ಆದರೂ, ವಾಹನ ಸವಾರರು ಕೂಡ ರಸ್ತೆಯನ್ನು ನೋಡಿಕೊಂಡು ಪಾದಚಾರಿಗಳು ರಸ್ತೆ ದಾಟಲು ಅನುಕೂಲ ಮಾಡಿಕೊಟ್ಟು ಮುಂದೆ ಹೋಗಬೇಕು. ಇಲ್ಲವಾದಲ್ಲಿ ರಸ್ತೆ ಅಪಘಾತ ಆಗುವುದು ಕಟ್ಟಿಟ್ಟ ಬುತ್ತಿಯಾಗಿದೆ. ಅದೇ ರೀತಿಯಾಗಿ ನೆಲಮಂಗಲದಲ್ಲಿ ಯುವಕನೊಬ್ಬ ರಸ್ತೆಯನ್ನು ದಾಟುವಾಗ ಕಾರು ಢಿಕ್ಕಿಯಾಗಿ ಸ್ಥಳದಲ್ಲಿಯೇ ಪಾದಚಾರಿ ಸಾವನ್ನಪ್ಪಿದ ಘಟನೆ ನಡೆದಿದೆ.
ಬೆಂಗಳೂರು ನಗರದಿಂದ ಪುಣೆಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಅತಿ ಹೆಚ್ಚು ವಾಹನಗಳು ಸಂಚಾರ ಮಾಡುತ್ತವೆ. ಇಲ್ಲಿ ರಸ್ತೆ ದಾಟಲೇ ಬಾರದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಎತ್ತರದ ಗೋಡೆಗಳು, ಕಬ್ಬಿಣದ ಬೇಲಿಗಳು, ಬ್ಯಾರಿಕೇಡ್ಗಳನ್ನು ಹಾಕಲಾಗಿದೆ. ಆದ್ದರಿಂದ ರಸ್ತೆಯೊಳಗೆ ನಾಯಿ, ಹಸು ಸೇರಿ ಇತರೆ ಪ್ರಾಣಿಗಳು ಬರುವುದು ಬಹುತೇಕ ನಿಯಂತ್ರಣಕ್ಕೆ ಬಂದಿದೆ. ಆದರೆ, ಸ್ಥಳೀಯ ಜನರು ಮಾತ್ರ ರಸ್ತೆಯನ್ನು ದಾಟುವುದನ್ನು ಮಾತ್ರ ಸಂಪೂರ್ಣವಾಗಿ ನಿಲ್ಲಿಸಿಲ್ಲ. ಹಗಲು, ರಾತ್ರಿ ಎನ್ನದೇ ರಸ್ತೆಗಳಲ್ಲಿ ವಾಹನಗಳು ಯಾವ ವೇಗದಲ್ಲಿ ಬರುತ್ತಿವೆ ಎನ್ನುವುದನ್ನು ಕೂಡ ನೋಡದೇ ರಸ್ತೆ ದಾಟುವ ಮೂಲಕ ವಾಹನ ಸವಾರರಿಗೂ ತೊಂದರೆ ಕೊಡುತ್ತಿದ್ದಾರೆ. ಈಗ ಇದೇ ರೀತಿ ಯುವಕನೊಬ್ಬ ರಸ್ತೆ ದಾಟಲು ಹೋಗಿ ಸಾವನ್ನಪ್ಪಿದ ಘಟನೆ ಮೈ ಜುಮ್ ಎನಿಸುತ್ತದೆ.
ತುಮಕೂರು ಬಳಿ ಭೀಕರ ಅಪಘಾತ: ಬ್ರಿಡ್ಜ್ನಿಂದ ಕೆಳಗೆ ಬಿದ್ದ ಕಾರು; ಸ್ಥಳದಲ್ಲೇ ಮೂವರು ಸಾವು!
