Belagavi: ವೈದ್ಯಕೀಯ ವಿದ್ಯಾರ್ಥಿಗಳ ಗಲಾಟೆ: 15 ವಿದ್ಯಾರ್ಥಿಗಳು ಸಸ್ಪೆಂಡ್!

By Govindaraj SFirst Published May 15, 2022, 12:05 AM IST
Highlights

• ಬಿಮ್ಸ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಚುನಾವಣೆ ವಿಚಾರಕ್ಕೆ ಗಲಾಟೆ
• ಆರೋಪಿತ ವಿದ್ಯಾರ್ಥಿಗಳ ವಿರುದ್ಧ ಬಿಮ್ಸ್ ನಿರ್ದೇಶಕರಿಂದ ದೂರು
• 15 ವೈದ್ಯಕೀಯ ವಿದ್ಯಾರ್ಥಿಗಳ ವಿರುದ್ಧ FIR ದಾಖಲು

ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ

ಬೆಳಗಾವಿ (ಮೇ.15): ಬೆಳಗಾವಿಯ ಪ್ರತಿಷ್ಠಿತ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ (BIMS) ಕಾಲೇಜಿನಲ್ಲಿ ವಿದ್ಯಾರ್ಥಿಗಳ ಮಧ್ಯೆ ಗಲಾಟೆ ನಡೆದಿದೆ. ಓರ್ವ ವಿದ್ಯಾರ್ಥಿ ಗಾಯಗೊಂಡಿರುವ ಘಟನೆ ಮೇ 4ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಏಪ್ರಿಲ್ 30ರಂದು ವಿದ್ಯಾರ್ಥಿಗಳ ಚುನಾವಣೆ ನಡೆದಿತ್ತು. ಈ ಚುನಾವಣೆಯಲ್ಲಿ ಗೆದ್ದ ವಿದ್ಯಾರ್ಥಿಗಳು ಗುಂಪು ಸೋತ ವಿದ್ಯಾರ್ಥಿಗಳ ಬಗ್ಗೆ ಹೀಯಾಳಿಸಿ ಮಾತುಗಳನ್ನ ಆಡಿದ್ದಾರೆ ಎಂಬ ಗಾಳಿ ಮಾತು ಹರಡಿದೆ. ಮೇ 4ರ ರಾತ್ರಿ 10 ಗಂಟೆಗೆ ಬಿಮ್ಸ್ ಬಾಯ್ಸ್ ಹಾಸ್ಟೆಲ್‌ನಲ್ಲಿ ಗಲಾಟೆ ನಡೆದಿದೆ‌. 

Latest Videos

ಆಗ ಸೋತ ವಿದ್ಯಾರ್ಥಿಗಳ ಗುಂಪು ಹಾಸ್ಟೆಲ್‌ನ ಮೂರನೇ ಮಹಡಿಯ ರೂಮ್ ನಂಬರ್ 323ರಲ್ಲಿದ್ದ ಎಂಬಿಬಿಎಸ್ ನಾಲ್ಕನೇ ವರ್ಷದ ವಿದ್ಯಾರ್ಥಿ ಬುರಾರಾಮ್ ಗೋಧರೆ ಎಂಬುವರ ಮೇಲೆ ಹಲ್ಲೆ ನಡಿಸಿದ್ದಾರೆ. ಎಂಬಿಬಿಎಸ್ ಮೂರನೇ ವರ್ಷದ ಸೋತ 15 ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಗಲಾಟೆಯಲ್ಲಿ  ಬುರಾರಾಮ್‌ನ ಮೂಗು, ಕಿರಿ ಬೆರಳಿಗೆ ತೀವ್ರ ಗಾಯವಾಗಿದೆ. ಬುರಾರಾಮ್ ರಾಜಸ್ಥಾನ ಮೂಲವನಾಗಿದ್ದು ಮೂಗಿಗೆ ಗಂಭೀರ ಗಾಯವಾಗಿದ್ದರಿಂದ ರಾಜಸ್ಥಾನದ ಜೋಧಪುರ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ. 

ಕುಡುಕ ಗಂಡ ಹೆಂಡತಿಯ ಹೆಣ ಮಲಗಿಸಿದ, ಪಾಪ ಪ್ರಜ್ಞೆಯಲ್ಲಿ ನೇಣಿಗೆ ಶರಣಾದ!

