
ಬೆಂಗಳೂರು(ಏ.13): ಕೇರಳದಿಂದ ಖಾಸಗಿ ಬಸ್ನಲ್ಲಿ ಗಾಂಜಾ ಹಾಗೂ ಹ್ಯಾಷ್ ಆಯಿಲ್ ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ ಕೇರಳದ ಇಬ್ಬರು ಸೇರಿ ನಾಲ್ವರನ್ನು ಮಡಿವಾಳ ಉಪವಿಭಾಗದ ಎಚ್ಎಸ್ಆರ್ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಕೇರಳದ ಕಾಸರಗೋಡಿನ ಮೊಹಮ್ಮದ್ ಮುಸ್ತಾಕ್(31) ಮತ್ತು ಮೊಹಮ್ಮದ್ ಆಶೀಕ್(19) ಮತ್ತು ದಕ್ಷಿಣ ಕನ್ನಡ ಜಿಲ್ಲೆ ಬಂಟವಾಳ ತಾಲೂಕಿನ ಪಿ.ಸಮೀರ ಹಾಗೂ ಮೊಹಮ್ಮದ್ ಅಫ್ರೀದ್(23) ಬಂಧಿತರು.
ಆರೋಪಿಗಳಿಂದ 15 ಲಕ್ಷ ಮೌಲ್ಯದ 48.18 ಕೆ.ಜಿ ತೂಕದ ಗಾಂಜಾ, 45 ಲಕ್ಷ ಮೌಲ್ಯದ 1.13 ಗ್ರಾಂ ಹ್ಯಾಷ್ ಆಯಿಲ್, ಕೃತ್ಯಕ್ಕೆ ಬಳಸಿದ್ದ ಒಂದು ತೂಕದ ಯಂತ್ರ, ಖಾಸಗಿ ಬಸ್, ಕಾರು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಆರೋಪಿಗಳ ವಿಚಾರಣೆಯಲ್ಲಿ ನಗರದ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದರು.
ಮ್ಯಾನ್ಮಾರ್ನಿಂದ ಬೆಂಗ್ಳೂರಿಗೆ ಕುಕ್ಕರ್ನಲ್ಲಿ ಡ್ರಗ್ಸ್ ತಂದು ದಂಧೆ..!
ಆರೋಪಿಗಳ ಪೈಕಿ ಮೊಹಮ್ಮದ್ ಮುಸ್ತಾಕ್ ಸ್ಲಿಪರ್ ಖಾಸಗಿ ಬಸ್ ಮಾಲಿಕನಾಗಿದ್ದು, ಲಾಕ್ಡೌನ್ ಸಂದರ್ಭದಲ್ಲಿ ಸ್ಥಳೀಯ ಗಾಂಜಾ ಮಾರಾಟಗಾರರ ಸಂಪರ್ಕ ಪಡೆದು ಅಕ್ರಮ ದಂಧೆಯಲ್ಲಿ ತೊಡಗಿದ್ದ. ನೂರಾರು ಕೆ.ಜಿ.ಗಾಂಜಾ ಬೇಯಿಸಿ ಹ್ಯಾಷ್ ಆಯಿಲ್ ತಯಾರಿಸಿ ಅವುಗಳನ್ನು ಬಾಟಲಿಗಳಲ್ಲಿ ತುಂಬಲಾಗಿತ್ತು. ನಂತರ ಕೇರಳದ ಕಾಸರಗೋಡಿನಿಂದ ನಿತ್ಯ ಬೆಂಗಳೂರಿಗೆ ಬರುವ ಬಸ್ನ ಲಗೇಜ್ ಬಾಕ್ಸ್ ಮತ್ತು ಟೂಲ್ ಬಾಕ್ಸ್ಗಳಲ್ಲಿ ಇಟ್ಟು ಹ್ಯಾಷ್ ಆಯಿಲ್ ಮತ್ತು ಗಾಂಜಾವನ್ನು ಬೆಂಗಳೂರಿಗೆ ಸಾಗಿಸುತ್ತಿದ್ದರು.
ಈ ಸಂಬಂಧ ಖಚಿತ ಮಾಹಿತಿ ಮೇರೆಗೆ ಮಡಿವಾಳ ಉಪ ವಿಭಾಗದ ಎಸಿಪಿ ಸುಧೀರ್ ಎಂ.ಹೆಗಡೆ ಮತ್ತು ಎಚ್ಎಸ್ಆರ್ ಲೇಔಟ್ ಠಾಣೆಯ ವಿ.ಮುನಿರೆಡ್ಡಿ ನೇತೃತ್ವದ ತಂಡ ಬಸ್ ಮೇಲೆ ದಾಳಿ ನಡೆಸಿದಾಗ ಅಲ್ಲಿನ ಲಗೇಜ್ ಮತ್ತು ಟೂಲ್ ಬಾಕ್ಸ್ಗಳಲ್ಲಿ ಅಕ್ರಮವಾಗಿ ಮಾದಕ ವಸ್ತುಗಳು ಪತ್ತೆಯಾಗಿದ್ದು, ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