ಅಮಾನ್ಯಗೊಂಡ 1 ಸಾವಿರ ಮತ್ತು 500 ಮುಖಬೆಲೆಯ 96 ಲಕ್ಷ ನೋಟು ಜಪ್ತಿ| ಯಶವಂತಪುರ ಆರ್ಟಿಓ ಕಚೇರಿ ಸಮೀಪ ಜನರಿಗೆ ಕಮಿಷನ್ ಆಸೆ ತೋರಿಸಿ ಹಳೇ ನೋಟುಗಳ ವಿಲೇವಾರಿ ಹೊಂಚು ಹಾಕಿದ್ದ ಆರೋಪಿಗಳು|
ಬೆಂಗಳೂರು(ಜು.31): ನಿಷೇಧಿತ ನೋಟುಗಳ ಚಲಾವಣೆ ಹೆಸರಿನಲ್ಲಿ ಜನರಿಗೆ ವಂಚಿಸಲು ಯತ್ನಿಸಿದ್ದ ಮತ್ತೊಂದು ತಂಡ ಯಶವಂತಪುರ ಠಾಣೆ ಪೊಲೀಸರಿಗೆ ಸಿಕ್ಕಿಬಿದ್ದಿದೆ.
ಕೊಡಗು ಜಿಲ್ಲೆಯ ವಿರಾಜಪೇಟೆಯ ದಿನೇಶ್, ರಾಸಿಕ್, ದಾಸರಹಳ್ಳಿ ಎಸ್.ನಾಗರಾಜ್ ಹಾಗೂ ಬಿಟಿಎಂ ಲೇಔಟ್ನ ಕೃಷ್ಣಮೂರ್ತಿ ಬಂಧಿತರಾಗಿದ್ದು, ಆರೋಪಿಗಳಿಂದ ಅಮಾನ್ಯಗೊಂಡ 1 ಸಾವಿರ ಮತ್ತು 500 ಮುಖಬೆಲೆಯ .96 ಲಕ್ಷ ನೋಟುಗಳನ್ನು ಜಪ್ತಿ ಮಾಡಲಾಗಿದೆ. ಯಶವಂತಪುರ ಆರ್ಟಿಓ ಕಚೇರಿ ಸಮೀಪ ಆರೋಪಿಗಳು, ಜನರಿಗೆ ಕಮಿಷನ್ ಆಸೆ ತೋರಿಸಿ ಹಳೇ ನೋಟುಗಳ ವಿಲೇವಾರಿ ಹೊಂಚು ಹಾಕಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬೆಂಗಳೂರು: ಕುಖ್ಯಾತ ಕಳ್ಳನ ಬಂಧನ, 7 ಬೈಕ್ ವಶ
ದಿನೇಶ್ ಹಾಗೂ ರಾಸಿಕ್ ವಿರಾಜಪೇಟೆಯಲ್ಲಿ ದಿನಸಿ ವ್ಯಾಪಾರಿಗಳಾಗಿದ್ದಾರೆ. ತಾವು ಕೇರಳ ಮೂಲದ ವ್ಯಕ್ತಿಗಳಿಂದ .1 ಕೋಟಿ ನಿಷೇಧಿತ ನೋಟುಗಳನ್ನು ಪಡೆದು 20 ಲಕ್ಷದ ಕಮಿಷನ್ ಆಸೆಗೆ ಈ ಕೃತ್ಯಕ್ಕೆ ಮುಂದಾಗಿದ್ದೇವು ಎಂದು ವಿಚಾರಣೆ ವೇಳೆ ಅವರು ಹೇಳಿಕೆ ನೀಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ನಿಷೇಧಿತ ನೋಟುಗಳು ಚಲಾವಣೆ ಮಾಡಲು ಸಾಧ್ಯವಿಲ್ಲ. ಆದರೆ ಜನರಿಗೆ ಲಕ್ಷ ಲಕ್ಷ ಕಮಿಷನ್ ಆಮಿಷವೊಡ್ಡಿ ಆರೋಪಿಗಳು ವಂಚಿಸಲು ಯತ್ನಿಸಿದ್ದರು. ಒಂದು ಕೋಟಿ ಹಳೇ ನೋಟು ಬದಲಾಯಿಸಿದರೆ .20 ಲಕ್ಷದಿಂದ .30 ಲಕ್ಷದವರೆಗೆ ಕಮಿಷನ್ ಸಿಗಲಿದೆ ಎಂದು ಆರೋಪಿಗಳು ಪ್ರಚಾರ ಮಾಡುತ್ತಿದ್ದರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.