ಬಿಮ್ಸ್ ನಿರ್ದೇಶಕರು ನೀಡಿದ ದೂರಿನ ಮೇರೆಗೆ 15 ವಿದ್ಯಾರ್ಥಿಗಳ ವಿರುದ್ಧ FIR: ಪ್ರಕರಣ ಸಂಬಂಧ ಬಿಮ್ಸ್ ನಿರ್ದೇಶಕ ಡಾ.ಆರ್‌.ಜಿ‌.ವಿವೇಕಿ ನೀಡಿದ ದೂರಿನ ಮೇರೆಗೆ 15 ವೈದ್ಯಕೀಯ ವಿದ್ಯಾರ್ಥಿಗಳ ವಿರುದ್ಧ ಬೆಳಗಾವಿಯ ಎಪಿಎಂಸಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಎಂಬಿಬಿಎಸ್ ಮೂರನೇ ವರ್ಷದ ವಿದ್ಯಾರ್ಥಿಗಳಾದ ಕೃಷ್ಣಾ ರಾಠೋಡ್, ಶಂಕರ್ ಕಂಬಾರ್, ಮಂಥನ್, ಬಸವರೆಡ್ಡಿ, ಆಕಾಶ್ ಜಾಧವ್, ಮಡಿವಾಳಪ್ಪ, ಗುರುರಾಜ್, ವಿನಯ್ ಪಾಟೀಲ್, ಸಚಿನ್ ರಾಠೋಡ್, ಸಂತೋಷ ಕುಮಾರ್, ಸೌರಬ್, ಬಸವರಾಜ ಮಕಾಳಿ, ಬಸವರಾಜ ಸತ್ತಿಗೇರಿ, ರಾಜಶೇಖರ್, ರಮೇಶ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಇನ್ನು ಆರೋಪಿತ ವಿದ್ಯಾರ್ಥಿಗಳನ್ನು ಬಂಧಿಸಿಲ್ಲವಾದರೂ ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಇಲಾಖೆ ಮೂಲಗಳು  ತಿಳಿಸಿವೆ. ಪೊಲೀಸ್ ತನಿಖೆ ಮುಗಿಯೋವರೆಗೂ ಹಾಸ್ಟೆಲ್‌ಗೆ ವಿದ್ಯಾರ್ಥಿಗಳ ಪ್ರವೇಶ ನಿಷೇಧಿಸಲಾಗಿದೆ.

'15 ವೈದ್ಯಕೀಯ ವಿದ್ಯಾರ್ಥಿಗಳನ್ನು ಸಸ್ಪೆಂಡ್ ಮಾಡಿದ್ದೇವೆ': ಘಟನೆ ಕುರಿತು ಪ್ರತಿಕ್ರಿಯಿಸಿರುವ ಬಿಮ್ಸ್ ಆಡಳಿತಾಧಿಕಾರಿ ಆದಿತ್ಯ ಅಮ್ಲಾನ್ ಬಿಸ್ವಾಸ್ 'ಮೂರನೇ ವರ್ಷದ ವಿದ್ಯಾರ್ಥಿ ನಾಲ್ಕನೇ ವರ್ಷದ ವಿದ್ಯಾರ್ಥಿಗೆ ಹೊಡೆದಿದ್ದಾನೆ. ಅವರ ಮೇಲೆ ಎಫ್ಐಆರ್ ಆಗಿದೆ. ನಾಲ್ಕನೇ ವರ್ಷದ ವಿದ್ಯಾರ್ಥಿಗಳು ಚುನಾವಣೆ ನಡೆಸಿದ್ದರು. ಚುನಾವಣೆಯಲ್ಲಿ ಸೋತಿದ್ದ ಎಂಬಿಬಿಎಸ್ ನಾಲ್ಕನೇ ವರ್ಷದ ವಿದ್ಯಾರ್ಥಿಗಳು ಮೂರನೇ ವರ್ಷದ ವಿದ್ಯಾರ್ಥಿ ಬುರಾರಾಮ್ ಗೋಧರೆ ಮೇಲೆ ಹಲ್ಲೆ ಮಾಡಿದ್ದು ಅವರ ಮೂಗಿಗೆ ಗಾಯವಾಗಿದೆ. ಹೀಗಾಗಿ ರಾಜಸ್ಥಾನದ ಜೋಧಪುರ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. 15 ವಿದ್ಯಾರ್ಥಿಗಳ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಸದ್ಯ ಆರೋಪಿತ ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿದೆ' ಎಂದಿದ್ದಾರೆ.

