Family Suicide: ಮಂಗ್ಳೂರಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ

By Suvarna NewsFirst Published Dec 8, 2021, 12:50 PM IST
Highlights

*  ಮಂಗಳೂರು ನಗರದ ಮಾರ್ಗನ್ಸ್ ಸ್ಟ್ರೀಟ್‌ನಲ್ಲಿ ನಡೆದ ಘಟನೆ
*  ಮನೆಯಲ್ಲಿ ಗಂಡ, ಹೆಂಡತಿ, ಇಬ್ಬರು ಮಕ್ಕಳ ಮೃತದೇಹ ಪತ್ತೆ
*  ಈ ಸಂಬಂಧ ಮಾರ್ಗನ್ಸ್ ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲು 
 

ಮಂಗಳೂರು(ಡಿ.08):  ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ನಗರದ ಮಾರ್ಗನ್ಸ್ ಸ್ಟ್ರೀಟ್‌ನಲ್ಲಿ ಇಂದು(ಬುಧವಾರ) ನಡೆದಿದೆ. ನಾಗೇಶ್ ಶೇರಿಗುಪ್ಪಿ(30), ವಿಜಯಲಕ್ಷ್ಮಿ(26), ಮಕ್ಕಳಾದ ಸಪ್ನಾ(8) ಹಾಗೂ ಸಮರ್ಥ್(4) ಎಂಬುವರೇ ಆತ್ಮಹತ್ಯೆಗೆ ಶರಣಾದ ದುರ್ದೈವಿಗಳಾಗಿದ್ದಾರೆ.  ಮೃತರೆಲ್ಲೂ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಸುನಗ ಗ್ರಾಮದವರು ಎಂದು ತಿಳಿದು ಬಂದಿದೆ. ನಾಗೇಶ್ ಶೇರಿಗುಪ್ಪಿ ಚಾಲಕ ವೃತ್ತಿ ಮಾಡಿಕೊಂಡು, ಪತ್ನಿ ವಿಜಯಲಕ್ಷ್ಮಿ ಸೆಕ್ಯುರಿಟಿ ಕೆಲಸ ಜೀವನ ಸಾಗಿಸುತ್ತಿದ್ದರು. ಕಳೆದ 15 ದಿನಗಳ ಹಿಂದಷ್ಟೇ ಬಾಡಿಗೆಗೆ ಬಂದಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. 

ಪತ್ನಿ ಮತ್ತು ಮಕ್ಕಳಿಗೆ ವಿಷವಿಕ್ಕಿ ಪತಿ ನಾಗೇಶ್ ನೇಣಿಗೆ ಶರಣಾದ ಶಂಕೆ ವ್ಯಕ್ತವಾಗಿದೆ. ಮನೆಯಲ್ಲಿ ಗಂಡ, ಹೆಂಡತಿ, ಇಬ್ಬರು ಮಕ್ಕಳ ಮೃತದೇಹ ಪತ್ತೆಯಾಗಿದೆ. ಮಂಗಳೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಈ ಸಂಬಂಧ ಮಂಗಳೂರಿನ ಮಾರ್ಗನ್ಸ್ ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಪೊಲೀಸರ ತನಿಖೆಯಿಂದಲೇ ಇವರ ಸಾವಿಗೆ ಕಾರಣ ತಿಳಿದು ಬರಬೇಕಿದೆ. 

shocking case of suicide: ತನ್ನಿಷ್ಟದಂತೆ ರವಿಕೆ ಹೊಲಿದಿಲ್ಲವೆಂದು ಪತಿಯೊಂದಿಗೆ ಕಿತ್ತಾಡಿ ಪತ್ನಿ ಆತ್ಮಹತ್ಯೆ

ಒಂದೇ ಕುಟುಂಬದ ಐವರು ಆತ್ಮಹತ್ಯೆ

ರಾಜ್ಯದಲ್ಲಿ ಇಂಥ ಪ್ರಕರಣಗಳು ಹೆಚ್ಚಾಗುತ್ತಿದೆ. ಹೌದು, ಸೆ.17 ರಂದು ಇಂಥಹದ್ದೇ ಘಟನೆ ನಡೆದಿತ್ತು. ಸ್ಥಳೀಯ ಪತ್ರಿಕೆ ಸಂಪಾದಕ ಶಂಕರ್ ಕುಟುಂಬದ ಐವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ತಿಗಳರಪಾಳ್ಯದಲ್ಲಿ ನಡೆದಿತ್ತು. ಭಾರತಿ (50), ಸಿಂಚನಾ (33), ಸಿಂಧೂರಾಣಿ (30), ಮಧುಸಾಗರ್ (27) ಆತ್ಮಹತ್ಯೆಗೆ ಶರಣಾದವರು. ಮಗಳು ಸಿಂಧೂರಾಣಿ ಗಂಡನ ಮನೆಗೆ ಹೋಗದಿದ್ದಕ್ಕೆ ಬೇಸರಗೊಂಡಿದ್ದ ಶಂಕರ್, ಮನೆಯಲ್ಲಿ ಜಗಳವಾಡಿಕೊಂಡು ಮನೆ ಬಿಟ್ಟು ಹೋಗಿದ್ದರು. ಮನೆಗೆ ವಾಪಸ್‌ ಹಾಕಿದ್ದನ್ನು ಗಮನಿಸಿ ಸ್ನೇಹಿತರ ಮನೆಗೆ ಹೋಗಿದ್ದರು. ಮನೆಯವರಿಗೆ ಸಾಕಷ್ಟು ಬಾರಿ ಕರೆ ಮಾಡಿದರೂ ರಿಸೀವ್ ಮಾಡದೇ ಇದ್ದಾಗ ಮನೆಗೆ ಬಂದು ಕಿಟಕಿ ಗಾಜು ಒಡೆದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿತ್ತು. 