ಕಾರು ನಿಲ್ಲಸದೇ ಚಾಲಕ ಎಸ್ಕೇಪ್:
ನೆಲಮಂಗಲ ತಾಲೂಕಿನ ಬಿಲ್ಲಿಕೋಟೆ ಬಳಿಯಲ್ಲಿ ರಸ್ತೆಯನ್ನು ದಾಟುತ್ತಿದ್ದ ಸಾಬು ಲಾಲ್ (26) ಮೃತಪಟ್ಟ ದುರ್ದೈವಿ ಆಗಿದ್ದಾನೆ. ಶನಿವಾರ ವಾರಾಂತ್ಯ ದಿನವಾದ್ದರಿಂದ ಬೆಂಗಳೂರಿನಿಂದ ತುಮಕೂರು ಕಡೆಗೆ ಹೋಗುವ ವಾಹನಗಳ ಸಂಖ್ಯೆಯೂ ಅಧಿಕವಾಗಿತ್ತು. ಬೆಂಗಳೂರಿನಿಂದ ತುಮಕೂರು ಕಡೆಗೆ ವೇಗವಾಗಿ ಹೋಗುತ್ತಿದ್ದ ಕಾರು ರಸ್ತೆಯನ್ನು ದಾಟುತ್ತಿದ್ದ ಸಾಬುಲಾಲ್ಗೆ ಡಿಕ್ಕಿ ಹೊಡೆದಿದೆ. ಕೂಡಲೇ ರಸ್ತೆಯಲ್ಲಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದ ವ್ಯಕ್ತಿಯನ್ನು ತಿರುಗಿ ನೋಡದೇ ಕಾರಿನ ಚಾಲಕ ಹೊರಟು ಹೋಗಿದ್ದಾನೆ. ಇನ್ನು ಘಟನೆಯ ಬಗ್ಗೆ ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದ್ದು, ನೆಲಮಂಗಲ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಾಹನ ಚಾಲಕನ ಪತ್ತೆಗೆ ಬಲೆ ಬೀಸಿದ್ದಾರೆ.
Vijayanagara: 50 ವಿದ್ಯಾರ್ಥಿಗಳಿದ್ದ ಪ್ರವಾಸದ ಬಸ್ನ ಆಕ್ಸಲ್ ಕಟ್: ತಪ್ಪಿದ ಭಾರಿ ಅನಾಹುತ
50 ಮೀ. ದೂರಕ್ಕೆ ಬಿದ್ದ ದೇಹ:
ಇನ್ನು ಟೋಲ್ ಗಳು ಇರುವ ಸ್ಥಳ, ಡಾಬಾಗಳು ಹಾಗೂ ಪೆಟ್ರೋಲ್ ಬಂಕ್ಗಳು ಇರುವ ಸ್ಥಳಗಳಲ್ಲಿ ವಾಹನ ಸವಾರರು ಸ್ವಲ್ಪ ನಿಧಾನವಾಗಿಯೇ ಹೋಗುವುದು ಉತ್ತಮ. ಇಲ್ಲವಾದರೆ ನಡೆಯುವ ಅಪಘಾತವನ್ನು ತಪ್ಪಿಸಲು ಸಾದ್ಯವಿಲ್ಲ. ಇಲ್ಲಿಯೂ ಕೂಡ ಅದೇ ರೀತಿಯ ಘಟನೆ ನಡೆದಿದೆ. ಯುವಕ ರಸ್ತೆಯನ್ನು ದಾಟುವಾಗ ತುಂಬಾ ವೇಗವಾಗಿ ಬಂದ ಕಾರು ಬಲಭಾಗದಲ್ಲಿ ನಿಧಾನವಾಗಿ ಹೋಗುತ್ತಿದ್ದ ಕಾರನ್ನು ಎಡಭಾಗದಿಂದ ಓವರ್ ಟೇಕ್ ಮಾಡಲು ಮುಂದಾಗಿದ್ದಾನೆ. ಹೀಗಾಗಿ, ರಸ್ತೆಯ ಎಡಭಾಗಕ್ಕೆ ವಾಹನವನ್ನು ಎಳೆದುಕೊಂಡಿದ್ದು, ಅಲ್ಲಿ ರಸ್ತೆ ದಾಟಲು ನಿಂತಿದ್ದ ಯುವಕನ ಮೇಲೆ ಹರಿದಿದೆ. ವೇಗವಾಗಿ ಕಾರು ಗುದ್ದಿದ ರಭಸಕ್ಕೆ ಯುವಕನ ದೇಹ 50 ಮೀಟರ್ ದೂರದಲ್ಲಿ ಹೋಗಿ ಬಿದ್ದಿತ್ತು. ಆದರೆ, ಕಾರು ಚಾಲಕ ಸ್ವಲ್ಪ ನಿಧಾನವಾಗಿ ಬಂದಿದ್ದರೆ ಅಥವಾ ಅಪಘಾತದ ನಂತರವೂ ವಾಹನ ನಿಲ್ಲಿಸಿ ಯುವಕನನ್ನು ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಿದ್ದರೆ ಜೀವ ಉಳಿಯಬಹುದಿತ್ತೋ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