ಗಂಡು ಮಗುವಿಗಾಗಿ ಪತ್ನಿಯ ಒಪ್ಪಿಗೆಯಿಂದ 2ನೇ ಮದುವೆಯಾದ ಪತಿ, ಇಬ್ರಿಗೂ ಕೈಕೊಟ್ಟು ಮತ್ತೊಬ್ಬಳ ಹಿಂದೆ ಬಿದ್ದ!

By Santosh NaikFirst Published Apr 23, 2024, 5:31 PM IST
Highlights

ವಂಶದ ಉದ್ದಾರಕ್ಕಾಗಿ ಗಂಡು ಮಗು ಬೇಕು ಎನ್ನುವ ಕಾರಣಕ್ಕೆ ಹೆಂಡತಿಯ ಒಪ್ಪಿಗೆಯಿಂದ ಗಂಡ 2ನೇ ಮದುವೆಯಾಗಿದ್ದ. ಈಗ ಇಬ್ಬರೂ ಪತ್ನಿಯರನ್ನು ಕೈಬಿಟ್ಟು, ಮೂರನೇ ಹುಡುಗಿಯ ಜೊತೆ ಲಿವ್‌ ಇನ್‌ ರಿಲೇಷನ್‌ಷಿಪ್‌ ಆರಂಭಿಸಿರುವ ಘಟನೆ ಗುಜರಾತ್‌ನಲ್ಲಿ ನಡೆದಿದೆ.

ಅಹಮದಾಬಾದ್‌ (ಏ.22): ಗುಜರಾತ್‌ನ ಅಹಮದಾಬಾದ್‌ನಲ್ಲಿ ಅಚ್ಚರಿಯ ಘಟನೆ ನಡೆದಿದೆ. 58 ವರ್ಷದ ಸರ್ಕಾರಿ ಶಾಲೆಯ ಶಿಕ್ಷಕ, ವಂಶದ ಉದ್ದಾರಕ್ಕಾಗಿ ಗಂಡು ಮಗು ಬೇಕು ಎನ್ನುವ ಕಾರಣಕ್ಕೆ ಪತ್ನಿಯ ಒಪ್ಪಿಗೆಯಿಂದಲೇ 2ನೇ ಮದುವೆಯಾಗಿದ್ದ. ಆದರೆ, ಈಗ ಇಬ್ಬರೂ ಪತ್ನಿಯರಿಗೆ ಕೈಕೊಟ್ಟಿರುವ ಆತ ಲವರ್‌ ಎನ್ನಲಾಗಿರುವ ಮೂರನೇ ಹುಡುಗಿ ಜೊತೆ ಲಿವ್‌ ಇನ್‌ ರಿಲೇಷನ್‌ಷಿಪ್‌ ಆರಂಭಿಸಿದ್ದಾರೆ. ಗುಜರಾತ್‌ ಖೇಡಾದ ಕತ್ಲಾಲ್ ಟೌನ್‌ನಲ್ಲಿ ಈ ಘಟನೆ ನಡೆದಿದೆ. ಪತಿಯಿಂದ ವಂಚನೆಗೆ ಒಳಗಾಗಿರುವ ಹಾಗೂ ನೊಂದ ಮಹಿಳೆಯರು ಶನಿವಾರ ಕತ್ಲಾಲ್ ಪೊಲೀಸ್‌ ಠಾಣೆಯ ಮೆಟ್ಟಿಲೇರಿದ್ದು ಮಾತ್ರವಲ್ಲದೆ, ಪತಿ ಹಾಗೂ ಆತನ ಹೊಸ ಲಿವ್‌ ಇನ್‌ ಪಾರ್ಟ್‌ನರ್‌ ಮತ್ತು ಆಕೆಯ ಪೋಷಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ವರದಿಯ ಪ್ರಕಾರ, ಮೊದಲ ಪತ್ನಿ ದೂರುದಾರರಾಗಿದ್ದರೆ, 2ನೇ ಪತ್ನಿ ಸಾಕ್ಷಿಯಾಗಿ ದೂರು ನೀಡಿದ್ದು, ಎಫ್‌ಐಆರ್‌ನಲ್ಲಿ ಇವರ ಜೀವನದ ಕೆಟ್ಟ ವಿಚಾರಗಳನ್ನು ತಿಳಿಸಿದ್ದಾರೆ.