ಒಂದೇ ಕುಟುಂಬದ ಮೂವರ ಆತ್ಮಹತ್ಯೆ

ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣಾದ ಘಟನೆ ದಾವಣಗೆರೆ ನಗರದ ಭಾರತ್ ಕಾಲೋನಿಯಲ್ಲಿ ಸೆ. 20ರಂದು ನಡೆದಿತ್ತು. ಕೃಷ್ಣ ನಾಯಕ(35) ಲಾರಿ ಚಾಲಕ, ಪತ್ನಿ ಸುಮಾ (30), ಮಗು ಧೃವ (6) ಆತ್ಮಹತ್ಯೆ ಮಾಡಿಕೊಂಡಿದ್ದರು. ಪತ್ನಿಯ ಅನಾರೋಗ್ಯದಿಂದ ಕುಟುಂಬ ಬೇಸತ್ತಿತ್ತು ಎಂದು ಹೇಳಲಾಗುತ್ತಿದೆ.

ದಾವಣಗೆರೆ ಚಿಗಟೇರಿ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ನಿರಂತರ ಅಲೆದಾಡುತ್ತಿತ್ತು ಈ ಕುಟುಂಬ. ಆಸ್ಪತ್ರೆ ಖರ್ಚು ವೆಚ್ಚಕ್ಕೆ ಹೆದರಿದ ಕುಟುಂಬ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ಪತ್ನಿ ಹಾಗೂ ಮಗುವಿಗೆ ವಿಷ ಕುಡಿಸಿ ಕೃಷ್ಣನಾಯ್ಕ್ ತಾನು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದನು.  

Family suicide:ಸಾಲಕ್ಕೆ ಹೆದರಿ ಒಂದೇ ಕುಟುಂಬದ ಐವರು ಆತ್ಮಹತ್ಯೆ

ಕೊರೋನಾ ಕಾಟಕ್ಕೆ ಒಂದೇ ಕುಟುಂಬ ಮೂವರ ಆತ್ಮಹತ್ಯೆ

ಖಾಸಗಿ ಕಂಪನಿ ಉದ್ಯೋಗಿಯೊಬ್ಬ ಪತ್ನಿ, ಮಗಳಿಗೆ ವಿಷ ನೀಡಿ, ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಧಾವರಾಡ ನಗರದ ಕವಳಿಕಾಯಿ‌ ಚಾಳದಲ್ಲಿ ಘಟನೆ ನಡೆದಿತ್ತು. ಮೌನೇಶ ಪತ್ತಾರ (36), ಪತ್ನಿ ಅರ್ಪಿತಾ(28), ಮಗಳು ಸುಕೃತಾ (4) ಆತ್ಮಹತ್ಯೆಗೆ ಶರಣಾಗಿದ್ದರು. 

ಮೃತ ಮೌನೇಶ ಪತ್ತಾರ ಅವರು ನಗರದ ಟಾಟಾ ಮಾರ್ಕೊಪೊಲೋ ಕಂಪನಿ ಉದ್ಯೋಗಿಯಾಗಿದ್ದರು. ತಮ್ಮ ಕಂಪನಿಯಲ್ಲಿ ಕೊರೋನಾ ಒಂದನೇ ಅಲೆಯಲ್ಲಿ ಕೇಸ್‌ಗಳ ಸಂಖ್ಯೆ ಹೆಚ್ಚಳವಾಗುತ್ತಿತ್ತು. ಹೀಗಾಗಿ ಉದ್ಯೋಗ ಕಳೆದುಕೊಳ್ಳುವ ಭಯದಲ್ಲಿ ಮೌನೇಶ ಪತ್ತಾರ ಅವರು ಆತ್ಮಹತ್ಯೆಯಂತಹ ಕೃತ್ಯಕ್ಕೆ ಮನಸ್ಸು ಮಾಡಿದ್ದರು. ಮೂಲತಃ ಗದಗ ಜಿಲ್ಲೆಯ ರೋಣ ತಾಲೂಕಿನ ಅಸೂಟಿ ಗ್ರಾಮದ ವರಾದ ಮೃತ ಮೌನೇಶ ಪತ್ತಾರ ಅವರು ಉದ್ಯೋಗಕ್ಕಾಗಿ ಧಾರವಾಡದಲ್ಲಿ ಬಂದು‌ ನೆಲೆಸಿದ್ದರು. ಡೆಡ್ಲಿ ಕೊರೋನಾ ಕಾಟಕ್ಕೆ ಇಡೀ ಕುಟುಂಬವೇ ನಾಶವಾಗಿದ್ದು ಮಾತ್ರ ವಿಪರ್ಯಾಸ. 
 

click me!