Belagavi ಸಂಪುಟ ವಿಸ್ತರಿಸಿದ್ರೆ ಗಡಿ ಉಸ್ತುವಾರಿ ಸಚಿವರ ನೇಮಿಸಿ ಕನ್ನಡಿಗರ ಆಗ್ರಹ

'ಕಾಲೇಜಿನಿಂದ ವಿದ್ಯಾರ್ಥಿಗಳು ಅಮಾನತಾಗಿದ್ದೇ ಅವರಿಗೆ ದೊಡ್ಡ ಶಿಕ್ಷೆ': ಇನ್ನು ಓದಿ ವೈದ್ಯರಾಗಬೇಕಾದವರು, ಗಲಾಟೆ ಮಾಡಿಕೊಂಡು ಬರುವವರಿಗೆ ಚಿಕಿತ್ಸೆ ನೀಡಬೇಕಾದ ವಿದ್ಯಾರ್ಥಿಗಳೇ ಗಲಾಟೆ ಮಾಡಿಕೊಂಡು ಸುದ್ದಿಯಾಗಿದ್ದಾರೆ. ಇತ್ತ ಕಾಲೇಜು ಚುನಾವಣೆ ವಿಚಾರದಲ್ಲಿ ಸಿನಿಯರ ಜ್ಯೂನಿಯರ್ ವಿದ್ಯಾರ್ಥಿಗಳ ಮಧ್ಯೆ ಮಾರಾಮಾರಿ ಕ್ಯಾಂಪಸ್‌ನ ಶಾಂತಿ ಹಾಳಾಗುವಂತಾಗಿದೆ. ಈ ಕುರಿತು ಮಾತನಾಡಿರುವ ಸೆಕ್ಯುರಿಟಿ ಇನ್‌ಚಾರ್ಜ್ ಶಿವಾನಂದ, ವಿದ್ಯಾರ್ಥಿಗಳ ಚುನಾವಣೆ ವೇಳೆ ಸೋತ ಗೆದ್ದ ವಿದ್ಯಾರ್ಥಿಗಳ ಮಧ್ಯೆ ಗಲಾಟೆ ನಡೆದಿದೆ‌. ರಾತ್ರಿ 11 ಗಂಟೆಗೆ ರೂಮ್‌ಗೆ ನುಗ್ಗಿ ಸೋತ ವಿದ್ಯಾರ್ಥಿಗಳು ಗಲಾಟೆ ನಡೆಸಿದ್ದಾರೆ. ಈಗ ಆರೋಪಿತ ವಿದ್ಯಾರ್ಥಿಗಳು ಅಮನಾತಾಗಿದ್ದೇ ಅವರಿಗೆ ದೊಡ್ಡ ಶಿಕ್ಷೆ ಇನ್ನೊಮ್ಮೆ ಗಲಾಟೆ ಆದ್ರೆ ನಮ್ಮ ಕರಿಯರ್ ಹಾಳಾಗುತ್ತದೆ ಅಂತಾ ಅವರು ಯೋಚನೆ ಮಾಡಬೇಕು' ಎಂದಿದ್ದಾರೆ. ಒಟ್ಟಿನಲ್ಲಿ ಚೆನ್ನಾಗಿ ಓದಿ ವೈದ್ಯರಾಗಬೇಕಾದ ವಿದ್ಯಾರ್ಥಿಗಳು ಈ ರೀತಿ ಗಲಾಟೆ ಮಾಡಿ ತಮ್ಮ ಭವಿಷ್ಯ ಹಾಳು ಮಾಡಿಕೊಳ್ಳದಿರಲಿ ಎಂಬುದು ಸಾರ್ವಜನಿಕರ ಆಶಯ.

click me!