ಸರ್ಕಾರಿ ಶಾಲೆಯ ಶಿಕ್ಷಕ 18ನೇ ವಯಸ್ಸಿನಲ್ಲಿ ಮೊದಲ ಮದುವೆಯಾಗಿದ್ದರು. ಆದರೆ, ಎರಡು ಹೆಣ್ಣುಮಕ್ಕಳು ಹುಟ್ಟಿದ ಬಳಿಕ ಸಂಸಾರದಲ್ಲಿ ಅಸಮಾಧಾನ ಆರಂಭಗೊಂಡಿತು. ಗಂಡು ಮಗು ಬೇಕು ಅದಕ್ಕಾಗಿ ನನಗೆ ಮತ್ತೊಂದು ಮದುವೆಯಾಗಲು ಒಪ್ಪಿಗೆ ನೀಡುವಂತೆ ಪತ್ನಿಗೆ ಪೀಡಿಸುತ್ತಿದ್ದ. ಪತಿಯ ಪದೇ ಪದೇ ಬೇಡಿಕೆಯಿಂದ ಬೇಸತ್ತ ಪತ್ನಿ ಕೊನೆಗೆ 2ನೇ ಮದುವೆ ಒಪ್ಪಿಗೆ ನೀಡಿದ್ದಳು. 2000 ಇಸವಿಯಲ್ಲಿ ಮೊದಲ ಪತ್ನಿಗೆ ಕಾನೂನುಬದ್ಧವಾಗಿ ವಿಚ್ಛೇದನ ನೀಡದೇ 2ನೇ ಮದುವೆಯಾಗಿದ್ದರು. ಈ ದಾಂಪತ್ಯದಿಂದ ಒಂದು ಪುತ್ರಿ ಹಾಗೂ ಪುತ್ರನನ್ನು ಹೊಂದಿದ್ದರು.

ಆದರೆ, ಈಗ ನಾಲ್ಕು ತಿಂಗಳ ಹಿಂದೆ 2ನೇ ಪತ್ನಿಗೆ ಗಂಡನ ಬಗ್ಗೆ ಅನುಮಾನ ಮೂಡಲು ಆರಂಭಿಸಿತ್ತು. ಸಂಪೂರ್ಣ ವಿಚಾರಣೆ ನಡೆಸಿದಾಗ 58 ವರ್ಷದ ವ್ಯಕ್ತಿ ಇನ್ನೊಂದು ಮಹಿಳೆಯ ಜೊತೆ ಲಿವ್‌ ಇನ್‌ ರಿಲೇಷನ್‌ಷಿಪ್‌ನಲ್ಲಿ ಇರುವುದು ಗೊತ್ತಾಗಿದ್ದಲ್ಲದೆ, ಇಬ್ಬರೂ ಪತ್ನಿಯರಿಗೆ ಮೋಸ ಮಾಡಿದ್ದೂ ತಿಳಿದುಬಂದಿದೆ.

ಅನೈತಿಕ ಸಂಬಂಧ ವಿಚ್ಚೇದನಕ್ಕೆ ಮಾತ್ರ ಕಾರಣ, ಮಗುವಿನ ಪಾಲನೆಗಲ್ಲ: ಬಾಂಬೆ ಹೈ ಕೋರ್ಟ್

ಎಫ್‌ಐಆರ್‌ನಲ್ಲಿ ಶಿಕ್ಷಕನ ಇಬ್ಬರೂ ಪತ್ನಿಯರು ತಮ್ಮ ಗಂಡನನ್ನು ವಾಪಾಸ್‌ ನಮ್ಮೊಂದಿಗೆ ಬದುಕುವಂತೆ ಬುದ್ಧಿಹೇಳಿ ಎಂದು ಕೇಳಿಕೊಂಡಿದ್ದಾರೆ. ಈ ಬಗ್ಗೆ ಲಿವ್‌ ಇನ್‌ ಪಾರ್ಟನರ್‌ ಆಗಿರುವ ಮಹಿಳೆಯ ಮನೆಯಲ್ಲೂ ಹೋಗಿ ಪ್ರಶ್ನೆ ಮಾಡಿದ್ದೇವೆ. ಈ ವೇಳೆ ನಮ್ಮ ಗಂಡ ಹಾಗೂ ಲಿವ್‌ ಇನ್‌ ಪಾರ್ಟ್‌ನರ್‌ ಕುಟುಂಬ ನಮ್ಮ ಮೇಲೆ ಹಲ್ಲೆ ಮಾಡಿದೆ ಎಂದು ತಿಳಿಸಿದ್ದಾರೆ.  ಆರೋಪಿಗಳು ಈಗ ಕೌಟುಂಬಿಕ ಹಿಂಸಾಚಾರ, ಕ್ರಿಮಿನಲ್ ಬೆದರಿಕೆ ಮತ್ತು ಪ್ರಚೋದನೆಯ ಆರೋಪಗಳನ್ನು ಎದುರಿಸುತ್ತಿದ್ದಾರೆ. ಈ ಘಟನೆಯು ಹಾಲಿ ಸಮಾಜದಲ್ಲಿ ಬಹುಪತ್ನಿತ್ವ ಮತ್ತು ಕೌಟುಂಬಿಕ ದೌರ್ಜನ್ಯದ ಕಾನೂನು ಮತ್ತು ನೈತಿಕ ಪರಿಣಾಮಗಳ ಬಗ್ಗೆ ವಿಶಾಲವಾದ ಚರ್ಚೆಯನ್ನು ಹುಟ್ಟುಹಾಕಿದೆ.

ಯುವಕನ ಕಿಡ್ನಾಪ್ ಮಾಡಿ ಮೂತ್ರ ಕುಡಿಸಿ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ ಹೆಂಡ್ತಿ ಮನೆಯವರು..!

click me!